21 ಶತಕ, 39 ಅರ್ಧಶತಕ, 7283 ರನ್; ರಣಜಿ ಸೋತ ಬೆನ್ನಲ್ಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೆಕೆಆರ್​ ಸ್ಟಾರ್ ಬ್ಯಾಟರ್
ಕನ್ನಡ ಸುದ್ದಿ  /  ಕ್ರಿಕೆಟ್  /  21 ಶತಕ, 39 ಅರ್ಧಶತಕ, 7283 ರನ್; ರಣಜಿ ಸೋತ ಬೆನ್ನಲ್ಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೆಕೆಆರ್​ ಸ್ಟಾರ್ ಬ್ಯಾಟರ್

21 ಶತಕ, 39 ಅರ್ಧಶತಕ, 7283 ರನ್; ರಣಜಿ ಸೋತ ಬೆನ್ನಲ್ಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೆಕೆಆರ್​ ಸ್ಟಾರ್ ಬ್ಯಾಟರ್

Sheldon Jackson Retire: ರಣಜಿ ಟ್ರೋಫಿಯ 4ನೇ ಸೆಮಿಫೈನಲ್ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಸೌರಾಷ್ಟ್ರ ಸೋತ ಬೆನ್ನಲ್ಲೇ ಶೆಲ್ಡನ್ ಜಾಕ್ಸನ್ ಫೆಬ್ರವರಿ 11ರಂದು ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು.

21 ಶತಕ, 39 ಅರ್ಧಶತಕ, 7283 ರನ್; ರಣಜಿ ಸೋತ ಬೆನ್ನಲ್ಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೆಕೆಆರ್​ ಸ್ಟಾರ್ ಬ್ಯಾಟರ್
21 ಶತಕ, 39 ಅರ್ಧಶತಕ, 7283 ರನ್; ರಣಜಿ ಸೋತ ಬೆನ್ನಲ್ಲೇ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಕೆಕೆಆರ್​ ಸ್ಟಾರ್ ಬ್ಯಾಟರ್

ಒಂದು ಕಾಲದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಭಾಗವಾಗಿದ್ದ ಸೌರಾಷ್ಟ್ರ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್ ತಮ್ಮ 15 ವರ್ಷಗಳ ಕ್ರಿಕೆಟ್ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಭಾರತೀಯ ಕ್ರಿಕೆಟ್ ತಂಡದಲ್ಲಿ ಕಾಣಿಸಿಕೊಳ್ಳಬೇಕೆಂಬ ಜಾಕ್ಸನ್ ಅವರ ಕನಸು ಕನಸಾಗೇ ಉಳಿಯಿತು. ರಣಜಿ ಕ್ರಿಕೆಟ್​ನಲ್ಲಿ ಅತ್ಯದ್ಭುತ ದಾಖಲೆಗಳನ್ನು ಹೊಂದಿದ್ದರ ನಡುವೆಯೂ ಭಾರತ ತಂಡದಲ್ಲಿ ಸ್ಥಾನ ಸಿಗಲಿಲ್ಲ.

ರಾಜ್​ಕೋಟ್​ನ ನಿರಂಜನ್​ ಶಾ ಕ್ರಿಕೆಟ್ ಮೈದಾನದಲ್ಲಿ ಜರುಗಿದ ರಣಜಿ ಟ್ರೋಫಿಯ ನಾಲ್ಕನೇ ಕ್ವಾರ್ಟರ್​​ ಫೈನಲ್​ ಪಂದ್ಯದಲ್ಲಿ ಗುಜರಾತ್ ತಂಡದ ವಿರುದ್ಧ ಸೌರಾಷ್ಟ್ರ ಇನ್ನಿಂಗ್ಸ್ ಮತ್ತು 98 ರನ್​ಗಳಿಂದ ಸೋತ ಬೆನ್ನಲ್ಲೇ 38 ವರ್ಷದ ಜಾಕ್ಸನ್ ಮಂಗಳವಾರ (ಫೆಬ್ರವರಿ 11) ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಘೋಷಿಸಿದರು. ವಿಕೆಟ್ ಕೀಪರ್ ಬ್ಯಾಟರ್​ ಆಗಿರುದ ಹಿರಿಯ ಆಟಗಾರ ಈವರೆಗೂ 105 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. 45.80ರ ಬ್ಯಾಟಿಂಗ್ ಸರಾಸರಿಯಲ್ಲಿ 7283 ರನ್ ಗಳಿಸಿದ್ದಾರೆ.

