ತವರಿನಲ್ಲಿ ಸತತ 3ನೇ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ; ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು
ಕನ್ನಡ ಸುದ್ದಿ  /  ಕ್ರಿಕೆಟ್  /  ತವರಿನಲ್ಲಿ ಸತತ 3ನೇ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ; ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು

ತವರಿನಲ್ಲಿ ಸತತ 3ನೇ ಪಂದ್ಯದಲ್ಲಿ ಮುಗ್ಗರಿಸಿದ ಆರ್‌ಸಿಬಿ; ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು

ತವರಿನಲ್ಲಿ ಸತತ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ, ಮೊದಲ ಇನ್ನಿಂಗ್ಸ್ ವೇಳೆಯೇ ಸೋಲು ಒಪ್ಪಿಕೊಂಡಂತಿತ್ತು. ಕೇವಲ 95 ರನ್‌ ಮಾತ್ರ ಗಳಿಸಿ ಪಂಜಾಬ್‌ ತಂಡ ಸುಲಭ ಚೇಸಿಂಗ್‌ ಮಾಡಲು ಅವಕಾಶ ಮಾಡಿಕೊಟ್ಟಿತು.

ತವರಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಆರ್‌ಸಿಬಿ; ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು
ತವರಲ್ಲಿ ಮತ್ತೊಮ್ಮೆ ಮುಗ್ಗರಿಸಿದ ಆರ್‌ಸಿಬಿ; ಮಳೆ ಬಾಧಿಸಿದ ಪಂದ್ಯದಲ್ಲಿ ಪಂಜಾಬ್‌ಗೆ ಗೆಲುವು (ANI)

ಹೊರಗಡೆ ಹುಲಿ, ತವರಲ್ಲಿ ಬೆಕ್ಕು... ಈ ಮಾತು ಆರ್‌ಸಿಬಿ ತಂಡಕ್ಕೆ ಸರಿಯಾಗಿ ಹೊಂದಿಕೆಯಾಗುವಂತಿದೆ. ಐಪಿಎಲ್‌ 18ನೇ ಆವೃತ್ತಿಯಲ್ಲಿ ತವರು ಮೈದಾನ ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಈವರೆಗ ಆಡಿದ ಮೂರೂ ಪಂದ್ಯಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಮುಗ್ಗರಿಸಿದೆ. ತವರಿನ ಹೊರಗೆ ಆಡಿದ ಎಲ್ಲಾ 4 ಪಂದ್ಯಗಳಲ್ಲಿ ಸುಲಭವಾಗಿ ಗೆದ್ದಿರುವ ಆರ್‌ಸಿಬಿಗೆ ತವರಿನಲ್ಲಿ ಇನ್ನೂ ಒಂದು ಪಂದ್ಯವೂ ಗೆಲ್ಲಲು ಸಾಧ್ಯವಾಗಿಲ್ಲ. ಇದಕ್ಕೆ ಹೊಸ ಸರ್ಪಡೆಯೇ ಪಂಜಾಬ್‌ ಕಿಂಗ್ಸ್‌ ವಿರುದ್ಧದ ಸೋಲು. ಮಳೆಯಿಂದ 14 ಓವರ್‌ಗಳಿಗೆ ಸೀಮಿತವಾದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡ 5 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ತವರಿನಲ್ಲಿ ಟಾಸ್‌ ಸೋತು ಸತತ ಮೂರನೇ ಪಂದ್ಯದಲ್ಲಿಯೂ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ಮತ್ತೊಮ್ಮೆ ತವರಿನ ಸಾವಿರಾರು ಅಭಿಮಾನಿಗಳ ಮುಂದೆ ಅಬ್ಬರಿಸುವುದನ್ನು ಮರೆತಿತು. ಹೀಗಾಗಿ ಕೇವಲ 95 ರನ್‌ ಮಾತ್ರ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಪಂಜಾಬ್‌ ತಂಡ, ಕೇವಲ 12.1 ಓವರ್‌ಗಳಲ್ಲಿ ಗುರಿ ತಲುಪಿತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ಆರಂಭದಿಂದಲೇ ವಿಕೆಟ್‌ ಕಳೆದುಕೊಳ್ಳುತ್ತಾ ಸಾಗಿತ್ತು. ಫಿಲ್‌ ಸಾಲ್ಟ್‌ 4, ವಿರಾಟ್‌ ಕೊಹ್ಲಿ 1, ಲಿವಿಂಗ್‌ಸ್ಟನ್‌ 4, ಜಿತೇಶ್‌ ಶರ್ಮಾ 2, ಕೃನಾಲ್‌ ಪಾಂಡ್ಯ 1, ಹೀಗೆ ಮೇಲಿಂದ ಮೇಲೆ ಐವರು ಬ್ಯಾಟರ್‌ಗಳು ಕೇವಲ ಒಂದಂಕಿ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿದರು. ಆರಂಭದಲ್ಲೇ ಪಂಜಾಬ್‌ ಮೇಲುಗೈ ಸಾಧಿಸಿತು.

ರಜತ್‌ ಪಾಟೀದಾರ್‌ ದಾಖಲೆ

ನಾಯಕ ರಜತ್‌ ಪಾಟೀದಾರ್‌ 18 ಎಸೆತಗಳಲ್ಲಿ 23 ರನ್‌ ಗಳಿಸಿದರು. ಇದು ತಂಡದ ಪರ ಎರಡನೇ ಗರಿಷ್ಠ ಮೊತ್ತ. ಇದರೊಂದಿಗೆ ಅವರು, ಐಪಿಎಲ್‌ನಲ್ಲಿ ಆರ್‌ಸಿಬಿ ಪರ 1000 ರನ್‌ಗಳ ಗಡಿ ದಾಟಿದ ಭಾರತದ ಕೇವಲ ಮೂರನೇ ಆಟಗಾರ ಎನಿಸಿಕೊಂಡರು. ಈ ಹಿಂದೆ ವಿರಾಟ್‌ ಕೊಹ್ಲಿ ಮತ್ತು ದೇವದತ್‌ ಪಡಿಕಲ್‌ ಮಾತ್ರ ಈ ಸಾಧನೆ ಮಾಡಿದ್ದರು. ಇಷ್ಟೇ ಅಲ್ಲದೆ, ಐಪಿಎಲ್‌ನಲ್ಲಿ ಅತಿ ಕಡಿಮೆ ಇನ್ನಿಂಗ್ಸ್‌ನಲ್ಲಿ 1000 ರನ್‌ ಪೂರೈಸಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ರಜತ್‌ ತಮ್ಮ 30ನೇ ಐಪಿಎಲ್‌ ಇನ್ನಿಂಗ್ಸ್‌ನಲ್ಲಿ 1000 ರನ್‌ ಗಡಿ ದಾಟಿದ್ದಾರೆ. ಆ ಮೂಲಕ ಸಚಿನ್‌ ತೆಂಡೂಲ್ಕರ್‌ (31 ಇನ್ನಿಂಗ್ಸ್)‌ ದಾಖಲೆ ಮುರಿದಿದ್ದಾರೆ.

ಆರ್‌ಸಿಬಿ ತಂಡದ ಗೌರವ ಉಳಿಸಿದ್ದೇ ಕೆಳಕ್ರಮಾಂಕದ ಬ್ಯಾಟರ್‌ ಟಿಮ್‌ ಡೇವಿಡ್‌. 50 ರನ್‌ ಒಳಗೆ ಆಲೌಟ್‌ ಆಗುವಂತಿದ್ದ ಆರ್‌ಸಿಬಿ ತಂಡದ ಮೊತ್ತವನ್ನು 100ರ ಸಮೀಪ ಕೊಂಡೊಯ್ದರು. 26 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್‌ ಸಹಿತ ಆಕರ್ಷಕ ಅರ್ಧಶತಕ (50 ರನ್‌) ಬಾರಿಸಿದರು.

ಪಂಜಾಬ್‌ ಗೆಲುವು

ಚೇಸಿಂಗ್‌ ಆರಂಭಿಸಿದ ಪಂಜಾಬ್‌, ನಿಧಾನಗತಿಯಲ್ಲಿ ಇನ್ನಿಂಗ್ಸ್‌ ಆರಂಭಿಸಿತು. ಆದರೆ ತಂಡಕ್ಕೂ ಪಿಚ್‌ ನೆರವಾಗಲಿಲ್ಲ. ಪ್ರಭ್‌ಸಿಮ್ರಾನ್‌ ಸಿಂಗ್‌ 13 ಹಾಗೂ ಶತಕವೀರ ಪ್ರಿಯಾಂಶ್‌ ಆರ್ಯ 16 ರನ್‌ ಗಳಿಸಿದರು. ನಾಯಕ ಶ್ರೇಯಸ್‌ ಅಯ್ಯರ್‌ 7 ರನ್‌ ಗಳಿಸಿ ಔಟಾದರೆ, ಜೋಶ್‌ ಹೇಜಲ್‌ವುಡ್‌ ಎಸೆದ ಅದೇ ಓವರ್‌ನಲ್ಲಿ ಜೋಶ್‌ ಇಂಗ್ಲಿಸ್‌ ಕೂಡಾ 14 ರನ್‌ ಗಳಿಸಿ ಔಟಾದರು. ಈ ವೇಳೆ ಅಬ್ಬರಿಸಿದ ನೆಹಾಲ್‌ ವಧೇರಾ, ಬೌಂಡರಿ ಸಿಕ್ಸರ್‌ಗಳ ಮೂಲಕ ಗುರಿ ಬೆನ್ನಟ್ಟಿದರು. 19 ಎಸೆತಗಳಲ್ಲಿ ಅಜೇಯ 33 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.