ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಹೀಗಿರಲಿದೆ ಕೆಕೆಆರ್ ಸಂಭಾವ್ಯ 11; ನರೈನ್ ಆರಂಭಿಕ, ರಸೆಲ್ ಫಿನಿಷರ್
KKRs Likely Playing XI: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಆರಂಭಿಕ ಪಂದ್ಯಕ್ಕೆ ಕೋಲ್ಕತ್ತಾ ನೈಟ್ ರೈಡರ್ಸ್ ಬಲಿಷ್ಠ ಪ್ಲೇಯಿಂಗ್ 11 ಕಣಕ್ಕಿಳಿಸಲು ಸಜ್ಜಾಗಿದೆ.

ಬಹುನಿರೀಕ್ಷಿತ ಐಪಿಎಲ್ 2025 ಮಾರ್ಚ್ 22ರಿಂದ ಶುರುವಾಗಲಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮುಖಾಮುಖಿಯಾಗಲಿವೆ. ಈ ಹೈವೋಲ್ಟೇಜ್ ಕದನಕ್ಕೆ ಕೋಲ್ಕತ್ತಾದ ಈಡನ್ ಗಾರ್ಡನ್ ಕ್ರಿಕೆಟ್ ಮೈದಾನವು ಆತಿಥ್ಯ ವಹಿಸಲಿದೆ. 2024ರಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಟ್ರೋಫಿಗೆ ಮುತ್ತಿಕ್ಕಿದ್ದ ಕೆಕೆಆರ್, ಈ ಸಲ ಅಜಿಂಕ್ಯ ರಹಾನೆ ಸಾರಥ್ಯದಲ್ಲಿ ಅಗ್ನಿ ಪರೀಕ್ಷೆಗೆ ಸಜ್ಜಾಗಿದೆ.
ಟ್ರೋಫಿ ಗೆದ್ದುಕೊಟ್ಟರೂ ಸರಿಯಾದ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ತಂಡ ತೊರೆದಿರುದಾಗಿ ಅಯ್ಯರ್ ಹೇಳಿದ್ದಾರೆ. ಹಾಗಾಗಿ ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ ನಡೆದ ಮೆಗಾ ಹರಾಜಿನಲ್ಲಿ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ಪಾಲಾಗಿರುವ ಅಯ್ಯರ್, ಚೊಚ್ಚಲ ಕಪ್ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಕಳಪೆ ದಾಖಲೆ ಹೊಂದಿರುವ ರಹಾನೆಗೆ ಬಲಿಷ್ಠ ಪ್ಲೇಯಿಂಗ್ 11 ರೂಪಿಸುವುದು ದೊಡ್ಡ ಸವಾಲಾಗಿದೆ.
ಅಗ್ರ ಕ್ರಮಾಂಕದ ಮೂವರು ಯಾರು?
ಸೌತ್ ಆಫ್ರಿಕಾ ಎಡಗೈ ಬ್ಯಾಟರ್ ಕ್ವಿಂಟನ್ ಡಿ ಕಾಕ್ ಅವರೊಂದಿಗೆ ಕಳೆದ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಸುನಿಲ್ ನರೈನ್ ಅವರು ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ. ಫಿಲ್ ಸಾಲ್ಟ್ ಜೊತೆಗೆ ನರೈನ್ ಕೆಕೆಆರ್ಗೆ ಭರ್ಜರಿ ಆರಂಭ ನೀಡಿದ್ದರು. ಇದು ಉತ್ತಮ ಅಡಿಪಾಯಕ್ಕೆ ಕಾರಣವಾಗಿತ್ತು. ಇದೀಗ ಅಂತಹದ್ದೇ ಆರಂಭ ಪಡೆಯುವ ವಿಶ್ವಾಸದಲ್ಲಿದೆ. ರಹಮಾನಲ್ಲಾ ಗುರ್ಬಾಜ್ ಕೂಡ ಅಗ್ರಸ್ಥಾನದಲ್ಲಿ ಕಣಕ್ಕಿಳಿಯವ ಆಟಗಾರನಾಗಿದ್ದು, ಡಿ ಕಾಕ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದರೂ ಅಚ್ಚರಿ ಇಲ್ಲ.
ಆರಂಭಿಕ ಸ್ಥಾನಕ್ಕೆ ನರೈನ್ ಅವರೇ ಮೊದಲ ಆದ್ಯತೆಯಾಗಿದ್ದಾರೆ. ಒಂದು ವೇಳೆ ಇದು ವರ್ಕೌಟ್ ಆಗದಿದ್ದರೆ ಆರಂಭಿಕ ಸ್ಥಾನದಲ್ಲಿ ಬದಲಾವಣೆಯಾಗಬಹುದು. ಇನ್ನು ನಾಯಕ ಅಜಿಂಕ್ಯ ರಹಾನೆ ಮೂರನೇ ಕ್ರಮಾಂಕದಲ್ಲಿ ಆಡಬಹುದು. ಈ ಹಿಂದೆಯೂ ಅವರು ಇದೇ ಸ್ಥಾನದಲ್ಲಿ ಕಣಕ್ಕಿಳಿದು ವಿವಿಧ ತಂಡಗಳಿಗೆ ಆಸರೆಯಾಗಿದ್ದಾರೆ. ನಂತರ ಉಪನಾಯಕ ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್ ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಲಿದ್ದಾರೆ. ರಿಂಕು ಸಿಂಗ್ ಮತ್ತು ಆಂಡ್ರೆ ರಸೆಲ್ ಬ್ಯಾಟಿಂಗ್ಗೆ ಶಕ್ತಿ ತುಂಬಲಿದ್ದಾರೆ. ಕ್ರಮವಾಗಿ 6 ಮತ್ತು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬರಲಿದ್ದಾರೆ.
ಬೌಲಿಂಗ್ನಲ್ಲಿ ಕಣಕ್ಕಿಳಿಯೋದು ಯಾರು?
ಸುನಿಲ್ ನರೈನ್ ಮತ್ತು ಆ್ಯಂಡ್ರೆ ರಸೆಲ್ ಬ್ಯಾಟಿಂಗ್ ಜೊತೆಗೆ ಬೌಲಿಂಗ್ನಲ್ಲೂ ಕೆಕೆಆರ್ಗೆ ಆಧಾರವಾಗಲಿದ್ದಾರೆ. ನರೈನ್ ಮಧ್ಯಮ ಓವರ್ಗಳಲ್ಲಿ ಎದುರಾಳಿ ತಂಡಕ್ಕೆ ಕಂಟಕವಾಗಲಿದ್ದರೆ, ರಸೆಲ್ ಡೆತ್ ಓವರ್ಗಳಲ್ಲಿ ಯಾರ್ಕರ್ಗಳ ಮೂಲಕ ಬ್ಯಾಟರ್ಗಳಿಗೆ ಕಾಡಲಿದ್ದಾರೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವರುಣ್ ಚಕ್ರವರ್ತಿ ಕೋಲ್ಕತ್ತಾ ಸ್ಪೆಷಲಿಸ್ಟ್ ಸ್ಪಿನ್ನರ್ ಆಗಿದ್ದಾರೆ. ಅಲ್ಲದೆ, ಅದೇ ಲಯ ಮುಂದುವರೆಸುವ ವಿಶ್ವಾಸದಲ್ಲೂ ಇದ್ದಾರೆ. ಆನ್ರಿಚ್ ನೋಕಿಯಾ, ಉಮ್ರಾನ್ ಮಲಿಕ್ ಮತ್ತು ಹರ್ಷಿತ್ ರಾಣಾ ವೇಗದ ದಾಳಿ ನಡೆಸಲಿದ್ದಾರೆ.
ಕೆಕೆಆರ್ ಸಂಭಾವ್ಯ ಬಳಗ
ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಸುನಿಲ್ ನರೈನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಉಮ್ರಾನ್ ಮಲಿಕ್, ಆ್ಯನ್ರಿಚ್ ನೋಕಿಯಾ.