ನಿವೃತ್ತಿ ಘೋಷಿಸಿದ ಆಟಗಾರನ ಖಾತೆಯಲ್ಲಿ 21 ಶತಕ, 39 ಅರ್ಧಶತಕ ಸೇರಿವೆ. ಅವರ ಗರಿಷ್ಠ ಸ್ಕೋರ್​ 186. ಜಾಕ್ಸನ್ ಒಬ್ಬ ಉತ್ತಮ ಬ್ಯಾಟ್ಸ್‌ಮನ್ ಮಾತ್ರವಲ್ಲ, ವಿಶ್ವಾಸಾರ್ಹ ವಿಕೆಟ್ ಕೀಪರ್ ಮತ್ತು ಅತ್ಯುತ್ತಮ ಫೀಲ್ಡರ್ ಕೂಡ ಹೌದು. ದೇಶೀಯ ಕ್ರಿಕೆಟ್​ಗೆ 2006ರಲ್ಲಿ ಲಿಸ್ಟ್ ಎ ಮೂಲಕ ಪದಾರ್ಪಣೆ ಮಾಡಿದ್ದರು. 86 ಲಿಸ್ಟ್ ಎ ಏಕದಿನ ಪಂದ್ಯಗಳಲ್ಲಿ 14 ಅರ್ಧಶತಕ, 9 ಶತಕ ಸಹಿತ 2792 ರನ್ ಗಳಿಸಿದ್ದಾರೆ. ಐಪಿಎಲ್​ನಲ್ಲಿ ಆಡಿರುವ 9 ಪಂದ್ಯ ಸಹಿತ ಒಟ್ಟಾರೆ 84 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 1812 ರನ್ ಪೇರಿಸಿದ್ದಾರೆ.

ಶೆಲ್ಡನ್ ಜಾಕ್ಸನ್ ಐಪಿಎಲ್ ಜರ್ನಿ

ಶೆಲ್ಡನ್ ಜಾಕ್ಸನ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಐಪಿಎಲ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. 2013 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮೂಲಕ ಐಪಿಎಲ್‌ ಪ್ರವೇಶಿಸಿದ ಅವರಿಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. 2017ರ ಕೆಕೆಆರ್ ಪರ ಮತ್ತೆ ಆಡಿದ್ದರೂ ಸ್ಥಿರ ಸ್ಥಾನ ಪಡೆಯಲು ವಿಫಲರಾದರು. 2021ರಲ್ಲಿ ಆರ್​​ಸಿಬಿ ಸೇರಿದರೂ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. 2022ರಲ್ಲಿ ಕೆಕೆಆರ್ ಮತ್ತೆ ಖರೀದಿಸಿದರೂ ಒಂದೆರಡು ಪಂದ್ಯಗಳಲ್ಲಿ ಅವಕಾಶ ಸಿಕ್ಕರೂ ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಐಪಿಎಲ್​ನಲ್ಲಿ ಆಡಿರುವ 9 ಪಂದ್ಯಗಳಲ್ಲಿ 61 ರನ್ ಗಳಿಸಿದ್ದಾರೆ.

