ಸಿಎಸ್​ಕೆ ವಿರುದ್ಧ 2 ರನ್​ಗಳ ರೋಚಕ ಗೆಲುವು; ಆರ್​ಸಿಬಿ ಟೇಬಲ್ ಟಾಪರ್, ಪ್ಲೇಆಫ್​ಗೂ ಸನಿಹ
ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್​ಕೆ ವಿರುದ್ಧ 2 ರನ್​ಗಳ ರೋಚಕ ಗೆಲುವು; ಆರ್​ಸಿಬಿ ಟೇಬಲ್ ಟಾಪರ್, ಪ್ಲೇಆಫ್​ಗೂ ಸನಿಹ

ಸಿಎಸ್​ಕೆ ವಿರುದ್ಧ 2 ರನ್​ಗಳ ರೋಚಕ ಗೆಲುವು; ಆರ್​ಸಿಬಿ ಟೇಬಲ್ ಟಾಪರ್, ಪ್ಲೇಆಫ್​ಗೂ ಸನಿಹ

ಇಂಡಿಯನ್ ಪ್ರೀಮಿಯರ್ ಲೀಗ್ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ರನ್​ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್​ಸಿಬಿ ಪ್ಲೇಆಫ್​ಗೆ ಮತ್ತಷ್ಟು ಹತ್ತಿರವಾಯಿತು.

ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 2 ರನ್​ಗಳ ರೋಚಕ ಗೆಲುವು; ಆರ್​ಸಿಬಿ ಟೇಬಲ್ ಟಾಪರ್, ಪ್ಲೇಆಫ್​ಗೂ ಸನಿಹ
ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ 2 ರನ್​ಗಳ ರೋಚಕ ಗೆಲುವು; ಆರ್​ಸಿಬಿ ಟೇಬಲ್ ಟಾಪರ್, ಪ್ಲೇಆಫ್​ಗೂ ಸನಿಹ (AP)

ಹೌದು.. 2024ರ ಐಪಿಎಲ್​ನಲ್ಲಿ ಆರ್​ಸಿಬಿ vs ಸಿಎಸ್​ಕೆ ನಡುವಿನ ಕೊನೆಯ ಲೀಗ್ ಪಂದ್ಯದ ದೃಶ್ಯಗಳು ಮತ್ತೊಮ್ಮೆ ಕಣ್ಮುಂದೆ ಹಾದುಹೋದವು. 2025ರ ಐಪಿಎಲ್​ನ 52ನೇ ಪಂದ್ಯದಲ್ಲೂ ಥೇಟ್ ಅದೇ ದೃಶ್ಯಗಳು ಸಾಕ್ಷಿಯಾದವು. ಅಂಥಹದ್ದೇ ರೋಚಕ ಗೆಲುವನ್ನು ಅಭಿಮಾನಿಗಳು ಮತ್ತೆ ಕಣ್ತುಂಬಿಕೊಂಡರು. ಜಿದ್ದಾಜಿದ್ದಿನ ಕೊನೆಯ ಓವರ್​​ನಲ್ಲಿ ಗೆಲುವಿಗೆ 15 ರನ್ ಬೇಕಿದ್ದಾಗ ಯಶ್ ದಯಾಳ್ ಮಾರಕ ಬೌಲಿಂಗ್ ದಾಳಿ ನಡೆಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕನಸಿಗೆ ತಣ್ಣೀರೆರಚಿದರು. 2024ರಂತೆಯೇ ಈ ಬಾರಿಯೂ ಯಶ್ ದಯಾಳ್ ಸಂಭ್ರಮಿಸುವ ಮೂಲಕ ಗಮನ ಸೆಳೆದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ 18ನೇ ಆವೃತ್ತಿಯ ಐಪಿಎಲ್​ನ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ರನ್​ಗಳ ರೋಚಕ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 8ನೇ ಗೆಲುವು ಸಾಧಿಸಿದ ಆರ್​ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ಲೇಆಫ್​ಗೆ ಮತ್ತಷ್ಟು ಹತ್ತಿರವಾಯಿತು. ಇದು 2024ರಲ್ಲಿ ಸಿಎಸ್​ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯದ ಗೆಲುವನ್ನೇ ನೆನಪಿಸಿತು. ಇದೇ ಮೊದಲ ಬಾರಿಗೆ ಸಿಎಸ್​ಕೆ ವಿರುದ್ಧ ಆರ್​ಸಿಬಿ ಆವೃತ್ತಿಯೊಂದರಲ್ಲಿ ಎರಡಕ್ಕೆ ಎರಡೂ ಗೆಲುವು ಸಾಧಿಸಿದೆ.

