ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮಿಂಚಿನ ಅರ್ಧಶತಕ, ಆರ್​ಸಿಬಿ ಜಯಭೇರಿ; ತವರಿನಲ್ಲಿ ಕೆಕೆಆರ್​ಗೆ ಮುಖಭಂಗ
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮಿಂಚಿನ ಅರ್ಧಶತಕ, ಆರ್​ಸಿಬಿ ಜಯಭೇರಿ; ತವರಿನಲ್ಲಿ ಕೆಕೆಆರ್​ಗೆ ಮುಖಭಂಗ

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮಿಂಚಿನ ಅರ್ಧಶತಕ, ಆರ್​ಸಿಬಿ ಜಯಭೇರಿ; ತವರಿನಲ್ಲಿ ಕೆಕೆಆರ್​ಗೆ ಮುಖಭಂಗ

ಐಪಿಎಲ್ 2025ರ ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿ ಅಭಿಯಾನ ಆರಂಭಿಸಿದೆ.

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮಿಂಚು, ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಜಯಭೇರಿ; ತವರಿನಲ್ಲಿ ಕೆಕೆಆರ್​ಗೆ ಮುಖಭಂಗ
ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಮಿಂಚು, ಉದ್ಘಾಟನಾ ಪಂದ್ಯದಲ್ಲೇ ಆರ್​ಸಿಬಿ ಜಯಭೇರಿ; ತವರಿನಲ್ಲಿ ಕೆಕೆಆರ್​ಗೆ ಮುಖಭಂಗ (REUTERS)

ಕೃನಾಲ್ ಪಾಂಡ್ಯ ಅವರ ಅದ್ಭುತ ಬೌಲಿಂಗ್ (29/3) ಜೊತೆಗೆ ವಿರಾಟ್ ಕೊಹ್ಲಿ (59*), ಫಿಲ್ ಸಾಲ್ಟ್ (55) ಅವರ ಅಬ್ಬರದ ಬ್ಯಾಟಿಂಗ್ ಸಹಾಯದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ ಅಭಿಯಾನ ಆರಂಭಿಸಿದೆ. ಈ ಸೋಲಿನೊಂದಿಗೆ ಹಾಲಿ ಚಾಂಪಿಯನ್ ತಮ್ಮ ತವರಿನ ಅಭಿಮಾನಿಗಳ ಮುಂದೆ ಮುಖಭಂಗಕ್ಕೆ ಒಳಗಾಯಿತು. ಇದರೊಂದಿಗೆ 2008ರ ಉದ್ಘಾಟನಾ ಆವೃತ್ತಿಯ ಉದ್ಘಾಟನಾ ಪಂದ್ಯದ ಸೋಲಿಗೆ ಅದೇ ಉದ್ಘಾಟನಾ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಆರ್​ಸಿಬಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಟಾಸ್ ಗೆದ್ದು ಅಜಿಂಕ್ಯ ರಹಾನೆ ನೇತೃತ್ವದ ತಂಡಕ್ಕೆ ಬ್ಯಾಟಿಂಗ್ ಆಹ್ವಾನ ಮಾಡಿದರು. ಅದರಂತೆ ಬ್ಯಾಟಿಂಗ್ ನಡೆಸಿದ ಕೆಕೆಆರ್, ರಹಾನೆ ಅವರ ಸ್ಫೋಟಕ ಅರ್ಧಶತಕದ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 174 ರನ್​​ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಕೃನಾಲ್ ಪಾಂಡ್ಯ 3, ಜೋಶ್ ಹೇಜಲ್​ವುಡ್ 2 ವಿಕೆಟ್ ಕಿತ್ತು ಮಿಂಚಿದರು. 175 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ, 3 ವಿಕೆಟ್ ನಷ್ಟಕ್ಕೆ 177 ರನ್ ಗಳಿಸಿ ಇನ್ನೂ 22 ಎಸೆತಗಳನ್ನು ಬಾಕಿ ಉಳಿಸಿ ಗೆಲುವಿನ ದಡ ಸೇರಿತು. ವಿರಾಟ್ ಕೊಹ್ಲಿ 59 (ಅಜೇಯ) ರನ್, ಫಿಲ್ ಸಾಲ್ಟ್ 55 ರನ್, ರಜತ್ ಪಾಟೀದಾರ್​ 35 ರನ್ ಸಿಡಿಸಿ ಮಿಂಚಿದರು. ಕೃನಾಲ್ ಪಾಂಡ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಸಾಲ್ಟ್​, ಕೊಹ್ಲಿ ಅರ್ಧಶತಕ ಮಿಂಚು

