ಅಗ್ರ-2ರಲ್ಲೇ ಉಳಿಯಲು ಆರ್​ಸಿಬಿ ಚಿತ್ತ, ಎಸ್​ಆರ್​ಹೆಚ್​ಗೆ ಔಪಚಾರಿಕ; ನಾಳಿನ ಪಂದ್ಯದ 10 ಪ್ರಮುಖ ಅಂಶಗಳು
ಕನ್ನಡ ಸುದ್ದಿ  /  ಕ್ರಿಕೆಟ್  /  ಅಗ್ರ-2ರಲ್ಲೇ ಉಳಿಯಲು ಆರ್​ಸಿಬಿ ಚಿತ್ತ, ಎಸ್​ಆರ್​ಹೆಚ್​ಗೆ ಔಪಚಾರಿಕ; ನಾಳಿನ ಪಂದ್ಯದ 10 ಪ್ರಮುಖ ಅಂಶಗಳು

ಅಗ್ರ-2ರಲ್ಲೇ ಉಳಿಯಲು ಆರ್​ಸಿಬಿ ಚಿತ್ತ, ಎಸ್​ಆರ್​ಹೆಚ್​ಗೆ ಔಪಚಾರಿಕ; ನಾಳಿನ ಪಂದ್ಯದ 10 ಪ್ರಮುಖ ಅಂಶಗಳು

ಇಂಡಿಯನ್ ಪ್ರೀಮಿಯರ್ ಲೀಗ್​ನ 65ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್​ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಟ ನಡೆಸಲಿವೆ. ಈ ಪಂದ್ಯಕ್ಕೆ ಲಕ್ನೋದ ಏಕನಾ ಕ್ರಿಕೆಟ್ ಮೈದಾನ ಆತಿಥ್ಯ ವಹಿಸಲಿದೆ.

ಅಗ್ರ-2ರಲ್ಲೇ ಉಳಿಯಲು ಆರ್​ಸಿಬಿ ಚಿತ್ತ, ಎಸ್​ಆರ್​ಹೆಚ್​ಗೆ ಔಪಚಾರಿಕ; ಇಂದಿನ ಪಂದ್ಯದ 10 ಪ್ರಮುಖ ಅಂಶಗಳು
ಅಗ್ರ-2ರಲ್ಲೇ ಉಳಿಯಲು ಆರ್​ಸಿಬಿ ಚಿತ್ತ, ಎಸ್​ಆರ್​ಹೆಚ್​ಗೆ ಔಪಚಾರಿಕ; ಇಂದಿನ ಪಂದ್ಯದ 10 ಪ್ರಮುಖ ಅಂಶಗಳು

ಮೇ 3ರ ನಂತರ ಇದೇ ಮೊದಲ ಬಾರಿಗೆ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಅಂಕಪಟ್ಟಿಯಲ್ಲಿ ಅಗ್ರ-2ರಲ್ಲೇ ಉಳಿಯಲು ಭರ್ಜರಿ ಕಸರತ್ತು ನಡೆಸುತ್ತಿದೆ. ಮೇ 23ರಂದು ಸನ್​ರೈಸರ್ಸ್​ ಹೈದರಾಬಾದ್​ ವಿರುದ್ಧ ಕಣಕ್ಕಿಳಿಯಲು ಸಿದ್ಧವಾಗಿದೆ. ಮೇ 9ರಂದು ಕಣಕ್ಕಿಳಿಯಬೇಕಿತ್ತಾದರೂ ಭಾರತ - ಪಾಕಿಸ್ತಾನ ನಡುವೆ ಉದ್ವಿಗ್ನತೆ ಹೆಚ್ಚಾದ ಹಿನ್ನೆಲೆ ಪಂದ್ಯ ಮುಂದೂಡಲಾಗಿತ್ತು. ಆ ಬಳಿಕ ಐಪಿಎಲ್ ಮರುಆರಂಭದ ದಿನವಾದ ಮೇ 17ರಂದು ಕೆಕೆಆರ್ ವಿರುದ್ಧ ಸೆಣಸಾಟ ನಡೆಸಬೇಕಿತ್ತು. ಆದರೆ ಅಂದು ಮಳೆಯಿಂದಾಗಿ ಟಾಸ್ ಕಾಣದೆ ಪಂದ್ಯ ರದ್ದಾಗಿತ್ತು. ಇದೀಗ ಕೊನೆಗೂ ಮೈದಾನದಲ್ಲಿ ಕಣಕ್ಕಿಳಿಯಲು ಆರ್​ಸಿಬಿ ಸಿದ್ಧವಾಗಿದೆ.

