ಆರ್‌ಸಿಬಿ ಸೋಲಿಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ! ಮನಸ್ಸು ಒಡೆಯಿತು ಅತಿರೇಕದ ಪೋಸ್ಟ್‌
ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಸೋಲಿಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ! ಮನಸ್ಸು ಒಡೆಯಿತು ಅತಿರೇಕದ ಪೋಸ್ಟ್‌

ಆರ್‌ಸಿಬಿ ಸೋಲಿಗೂ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ಗೂ ಎಲ್ಲಿಂದ ಎಲ್ಲಿಯ ಸಂಬಂಧ! ಮನಸ್ಸು ಒಡೆಯಿತು ಅತಿರೇಕದ ಪೋಸ್ಟ್‌

Ashwini Puneeth Rajkumar : ಅಶ್ವಿನಿ ಪುನೀತ್​ ರಾಜ್​ಕುಮಾರ್​ ವಿರುದ್ಧ ಕಿಡಿಗೇಡಿಗಳು ಅತಿರೇಕದ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಆರ್​ಸಿಬಿ ಸೋಲಿಗೆ ಅಶ್ವಿನಿ ಕಾರಣ ಎಂಬ ಕೀಳುಮಟ್ಟದ ಪೋಸ್ಟ್​ ಹಂಚಿಕೊಂಡಿದ್ದಾರೆ.

ಅನ್​ಬಾಕ್ಸ್ ಈವೆಂಟ್​ನಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಆರ್​ಸಿಬಿ ಜೆರ್ಸಿಯನ್ನು ಸ್ವೀಕರಿಸಿದ ಕ್ಷಣ.
ಅನ್​ಬಾಕ್ಸ್ ಈವೆಂಟ್​ನಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಆರ್​ಸಿಬಿ ಜೆರ್ಸಿಯನ್ನು ಸ್ವೀಕರಿಸಿದ ಕ್ಷಣ.

ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡಕ್ಕೆ ದೇಶ-ವಿದೇಶಗಳಲ್ಲಿ ಕೋಟ್ಯಂತರ ಅಭಿಮಾನಿಗಳ ದಂಡೇ ಇದೆ. 16 ವರ್ಷಗಳಿಂದ ಟ್ರೋಫಿ ಗೆಲ್ಲದಿದ್ದರೂ ಅಭಿಮಾನಿಗಳ ಸಂಖ್ಯೆ ಮಾತ್ರ ಕುಸಿದಲ್ಲ. ಸೋತರೂ ಗೆದ್ದರೂ ನಿಷ್ಠಾವಂತ ಅಭಿಮಾನಿಗಳು ಆರ್​ಸಿಬಿಯನ್ನು ಎಂದಿಗೂ ಕೈ ಬಿಟ್ಟವರಲ್ಲ. ಈ ಪೈಕಿ ಕರ್ನಾಟಕ ರತ್ನ ಪುನೀತ್ ರಾಜ್​ಕುಮಾರ್ (Puneeth Rajukumar)​ ಕೂಡ ಒಬ್ಬರು. ಸಾಮಾನ್ಯರಂತೆ 'ಈ ಸಲ ಕಪ್​ ನಮ್ದೆ' ಎಂದು ಅಪಾರ ಬೆಂಬಲ ತೋರುತ್ತಿದ್ದರು ಅಪ್ಪು​.

ಐಪಿಎಲ್​ ಶುರುವಾದಾಗ ಪ್ರತಿ ವರ್ಷವೂ ಆರ್​ಸಿಬಿ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ಹೋಗಿ ಚಿಯರ್ ಮಾಡಲು ಹೋಗುತ್ತಿದ್ದ ಪುನೀತ್​ ರಾಜ್​ಕುಮಾರ್​, ತಂಡಕ್ಕೆ ರಾಯಭಾರಿಯೂ ಆಗಿದ್ದರು. ಎಷ್ಟೇ ಸಿನಿಮಾ ಬ್ಯುಸಿ ಶೆಡ್ಯೂಲ್ ಇದ್ರೂ ಆರ್​ಸಿಬಿ ಪರವಾಗಿ ಪ್ರಚಾರ ಮಾಡುತ್ತಿದ್ದರು. ನಗುವಿನ ಒಡೆಯ ಅಪ್ಪು ಮಾತ್ರವಲ್ಲ, ಅವರ​ ಪತ್ನಿ ಅಶ್ವಿನಿ​ (Ashwini Punneth Rajkumar) ಕೂಡ ಅಪ್ಪಟ್ಟ ಆರ್​ಸಿಬಿ ಅಭಿಮಾನಿ. ಸದಾ ಬೆಂಬಲ ನೀಡುವ ಅಶ್ವಿನಿ, ಇತ್ತೀಚಿಗೆ ಆರ್​ಸಿಬಿ ಅನ್​ಬಾಕ್ಸ್ ಈವೆಂಟ್​ಗೆ ಭಾಗಿಯಾಗಿದ್ದರು.

ಆರ್​​ಸಿಬಿ ಅಭಿಮಾನಿಯಾದ ಅಶ್ವಿನಿ ಪುನೀತ್​ ರಾಜ್​ಕುಮಾರ್​ ವಿರುದ್ಧ ಕಿಡಿಗೇಡಿಗಳು ಅತಿರೇಕದ ಪೋಸ್ಟ್​ವೊಂದನ್ನು ಹಾಕಿದ್ದಾರೆ. ಆರ್​ಸಿಬಿ ಸೋಲಿಗೆ ಅಶ್ವಿನಿ ಅವರೇ ಕಾರಣ ಎಂಬ ಕೀಳುಮಟ್ಟದ ಪೋಸ್ಟ್​ ಹಂಚಿಕೊಂಡಿದ್ದಾರೆ. ಗಜಪಡೆ ಎಂಬ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ. ತಿಳುವಳಿಕೆ ಇಲ್ಲದ ಅಜ್ಞಾನಿಗಳು ಬಾಯಿಗೆ ಬಂದಂತೆ ಪೋಸ್ಟ್ ಹಾಕುವ ಮೂಲಕ ಹೆಣ್ಣಿಗೆ ಅಗೌರವ ಸೂಚಿಸಿದ್ದಾರೆ. ಇದರ ದೂರುಗಳು ದಾಖಲಾಗಿದ್ದು, ಪುನೀತ್​ ಅಭಿಮಾನಿಗಳು ಈ ಕೆಲಸ ದರ್ಶನ್ ಅಭಿಮಾನಿಗಳದ್ದೇ ಎಂದು ಹೇಳುತ್ತಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ?

@GAJAPADE6 ಹೆಸರಿನ ಟ್ವಿಟರ್‌ ಖಾತೆಯಿಂದ, 'ಶುಭ ಕಾರ್ಯಕ್ಕೆ ಮುತ್ತೈದೆಯರನ್ನು ಕರೆಯಬೇಕು. ಗಂಡ ಸತ್ತ ಮುಂ.. ಯರನ್ನು ಕರೀಬಾರದು. ಆರ್‌ಸಿಬಿ ಅನ್‌ಬಾಕ್ಸ್‌ ಇವೆಂಟ್‌ಗೆ ಈ ಮುಂ...ಯನ್ನು ಕರೆದಿದ್ದಕ್ಕೆ ಎಲ್ಲ ಮ್ಯಾಚ್‌ ಸೋಲ್ತಾ ಇದ್ದಾರೆ' ಎಂದು #Yuvarajkumar #PuneethRajkumar #Yuva #Dboss #DevilTheHero ಎಂಬ ಹ್ಯಾಷ್‌ಟ್ಯಾಗ್‌ ಹಾಕಿ ಪೋಸ್ಟ್‌ ಮಾಡಿದ್ದಾರೆ. ಅಪ್ಪು ಅಭಿಮಾನಿಗಳು ಕ್ಷಮೆಗೆ ಒತ್ತಾಯಿಸಿದ್ದಾರೆ. ಕಮಿಷನರ್​​ಗೂ ದೂರು ಕೊಟ್ಟಿದ್ದಾರೆ.

ಇಷ್ಟು ಕೀಳುಮಟ್ಟಕ್ಕೆ ಇಳಿಯಬಾರದು

ಆರ್​​ಸಿಬಿ ಸೋಲಿಗೂ ಅಶ್ವಿನಿ ಪುನೀತ್​ ರಾಜ್​ಕುಮಾರ್ ಅವರಿಗೂ ಏನು ಸಂಬಂಧ? ಇದನ್ನು ಅನೇಕರು ಖಂಡಿಸಿದ್ದು, ಆರ್​ಸಿಬಿ ಸೋಲುತ್ತಿದೆ ಎಂದು ಇಷ್ಟುಕೀಳು ಮಟ್ಟಕ್ಕೆ ಇಳಿಯಬಾರದು. ಇದು ಅವಿವೇಕಿತನದ ಪರಮಾವಧಿ. ಈ ಪೋಸ್ಟ್ ಹಾಕಿದವರ ವಿರುದ್ಧ ಕರ್ನಾಟಕದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಯಾವ ನಟನ ಅಭಿಮಾನಿಯಾಗಲಿ, ಅವರು ಆತನಿಗೆ ಬುದ್ಧಿ ಹೇಳಬೇಕು ಎಂದು ಒತ್ತಾಯಿಸಿದ್ದಾರೆ. ಆದರೆ ಇದು ದರ್ಶನ್ ಅಭಿಮಾನಿಯೇ ಅಥವಾ ನಕಲಿ ಖಾತೆಯೇ ಎನ್ನುವುದರ ಕುರಿತು ಸ್ಪಷ್ಟವಾಗಿಲ್ಲ.

ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​ಗೆ ಆಗಮಿಸಿದ್ದ ಅಶ್ವಿನಿ

ಐಪಿಎಲ್ ಆರಂಭಕ್ಕೂ ಮುನ್ನ ಮಾರ್ಚ್ 19ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಆರ್​ಸಿಬಿ ಅನ್​ಬಾಕ್ಸ್​ ಈವೆಂಟ್​ಗೆ ಅಶ್ವಿನಿ ಅವರು ಕೂಡ ಅತಿಥಿಯಾಗಿ ಪಾಲ್ಗೊಂಡಿದ್ದರು. ನೂತನ ಜೆರ್ಸಿ ಬಿಡುಗಡೆ ಸೇರಿ ಹಲವು ಕಾರ್ಯಕ್ರಮಗಳು ನಡೆದವು. ಇದೇ ಕಾರ್ಯಕರ್ಮದಲ್ಲಿ ವಿರಾಟ್ ಕೊಹ್ಲಿ ಅವರು ಅಶ್ವಿನಿ ಅವರಿಗೆ ಆರ್​ಸಿಬಿ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದ್ದರು. ಇದಕ್ಕೂ ಮುನ್ನ ಆರ್​ಸಿಬಿ ಹೆಸರು ಬದಲಾವಣೆ ಪ್ರೋಮೋದಲ್ಲೂ ಅಶ್ವಿನಿ ಕಾಣಿಸಿಕೊಂಡಿದ್ದರು.

ಪ್ರಸಕ್ತ ಐಪಿಎಲ್​ನಲ್ಲಿ ಆರ್​ಸಿಬಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರು ಪಂದ್ಯಗಳನ್ನು ಸೋತಿದೆ. ಆದರೆ ಈ ಸೋಲುಗಳಿಗೆ ತಂಡದ ಮ್ಯಾನೇಜ್​ಮೆಂಟ್ ಸರಿಯಾದ ತಂತ್ರಗಳನ್ನು ರೂಪಿಸದಿರುವುದು, ಕಳಪೆ ಬ್ಯಾಟಿಂಗ್, ಕಳಪೆ ಬೌಲಿಂಗ್​, ಕಳಪೆ ಫೀಲ್ಡಿಂಗ್​ ಮತ್ತು ಆಟಗಾರರ ಪಾತ್ರದಲ್ಲಿ ಯಾವುದೇ ಸ್ಪಷ್ಟತೆ ಇಲ್ಲದಿರುವುದು ಕೂಡ ಒಂದು ಕಾರಣ. ಆದರೆ, ಅವಿವೇಕಿತನ ಮತ್ತು ಕೀಳುಮಟ್ಟದಲ್ಲಿ ಪೋಸ್ಟ್​ ಮೂಲಕ ಹೆಣ್ಣಿಗೆ ಅಗೌರವ ತೋರುವುದು ಸರಿಯಲ್ಲ.