175 ರನ್ ಗುರಿ ಬೆನ್ನಟ್ಟಿದ ಆರ್​ಸಿಬಿ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್​​ಗೆ 95 ರನ್​ ಹರಿದು ಬಂತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಅವರು ಪವರ್​ಪ್ಲೇನಲ್ಲಿ 80 ರನ್ ಕಲೆ ಹಾಕುವ ಮೂಲಕ ಕೆಕೆಆರ್​ ಬೌಲಿಂಗ್ ಪಡೆಯನ್ನು ಧ್ವಂಸಗೊಳಿಸಿದರು. ಕಳೆದ ವರ್ಷ ಕೆಕೆಆರ್ ಪರವೇ ಆಡಿದ್ದ ಸಾಲ್ಟ್ ಇದೀಗ ಅದೇ ತಂಡದ ವಿರುದ್ಧ ಬಿರುಸಿನ ಬ್ಯಾಟಿಂಗ್ ನಡೆಸಿ ಸ್ಫೋಟಕ ಅರ್ಧಶತಕ ಬಾರಿಸಿದರು. 31 ಎಸೆತಗಳಲ್ಲಿ 9 ಬೌಂಡರಿ 2 ಸಿಕ್ಸರ್​ ಸಹಿತ 56 ರನ್​ಗಳ ಭರ್ಜರಿ ಅಟವಾಡುವ ಮೂಲಕ ಉತ್ತಮ ಭದ್ರಬುನಾದಿ ಹಾಕಿಕೊಟ್ಟು ವರುಣ್ ಚಕ್ರವರ್ತಿ ಬೌಲಿಂಗ್​ನಲ್ಲಿ ಔಟಾದರು. ಬಳಿಕ ವಿರಾಟ್ ಫಿಫ್ಟಿ ಬಾರಿಸಿದರು. 36 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಿತ ಅಜೇಯ 59 ರನ್ ಸಿಡಿಸಿದರು. ಇದು ಕೊಹ್ಲಿಯ 56ನೇ ಐಪಿಎಲ್ ಅರ್ಧಶತಕ. ಇದೇ ವೇಳೆ ಕೆಕೆಆರ್​ ವಿರುದ್ಧ 1000 ರನ್ ಪೂರೈಸಿದರು. ದೇವದತ್ ಪಡಿಕ್ಕಲ್ 10 ರನ್ ಗಳಿಸಿ ನಿರಾಸೆ ಮೂಡಿಸಿದರೆ, ರಜತ್ ಪಾಟೀದಾರ್ ಬಿರು್ಗಾಳಿ ಬ್ಯಾಟಿಂಗ್ ನಡೆಸಿ 34 ರನ್ ಚಚ್ಚಿದರು. ಕೊನೆಯಲ್ಲಿ 5 ಎಸೆತಗಳಲ್ಲಿ ಅಜೇಯ 15 ರನ್ ಗಳಿಸಿದ ಲಿಯಾಮ್ ವಿಲಿಂಗ್​ಸ್ಟೋನ್, 16.2ನೇ ಓವರ್​ನಲ್ಲಿ ಬೌಂಡರಿ ಸಿಡಿಸಿ ತಂಡವನ್ನು ಗೆಲುವಿನ ಗೆರೆ ದಾಟಿಸಿದರು.

