ಸ್ಟುಪಿಡ್.. ಸ್ಟುಪಿಡ್.. ಸ್ಟುಪಿಡ್..; ರಿಷಭ್ ಪಂತ್ ಔಟಾದ ರೀತಿಗೆ ಲೈವ್ನಲ್ಲೇ ಭಾರತದ ಮಾಜಿ ಕ್ರಿಕೆಟಿಗ ತೀವ್ರ ಆಕ್ರೋಶ
Sunil Gavaskar: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ರಿಷಭ್ ಪಂತ್ ಔಟಾದ ರೀತಿಗೆ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Rishabh Pant: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರನ್ನು ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮೂರ್ಖ ಎಂದು ಕರೆದಿದ್ದಾರೆ. ಪಂದ್ಯದ 3ನೇ ದಿನದ ನಿರ್ಣಾಯಕ ಹಂತದಲ್ಲಿ ರಿಷಭ್ ಪಂತ್ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಔಟಾದರು. ಪರಿಣಾಮ, ಇದು ತಂಡವನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿತು. ಈ ಬೆನ್ನಲ್ಲೇ ಕಾಮೆಂಟರಿ ಮಾಡುತ್ತಿದ್ದ ಗವಾಸ್ಕರ್, ಅಸಮಾಧಾನ ಹೊರಹಾಕಿದ್ದು, ಸ್ಟುಪಿಡ್ ಎಂದು ಕಿಡಿಕಾರಿದ್ದಾರೆ.
ಎರಡನೇ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 5 ವಿಕೆಟ್ ನಷ್ಟಕ್ಕೆ 164 ರನ್ ಪೇರಿಸಿತು. ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಇದೇ ಸ್ಕೋರ್ನೊಂದಿಗೆ ಮೂರನೇ ದಿನ ಆರಂಭಿಸಿದ ಈ ಜೋಡಿ, ಮೊದಲ ಸೆಷನ್ನಲ್ಲೇ ಔಟಾಯಿತು. 3ನೇ ದಿನ ