ಸರ್ಫರಾಜ್ ಖಾನ್ ಔಟ್, ಸಾಯಿ ಸುದರ್ಶನ್ ಇನ್; ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತದ 35 ಆಟಗಾರರ ಶಾರ್ಟ್ಲಿಸ್ಟ್
ಮುಂಬರುವ ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮತ್ತು ಅಧಿಕೃತ ಟೆಸ್ಟ್ಗಳಿಗೆ ಸಂಬಂಧಿಸಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಭಾರತ ಮತ್ತು ಭಾರತ 'ಎ' ತಂಡಗಳಿಗೆ ಒಟ್ಟು 35 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಜೂನ್ 20ರಿಂದ ಪ್ರಾರಂಭವಾಗುವ ಐದು ಪಂದ್ಯಗಳ ಮಹತ್ವದ ಟೆಸ್ಟ್ ಸರಣಿಯಲ್ಲಿ 'ತ್ರಿ ಲಯನ್ಸ್' (ಇಂಗ್ಲೆಂಡ್) ವಿರುದ್ಧ ಸೆಣಸಾಟ ನಡೆಸಲು ಭಾರತ ತಂಡ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲು ಸಜ್ಜಾಗಿದೆ. 2025-27ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಆವೃತ್ತಿಗೆ ಚಾಲನೆ ನೀಡುವ ಸರಣಿ ಇದಾಗಿದೆ. ಮೊದಲ 2 ಆವೃತ್ತಿಯಲ್ಲಿ ಫೈನಲ್ಗೆ ಅರ್ಹತೆ ಪಡೆದಿದ್ದ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 3ನೇ ಆವೃತ್ತಿಯ ಕೊನೆಯ ಹಂತದಲ್ಲಿ ಪ್ರಶಸ್ತಿ ಸುತ್ತಿಗೇರಲು ವಿಫಲವಾಗಿದ್ದ ಭಾರತ ಇದೀಗ ನಾಲ್ಕನೇ ಆವೃತ್ತಿಗೆ ಭರ್ಜರಿ ಸಿದ್ಧತೆ ನಡೆಸಿದೆ.
ಅಭ್ಯಾಸ ಪಂದ್ಯ ಮತ್ತು ಅಧಿಕೃತ ಟೆಸ್ಟ್ಗಳಿಗೆ ಸಂಬಂಧಿಸಿ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲು ಭಾರತ ಮತ್ತು ಭಾರತ 'ಎ' ತಂಡಗಳಿಗೆ ಒಟ್ಟು 35 ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಮೇ 2ನೇ ಅಥವಾ ಕೊನೆಯ ವಾರದಲ್ಲಿ ತಂಡದ ಪ್ರಕಟವಾಗುವ ನಿರೀಕ್ಷೆಯಿದೆ. ರೋಹಿತ್ರನ್ನು ಭಾರತ ಮತ್ತು ಭಾರತ 'ಎ' ಎರಡೂ ತಂಡಗಳಿಗೆ ಆಯ್ಕೆ ಮಾಡಲಾಗಿದೆ. ಬಾಂಗ್ಲಾದೇಶ, ನ್ಯೂಜಿಲೆಂಡ್ ವಿರುದ್ಧದ ತವರು ಸರಣಿಯಲ್ಲಿ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಹಿಟ್ಮ್ಯಾನ್ ಕಳಪೆ ಪ್ರದರ್ಶನ ನೀಡಿದ್ದ ಕಾರಣ ಲಯಕ್ಕೆ ಮರಳುವ ಅಗತ್ಯ ಇದೆ. ಹಾಗಾಗಿ ಅಭ್ಯಾಸ ಪಂದ್ಯಗಳಿಗೂ ಆಯ್ಕೆ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ರೋಹಿತ್ ಶರ್ಮಾ ಸ್ಥಾನ ಕೆಲವು ಸಮಯದಿಂದ ಪರಿಶೀಲನೆಗೆ ಒಳಪಟ್ಟಿದೆ. ಆದರೆ, ಅವರನ್ನು ಕೈಬಿಟ್ಟು ಮುನ್ನಡೆಯುವ ಸಾಹಸವನ್ನಂತೂ ಬಿಸಿಸಿಐ ಮಾಡುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಷ್ಟೇ ಕಠಿಣವಾದ ಈ ಸರಣಿಯ ಉದ್ದಕ್ಕೂ ಒಬ್ಬ ಬಲಿಷ್ಠ ನಾಯಕನ ಅಗತ್ಯವಿದೆ ಎಂದು ಮಂಡಳಿ ಭಾವಿಸಿರುವುದರಿಂದ ರೋಹಿತ್ ಆಡುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ. ಆಯ್ಕೆದಾರರು ಗಮನ ಸೆಳೆದಿರುವ ಮತ್ತೊಂದು ವಿಷಯವೆಂದರೆ ಮಧ್ಯಮ ಕ್ರಮಾಂಕದಲ್ಲಿ 5 ಅಥವಾ 6ನೇ ಕ್ರಮಾಂಕದಲ್ಲಿ ಉತ್ತಮ ಆಟಗಾರರ ಅನುಪಸ್ಥಿತಿ.
ರಜತ್ ಅಥವಾ ಸರ್ಫರಾಜ್?
ಮಧ್ಯಮ ಕ್ರಮಾಂಕದಲ್ಲಿ ಸರ್ಫರಾಜ್ ಖಾನ್ ಅವರ ಸಾಮರ್ಥ್ಯದ ಬಗ್ಗೆ ಬಿಸಿಸಿಐಗೆ ವಿಶ್ವಾಸವಿಲ್ಲ. ಏಕೆಂದರೆ ಅವರು ವಿದೇಶಿ ಪಿಚ್ಗಳಲ್ಲಿ ನಿರೀಕ್ಷೆಗೆ ತಕ್ಕಂತೆ ಆಡುತ್ತಿಲ್ಲ. ಈ ಸ್ಥಾನಕ್ಕೆ ಕರುಣ್ ನಾಯರ್ ಮತ್ತು ರಜತ್ ಪಾಟೀದಾರ್ ಅವರನ್ನು ಪರಿಗಣಿಸಲಾಗಿದೆ ಎಂದು ವರದಿ ಹೇಳುತ್ತದೆ. ವಿಶೇಷವಾಗಿ, ನಾಯರ್ ಕಳೆದ ಕೆಲವು ವರ್ಷಗಳಿಂದ ದೇಶೀಯ ಕ್ರಿಕೆಟ್ನಲ್ಲಿ ಅಸಾಧಾರಣ ಪ್ರದರ್ಶನ ನೀಡುತ್ತಿದ್ದಾರೆ. ಈತ ಭಾರತ ಎ ತಂಡದಲ್ಲಿ ಅವಕಾಶ ಪಡೆಯುವುದು ಬಹುತೇಕ ಖಚಿತ.
ಮಧ್ಯಮ ಕ್ರಮಾಂಕದ ವಿಷಯಕ್ಕೆ ಸಂಬಂಧಿಸಿ ಟೀಮ್ ಮ್ಯಾನೇಜ್ಮೆಂಟ್ ಸರ್ಫರಾಜ್ ಖಾನ್ ಅವರ ಸಾಮರ್ಥ್ಯದ ಬಗ್ಗೆ ಬಹಳ ಕಡಿಮೆ ವಿಶ್ವಾಸ ತೋರಿಸಿದೆ. ನಾಯರ್ ಮತ್ತು ಪಾಟೀದಾರ್ ಅನುಭವಿ ರೆಡ್-ಬಾಲ್ ಆಟಗಾರರು ಮತ್ತು ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರಲ್ಲಿ ಕನಿಷ್ಠ ಒಬ್ಬರಾದರೂ ಭಾರತ 'ಎ' ತಂಡದಲ್ಲಿ ಇರುವ ಸಾಧ್ಯತೆಯಿದೆ ಎಂದು ಮತ್ತೊಂದು ಮೂಲ ತಿಳಿಸಿದೆ. ಸಾಯಿ ಸುದರ್ಶನ್ ಅವರನ್ನು ಆರಂಭಿಕ ಸ್ಥಾನಕ್ಕೆ ಎಂದು ಪರಿಗಣಿಸುವ ಸಾಧ್ಯತೆಯಿದೆ.
ಅಯ್ಯರ್ ಆಯ್ಕೆ ಅನುಮಾನ
ಮತ್ತೊಂದೆಡೆ, ಶ್ರೇಯಸ್ ಅಯ್ಯರ್ ಟೆಸ್ಟ್ ತಂಡಕ್ಕೆ ಮರಳುವ ಬಗ್ಗೆ ಬಿಸಿಸಿಐ ಇನ್ನೂ ನಿರ್ಧರಿಸಿಲ್ಲ. 2024ರ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ ಕೊನೆಯ ಬಾರಿಗೆ ಟೆಸ್ಟ್ ಆಡಿದ್ದ ಅಯ್ಯರ್, ದೇಶೀಯ ಕ್ರಿಕೆಟ್ ಆಡುವುದನ್ನು ನಿರ್ಲಕ್ಷಿಸಿದ್ದರು. ಪರಿಣಾಮ ಕೇಂದ್ರ ಒಪ್ಪಂದಗಳು ಮತ್ತು ಟೆಸ್ಟ್ ತಂಡದಿಂದ ಹೊರಗುಳಿದಿದ್ದರು. ಅಯ್ಯರ್ ಕಳೆದ ವರ್ಷ ಟೆಸ್ಟ್ ಕ್ರಿಕೆಟ್ನಲ್ಲಿ ಕಳಪೆ ಪ್ರದರ್ಶನ ನೀಡಿದ ಕಾರಣ ಕೈಬಿಡಲಾಗಿತ್ತು. ಆದರೆ ಅಯ್ಯರ್ ಆಯ್ಕೆಗೆ ಸಂಬಂಧಿಸಿ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಹಾಗೆಯೇ ಕುಲ್ದೀಪ್ ಯಾದವ್ ಆಯ್ಕೆಯ ಸಾಧ್ಯತೆಯೂ ಕಡಿಮೆ ಎನ್ನಲಾಗಿದೆ. ರವಿಚಂದ್ರನ್ ಅಶ್ವಿನ್ ನಿವೃತ್ತಿ ಘೋಷಿಸಿದ ಹಿನ್ನೆಲೆ ರವೀಂದ್ರ ಜಡೇಜಾಗೆ ಜೋಡಿಯಾಗಿ ಆಲ್ರೌಂಡರ್ ಅಕ್ಷರ್ ಪಟೇಲ್ಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚು.