ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು

ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ; ನಾಳಿನ ಐಪಿಎಲ್‌ ಪಂದ್ಯದ 10 ಅಂಶಗಳು

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ತವರು ಮೈದಾನದಲ್ಲಿ ಮೊದಲ ಗೆಲುವಿನ ನಿರೀಕ್ಷೆಯಲ್ಲಿದೆ. ರಾಜಸ್ಥಾನ್‌ ರಾಯಲ್ಸ್‌ ತಂಡವನ್ನು ಟೂರ್ನಿಯಲ್ಲಿ ಎರಡನೇ ಬಾರಿ ಎದುರಿಸುತ್ತಿದ್ದು, ಐಪಿಎಲ್‌ ಪಂದ್ಯದ ಪ್ರಮುಖ 10 ಅಂಶಗಳು ಇಲ್ಲಿವೆ.

ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ
ತವರಿನಲ್ಲಿ ಮೊದಲ ರಾಯಲ್‌ ಗೆಲುವಿನ ನಿರೀಕ್ಷೆಯಲ್ಲಿ ಆರ್‌ಸಿಬಿ (PTI)

ಐಪಿಎಲ್ 18ನೇ ಆವೃತ್ತಿಯಲ್ಲಿ ನಾಳೆ (ಏ.24 ಗುರುವಾರ) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ರಾಜಸ್ಥಾನ ರಾಯಲ್ಸ್ (RR) ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಈ ಬಾರಿ ತವರಿನಲ್ಲಿ ಇದುವರೆಗೂ ಗೆಲುವನ್ನೇ ಕಾಣದ ಆರ್‌ಸಿಬಿ ತಂಡಕ್ಕೆ ಮತ್ತೊಂದು ಸವಾಲು ಎದುರಾಗಿದೆ. ಉಭಯ ತಂಡಗಳಿಗೂ ಗೆಲುವು ಅನಿವಾರ್ಯ. ಅದರಲ್ಲೂ ಸೋಲಿನ ಸುಳಿಯಲ್ಲಿರುವ ರಾಜಸ್ಥಾನಕ್ಕೆ ಪ್ಲೇಆಫ್ ರೇಸ್‌ನಲ್ಲಿ ಉಳಿಯಲು ಗೆಲುವು ಬೇಕೇಬೇಕು. ಈ ಪಂದ್ಯದ 10 ಪ್ರಮುಖ ಅಂಶಗಳನ್ನು ನೋಡೋಣ.

  1. ರಾಜಸ್ಥಾನ ತಂಡವು ಈ ಬಾರಿ ಟೂರ್ನಿಯಲ್ಲಿ ಈವರೆಗೆ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಗೆದ್ದು, ಪಾಯಿಂಟ್ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಮತ್ತೊಂದೆಡೆ, ಆರ್‌ಸಿಬಿ ತಂಡ ಆಡಿದ ಎಂಟು ಪಂದ್ಯಗಳಲ್ಲಿ ಕೇವಲ ಮೂರರಲ್ಲಿ ಮಾತ್ರ ಸೋತಿದ್ದು, 10 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಆದರೆ, ತವರಿನಲ್ಲಿ ಒಂದೂ ಪಂದ್ಯದಲ್ಲಿ ಗೆದ್ದಿಲ್ಲ ಎಂಬುದೇ ತಂಡಕ್ಕೆ ಚಿಂತೆ ಹಾಗೂ ಸವಾಲು.
  2. ಐಪಿಎಲ್‌ ಇತಿಹಾಸದಲ್ಲಿ ಇದುವರೆಗೂ ಈ ಎರಡು ತಂಡಗಳ ನಡುವಿನ 32 ಪಂದ್ಯಗಳಲ್ಲಿ ಆರ್‌ಸಿಬಿ ತಂಡ 16 ಪಂದ್ಯಗಳಲ್ಲಿ ಗೆದ್ದಿದ್ದರೆ, ಆರ್‌ಆರ್ ತಂಡ 14 ಪಂದ್ಯಗಳಲ್ಲಿ ಗೆದ್ದಿದೆ. ಆದರೆ, ಬೆಂಗಳೂರಿನಲ್ಲಿ ನಡೆದ ಪಂದ್ಯಗಳಲ್ಲಿ ರಾಜಸ್ಥಾನವೇ ಮೇಲುಗೈ ಸಾಧಿಸಿದೆ. ನಾಲ್ಕು ಪಂದ್ಯಗಳನ್ನು ಪಿಂಕ್‌ ಆರ್ಮಿ ಗೆದ್ದರೆ, ಆರ್‌ಸಿಬಿ ಮೂರು ಪಂದ್ಯಗಳಲ್ಲಿ ಗೆದ್ದಿದೆ. ತವರಿನಲ್ಲಿ ಈ ಬಾರಿ ಗೆಲುವೇ ಕಾಣದ ರೆಡ್‌ ಆಂಡ್‌ ಗೋಲ್ಡ್‌ ಆರ್ಮಿಗೆ ಈ ಅಂಕಿ-ಅಂಶ ಕೂಡಾ ಕಾಡಲಿದೆ.
  3. ಈ ಆವೃತ್ತಿಯಲ್ಲಿ ಉಭಯ ತಂಡಗಳ ನಡುವೆ ಇದು ಎರಡನೇ ಪಂದ್ಯ. ಈಗಾಗಲೇ ಜೈಪುರದಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ, ಆರ್‌ಸಿಬಿ ತಂಡವು ಸುಲಭವಾಗಿ 9 ವಿಕೆಟ್‌ಗಳ ಭಾರಿ ಅಂತರದಿಂದ ಗೆದ್ದಿತ್ತು. ಆ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ರಾಜಸ್ಥಾನದ್ದು.
  4. ಹೊಟ್ಟೆಯ ಗಾಯದ ಸಮಸ್ಯೆಯಿಂದಾಗಿ ರಾಜಸ್ಥಾನ್‌ ನಾಯಕ ಸಂಜು ಸ್ಯಾಮ್ಸನ್ ಬೆಂಗಳೂರಿಗೆ ತಂಡದೊಂದಿಗೆ ಪ್ರಯಾಣಿಸಿಲ್ಲ. ಹೀಗಾಗಿ ಮುಂದಿನ ಪಂದ್ಯದಲ್ಲೂ ರಿಯಾನ್‌ ಪರಾಗ್‌ ನಾಯಕನಾಗುವ ಸಾಧ್ಯತೆ ಇದೆ.‌ ಕಳೆದ ಎರಡು ಪಂದ್ಯಗಳಲ್ಲಿ ದುಬಾರಿಯಾಗಿರುವ ಸಂದೀಪ್ ಶರ್ಮಾ ಬದಲಿಗೆ ಆಕಾಶ್ ಮಧ್ವಲ್ ಆಡುವ ಸಾಧ್ಯತೆಯೂ ಇದೆ.
  5. ಪ್ರಸಕ್ತ ಋತುವಿನಲ್ಲಿ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆಡಿದ ಎಂಟು ಇನ್ನಿಂಗ್ಸ್‌ಗಳಲ್ಲಿ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ಆದರೆ, ರನ್‌ ಮಷಿನ್‌ ಅನ್ನು ರಾಜಸ್ಥಾನದ ವೇಗಿ ಸಂದೀಪ್ ಶರ್ಮಾ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಏಕೆಂದರೆ ಐಪಿಎಲ್‌ನಲ್ಲಿ ಗರಿಷ್ಠ ಏಳು ಬಾರಿ ವಿರಾಟ್‌ ಅವರನ್ನು ಔಟ್ ಮಾಡಿದ್ದಾರೆ.
  6. ಈ ಋತುವಿನಲ್ಲಿ ಆರ್‌ಸಿಬಿ ಯಶಸ್ವಿಯಾಗಿ ಚೇಸಿಂಗ್‌ ಮಾಡಿ ಗೆದ್ದ ಮೂರು ಪಂದ್ಯಗಳಲ್ಲಿಯೂ ವಿರಾಟ್ ಕೊಹ್ಲಿ ಅಜೇಯ ಅರ್ಧಶತಕಗಳನ್ನು ಸಿಡಿಸಿದ್ದಾರೆ.
  7. ಐಪಿಎಲ್‌ನ ಅನುಭವಿ ವೇಗಿ ಭುವನೇಶ್ವರ್ ಕುಮಾರ್, 189 ವಿಕೆಟ್‌ಗಳನ್ನು ಪಡೆಯುವ ಮೂಲಕ ಅತಿ ಹೆಚ್ಚು ಐಪಿಎಲ್ ವಿಕೆಟ್‌ ಪಡೆದ ವೇಗದ ಬೌಲರ್‌ ಎನಿಸಿಕೊಂಡಿದ್ದಾರೆ. ಭುವನೇಶ್ವರ್‌ ಎಸೆತವನ್ನು ಯಶಸ್ವಿ ಜೈಸ್ವಾಲ್‌ ಸಮರ್ಥವಾಗಿ ಎದುರಿಸಿದ್ದಾರೆ. ಎಂಟು ಇನ್ನಿಂಗ್ಸ್‌ಗಳಲ್ಲಿ ಜೈಸ್ವಾಲ್ ಔಟ್ ಮಾಡಲು ಭುವನೇಶ್ವರ್‌ಗೆ ಸಾಧ್ಯವಾಗಿಲ್ಲ. ಜೈಸ್ವಾಲ್ 174ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದಾರೆ.
  8. ಜೋಶ್ ಹೇಜಲ್‌ವುಡ್ ಆಡಿದ ಮೂರು ಇನ್ನಿಂಗ್ಸ್‌ಗಳಲ್ಲಿ ಎರಡರಲ್ಲಿ ಜೈಸ್ವಾಲ್‌ ವಿಕೆಟ್‌ ಪಡೆದಿದ್ದಾರೆ. ಯಶ್ ದಯಾಳ್ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಎರಡರಲ್ಲಿ ಅವರನ್ನು ಔಟ್ ಮಾಡಿದ್ದಾರೆ. ಈ ಋತುವಿನಲ್ಲಿ ಪವರ್‌ಪ್ಲೇನಲ್ಲಿ ಎಂಟಕ್ಕಿಂತ ಕಡಿಮೆ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟ ಏಕೈಕ ತಂಡ ಆರ್‌ಸಿಬಿ.
  9. ಈ ವರ್ಷ ಆರ್‌ಸಿಬಿ ತಂಡ ಅಮೋಘ ಫಾರ್ಮ್‌ನಲ್ಲಿರುವುದು ಸತ್ಯ. ಆಡಿದ ಎಂಟು ಪಂದ್ಯಗಳಿಂದ ಐದು ಗೆಲುವಿನೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಗೆದ್ದಿರುವ ಐದು ಪಂದ್ಯಗಳೂ ಕೂಡಾ ತವರಿನ ಹೊರಗೆ ಎನ್ನುವುದು ವಿಶೇಷ. ಆದರೆ, ತವರಿನ ಅಭಿಮಾನಿಗಳ ಮುಂದೆ ಒಂದರಲ್ಲೂ ಗೆದ್ದಿಲ್ಲ. ತವರಿನಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲೂ ಸೋತಿದೆ.
  10. ಜೈಪುರದಲ್ಲಿ ನಡೆದ ಉಭಯ ತಂಡಗಳ ನಡುವಿನ ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಅಬ್ಬರಿಸಿದ್ದರು. ಅದು ಜೋಫ್ರಾ ಆರ್ಚರ್ vs ಫಿಲ್ ಸಾಲ್ಟ್ ಎಂಬಂತಾಗಿತ್ತು. ವಿಶ್ವದರ್ಜೆಯ ಬೌಲರ್‌ ಎಸೆತಗಳನ್ನು ಸಾಲ್ಟ್‌ ಹಣ್ಣುಗಾಯಿ ನೀರುಗಾಯಿ ಮಾಡಿದ್ದರು. ಇವರ ಮುಖಾಮುಖಿ ಮತ್ತೊಮ್ಮೆ ರೋಚಕವಾಗಿರುವ ನಿರೀಕ್ಷೆ ಇದೆ.

ಇದನ್ನೂ ಓದಿ | ಸೇಡು ತೀರಿಸಲು ವಿಫಲವಾದ ಲಕ್ನೋ; ಎಲ್‌ಎಸ್‌ಜಿ ವಿರುದ್ಧದ ಎರಡೂ ಪಂದ್ಯಗಳಲ್ಲಿ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

Jayaraj

TwittereMail
ಜಯರಾಜ್‌ ಅಮಿನ್: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಸೀನಿಯರ್ ಕಂಟೆಂಟ್‌ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಈಟಿವಿ ಭಾರತ್, ಇನ್‌ಶಾರ್ಟ್ಸ್‌ ವಿವಿಧ ವಿಭಾಗಗಳಲ್ಲಿ ಒಟ್ಟು 6 ವರ್ಷಗಳ ಅನುಭವ. ಕಲೆ, ಸಾಹಿತ್ಯ, ಭೂಗೋಳದ ಬಗ್ಗೆ ಹೆಚ್ಚು ಆಸಕ್ತಿ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಹೊಸಮೊಗ್ರು ನಿವಾಸಿ.