ಆರ್ಸಿಬಿಗೆ ಚಿನ್ನಸ್ವಾಮಿಯೇ ಕಬ್ಬಿಣದ ಕಡಲೆ; ತವರಿನಲ್ಲಿ ಮೊದಲ ಗೆಲುವಿನ ತುಡಿತ, ಪಂಜಾಬ್ ಸವಾಲು ಮೀರುವುದೇ ಬೆಂಗಳೂರು?
2025ರ ಇಂಡಿಯನ್ ಪ್ರೀಮಿಯರ್ ಲೀಗ್ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ 2025ರ ಐಪಿಎಲ್ನ 34ನೇ ಪಂದ್ಯವು ಶುಕ್ರವಾರ (ಏಪ್ರಿಲ್ 18) ನಡೆಯಲಿದೆ. ಈ ಮಹತ್ವದ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನವು ಆತಿಥ್ಯ ವಹಿಸಲಿದೆ. ಪಂಜಾಬ್ ತನ್ನ ಕೊನೆಯ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಅನ್ನು ಡಿಫೆಂಡ್ ಮಾಡಿಕೊಳ್ಳುವ ಮೂಲಕ ಚರಿತ್ರೆ ಸೃಷ್ಟಿಸಿದೆ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ತನ್ನ ಕೊನೆ ಪಂದ್ಯದಲ್ಲಿ ಗೆದ್ದು ಲಯ ಕಂಡುಕೊಂಡಿದೆ. ಆದರೆ ಬೆಂಗಳೂರು ಪಾಲಿಗೆ ತವರಿನ ಮೈದಾನವೇ ಕಬ್ಬಿಣದ ಕಡಲೆಯಾಗಿದ್ದು, ಪಂಜಾಬ್ ಬೌಲಿಂಗ್ ದಾಳಿಯನ್ನು ಹೇಗೆ ಎದುರಿಸುತ್ತದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.
ಆರ್ಸಿಬಿ ಪ್ರಸ್ತುತ ಆವೃತ್ತಿಯಲ್ಲಿ ತವರು ಮೈದಾನ ಚಿನ್ನಸ್ವಾಮಿಯಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲು ಕಂಡಿದೆ. ಆರ್ಸಿಬಿ ಬ್ಯಾಟ್ಸ್ಮನ್ಗಳು ನಿಧಾನಗತಿಯ ಪಿಚ್ನಲ್ಲಿ ಗುಜರಾತ್ ಟೈಟಾನ್ಸ್ನ ಆರ್ ಸಾಯಿ ಕಿಶೋರ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ನ ಕುಲ್ದೀಪ್ ಯಾದವ್ ಮತ್ತು ವಿಪ್ರಜ್ ನಿಗಮ್ ವಿರುದ್ಧ ಹೋರಾಡಬೇಕಾಯಿತು. ಆದ್ದರಿಂದ ಯುಜ್ವೇಂದ್ರ ಚಹಲ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಈ ದೌರ್ಬಲ್ಯದ ಸಂಪೂರ್ಣ ಲಾಭ ಪಡೆಯಲು ಪ್ರಯತ್ನಿಸುವ ಸಾಧ್ಯತೆ ಇದೆ. ಅಷ್ಟೇ ಅಲ್ಲ, ಚಹಲ್ ಮತ್ತು ಮ್ಯಾಕ್ಸ್ವೆಲ್ ದೀರ್ಘಕಾಲ ಆರ್ಸಿಬಿ ಪರ ಆಡಿದ್ದರು. ಇಲ್ಲಿನ ಪರಿಸ್ಥಿತಿಗಳ ಬಗ್ಗೆ ಚೆನ್ನಾಗಿ ತಿಳಿದಿದ್ದಾರೆ. ಇದೀಗ ಬೆಂಗಳೂರು ವಿರುದ್ದ ಯಾವ ರೀತಿ ಪ್ರದರ್ಶನ ನೀಡುತ್ತಾರೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ. ಮತ್ತೊಂದೆಡೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ತಂಡಗಳ ಬಲಾಬಲ
ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ 4 ವಿಕೆಟ್ಗಳೊಂದಿಗೆ ಚಹಲ್ ಫಾರ್ಮ್ಗೆ ಮರಳಿದ್ದಾರೆ. ಹೀಗಾಗಿ ಚಹಲ್ ವಿರುದ್ಧ ಆಡುವಾಗ ಎಚ್ಚರಿಕೆ ಅಗತ್ಯ. ಬ್ಯಾಟಿಂಗ್ನಲ್ಲಿ ಕಳಪೆ ಪ್ರದರ್ಶನದ ಹೊರತಾಗಿಯೂ ಮ್ಯಾಕ್ಸ್ವೆಲ್ ಆಡುವ 11ರಲ್ಲಿ ಸ್ಥಾನ ಪಡೆಯುವುದು ಖಚಿತ. ಚಹಲ್ ಮ್ಯಾಜಿಕ್ ಚೆಂಡುಗಳಿಗಿಂತ ಲೆಂಗ್ತ್ ಎಸೆತಗಳಲ್ಲಿ ನಿಪುಣ. ಲೆಗ್-ಸ್ಪಿನ್ನರ್ ಆಫ್-ಸ್ಟಂಪ್ನ ಹೊರಗೆ ಬೌಲ್ ಮಾಡಿ ಬ್ಯಾಟ್ಸ್ಮನ್ಗಳನ್ನು ಬಲೆಗೆ ಬೀಳಿಸುತ್ತಾರೆ. ಚಹಲ್ ಬೌಲಿಂಗ್ನಲ್ಲಿ ಬ್ಯಾಟರ್ಸ್ ಬುದ್ಧಿವಂತಿಕೆ ತೋರಬೇಕು. ಆತನ ಎದುರು ಸಿಕ್ಸರ್ಗಳನ್ನು ಹೊಡೆಯಬೇಕಾದರೆ ಹೆಚ್ಚುವರಿ ಪ್ರಯತ್ನ ನಡೆಸಬೇಕು. ಮ್ಯಾಕ್ಸ್ವೆಲ್ ಕೂಡ ಸ್ಪಿನ್ನರ್ ಆಗಿದ್ದು, ಪಂದ್ಯದ ಚಿತ್ರಣ ಬದಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಹಾಗಂತ ಆರ್ಸಿಬಿ ಏನೂ ಕಡಿಮೆ ಇಲ್ಲ. ಇಲ್ಲೂ ಪರಿಣಾಮಕಾರಿ ಸ್ಪಿನ್ನರ್ಗಳ ದಂಡೇ ಇದೆ. ಕೃನಾಲ್ ಪಾಂಡ್ಯ ಮತ್ತು ಸುಯಾಶ್ ಶರ್ಮಾ ರೂಪದಲ್ಲಿ ಉತ್ತಮ ಸ್ಪಿನ್ನರ್ಗಳನ್ನು ಹೊಂದಿದ್ದು, ಉತ್ತಮ ಪ್ರದರ್ಶನ ನಿರೀಕ್ಷಿಸಲಾಗಿದೆ.
ವೇಗದ ಬೌಲಿಂಗ್ ದಾಳಿಯಲ್ಲೂ ಉಭಯ ತಂಡಗಳು ಒಬ್ಬರಿಗಿಂತ ಒಬ್ಬರು ಕಡಿಮೆ ಏನಿಲ್ಲ. ಪಂಜಾಬ್ ಪರ ಅರ್ಷದೀಪ್ ಸಿಂಗ್ ಮತ್ತು ಮಾರ್ಕೊ ಜಾನ್ಸೆನ್ ಅವರು ವಿಕೆಟ್ ಬೇಟೆಯಾಡಲಿದ್ದಾರೆ. ಆದರೂ ಅವರು ಆರ್ಸಿಬಿಯ ಜೋಶ್ ಹೇಜಲ್ವುಡ್ ಮತ್ತು ಭುವನೇಶ್ವರ್ ಕುಮಾರ್ ಅವರಷ್ಟು ಅನುಭವಿಗಳಲ್ಲ. ನಾಯಕರ ಬಗ್ಗೆ ಮಾತನಾಡುವುದಾದರೆ, ರಜತ್ ಪಾಟೀದಾರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಬಹಳ ಕಡಿಮೆ ಹೋಲಿಕೆ ಇದೆ. ಈ ಟೂರ್ನಿಯಲ್ಲಿ ಬ್ಯಾಟ್ಸ್ಮನ್ ಆಗಿ ಉತ್ತಮ ದಾಖಲೆ ಹೊಂದಿರುವ ಅಯ್ಯರ್, ಐಪಿಎಲ್ ವಿಜೇತ ನಾಯಕನಾಗಿ ತಮ್ಮ ರುಜುವಾತುಗಳನ್ನು ಸಾಬೀತುಪಡಿಸಿದ್ದಾರೆ. ಮತ್ತೊಂದೆಡೆ, ಪಾಟೀದಾರ್ ಐಪಿಎಲ್ನಲ್ಲಿ ಮೊದಲ ಬಾರಿಗೆ ನಾಯಕರಾಗಿದ್ದಾರೆ. ಆದರೂ ಅವರ ನಾಯಕತ್ವ ಗಮನ ಸೆಳೆದಿದೆ.
ಆದರೆ ಈ ಇಬ್ಬರು ನಾಯಕರು ಸಹ ಶಾಂತ ಸ್ವಭಾವದ ನಾಯಕರು. ತಮ್ಮ ತಂಡಗಳನ್ನು ಬಹಳ ಪರಿಣಾಮಕಾರಿಯಾಗಿ ಮುನ್ನಡೆಸುತ್ತಿದ್ದಾರೆ. ಈ ಇಬ್ಬರೂ ಸಹ ಸ್ಪಿನ್ ಬೌಲಿಂಗ್ ವಿರುದ್ಧ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಬ್ಯಾಟಿಂಗ್ನಲ್ಲಿ ಅವರ ಪಾತ್ರ ನಿರ್ಣಾಯಕವಾಗಿದೆ. ಕೋಲ್ಕತಾ ವಿರುದ್ಧದ ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಗೆಲುವು ಪಂಜಾಬ್ನ ನೈತಿಕ ಸ್ಥೈರ್ಯ ಹೆಚ್ಚಿಸಿದೆ. ಆದರೆ ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಸಾಕಷ್ಟು ಆಳವನ್ನು ಹೊಂದಿರುವ ಆರ್ಸಿಬಿ ವಿರುದ್ಧ ಜಾಗರೂಕರಾಗಿರಬೇಕು.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ರಜತ್ ಪಾಟೀದಾರ್ (ನಾಯಕ), ವಿರಾಟ್ ಕೊಹ್ಲಿ, ಯಶ್ ದಯಾಳ್, ಜೋಶ್ ಹೇಜಲ್ವುಡ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್ಸ್ಟೋನ್, ರಸಿಕ್ ಸಲಾಮ್, ಸುಯಾಶ್ ಶರ್ಮಾ, ಕುನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ನುವಾನ್ ತುಷಾರ, ಮನೋಜ್ ಭಾಂಡಗೆ, ಜೇಕಬ್ ಬೆತೆಲ್, ದೇವದತ್ ಪಡಿಕ್ಕಲ್, ಸ್ವಸ್ತಿಕ್ ಚಿಕಾರಾ, ಲುಂಗಿ ಎನ್ಗಿಡಿ. ಅಭಿನಂದನ್ ಸಿಂಗ್, ಮೋಹಿತ್ ರಾಠಿ.
ಪಂಜಾಬ್ ಕಿಂಗ್ಸ್
ಶ್ರೇಯಸ್ ಅಯ್ಯರ್ (ನಾಯಕ), ಪ್ರಿಯಾಂಶ್ ಆರ್ಯ, ಪ್ರಭುಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ನೇಹಾಲ್ ವಧೇರಾ, ಶಶಾಂಕ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ಮಾರ್ಕಸ್ ಸ್ಟೊಯ್ನಿಸ್, ಮಾರ್ಕೊ ಜಾನ್ಸೆನ್, ಯಜುವೇಂದ್ರ ಚಾಹಲ್, ಅರ್ಷ್ದೀಪ್ ಸಿಂಗ್, ಯಶ್ ಠಾಕೂರ್, ಸೂರ್ಯಾಂಶ್ ಶೇಡ್ಗೆ, ಪ್ರವೀಣ್ ದುಬೆ, ವಿಜಯಕುಮಾರ್ ವೈಶಾಕ್, ಹರ್ಪ್ರೀತ್ ಬ್ರಾರ್, ಅಜ್ಮತುಲ್ಲಾ ಒಮರ್ಜೈ, ಜೋಶ್ ಇಂಗ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ವಿಷ್ಣು ವಿನೋದ್, ಆರೋನ್ ಹಾರ್ಡಿ, ಹರ್ನೂರ್ ಸಿಂಗ್, ಮುಶೀರ್ ಖಾನ್, ಅವಿನಾಶ್.