ಕನ್ನಡ ಸುದ್ದಿ  /  Cricket  /  Sanju Samson Dropped Yuzvendra Chahal Reacts To Selection Snub After India Announce T20i Squad India Vs Australia Prs

ಆಸೀಸ್ ಸರಣಿಗೂ ಸ್ಯಾಮ್ಸನ್​ ಕಡೆಗಣನೆ; ಅವಕಾಶ ಸಿಗದ್ದಕ್ಕೆ ಮೌನ ಮುರಿದ ಚಹಲ್, ಬಿಸಿಸಿಐ ವಿರುದ್ಧ ಭುಗಿಲೆದ್ದ ಆಕ್ರೋಶ

India vs Australia: ಆಸ್ಟ್ರೇಲಿಯಾ ಎದುರಿನ ಟಿ20 ಸರಣಿಗೆ ಸಂಜು ಸ್ಯಾಮ್ಸನ್, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್​ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಹೀಗಾಗಿ ಅಭಿಮಾನಿಗಳ ವಲಯದಲ್ಲಿ ಬಿಸಿಸಿಐ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಆಸೀಸ್ ಸರಣಿಗೂ ಸ್ಯಾಮ್ಸನ್​ ಕಡೆಗಣನೆ; ಅವಕಾಶ ಸಿಗದ್ದಕ್ಕೆ ಮೌನ ಮುರಿದ ಚಹಲ್.
ಆಸೀಸ್ ಸರಣಿಗೂ ಸ್ಯಾಮ್ಸನ್​ ಕಡೆಗಣನೆ; ಅವಕಾಶ ಸಿಗದ್ದಕ್ಕೆ ಮೌನ ಮುರಿದ ಚಹಲ್.

ನವೆಂಬರ್​ 23ರಿಂದ ಆಸ್ಟ್ರೇಲಿಯಾ ಎದುರಿನ ಐದು ಪಂದ್ಯಗಳ ಟಿ20 ಸರಣಿಗೆ ಭಾರತದ ಯುವ ತಂಡ ಪ್ರಕಟಗೊಂಡಿದೆ. ಹಾರ್ದಿಕ್ ಪಾಂಡ್ಯ ಗಾಯಗೊಂಡ ಕಾರಣ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್​​​​ ಯಾದವ್​ಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿದೆ. ಏಕದಿನ ವಿಶ್ವಕಪ್ ಆಡಿದ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗಾಗಿ ಯುವಕರ ತಂಡಕ್ಕೆ ಹೆಚ್ಚು ಒತ್ತು ನೀಡಲಾಗಿದೆ.

ಟ್ರೆಂಡಿಂಗ್​ ಸುದ್ದಿ

ಆದರೆ ಏಷ್ಯಾಕಪ್, ಏಕದಿನ ವಿಶ್ವಕಪ್ ಟೂರ್ನಿಗೆ ಕಡೆಗಣಿಸಲಾಗಿದ್ದ ವಿಕೆಟ್ ಕೀಪರ್ ಬ್ಯಾಟ್ಸ್​ಮನ್​ ಸಂಜು ಸ್ಯಾಮ್ಸನ್, ಲೆಗ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಮತ್ತು ಸ್ವಿಂಗ್ ಬೌಲರ್ ಭುವನೇಶ್ವರ್ ಕುಮಾರ್​ ಅವರನ್ನು ಮತ್ತೆ ಕಡೆಗಣಿಸಲಾಗಿದೆ. ಈ ಆಟಗಾರರನ್ನು ಆಯ್ಕೆ ಮಾಡದ ಬಿಸಿಸಿಐ ಮತ್ತು ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ವಿರುದ್ಧ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವಕಪ್ ತಂಡದ ಮೂವರಿಗೆ ಅವಕಾಶ

ಸೂರ್ಯಕುಮಾರ್​​ಗೆ ನಾಯಕತ್ವ ಪಟ್ಟ ಸಿಕ್ಕಿದ್ದರೆ, ಋತುರಾಜ್ ಗಾಯಕ್ವಡ್ ಉಪನಾಯಕರಾಗಿದ್ದಾರೆ. ಅಲ್ಲದೆ, ವಿಶ್ವಕಪ್ ತಂಡದ ಮೂವರಿಗೆ ಸ್ಥಾನ ಸಿಕ್ಕಿದೆ. ಸೂರ್ಯ, ಇಶಾನ್‌ ಕಿಶನ್‌ ಮತ್ತು ಪ್ರಸಿದ್ಧ್ ಕೃಷ್ಣ ವಿಶ್ವಕಪ್ ತಂಡದಲ್ಲಿದ್ದರು. ಸೂರ್ಯ 7 ಪಂದ್ಯಗಳಲ್ಲಿ 106 ರನ್ ಗಳಿಸಿದ್ದರೆ, ಇಶಾನ್ ಎರಡು ಪಂದ್ಯಗಳಲ್ಲಿ ಕಣಕ್ಕಿಳಿದಿದ್ದರು. ಇನ್ನು ಹಾರ್ದಿಕ್ ಪಾಂಡ್ಯ ಜಾಗದಲ್ಲಿ ಅವಕಾಶ ಪಡೆದ ಪ್ರಸಿದ್ದ್​ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ.

ಜಿತೇಶ್​ಗೆ ಮಣೆ, ಸಂಜುಗೆ ಅನ್ಯಾಯ

ಏಷ್ಯಾಕಪ್ ಟೂರ್ನಿಗೂ ಮುನ್ನ ನಡೆದ ಐರ್ಲೆಂಡ್ ಎದುರಿನ ಟಿ20 ಸರಣಿಗೆ ಅವಕಾಶ ಪಡೆದಿದ್ದ ಸ್ಯಾಮ್ಸನ್​ಗೆ ಮತ್ತೆ ಅನ್ಯಾಯವಾಗಿದೆ. ಪ್ರಮುಖ ವಿಕೆಟ್​ ಕೀಪರ್​ ಆಗಿ ಜಿತೇಶ್ ಶರ್ಮಾ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ, ಸಂಜುಗೆ ಅವಕಾಶ ನೀಡದ ಕಾರಣ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಸ್ಯಾಮ್ಸನ್​ಗೆ ಅನ್ಯಾಯ ಆಗಿರುವುದು ಇದೇ ಮೊದಲಲ್ಲ. ಫಾರ್ಮ್​ನಲ್ಲಿದ್ದರೂ ಕಡೆಗಣನೆ ಮಾಡಲಾಗುತ್ತಿದೆ ಎಂದು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

ಏಷ್ಯಾಕಪ್​ ಟೂರ್ನಿಗೆ ಮೀಸಲು ಆಟಗಾರನಾಗಿ ಸಂಜು ಆಯ್ಕೆ ಆಗಿದ್ದರು. ಆದರೆ ಎರಡು ಪಂದ್ಯಗಳ ನಂತರ ಕೆಎಲ್ ರಾಹುಲ್​ ತಂಡ ಕೂಡಿಕೊಳ್ಳುತ್ತಿದ್ದಂತೆ ತವರಿಗೆ ಮರಳುವಂತೆ ಬಿಸಿಸಿಐ ಸೂಚಿಸಿತ್ತು. ಅದಕ್ಕೂ ಹಿಂದೆ ಭಾರತದ ಸರಣಿಗಳಲ್ಲಿ ಸ್ಯಾಮ್ಸನ್​ಗೆ ಅವಕಾಶ ನೀಡುವಂತೆ ಅಭಿಮಾನಿಗಳು ಬ್ಯಾನರ್​​ಗಳನ್ನು ಪ್ರದರ್ಶಿಸಿದ್ದರು. ಈಗ ಆಸೀಸ್​ ಎದುರಿನ ಸರಣಿಗೂ ಚಾನ್ಸ್​ ನೀಡದ್ದಕ್ಕೆ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕೆರಳಿದ್ದಾರೆ. ಉದ್ದೇಶ ಪೂರ್ವಕವಾಗಿ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಮೌನ ಮುರಿದ ಚಹಲ್

ಆಸೀಸ್ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನ ಸಿಗದಿರುವ ಬಗ್ಗೆ ಚಹಲ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಕಣ್ಣೀರಿನ ಎಮೋಜಿಯೊಂದಿಗೆ ತಮ್ಮ ನೋವನ್ನು ಸರಳ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್‌ಗೆ ನೆಟಿಜನ್‌ಗ ಪ್ರತಿಕ್ರಿಯಿಸಿದ್ದು, ಧೈರ್ಯವಾಗಿ ಇರುವಂತೆ ಕೇಳಿಕೊಂಡಿದ್ದಾರೆ. ಕೆಲವರು ಬಿಸಿಸಿಐ ವಿರುದ್ಧ ಕೆಂಡ ಕಾರಿದ್ದಾರೆ. ಚಹಲ್ ಕೊನೆಯ ಬಾರಿಗೆ ಆಗಸ್ಟ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಆಡಿದ್ದರು.

ಆಸ್ಟ್ರೇಲಿಯಾ ಟಿ20 ಸರಣಿಗೆ ಭಾರತ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಋತುರಾಜ್ ಗಾಯಕ್ವಾಡ್ (ಉಪನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್) ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಅವೇಶ್ ಖಾನ್, ಮುಕೇಶ್ ಕುಮಾರ್.

- ಶ್ರೇಯಸ್ ಅಯ್ಯರ್ ಕೊನೆಯ 2 ಟಿ20 ಪಂದ್ಯಗಳಿಗೆ ತಂಡಕ್ಕೆ ಸೇರಿಕೊಳ್ಳಲಿದ್ದು, ಉಪನಾಯಕನ ಜವಾಬ್ದಾರಿ ವಹಿಸಲಿದ್ದಾರೆ.

ಭಾರತ - ಆಸ್ಟ್ರೇಲಿಯಾ ನಡುವಿನ ಟಿ20 ಸರಣಿ ವೇಳಾಪಟ್ಟಿ
ಸಂಖ್ಯೆದಿನಾಂಕಪಂದ್ಯಸ್ಥಳ
1ನವೆಂಬರ್​ 23ಮೊದಲ ಟಿ20 ಪಂದ್ಯವಿಶಾಖಪಟ್ಟಣ
2ನವೆಂಬರ್​ 26ಎರಡನೇ ಟಿ20 ಪಂದ್ಯತಿರುವನಂತಪುರಂ
3ನವೆಂಬರ್​ 28ಮೂರನೇ ಟಿ20 ಪಂದ್ಯಗುವಾಹಟಿ
4ಡಿಸೆಂಬರ್ 1ನಾಲ್ಕನೇ ಟಿ20 ಪಂದ್ಯರಾಯ್​ಪುರ
5ಡಿಸೆಂಬರ್ 3ಐದನೇ ಟಿ20 ಪಂದ್ಯಬೆಂಗಳೂರು

ಸಂಬಂಧಿತ ಲೇಖನ

ಕ್ರಿಕೆಟ್ ಪ್ರೇಮಿಗಳೇ Cricket News, Live Score ಮತ್ತು Kannada News ಮತ್ತು ಸಂಬಂಧಿಸಿದ ಬರಹಗಳನ್ನು ಓದಿ.