ರೋಚಕ, ಅತಿರೋಚಕ; ತವರು ನೆಲದಲ್ಲಿ ಕೊನೆಗೂ ಎದ್ದು ಬಿದ್ದು ಗೆದ್ದ ಆರ್ಸಿಬಿ; ರಾಜಸ್ಥಾನಕ್ಕೆ ಆಘಾತಕಾರಿ ಸೋಲು
ಜೋಶ್ ಹೇಜಲ್ವುಡ್ ಅಮೋಘವಾಗಿ ಬೌಲಿಂಗ್ ಮಾಡಿ 19ನೇ ಓವರ್ನಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಅಲ್ಲದೆ 2 ಪ್ರಮುಖ ವಿಕೆಟ್ ಕಬಳಿಸಿದರು. ಇದು ಪಂದ್ಯ ಗತಿಯನ್ನೇ ಬದಲಿಸಿ, ಆರ್ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊನೆಯ ಓವರ್ನ ಮೊದಲ ಎಸೆತದಲ್ಲಿ ಶುಭಂ ದುಬೆ ಔಟಾಗುವುದರೊಂದಿಗೆ ಆರ್ಆರ್ ಸೋಲು ಖಚಿತವಾಯ್ತು.
ತವರು ಮೈದಾನ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ತಂಡ ಕೊನೆಗೂ ಈ ಬಾರಿಯ ಐಪಿಎಲ್ನಲ್ಲಿ ಮೊದಲ ಗೆಲುವು ಸಾಧಿಸಿದೆ. ಈವರೆಗೆ ಆಡಿದ ಸತತ ಮೂರು ಪಂದ್ಯಗಳಲ್ಲಿ ಮುಗ್ಗರಿಸಿದ್ದ ತಂಡವು, ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರದ ಪ್ರದರ್ಶನ ನೀಡುವ ಮೂಲಕ ತವರು ಅಭಿಮಾನಿಗಳಿಗೆ ಮೊದಲ ಗೆಲುವಿನ ಸಿಹಿ ಉಣಿಸಿದೆ. ತವರಿನಲ್ಲಿ ಸತತ ನಾಲ್ಕನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ, ನಾಲ್ಕನೇ ಪ್ರಯತ್ನದಲ್ಲಿ ಎದುರಾಳಿ ತಂಡವನ್ನು ಕಟ್ಟಿಹಾಕಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 205 ರನ್ ಗಳಿಸಿತು. ಇದಕ್ಕೆ ಪ್ರತಿಯಾಗಿ ರಾಜಸ್ಥಾನ ತಂಡ 9 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿ 11 ರನ್ಗಳಿಂದ ಸೋತಿತು. ಚೇಸಿಂಗ್ ನಡೆಸಿದ ರಾಜಸ್ಥಾನ, ಒಂದು ಹಂತದಲ್ಲಿ ಗೆಲುವಿನ ದಡದಲ್ಲೇ ಇತ್ತು. ಆದರೆ, ಕೊನೆಯ ಎರಡು ಓವರ್ಗಳಲ್ಲಿ ಪಂದ್ಯದ ಗತಿಯೇ ಬದಲಾಯ್ತು.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ, ಆರಂಭದಿಂದಲೇ ಸ್ಥಿರವಾಗಿ ರನ್ ಗಳಿಸುತ್ತಾ ಸಾಗಿತು. ಕಳೆದ ಮೂರು ಪಂದ್ಯಗಳಲ್ಲಿ ಚಿನ್ನಸ್ವಾಮಿ ಅಂಗಳದಲ್ಲಿ ರನ್ ಗಳಿಸಲು ಪರದಾಡಿದ್ದ ಆರ್ಸಿಬಿ ಆರಂಭಿಕರು, ಪವರ್ಪ್ಲೇ ಓವರ್ಗಳನ್ನು ನಾಜೂಕಾಗಿ ನಿಭಾಯಿಸಿ ಉತ್ತಮ ಮೊತ್ತ ಕಲೆ ಹಾಕಿದರು. ಪವರ್ಪ್ಲೇ ಮುಗಿಯುತ್ತಿದ್ದಂತೆ ಫಿಲ್ ಸಾಲ್ಟ್ 26 ರನ್ ಗಳಿಸಿ ಔಟಾದರು. ಸಾಲ್ಟ್ ಸ್ಟ್ರೈಕ್ ರೇಟ್ ಈ ಪಂದ್ಯದಲ್ಲಿ ಕಡಿಮೆಯಾಯ್ತು. ಜವಾಬ್ದಾರಿಯುತ ಆಟ ಮುಂದುವರೆಸಿದ ಅನುಭವಿ ಆಟಗಾರ ವಿರಾಟ್ ಕೊಹ್ಲಿ, ಕನ್ನಡಿಗ ದೇವದತ್ ಪಡಿಕಲ್ ಜೊತೆಗೆ ಅಮೋಘ ಜೊತೆಯಾಟ ಆಡಿದರು.
ಇವರಿಬ್ಬರೂ ಎರಡನೇ ವಿಕೆಟ್ಗೆ 95 ರನ್ಗಳ ಅಮೋಘ ಜೊತೆಯಾಟವಾಡಿದರು. ವೇಗದ ಆಟವಾಡಿದ ಪಡಿಕಲ್, ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಜೊತೆಗೆ 50 ರನ್ ಸಿಡಿಸಿದರು. ಅತ್ತ, ಈ ಬಾರಿಯ ಐಪಿಎಲ್ನಲ್ಲಿ ಐದನೇ ಅರ್ಧಶತಕ ಬಾರಿಸಿದ ವಿರಾಟ್ ಕೊಹ್ಲಿ, 42 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 70 ರನ್ ಸಿಡಿಸಿದರು. ಮತ್ತೊಮ್ಮೆ ಅಬ್ಬರಿಸಲು ಮರೆತ ನಾಯಕ ರಜತ್ ಪಾಟೀದಾರ್ 1 ರನ್ ಮಾತ್ರ ಗಳಿಸಿದರು. ಅತ್ತ ಕೊನೆಯವರೆಗೆ ಆಡಿದ ಜಿತೇಶ್ ಶರ್ಮಾ 20 ರನ್ ಗಳಿಸಿದರೆ, ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಟಿಮ್ ಡೇವಿಡ್ 23 ರನ್ ಬಾರಿಸಿದರು.
ರಾಜಸ್ಥಾನ ಭರ್ಜರಿ ಆರಂಭ
ಚೇಸಿಂಗ್ ಆರಂಭಿಸಿದ ರಾಜಸ್ಥಾನಕ್ಕೆ ಸ್ಫೋಟಕ ಆರಂಭ ಸಿಕ್ಕಿತು. ಯುವ ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ ಹಾಗೂ ವೈಭವ್ ಸೂರ್ಯವಂಶಿ ಮೊದಲ ವಿಕೆಟ್ಗೆ 52 ರನ್ಗಳ ಜೊತೆಯಾಟವಾಡಿದರು. 2 ಸಿಕ್ಸರ್ ಸಹಿತ 16 ರನ್ ಗಳಿಸಿದ ಐಪಿಎಲ್ನ ಅತ್ಯಂತ ಯುವ ಆಟಗಾರ ವೈಭವ್ 16 ರನ್ ಗಳಿಸಿ ಭುವನೇಶ್ವರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಮೊದಲ ಎಸೆತದಿಂದಲೂ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಯಶಸ್ವಿ ಜೈಸ್ವಾಲ್ ಕೇವಲ 19 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 49 ರನ್ ಗಳಿಸಿ ಕೇವಲ 1 ರನ್ನಿಂದ ಅರ್ಧಶತಕ ವಂಚಿತರಾದರು.
ರೋಚಕ ಅಂತ್ಯ
ತಂಡದ ಆಟಗಾರರು ಮೈದಾನಕ್ಕೆ ಬರುತ್ತಿದ್ದಂತೆ ಎಲ್ಲ ಆಟಗಾರರು ವೇಗದ ಆಟಕ್ಕೆ ಕೈಹಾಕತೊಡಗಿದರು. ನಿತೀಶ್ ರಾಣಾ 22 ಎಸೆತಗಳಲ್ಲಿ 28 ರನ್ ಸಿಡಿಸಿದರು. 10 ಎಸೆತ ಎದುರಿಸಿದ ನಾಯಕ ರಿಯಾನ್ ಪರಾಗ್ ತಲಾ 2 ಬೌಂಡರಿ ಹಾಗೂ ಸಿಕ್ಸರ್ ನೆರವಿಂದ 22 ರನ್ ಗಳಿಸಿ ಕೃನಾಲ್ ಎಸೆತದಲ್ಲಿ ಔಟಾದರು. ಹೆಟ್ಮಾಯರ್ ಆಟ 11 ರನ್ಗಳಿಗೆ ಸೀಮಿತವಾಯ್ತು. ಸುಸ್ಥಿತಿಯಲ್ಲಿದ್ದ ರಾಜಸ್ಥಾನಕ್ಕೆ ಜೋಶ್ ಹೇಜಲ್ವುಡ್ ಸಣ್ಣ ಚಮಕ್ ಕೊಟ್ಟರು. ಆದರೆ, ಕೊನೆಯಲ್ಲಿ ಧ್ರುವ್ ಜುರೆಲ್ ಮತ್ತು ಶುಭಮ್ ದುಬೆ ಪಂದ್ಯವನ್ನು ತಮ್ಮತ್ತ ತಿರುಗಿಸಿದರು. ಈ ವೇಳೆ ಜೋಶ್ ಹೇಜಲ್ವುಡ್ ಅಮೋಘವಾಗಿ ಬೌಲಿಂಗ್ ಮಾಡಿ 19ನೇ ಓವರ್ನಲ್ಲಿ ಕೇವಲ 1 ರನ್ ಮಾತ್ರ ಬಿಟ್ಟುಕೊಟ್ಟರು. ಕೊನೆಯ ಓವರ್ನ ಮೊದಲ ಎಸೆತದಲ್ಲಿ ಶುಭಂ ದುಬೆ ಔಟಾಗುವುದರೊಂದಿಗೆ ಆರ್ಆರ್ ಸೋಲು ಖಚಿತವಾಯ್ತು.