ಕೊನೆಗೂ ಅಬ್ಬರಿಸಿದ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್​ ಗೆಲುವು, ಸಿಎಸ್​ಕೆ ಪ್ಲೇಆಫ್ ಹಾದಿ ಕಠಿಣ
ಕನ್ನಡ ಸುದ್ದಿ  /  ಕ್ರಿಕೆಟ್  /  ಕೊನೆಗೂ ಅಬ್ಬರಿಸಿದ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್​ ಗೆಲುವು, ಸಿಎಸ್​ಕೆ ಪ್ಲೇಆಫ್ ಹಾದಿ ಕಠಿಣ

ಕೊನೆಗೂ ಅಬ್ಬರಿಸಿದ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್​ ಗೆಲುವು, ಸಿಎಸ್​ಕೆ ಪ್ಲೇಆಫ್ ಹಾದಿ ಕಠಿಣ

ಇಂಡಿಯನ್ ಪ್ರೀಮಿಯರ್ ಲೀಗ್​​​ನ 38ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ವಿಕೆಟ್​ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದು ಎಂಐಗೆ ಹ್ಯಾಟ್ರಿಕ್ ಗೆಲುವು.

ಕೊನೆಗೂ ಅಬ್ಬರಿಸಿದ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್​ ಗೆಲುವು, ಸಿಎಸ್​ಕೆ ಪ್ಲೇಆಫ್ ಹಾದಿ ಕಠಿಣ
ಕೊನೆಗೂ ಅಬ್ಬರಿಸಿದ ರೋಹಿತ್ ಶರ್ಮಾ; ಮುಂಬೈ ಇಂಡಿಯನ್ಸ್​ಗೆ ಹ್ಯಾಟ್ರಿಕ್​ ಗೆಲುವು, ಸಿಎಸ್​ಕೆ ಪ್ಲೇಆಫ್ ಹಾದಿ ಕಠಿಣ (Hindustan Times)

ಕೊನೆಗೂ ಲಯಕ್ಕೆ ಮರಳಿದ ರೋಹಿತ್​ ಶರ್ಮಾ (76*) ಮತ್ತು ಸೂರ್ಯಕುಮಾರ್ ಯಾದವ್ (68*) ಅವರ ಸ್ಫೋಟಕ ಅರ್ಧಶತಕ ಮತ್ತು ಅದ್ಭುತ ಫೀಲ್ಡಿಂಗ್​ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 9 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಇದು ಮುಂಬೈಗೆ ದಕ್ಕಿದ ಹ್ಯಾಟ್ರಿಕ್ ಗೆಲುವಾದರೆ, ಸಿಎಸ್​ಕೆಗೆ ಒಟ್ಟಾರೆ 6ನೇ ಸೋಲು. ಪ್ಲೇಆಫ್ ರೇಸ್​​ನಲ್ಲಿ ಉಳಿಯಬೇಕಾದರೆ ಸಿಎಸ್​ಕೆ ಉಳಿದ ಆರೂ ಪಂದ್ಯಗಳನ್ನು ಗೆಲ್ಲುವುದು ಅನಿವಾರ್ಯ.

ಮುಂಬೈನ ವಾಂಖೆಡೆ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ 38ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ, ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿತು. ಶಿವಂ ದುಬೆ (50) ಮತ್ತು ರವೀಂದ್ರ ಜಡೇಜಾ (53) ತಲಾ ಅರ್ಧಶತಕ ಸಿಡಿಸಿ ಮಿಂಚಿದರು. 177 ರನ್ ಗುರಿ ಬೆನ್ನಟ್ಟಿದ ಮುಂಬೈ 15.4 ಓವರ್​ಗಳಲ್ಲೇ ಜಯಭೇರಿ ಬಾರಿಸಿತು. ರೋಹಿತ್, ಸೂರ್ಯ ಬಿರುಸಿನ ಬ್ಯಾಟಿಂಗ್ ನಡೆಸಿ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ರೋಹಿತ್​ ಮೊದಲ ಅರ್ಧಶತಕ, ಶತಕದ ಜೊತೆಯಾಟ

ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಮುಂಬೈ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 63 ರನ್ ಹರಿದು ಬಂತು. ರಿಯಾನ್ ರಿಕೆಲ್ಟನ್ 24 ರನ್ ಗಳಿಸಿ ಔಟಾದರು. ಬಳಿಕ ರೋಹಿತ್​ ಮತ್ತು ಸೂರ್ಯ ಜೊತೆಗೂಡಿ ಸಿಎಸ್​ಕೆ ಬೌಲರ್​ಗಳನ್ನು ದಂಡಿಸಿದರು. ಈ ಜೋಡಿ 2ನೇ ವಿಕೆಟ್​ಗೆ ಮುರಿಯದ 114 ರನ್ ಪಾಲುದಾರಿಕೆ ಒದಗಿಸಿತು. ಕಳೆದ 7 ಪಂದ್ಯಗಳಲ್ಲಿ ನಿರಾಸೆ ಮೂಡಿಸಿದ್ದ ರೋಹಿತ್​ ಕೊನೆಗೂ ಲಯಕ್ಕೆ ಮರಳಿದರು. 45 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಿತ ಅಜೇಯ 76 ರನ್ ಚಚ್ಚಿದರು.

ಹಿಟ್​ಮ್ಯಾನ್​ಗೆ ಸಾಥ್ ನೀಡಿದ ಸೂರ್ಯಕುಮಾರ್​ 30 ಎಸೆತಗಳಲ್ಲೇ 6 ಬೌಂಡರಿ, 5 ಸಿಕ್ಸರ್ ಸಹಿತ ಅಜೇಯ 65 ರನ್ ಗಳಿಸಿದರು. ಇವರಿಬ್ಬರ ಅಬ್ಬರಕ್ಕೆ ಚೆನ್ನೈ ಬೌಲರ್​​ಗಳು ಸುಸ್ತಾದರು. ಸಿಎಸ್​ಕೆ ಶ್ರೇಷ್ಠ ಬೌಲರ್​ಗಳಾದ ನೂರ್ ಅಹ್ಮದ್ ಮತ್ತು ಮತೀಶಾ ಪತಿರಾಣ ಓವರ್​​ಗಳಲ್ಲಿ ಸಿಕ್ಸರ್​ಗಳ ಸುರಿಮಳೆಗೈದು ಅಚ್ಚರಿ ಮೂಡಿಸಿದರು. ತವರಿನ ಪ್ರೇಕ್ಷಕರಿಗೆ ಮಸ್ತ್ ಮನರಂಜನೆ ಒದಗಿಸಿದರು. ಕೇವಲ 15.4 ಓವರ್​​ಗಳಲ್ಲೇ ಚೇಸ್​ ಮಾಡುವ ಮೂಲಕ ಪ್ಲೇಆಫ್​ಗೆ ಪ್ರಬಲ ಪೈಪೋಟಿ ನೀಡಲು ಹೆಜ್ಜೆ ಹಾಕುತ್ತಿದೆ.

ಜಡೇಜಾ-ದುಬೆ ಆಟ ವ್ಯರ್ಥ

ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್​ಕೆ ಉತ್ತಮ ಆರಂಭ ಪಡೆಯಲಿಲ್ಲ. ರಚಿನ್ ರವೀಂದ್ರ (5) ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು. ಬಳಿಕ ಯುವ ಆಟಗಾರರಾದ ಶೇಕ್ ರಶೀದ್ (19) ಮತ್ತು ಆಯುಷ್ ಮಾತ್ರೆ ಕೆಲಹೊತ್ತು ಮುಂಬೈ ಬೌಲರ್​​ಗಳ ಮೇಲೆ ಹಿಡಿತ ಸಾಧಿಸಿದರು. ಅದರಲ್ಲೂ ಆಯುಷ್ ತನ್ನ ಚೊಚ್ಚಲ ಪಂದ್ಯದಲ್ಲೇ 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32 ರನ್​ಗಳ ಗಮನಾರ್ಹ ಪ್ರದರ್ಶನ ನೀಡಿದರು. ಇವರ ಬಳಿಕ ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಜವಾಬ್ದಾರಿ ಹೊತ್ತರು. ಇಬ್ಬರು ಸಹ ತಲಾ 50 ರನ್ ಸಿಡಿಸಿದರು.

ಎಂಐ ಬೌಲರ್​ಗಳ ಮೇಲೆ ಕ್ರೌರ್ಯ ಮೆರೆದ ದುಬೆ (53 ರನ್, 35 ಎಸೆತ, 4 ಬೌಂಡರಿ, 2 ಸಿಕ್ಸರ್​) ಮತ್ತು ಜಡ್ಡು (50 ರನ್, 32 ಎಸೆತ, 2 ಬೌಂಡರಿ, 4 ಸಿಕ್ಸರ್), ತಂಡದ ಮೊತ್ತ ಹಿಗ್ಗಿಸಲು ಯತ್ನಿಸಿದರು. ಆದರೆ ಡೆತ್​ ಓವರ್​ಗಳಲ್ಲಿ ಬುಮ್ರಾರ ಈ ಕನಸಿಗೆ ತಣ್ಣೀರು ಹಾಕಿದರು. ಅದೂ ಅಲ್ಲದೆ, ಮುಂಬೈ ಫೀಲ್ಡರ್ಸ್​ ಕನಿಷ್ಠ 20 ರಿಂದ 30 ರನ್ ರಕ್ಷಿಸಿದರು. ಇದು ಸಿಎಸ್​ಕೆಗೆ ದೊಡ್ಡ ಪೆಟ್ಟು ಬಿತ್ತು. ಪರಿಣಾಮ ಯೆಲ್ಲೋ ಆರ್ಮಿ 180ರ ಗಡಿ ದಾಟಲು ಸಾಧ್ಯವಾಗಲಿಲ್ಲ. ಆದರೆ ದುಬೆ ಮತ್ತು ಜಡ್ಡು ಆಟ ವ್ಯರ್ಥವಾಯಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.