ರಣಜಿ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ

2012-13ರ ರಣಜಿ ಋತುವಿನಲ್ಲಿ 4 ಅರ್ಧಶತಕ, ಮೂರು ಶತಕ ಗಳಿಸುವ ಮೂಲಕ ಜಾಕ್ಸನ್ ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದರು. ಕರ್ನಾಟಕ ಮತ್ತು ಪಂಜಾಬ್ ವಿರುದ್ಧ ಕ್ವಾರ್ಟರ್ ಫೈನಲ್ ಮತ್ತು ಸೆಮಿಫೈನಲ್‌ನಲ್ಲಿ ಸತತ ಶತಕ ಬಾರಿಸಿ ಗಮನ ಸೆಳೆಸಿದ್ದರು. ಆ ವರ್ಷ ನೀಡಿದ್ದ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದ ಕಾರಣ ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧದ ಸರಣಿಗೆ ಭಾರತ ಎ ತಂಡದಲ್ಲಿ ಸ್ಥಾನ ಪಡೆದಿದ್ದರು. 2015-16ರ ರಣಜಿ ಆವೃತ್ತಿಯಲ್ಲಿ ಸೌರಾಷ್ಟ್ರ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಹೆಚ್ಚಿನ ಅವಕಾಶಗಳು ಸಿಗಲಿಲ್ಲವೇಕೆ?

ಭಾರತೀಯ ತಂಡದಲ್ಲಿ ಈಗಾಗಲೇ ಅತ್ಯುತ್ತಮ ವಿಕೆಟ್‌ಕೀಪರ್‌ಗಳು (ಎಂಎಸ್ ಧೋನಿ, ರಿಷಭ್ ಪಂತ್, ಸಂಜು ಸ್ಯಾಮ್ಸನ್ ಮತ್ತು ದಿನೇಶ್ ಕಾರ್ತಿಕ್..) ಇದ್ದುದರಿಂದ ಅವರಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಅಷ್ಟೇ ಅಲ್ಲ, ಐಪಿಎಲ್‌ನಲ್ಲಿ ತನ್ನ ಸಾಮರ್ಥ್ಯ ನಿರೂಪಿಸಲು ವಿಫಲವಾಗಿದ್ದು ಸಹ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರಿತು. ಭಾರತ ತಂಡದಲ್ಲಿ ಅವಕಾಶ ಪಡೆದಿರುವ ಸಾಕಷ್ಟು ಆಟಗಾರರು ಐಪಿಎಲ್​ನಲ್ಲಿ ಅಬ್ಬರಿಸಿದವರೇ. ಒಂದು ವೇಳೆ ಸಿಕ್ಕ ಪಂದ್ಯಗಳಲ್ಲಿ ಜಾಕ್ಸನ್​, ತನ್ನ ಪ್ರತಾಪ ತೋರಿದ್ದರೆ ಆಯ್ಕೆದಾರರ ಗಮನ ಸೆಳೆಯಬಹುದಿತ್ತು.

ಪ್ರಥಮ ದರ್ಜೆಯಲ್ಲಿ ಅತ್ಯುತ್ತಮ ಉತ್ತಮ ದಾಖಲೆ ಹೊಂದಿದ್ದ ಕಾರಣ ಜಾಕ್ಸನ್, ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದರು. ಬಿಸಿಸಿಐ ಸೆಲೆಕ್ಟರ್​​ಗಳು ಇವರ ಆಯ್ಕೆಗೆ ಮನಸ್ಸು ಮಾಡದ ಕಾರಣ ಕಳೆದ ತಿಂಗಳು ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಜಾಕ್ಸನ್, ಇದೀಗ ಫಸ್ಟ್ ಕ್ಲಾಸ್​ನಿಂದಲೂ ಹಿಂದೆ ಸರಿದಿದ್ದಾರೆ. ಭಾರತ ತಂಡದಲ್ಲಿ ಆಡಲು ಅವಕಾಶ ಸಿಗದಿದ್ದರೂ ನನ್ನ ವೃತ್ತಿಜೀವನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಜಾಕ್ಸನ್ ಪ್ರತಿಕ್ರಿಯಿಸಿದ್ದಾರೆ.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner