ಸಿಎಸ್ಕೆ ವಿರುದ್ಧ 2 ರನ್ಗಳ ರೋಚಕ ಗೆಲುವು; ಆರ್ಸಿಬಿ ಟೇಬಲ್ ಟಾಪರ್, ಪ್ಲೇಆಫ್ಗೂ ಸನಿಹ
ಇಂಡಿಯನ್ ಪ್ರೀಮಿಯರ್ ಲೀಗ್ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ರನ್ಗಳ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಆರ್ಸಿಬಿ ಪ್ಲೇಆಫ್ಗೆ ಮತ್ತಷ್ಟು ಹತ್ತಿರವಾಯಿತು.

ಹೌದು.. 2024ರ ಐಪಿಎಲ್ನಲ್ಲಿ ಆರ್ಸಿಬಿ vs ಸಿಎಸ್ಕೆ ನಡುವಿನ ಕೊನೆಯ ಲೀಗ್ ಪಂದ್ಯದ ದೃಶ್ಯಗಳು ಮತ್ತೊಮ್ಮೆ ಕಣ್ಮುಂದೆ ಹಾದುಹೋದವು. 2025ರ ಐಪಿಎಲ್ನ 52ನೇ ಪಂದ್ಯದಲ್ಲೂ ಥೇಟ್ ಅದೇ ದೃಶ್ಯಗಳು ಸಾಕ್ಷಿಯಾದವು. ಅಂಥಹದ್ದೇ ರೋಚಕ ಗೆಲುವನ್ನು ಅಭಿಮಾನಿಗಳು ಮತ್ತೆ ಕಣ್ತುಂಬಿಕೊಂಡರು. ಜಿದ್ದಾಜಿದ್ದಿನ ಕೊನೆಯ ಓವರ್ನಲ್ಲಿ ಗೆಲುವಿಗೆ 15 ರನ್ ಬೇಕಿದ್ದಾಗ ಯಶ್ ದಯಾಳ್ ಮಾರಕ ಬೌಲಿಂಗ್ ದಾಳಿ ನಡೆಸಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕನಸಿಗೆ ತಣ್ಣೀರೆರಚಿದರು. 2024ರಂತೆಯೇ ಈ ಬಾರಿಯೂ ಯಶ್ ದಯಾಳ್ ಸಂಭ್ರಮಿಸುವ ಮೂಲಕ ಗಮನ ಸೆಳೆದರು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಜರುಗಿದ 18ನೇ ಆವೃತ್ತಿಯ ಐಪಿಎಲ್ನ 52ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 2 ರನ್ಗಳ ರೋಚಕ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 8ನೇ ಗೆಲುವು ಸಾಧಿಸಿದ ಆರ್ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ಪ್ಲೇಆಫ್ಗೆ ಮತ್ತಷ್ಟು ಹತ್ತಿರವಾಯಿತು. ಇದು 2024ರಲ್ಲಿ ಸಿಎಸ್ಕೆ ವಿರುದ್ಧದ ಕೊನೆಯ ಲೀಗ್ ಪಂದ್ಯದ ಗೆಲುವನ್ನೇ ನೆನಪಿಸಿತು. ಇದೇ ಮೊದಲ ಬಾರಿಗೆ ಸಿಎಸ್ಕೆ ವಿರುದ್ಧ ಆರ್ಸಿಬಿ ಆವೃತ್ತಿಯೊಂದರಲ್ಲಿ ಎರಡಕ್ಕೆ ಎರಡೂ ಗೆಲುವು ಸಾಧಿಸಿದೆ.
ಗೆಲುವಿನ ಆಸೆ ತೋರಿಸಿ ವಿಜಯಲಕ್ಷ್ಮಿಯನ್ನು ತನ್ನತ್ತ ಒಲಿಸಿಕೊಂಡ ಆರ್ಸಿಬಿಗೆ ಪ್ರಸಕ್ತ ಆವೃತ್ತಿಯಲ್ಲಿ ಇದು ತವರಿನಲ್ಲಿ ಎರಡನೇ ಗೆಲುವು. ಒಟ್ಟಾರೆ ಟೂರ್ನಿಯಲ್ಲಿ 8ನೇ ಜಯದ ನಗೆ ಬೀರಿದ ರಜತ್ ಪಾಟೀದಾರ್ ಪಡೆ ಒಟ್ಟು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಪ್ಲೇಆಫ್ ಪ್ರವೇಶಿಸಲು ಇನ್ನೂ ಒಂದು ಗೆಲುವು ಅಗತ್ಯವಿದೆ. ಮತ್ತೊಂದೆಡೆ ಸಿಎಸ್ಕೆ ಪ್ರಸಕ್ತ ಆವೃತ್ತಿಯಲ್ಲಿ 9ನೇ ಸೋಲಿಗೆ ಶರಣಾಗಿದೆ. 4 ಅಂಕಗಳೊಂದಿಗೆ ಕೊನೆಯ ಸ್ಥಾನದಲ್ಲೇ ಉಳಿದಿದೆ. ಉಭಯ ತಂಡಗಳ ನಡುವಿನ ರೋಚಕ ಕದನದಲ್ಲಿ ಕೊನೆಯ ಎಸೆತದಲ್ಲಿ ಫಲಿತಾಂಶ ನಿರ್ಧಾರವಾಯಿತು.
ಕೊಹ್ಲಿ-ಬೆಥೆಲ್ ಮಿಂಚು, ಶೆಫರ್ಡ್ ಸ್ಫೋಟ
ಚಿನ್ನಸ್ವಾಮಿಯಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಬಿರುಸಿನ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 97 ರನ್ಗಳು ಹರಿದು ಬಂತು. ಇದು ಸಿಎಸ್ಕೆ ವಿರುದ್ಧ ಬಂದ ಆರ್ಸಿಬಿಯ ಅತ್ಯಧಿಕ ಎರಡನೇ ಜೊತೆಯಾಟ. ಜೇಕಬ್ ಬೆಥೆಲ್ ಮತ್ತು ವಿರಾಟ್ ಕೊಹ್ಲಿ ಸಿಎಸ್ಕೆ ಬೌಲರ್ಗಳ ಮೇಲೆ ಅಕ್ಷರಶಃ ದಂಡಯಾತ್ರೆ ನಡೆಸಿದರು. ಇಬ್ಬರೂ ಸ್ಫೋಟಕ ಅರ್ಧಶತಕ ಬಾರಿಸಿ ಬೃಹತ್ ಮೊತ್ತದತ್ತ ದಾಖಲಿಸುವ ಭರವಸೆ ಮೂಡಿಸಿದರು. ಕೊಹ್ಲಿ 33 ಎಸೆತಗಳಲ್ಲಿ 5 ಬೌಂಡರಿ, 5 ಸಿಕ್ಸರ್ ಸಹಿತ 62 ರನ್, ಬೆಥೆಲ್ 33 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ 55 ರನ್ ಬಾರಿಸಿ ಔಟಾದರು. ಆದರೆ ಇವರಿಬ್ಬರ ಬಳಿಕ ತಂಡದ ಮೊತ್ತ ಆಘಾತಕಾರಿಯಾಗಿ ಕುಸಿಯಿತು.
ಸಿಎಸ್ಕೆ ಬೌಲರ್ಗಳು ಮತ್ತೆ ಹಿಡಿತ ಸಾಧಿಸಿದರು. ಕೊಹ್ಲಿ ಔಟಾದಾಗ 11.5 ಓವರ್ಗಳಲ್ಲಿ 121 ಆಗಿತ್ತು. ಬಳಿಕ ದೇವದತ್ ಪಡಿಕ್ಕಲ್ (17), ರಜತ್ ಪಾಟೀದಾರ್ (11), ಜಿತೇಶ್ ಶರ್ಮಾ (7) ತೀವ್ರ ನಿರಾಸೆ ಮೂಡಿಸಿದರು. 18 ಓವರ್ಗಳವರೆಗೂ ಸ್ಕೋರ್ ಇದ್ದದ್ದು 159. ಆದರೆ 19ನೇ ಓವರ್ನಲ್ಲಿ ರೊಮಾರಿಯೊ ಶೆಫರ್ಡ್ ಅಕ್ಷರಶಃ ಶಿವತಾಂಡವ ನಡೆಸಿದರು. ಖಲೀಲ್ ಅಹ್ಮದ್ರ ಆ ಓವರ್ನಲ್ಲಿ ಬರೋಬ್ಬರಿ 33 ರನ್ ಕಸಿದರು. ಇದು ತಂಡದ ಚಿತ್ರಣವನ್ನೇ ಬದಲಿಸಿತು. ಬಳಿಕ ಕೊನೆಯ ಓವರ್ನಲ್ಲಿ 21 ರನ್ ಹೊಡೆದರು. ಆ ಮೂಲಕ 14 ಎಸೆತಗಳಲ್ಲೇ 53 ರನ್ ಗಳಿಸಿ ದಾಖಲೆ ಬರೆದರು. ಪರಿಣಾಮ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 213 ರನ್ ಪೇರಿಸಿತು.
ಆಯುಷ್-ಜಡೇಜಾ ಆಟ ವ್ಯರ್ಥ, ಯಶ್ ಅದ್ಭುತ ಬೌಲಿಂಗ್
214 ರನ್ಗಳ ಗುರಿ ಬೆನ್ನಟ್ಟಿದ ಸಿಎಸ್ಕೆ ಭರ್ಜರಿ ಆರಂಭ ಪಡೆಯಿತು. ಮೊದಲ ವಿಕೆಟ್ಗೆ 51 ರನ್ ಹರಿದು ಬಂತು. ಶೇಕ್ ರಶೀದ್ (14) ಬೇಗನೇ ಔಟಾದರೂ 17 ವರ್ಷದ ಆಯುಷ್ ಮಾತ್ರೆ ಭರ್ಜರಿ ಬ್ಯಾಟಿಂಗ್ ನಡೆಸಿದರು. ಕಳೆದ ಪಂದ್ಯದಲ್ಲಿ 88 ರನ್ ಚಚ್ಚಿದ್ದ ಸ್ಯಾಮ್ ಕರನ್ ಈಗ 5 ರನ್ಗೆ ಸುಸ್ತಾದರು. ಈ ಹಂತದಲ್ಲಿ ಒಂದಾದ ಆಯುಷ್ ಮತ್ತು ರವೀಂದ್ರ ಜಡೇಜಾ ಜೋಡಿ 3ನೇ ವಿಕೆಟ್ಗೆ ಕಲೆ ಹಾಕಿದ್ದು 114 ರನ್. ಆ ಮೂಲಕ ಆರ್ಸಿಬಿ ಗೆಲುವನ್ನು ಬಹುತೇಕ ಕಸಿದುಬಿಟ್ಟರು. ಅದರಲ್ಲೂ ಆಯುಷ್ ಬಿರುಸಿನ ಬ್ಯಾಟಿಂಗ್ ಮೂಲಕ ಸ್ಕೋರ್ ಒಂದೇ ಸಮನೆ ಏರಿಸಿದರು. 48 ಎಸೆತಗಳಲ್ಲಿ 9 ಬೌಂಡರಿ, 5 ಸಿಕ್ಸರ್ಗಳೊಂದಿಗೆ 94 ರನ್ ಗಳಿಸಿ ಶತಕದಂಚಿನಲ್ಲಿ ಮತ್ತು ಗೆಲುವಿನ ಸನಿಹದಲ್ಲಿ ವಿಕೆಟ್ ಒಪ್ಪಿಸಿದರು.
ಹೀಗಿದ್ದರೂ ಸಿಎಸ್ಕೆ ಸೋಲು ಖಚಿತವಾಗಿರಲಿಲ್ಲ. ಆಯುಷ್ ಔಟಾದ ಬಳಿಕ ರವೀಂದ್ರ ಜಡೇಜಾ ಆರ್ಭಟ ಶುರು ಮಾಡಿದರು. 45 ಎಸೆತಗಳಲ್ಲಿ 8 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 77 ರನ್ ಗಳಿಸಿದರು. ಕೊನೆಯ ತನಕ ಕ್ರೀಸ್ನಲ್ಲಿ ಉಳಿದರೂ ಗೆಲುವು ತಂದುಕೊಡಲು ವಿಫಲರಾದರು. ಕೊನೆಯ ಓವರ್ನಲ್ಲಿ 15 ರನ್ ಬೇಕಿದ್ದ ಅವಧಿಯಲ್ಲಿ ಮೊದಲ ಎರಡು ಎಸೆತಗಳಲ್ಲಿ 2 ರನ್ ನೀಡಿದ ಯಶ್ ದಯಾಳ್ ಮೂರನೇ ಎಸೆತದಲ್ಲಿ ಎಂಎಸ್ ಧೋನಿ ಅವರನ್ನು ಎಲ್ಬಿಡಬ್ಲ್ಯು ಮಾಡಿದರು. ಆದರೆ ನಾಲ್ಕನೇ ಎಸೆತದಲ್ಲಿ ನೋ ಬಾಲ್ ಸಿಕ್ಸರ್ ಹೊಡೆಸಿಕೊಂಡರು. ಇದು ಸಿಎಸ್ಕೆ ಕಡೆಗೆ ಪಂದ್ಯ ವಾಲುವಂತೆ ಮಾಡಿತು. ಆದರೆ ಮತ್ತೆ ಕಂಬ್ಯಾಕ್ ಮಾಡಿದ ಯಶ್, ಕೊನೆಯ 3 ಎಸೆತಗಳಿಗೆ ಕೇವಲ 3 ರನ್ ನೀಡಿ ರೋಚಕ ಗೆಲುವಿಗೆ ಕಾರಣರಾದರು. 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 211 ರನ್ ಗಳಿಸಿತು.