20 ದಿನಗಳ ಬಳಿಕ ಮೈದಾನಕ್ಕೆ ಮರಳುತ್ತಿರುವ ಆರ್​ಸಿಬಿ ತಂಡದಲ್ಲಿ ಮಹತ್ವದ ಬದಲಾವಣೆಗಳು ಕಂಡಿವೆ. ಲುಂಗಿ ಎನ್​ಗಿಡಿ ಮತ್ತು ಜೇಕಬ್ ಬೆಥೆಲ್ ಆರ್​ಸಿಬಿ ತಂಡವನ್ನು ತೊರೆಯುತ್ತಿದ್ದಾರೆ. ಈ ಇಬ್ಬರು ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಆ ಬಳಿಕ ತಂಡ ತೊರೆಯಲಿದ್ದಾರೆ. ಈಗಾಗಲೇ ಇಬ್ಬರ ಬದಲಿ ಆಟಗಾರರೂ ನೇಮಕ ಆಗಿದ್ದಾರೆ. ಎನ್​ಗಿಡಿಗೆ ಜಿಂಬಾಬ್ವೆಯ ಬ್ಲೆಸಿಂಗ್ ಮುಜರಬಾನಿ ಮತ್ತು ಬೆಥೆಲ್​ಗೆ ನ್ಯೂಜಿಲೆಂಡ್​ನ ಟಿಮ್ ಸೀಫರ್ಟ್​ ಆಯ್ಕೆಯಾಗಿದ್ದು, ಕೊನೆಯ ಲೀಗ್ ಪಂದ್ಯ ಮತ್ತು ಪ್ಲೇಆಫ್​ ಪಂದ್ಯಗಳನ್ನು ಆಡಲಿದ್ದಾರೆ. ಲಕ್ನೋದ ಏಕನಾ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಈ ಪಂದ್ಯದ ಕುರಿತ ಪ್ರಮುಖ 10 ಅಂಶಗಳನ್ನು ಈ ಮುಂದೆ ತಿಳಿಯೋಣ.

1. ಸನ್​ರೈಸರ್ಸ್ ಹೈದರಾಬಾದ್ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯವಷ್ಟೆ. ಆದರೆ ಆರ್​​ಸಿಬಿಗೆ ಮಹತ್ವದ ಪಂದ್ಯ. ಏಕೆಂದರೆ ಅಂಕ ಪಟ್ಟಿಯಲ್ಲಿ ಅಗ್ರ 2ರಲ್ಲಿ ಉಳಿಯಬೇಕಿರುವುದು ಅನಿವಾರ್ಯ. ಅಂದರೆ ಮೊದಲ ಎರಡು ತಂಡಗಳು ಮೊದಲ ಕ್ವಾಲಿಫೈಯರ್​​ನಲ್ಲಿ ಸೆಣಸಾಟ ನಡೆಸಲಿದ್ದು, ಸೋತ ಯಾವುದೇ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಹೀಗಾಗಿ ಆರ್​ಸಿಬಿ ಅಗ್ರ-2ರೊಳಗೆ ಉಳಿಯಲು ನಿರ್ಧರಿಸಿದೆ.

2. ಇದು ಸಾಧ್ಯವಾಗಬೇಕೆಂದರೆ ಆರ್​ಸಿಬಿ, ಎಸ್​ಆರ್​ಹೆಚ್​ ವಿರುದ್ಧ ಗೆಲ್ಲುವುದರ ಜೊತೆಗೆ ಅಂತಿಮ ಲೀಗ್​ ಪಂದ್ಯದಲ್ಲೂ ಎಲ್​ಎಸ್​ಜಿ ವಿರುದ್ಧ ಜಯಿಸಬೇಕು. ಮತ್ತೊಂದೆಡೆ ತನಗೆ ಸ್ಪರ್ಧಿಯಾದ ಮತ್ತು ಈಗಾಗಲೇ ಪ್ಲೇಆಫ್ ಪ್ರವೇಶಿಸಿರುವ ಪಂಜಾಬ್​ ತಂಡದ ಸೋಲಿಗೂ ಆರ್​ಸಿಬಿ ಪ್ರಾರ್ಥಿಸಬೇಕಾಗುತ್ತದೆ. ಮತ್ತೊಂದೆಡೆ ಆರ್​ಸಿಬಿ ಉಳಿದ ಎರಡಲ್ಲೂ ಸೋತರೆ, ಮುಂಬೈ ಉಳಿದೊಂದನ್ನೂ ಗೆದ್ದರೆ ಅಗ್ರ-2ರೊಳಗೆ ಪ್ರವೇಶಿಸುವ ಕನಸು ಭಗ್ನವಾಗಬಹುದು.

3. ಆರ್​ಸಿಬಿ ಮತ್ತು ಎಸ್​ಆರ್​ಹೆಚ್​ ಐಪಿಎಲ್ ಇತಿಹಾಸದಲ್ಲಿ ಒಟ್ಟು 25 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಆದರೆ ಮುಖಾಮುಖಿಯಲ್ಲಿ ಆರೆಂಜ್ ಆರ್ಮಿ ತಂಡವೇ ಮೇಲುಗೈ ಸಾಧಿಸಿದೆ. ಆರ್​ಸಿಬಿ 11 ಗೆಲುವು, ಎಸ್​ಆರ್​ಹೆಚ್​ 13 ಜಯ ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ. ಕಳೆದ ಐದು ಪಂದ್ಯಗಳ ಮುಖಾಮುಖಿಯಲ್ಲಿ ಆರ್​ಸಿಬಿ 3 ಗೆಲುವು, ಎಸ್​ಆರ್​​ಹೆಚ್​ 2 ಜಯ ಸಾಧಿಸಿದೆ.

4. ಎಸ್​ಆರ್​​ಹೆಚ್​ ಆರ್​ಸಿಬಿ ವಿರುದ್ಧ ಅತಿ ದೊಡ್ಡ ದಾಖಲೆ ಹೊಂದಿದೆ. ಕಳೆದ ಐಪಿಎಲ್​ನಲ್ಲಿ ಚಿನ್ನಸ್ವಾಮಿ ಮೈದಾನದಲ್ಲಿ ಬೆಂಗಳೂರು ವಿರುದ್ಧ ಸಾರ್ವಕಾಲಿಕ ಮೊತ್ತ ದಾಖಲಿಸಿತ್ತು. ಅಂದು ಹೈದರಾಬಾದ್​ 287 ರನ್​ಗಳ ಬೃಹತ್ ಮೊತ್ತ ದಾಖಲಿಸಿತ್ತು. ಇದು ಐಪಿಎಲ್ ಇತಿಹಾಸದಲ್ಲೇ ತಂಡವೊಂದು ಗಳಿಸಿರುವ ಗರಿಷ್ಠ ಮೊತ್ತ. ಇದಕ್ಕೆ ಪ್ರತ್ಯುತ್ತರವಾಗಿ ಆರ್​ಸಿಬಿ 262 ರನ್ ಗಳಿಸಿ ಪೈಪೋಟಿ ನೀಡಿತ್ತು.

5. ಅಚ್ಚರಿ ಏನೆಂದರೆ ಹವಾಮಾನ ವೈಪರಿತ್ಯ ಕಾರಣ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಲಕ್ನೋದ ಏಕನಾ ಕ್ರಿಕೆಟ್ ಮೈದಾನಕ್ಕೆ ಸ್ಥಳಾಂತರಿಸಿದೆ. ಈ ಇಲ್ಲಿನ ಪಿಚ್ ಬ್ಯಾಟರ್​ಗಳು ಮತ್ತು ಬೌಲರ್​​ಗಳಿಗೆ ಇಬ್ಬರಿಗೂ ನೆರವಾಗಲಿದೆ. ಇದೇ ಮೈದಾನದಲ್ಲಿ ಆರ್​ಸಿಬಿ ತನ್ನ ಕೊನೆಯ ಲೀಗ್ ಪಂದ್ಯವನ್ನೂ ಆಡಲಿದೆ. ಆದರೆ ಈ ಪಂದ್ಯಕ್ಕೆ ಯಾವುದೇ ಮಳೆ ಅಡ್ಡಿಪಡಿಸುವುದಿಲ್ಲ.

6. ಪ್ರಸ್ತುತ ಆರ್​​ಸಿಬಿ ಆಡಿರುವ 12 ಪಂದ್ಯಗಳಲ್ಲಿ 8 ಗೆಲುವು, 3 ಸೋತಿದೆ. 1 ಪಂದ್ಯ ಡ್ರಾಗೊಂಡಿದೆ. ಒಟ್ಟು 17 ಅಂಕ ಪಡೆದು ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಎಸ್​ಆರ್​​ಹೆಚ್​ 12 ಪಂದ್ಯಗಳಲ್ಲಿ 4 ಗೆಲುವು, 7 ಸೋಲು ಮತ್ತು 1 ಪಂದ್ಯ ಡ್ರಾನೊಂದಿಗೆ 9 ಅಂಕ ಗಳಿಸಿದೆ. ಇದು ಕಳೆದ ವರ್ಷ ರನ್ನರ್​ಅಪ್ ಆಗಿತ್ತು.

7. ಹೇಜಲ್​ವುಡ್ ಇನ್ನೂ ತಂಡಕ್ಕೆ ಮರಳಿಲ್ಲ. ಆದರೆ ಪ್ರಸ್ತುತ ತಂಡದ ಎಲ್ಲಾ ಸದಸ್ಯರು ಲಭ್ಯವಿದೆ. ದೇವದತ್ ಪಡಿಕ್ಕಲ್ ಗಾಯದ ನಂತರ ಆರ್‌ಸಿಬಿ ತಮ್ಮ 3ನೇ ಸ್ಥಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಅನುಭವಿ ಮಯಾಂಕ್ ಅಗರ್ವಾಲ್ ಅವರು ತಂಡಕ್ಕೆ ಆಯ್ಕೆಯಾಗುವ ಸೂಚನೆಗಳಿವೆ.

8. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಂಭವನೀಯ): ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ರಜತ್ ಪಾಟೀದಾರ್ (ನಾಯಕ), ಜಿತೇಶ್ ಶರ್ಮಾ, ರೊಮಾರಿಯೊ ಶೆಫರ್ಡ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಲುಂಗಿ ಎನ್​ಗಿಡಿ, ಸುಯಾಶ್ ಶರ್ಮಾ.

9. ಹೆಡ್ ಫಿಟ್ ಆಗಿದ್ದಾರೆಂದು ಘೋಷಿಸಲಾಗಿದ್ದು, ಆಡುವ 11ಕ್ಕೆ ಮರಳುವ ಸಾಧ್ಯತೆ ಇದೆ. ಹಿಂದಿನ ಪಂದ್ಯವನ್ನು ತಪ್ಪಿಸಿಕೊಂಡಿದ್ದ ಜಯದೇವ್ ಉನಾದ್ಕತ್ ಕೂಡ ತಂಡಕ್ಕೆ ಮರಳಿದ್ದಾರೆ.

10. ಸನ್ ರೈಸರ್ಸ್ ಹೈದರಾಬಾದ್ (ಸಂಭಾವ್ಯ): ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ಹೆನ್ರಿಚ್ ಕ್ಲಾಸೆನ್, ಅನಿಕೇತ್ ವರ್ಮಾ, ಅಭಿನವ್ ಮನೋಹರ್, ಪ್ಯಾಟ್ ಕಮಿನ್ಸ್ (ನಾಯಕ), ಹರ್ಷಲ್ ಪಟೇಲ್, ಹರ್ಷ್ ದುಬೆ, ಇಶಾನ್ ಮಲಿಂಗ, ಜಯದೇವ್ ಉನಾದ್ಕತ್.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.