ಗೆಲುವಿನ ಆಸೆ ತೋರಿಸಿ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡ ಆರ್​​ಸಿಬಿಗೆ ಪ್ರಸಕ್ತ ಆವೃತ್ತಿಯಲ್ಲಿ ಇದು ತವರಿನಲ್ಲಿ ಎರಡನೇ ಗೆಲುವು. ಒಟ್ಟಾರೆ ಟೂರ್ನಿಯಲ್ಲಿ 8ನೇ ಜಯದ ನಗೆ ಬೀರಿದ ರಜತ್ ಪಾಟೀದಾರ್ ಪಡೆ ಒಟ್ಟು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ಪ್ರವೇಶಿಸಲು ಇನ್ನೂ ಒಂದು ಗೆಲುವು ಅಗತ್ಯವಿದೆ. ಮತ್ತೊಂದೆಡೆ ಸಿಎಸ್​ಕೆ ಪ್ರಸಕ್ತ ಆವೃತ್ತಿಯಲ್ಲಿ 9ನೇ ಸೋಲಿಗೆ ಶರಣಾಗಿದೆ. 4 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಉಳಿದಿದೆ. ಉಭಯ ತಂಡಗಳ ನಡುವಿನ ರೋಚಕ ಕದನದಲ್ಲಿ ಕೊನೆಯ ಎಸೆತದಲ್ಲಿ ಫಲಿತಾಂಶ ನಿರ್ಧಾರವಾಯಿತು.

ಕೊಹ್ಲಿ-ಬೆಥೆಲ್ ಮಿಂಚು, ಶೆಫರ್ಡ್ ಸ್ಫೋಟ

ಚಿನ್ನಸ್ವಾಮಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್​ಸಿಬಿ, ಬಿರುಸಿನ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 97 ರನ್​ಗಳು ಹರಿದು ಬಂತು. ಇದು ಸಿಎಸ್​ಕೆ ವಿರುದ್ಧ ಬಂದ ಆರ್​ಸಿಬಿಯ ಅತ್ಯಧಿಕ ಎರಡನೇ ಜೊತೆಯಾಟ. ಜೇಕಬ್ ಬೆಥೆಲ್ ಮತ್ತು ವಿರಾಟ್ ಕೊಹ್ಲಿ ಸಿಎಸ್​ಕೆ ಬೌಲರ್​ಗಳ ಮೇಲೆ ಅಕ್ಷರಶಃ ದಂಡಯಾತ್ರೆ ನಡೆಸಿದರು. ಇಬ್ಬರೂ ಸ್ಫೋಟಕ ಅರ್ಧಶತಕ ಬಾರಿಸಿ ಬೃಹತ್ ಮೊತ್ತದತ್ತ ದಾಖಲಿಸುವ ಭರವಸೆ ಮೂಡಿಸಿದರು. ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 62 ರನ್, ಬೆಥೆಲ್ 33 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 55 ರನ್ ಬಾರಿಸಿ ಔಟಾದರು. ಆದರೆ ಇವರಿಬ್ಬರ ಬಳಿಕ ತಂಡದ ಮೊತ್ತ ಆಘಾತಕಾರಿಯಾಗಿ ಕುಸಿಯಿತು.

ಸಿಎಸ್​ಕೆ ಬೌಲರ್​​ಗಳು ಮತ್ತೆ ಹಿಡಿತ ಸಾಧಿಸಿದರು. ಕೊಹ್ಲಿ ಔಟಾದಾಗ 11.5 ಓವರ್​ಗಳಲ್ಲಿ 121 ಆಗಿತ್ತು. ಬಳಿಕ ದೇವದತ್ ಪಡಿಕ್ಕಲ್ (17), ರಜತ್ ಪಾಟೀದಾರ್ (11), ಜಿತೇಶ್ ಶರ್ಮಾ (7) ತೀವ್ರ ನಿರಾಸೆ ಮೂಡಿಸಿದರು. 18 ಓವರ್​ಗಳವರೆಗೂ ಸ್ಕೋರ್​ ಇದ್ದದ್ದು 159. ಆದರೆ 19ನೇ ಓವರ್​ನಲ್ಲಿ ರೊಮಾರಿಯೊ ಶೆಫರ್ಡ್​ ಅಕ್ಷರಶಃ ಶಿವತಾಂಡವ ನಡೆಸಿದರು. ಖಲೀಲ್​ ಅಹ್ಮದ್​ರ ಆ ಓವರ್​​ನಲ್ಲಿ ಬರೋಬ್ಬರಿ 33 ರನ್ ಕಸಿದರು. ಇದು ತಂಡದ ಚಿತ್ರಣವನ್ನೇ ಬದಲಿಸಿತು. ಬಳಿಕ ಕೊನೆಯ ಓವರ್​ನಲ್ಲಿ 21 ರನ್ ಹೊಡೆದರು. ಆ ಮೂಲಕ 14 ಎಸೆತಗಳಲ್ಲೇ 53 ರನ್ ಗಳಿಸಿ ದಾಖಲೆ ಬರೆದರು. ಪರಿಣಾಮ ಆರ್​ಸಿಬಿ 20 ಓವರ್​​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213 ರನ್ ಪೇರಿಸಿತು.

ಆಯುಷ್-ಜಡೇಜಾ ಆಟ ವ್ಯರ್ಥ, ಯಶ್ ಅದ್ಭುತ ಬೌಲಿಂಗ್

214 ರನ್​ಗಳ ಗುರಿ ಬೆನ್ನಟ್ಟಿದ ಸಿಎಸ್​ಕೆ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ 51 ರನ್ ಹರಿದು ಬಂತು. ಶೇಕ್ ರಶೀದ್ (14) ಬೇಗನೇ ಔಟಾದರೂ 17 ವರ್ಷದ ಆಯುಷ್ ಮಾತ್ರೆ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕಳೆದ ಪಂದ್ಯದಲ್ಲಿ 88 ರನ್ ಚಚ್ಚಿದ್ದ ಸ್ಯಾಮ್ ಕರನ್ ಈಗ 5 ರನ್​ಗೆ ಸುಸ್ತಾದರು. ಈ ಹಂತದಲ್ಲಿ ಒಂದಾದ ಆಯುಷ್ ಮತ್ತು ರವೀಂದ್ರ ಜಡೇಜಾ ಜೋಡಿ 3ನೇ ವಿಕೆಟ್​ಗೆ ಕಲೆ ಹಾಕಿದ್ದು 114 ರನ್. ಆ ಮೂಲಕ ಆರ್​ಸಿಬಿ ಗೆಲುವನ್ನು ಬಹುತೇಕ ಕಸಿದುಬಿಟ್ಟರು. ಅದರಲ್ಲೂ ಆಯುಷ್ ಬಿರುಸಿನ ಬ್ಯಾಟಿಂಗ್ ಮೂಲಕ ಸ್ಕೋರ್​ ಒಂದೇ ಸಮನೆ ಏರಿಸಿದರು. 48 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್​ಗಳೊಂದಿಗೆ 94 ರನ್ ಗಳಿಸಿ ಶತಕದಂಚಿನಲ್ಲಿ ಮತ್ತು ಗೆಲುವಿನ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು.

ಹೀಗಿದ್ದರೂ ಸಿಎಸ್​ಕೆ ಸೋಲು ಖಚಿತವಾಗಿರಲಿಲ್ಲ. ಆಯುಷ್ ಔಟಾದ ಬಳಿಕ ರವೀಂದ್ರ ಜಡೇಜಾ ಆರ್ಭಟ ಶುರು ಮಾಡಿದರು. 45 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 77 ರನ್ ಗಳಿಸಿದರು. ಕೊನೆಯ ತನಕ ಕ್ರೀಸ್​​ನಲ್ಲಿ ಉಳಿದರೂ ಗೆಲುವು ತಂದುಕೊಡಲು ವಿಫಲರಾದರು. ಕೊನೆಯ ಓವರ್​​ನಲ್ಲಿ 15 ರನ್ ಬೇಕಿದ್ದ ಅವಧಿಯಲ್ಲಿ ಮೊದಲ ಎರಡು ಎಸೆತಗಳಲ್ಲಿ 2 ರನ್ ನೀಡಿದ ಯಶ್ ದಯಾಳ್ ಮೂರನೇ ಎಸೆತದಲ್ಲಿ ಎಂಎಸ್ ಧೋನಿ ಅವರನ್ನು ಎಲ್​ಬಿಡಬ್ಲ್ಯು ಮಾಡಿದರು. ಆದರೆ ನಾಲ್ಕನೇ ಎಸೆತದಲ್ಲಿ ನೋ ಬಾಲ್ ಸಿಕ್ಸರ್​ ಹೊಡೆಸಿಕೊಂಡರು. ಇದು ಸಿಎಸ್​ಕೆ ಕಡೆಗೆ ಪಂದ್ಯ ವಾಲುವಂತೆ ಮಾಡಿತು. ಆದರೆ ಮತ್ತೆ ಕಂಬ್ಯಾಕ್ ಮಾಡಿದ ಯಶ್, ಕೊನೆಯ 3 ಎಸೆತಗಳಿಗೆ ಕೇವಲ 3 ರನ್ ನೀಡಿ ರೋಚಕ ಗೆಲುವಿಗೆ ಕಾರಣರಾದರು. 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.