ಕೆಕೆಆರ್ ಅಬ್ಬರಕ್ಕೆ ಬ್ರೇಕ್ ಹಾಕಿದ ಕೃನಾಲ್ ಪಾಂಡ್ಯ 

ತವರಿನ ಅಭಿಮಾನಿಗಳ ಮುಂದೆ ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್, ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಓವರ್​​​ನಲ್ಲಿ ಜೀವದಾನ ಪಡೆದರೂ ಕ್ವಿಂಟನ್ ಡಿ ಕಾಕ್ (4)​ ಅವರನ್ನು ಅದೇ ಓವರ್​​ನಲ್ಲಿ ಜೋಶ್ ಹೇಜಲ್​ವುಡ್ ಹೊರದಬ್ಬುವ ಮೂಲಕ ಆರ್​ಸಿಬಿಗೆ ಮುನ್ನಡೆ ತಂದರು. ಬಳಿಕ ನಾಯಕ ಅಜಿಂಕ್ಯ ರಹಾನೆ, ಸುನಿಲ್ ನರೇನ್ ಜೊತೆಗೂಡಿ ಆರ್​ಸಿಬಿ ಬೌಲಿಂಗ್ ದಾಳಿಯನ್ನು ಪುಡಿಗಟ್ಟಿದರು. 2ನೇ ವಿಕೆಟ್​​ಗೆ 55 ಎಸೆತಗಳಲ್ಲಿ 103 ರನ್​ಗಳ ಜೊತೆಯಾಟವಾಡಿದರು. ಅದರಲ್ಲೂ ಅಜಿಂಕ್ಯ ರಹಾನೆ ಆಟ ನೆರೆದಿದ್ದ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿತು.

ಆರಂಭದ ಎರಡು ಓವರ್​ಗಳಲ್ಲಿ ಹಿಡಿತ ಸಾಧಿಸಿದ್ದ ಆರ್​ಸಿಬಿ ಬೌಲರ್​ಗಳು ಬಳಿಕ ಹಳಿ ತಪ್ಪಿದರು. ರಹಾನೆ ಸಿಕ್ಸರ್​-ಬೌಂಡರಿಗಳ ಸುರಿಮಳೆಗೈದರು. ಕೇವಲ 31 ಎಸೆತಗಳಲ್ಲಿ 6 ಬೌಂಡರಿ, 4 ಸಿಕ್ಸರ್​ ಸಹಿತ 56 ರನ್ ಚಚ್ಚಿದರು. ಮತ್ತೊಂದು ತುದಿಯಲ್ಲಿ ನರೇನ್ 26 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಿತ 44 ರನ್ ಗಳಿಸಿದರು. ಆದರೆ ರಹಾನೆ ಮತ್ತು ನರೈನ್ ಆಟವು ತಂಡದ ಮೊತ್ತವನ್ನು 230ರ ಗಡಿ ದಾಟಿಸುತ್ತದೆ ಎಂದು ಅಂದಾಜು ಮಾಡಲಾಗಿತ್ತು. ಅದಕ್ಕೆ ಆರ್​ಸಿಬಿ ಬೌಲರ್​ಗಳು ಅವಕಾಶ ನೀಡಲಿಲ್ಲ. ಕೃನಾಲ್ ಪಾಂಡ್ಯ ಪ್ರಮುಖ ಮೂರು ವಿಕೆಟ್ ಪಡೆದು ಮಿಂಚಿದರು. ಆದರೆ ನರೇನ್ ಔಟಾದ ಬಳಿಕ ಆರ್​ಸಿಬಿ ಮೇಲುಗೈ ಸಾಧಿಸಲು ಪ್ರಾರಂಭವಾಯಿತು.

ರಸಿಕ್ ಸಲಾಮ್​ಗೆ ವೆಸ್ಟ್ ಇಂಡೀಸ್ ಆಟಗಾರ ಔಟಾದರೆ, ರಹಾನೆ ಕೃನಾಲ್​ ಪಾಂಡ್ಯಗೆ ವಿಕೆಟ್ ಒಪ್ಪಿಸಿದರು.  ಇದರ ಜೊತೆಗೆ ಕೃನಾಲ್ ಇನ್ನೆರಡು ವಿಕೆಟ್ ಕಿತ್ತರು. ವೆಂಕಟೇಶ್ ಅಯ್ಯರ್ (6), ರಿಂಕು ಸಿಂಗ್​ರನ್ನು (12) ಕಡಿಮೆ ಮೊತ್ತಕ್ಕೆ ಔಟ್ ಮಾಡಿದರು. ಬಳಿಕ ಆಂಡ್ರೆ ರಸೆಲ್ (4), ರಮಣದೀಪ್ ಸಿಂಗ್ (6*) ನಿರಾಸೆ ಮೂಡಿಸಿದರು. ಇದು ಕೆಕೆಆರ್ ತಂಡದ ಮೊತ್ತ ದಿಢೀರ್ ಕುಸಿಯಲು ಕಾರಣವಾಯಿತು. 

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner