ನಾವೆಷ್ಟೇ ಹೇಳ್ತಿದ್ರೂ ಕೇಳ್ತಿಲ್ಲ, ನಾನೇನು ಮಾಡ್ಲಿ; ರಾಹುಲ್ ದ್ರಾವಿಡ್ ನಿರ್ಗಮನಕ್ಕೆ ರೋಹಿತ್ ಶರ್ಮಾ ಭಾವುಕ
Rohit Sharma on Rahul Dravid: ಐರ್ಲೆಂಡ್ ವಿರುದ್ಧದ ಟಿ20 ವಿಶ್ವಕಪ್ 2024 ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ದ್ರಾವಿಡ್ ಅವರ ವಿದಾಯದ ಬಗ್ಗೆ ಮಾತನಾಡುವಾಗ ರೋಹಿತ್ ಶರ್ಮಾ ಭಾವುಕರಾಗಿದ್ದಾರೆ.
2007ರಲ್ಲಿ ಬೆಲ್ಫೆಸ್ಟ್ನಲ್ಲಿ ನಡೆದ ಐರ್ಲೆಂಡ್ ವಿರುದ್ಧದ ಏಕೈಕ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಚೊಚ್ಚಲ ಅವಕಾಶ ಪಡೆದಿದ್ರು. ರಾಹುಲ್ ದ್ರಾವಿಡ್ ನಾಯತ್ವದಲ್ಲೇ ಆಡುವ ಅವಕಾಶ ಪಡೆದಿದ್ದ ಹಿಟ್ಮ್ಯಾನ್ಗೆ, ಈ ಏಕಪಕ್ಷೀಯ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ದ್ರಾವಿಡ್ ಜತೆಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದ ರೋಹಿತ್, ಇದೀಗ ಅವರದ್ದೇ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಐರ್ಲೆಂಡ್ ವಿರುದ್ಧದ ಭಾರತದ ಟಿ20 ವಿಶ್ವಕಪ್ ಆರಂಭಿಕ ಪಂದ್ಯಕ್ಕೂ ಮುನ್ನ ತಮ್ಮ ಮೊದಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೋಹಿತ್ ಶರ್ಮಾ, ಮುಖ್ಯಕೋಚ್ ದ್ರಾವಿಡ್ ಉನ್ನತ ಹುದ್ದೆಗೆ ಮತ್ತೆ ಅರ್ಜಿ ಸಲ್ಲಿಸುವುದಿಲ್ಲ ಎಂದು ದೃಢಪಡಿಸಿದ್ದಾರೆ. ನಾನು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದೇ ಐರ್ಲೆಂಡ್ ವಿರುದ್ಧ. ಆಗ ನನ್ನ ಮೊದಲ ನಾಯಕರಾಗಿದ್ದು, ರಾಹುಲ್ ದ್ರಾವಿಡ್ ಅವರೇ ಎಂದು ಹೇಳಿದ್ದಾರೆ.
ನನಗೆ ಟೆಸ್ಟ್ ಕ್ರಿಕೆಟ್ ಆಡಲು ಅವಕಾಶ ಸಿಕ್ಕಾಗ ದ್ರಾವಿಡ್ ಆಟವನ್ನು ನೋಡುತ್ತಿದ್ದೆ. ನಮ್ಮೆಲ್ಲರಿಗೂ ರೋಲ್ ಮಾಡೆಲ್. ಅವರು ವೈಯಕ್ತಿಕವಾಗಿ ಆಟಗಾರನಾಗಿ ಏನೆಲ್ಲಾ ಸಾಧಿಸಿದ್ದಾರೆ, ತಂಡಕ್ಕೆ ಏನೆಲ್ಲಾ ಕೊಡುಗೆ ನೀಡಿದ್ದಾರೆ ಎಂಬುದು ನಮಗೆ ತಿಳಿದಿದೆ. ಕಠಿಣ ಸಂದರ್ಭಗಳಲ್ಲಿ ತಂಡವನ್ನು ರಕ್ಷಿಸುವ ಮೂಲಕ ಹೆಸರುವಾಸಿಯಾಗಿದ್ದಾರೆ ಎಂದು ಹೇಳಿದ್ದಾರೆ. ಈ ಜೋಡಿ ನಾಯಕತ್ವದಲ್ಲಿ ಭಾರತ ಕಪ್ ಗೆಲ್ಲಲು ಸಿದ್ಧವಾಗಿದೆ.
ದ್ರಾವಿಡ್ ಮಾರ್ಗದರ್ಶನ ಮತ್ತು ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿದೆ. 2023ರ ವಿಶ್ವಕಪ್ನಲ್ಲಿ ಸತತ 10 ಗೆಲುವು ದಾಖಲಿಸಿದ್ದ ಟೀಂ ಇಂಡಿಯಾ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಐಸಿಸಿ ಟೂರ್ನಿಗಳಲ್ಲಿ ಟ್ರೋಫಿ ರಹಿತ ಓಟವನ್ನು ಮುಂದುವರೆಸಿತು. ಇದೀಗ ಟ್ರೋಫಿ ಬರ ನೀಗಿಸಲು ಅದೇ ಜೋಡಿ ಟಿ20 ವಿಶ್ವಕಪ್ ಟೂರ್ನಿಗೆ ಸಜ್ಜಾಗಿದೆ.
ನಾನು ದ್ರಾವಿಡ್ ಮನವೊಲಿಸಲು ಪ್ರಯತ್ನಿಸಿದೆ, ಆದರೆ...':
ಐರ್ಲೆಂಡ್ ಪಂದ್ಯಕ್ಕೆ ದ್ರಾವಿಡ್ ನಿರ್ಗಮಿಸುವ ಕುರಿತು ಮಾತನಾಡಿದ ರೋಹಿತ್ ಭಾವುಕರಾದರು. ಮತ್ತಷ್ಟು ಕಾಲ ನಮ್ಮೊಂದಿಗೆ ಸೇವೆ ಸಲ್ಲಿಸುವಂತೆ ನಾನು ದ್ರಾವಿಡ್ ಅವರನ್ನು ಮನವೊಲಿಸಲು ಪ್ರಯತ್ನಿಸಿದೆ. ಆದರೆ, ಸಾಧ್ಯವಾಗಲಿಲ್ಲ. ಅವರು ನೋಡಿಕೊಳ್ಳಲು ಬಹಳಷ್ಟು ವಿಷಯಗಳಿವೆ. ನಾನು ವೈಯಕ್ತಿಕವಾಗಿ ಅವರೊಂದಿಗೆ ತುಂಬಾ ಆನಂದಿಸಿದೆ. ಉಳಿದ ಆಟಗಾರರು ಸಹ ಹೇಳುವುದು ಇದನ್ನೇ ಎಂದಿದ್ದಾರೆ.
ಅವರೊಂದಿಗಿನ ಪ್ರಯಾಣ ನಿಜಕ್ಕೂ ಅದ್ಭುತವಾಗಿತ್ತು. ನಾನು ನಿಜವಾಗಿ ಏನನ್ನೂ ಹೇಳಲು ಹೋಗುವುದಿಲ್ಲ ಎಂದು ರೋಹಿತ್ ಹೇಳಿದ್ದಾರೆ. ದ್ರಾವಿಡ್ ಅವಧಿಯಲ್ಲಿ ಟೀಮ್ ಇಂಡಿಯಾ ಏಷ್ಯಾಕಪ್ ಪ್ರಶಸ್ತಿ ಗೆದ್ದಿದ್ದೇ ದೊಡ್ಡ ಪ್ರಶಸ್ತಿಯಾಗಿದೆ. ಉಳಿದಂತೆ ಸಾಕಷ್ಟು ಸರಣಿಗಳನ್ನು ಗೆದ್ದಿದ್ದಾರೆ. ಆದರೆ ಐಸಿಸಿ ಟೂರ್ನಿ ಗೆಲ್ಲಲು ವಿಫಲರಾಗಿದ್ದಾರೆ. ದ್ರಾವಿಡ್ ಮುಖ್ಯ ಕೋಚ್ ಆಗಿ ಟೀಮ್ ಇಂಡಿಯಾ 71 ಪಂದ್ಯಗಳನ್ನು ಆಡಿದೆ.
ಈ ಪೈಕಿ 50 ಪಂದ್ಯಗಳನ್ನು ಗೆದ್ದಿರುವ ಭಾರತ, 17 ಪಂದ್ಯ ಸೋತಿದೆ. 2 ಪಂದ್ಯಗಳು ಟೈನಲ್ಲಿ ಕೊನೆಗೊಂಡರೆ, 2 ಪಂದ್ಯಗಳು ರದ್ದುಗೊಂಡಿವೆ. 2021ರ ನವೆಂಬರ್ನಲ್ಲಿ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡ ನಂತರ ದ್ರಾವಿಡ್ ನೇತೃತ್ವದ ಭಾರತ, 2021-23 ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಮತ್ತು 2023ರ ವಿಶ್ವಕಪ್ ಫೈನಲ್ನಲ್ಲಿ ಸ್ಪರ್ಧಿಸಿತು. 2022ರ ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿತ್ತು.
'ನಾನು ದ್ರಾವಿಡ್ ಅವರಿಂದ ಕಲಿಯಲು ಬಯಸಿದ್ದೆ'
ದ್ರಾವಿಡ್ ತಮ್ಮ ವೃತ್ತಿಜೀವನದುದ್ದಕ್ಕೂ ಸಾಕಷ್ಟು ದೃಢನಿಶ್ಚಯವನ್ನು ತೋರಿಸಿದ್ದಾರೆ. ಅವರು ಕೋಚ್ ಆದಾಗ ನಾನು ಅವರಿಂದ ಕಲಿಯಲು ಬಯಸಿದ್ದೆ. ಇದೀಗ ಅದು ತುಂಬಾ ಫಲಪ್ರದ ನೀಡಿದೆ. ಅವರ ಮಾರ್ಗದರ್ಶನದಲ್ಲಿ ಎಲ್ಲಾ ಪ್ರಮುಖ ಸರಣಿ ಗೆದ್ದಿದ್ದೇವೆ. ನಾನು ಅವರೊಂದಿಗಿನ ಪ್ರತಿ ಕ್ಷಣವನ್ನೂ ಆನಂದಿಸಿದ್ದೇನೆ. ಅದರಂತೆ ತಂಡವು ಯಾವ ದಿಕ್ಕಿನಲ್ಲಿ ಸಾಗಬೇಕು ಎಂದು ನಿರ್ಧರಿಸುತ್ತೇನೆ ಎಂದಿದ್ದಾರೆ.
ಟಿ20 ವಿಶ್ವಕಪ್ 2024 ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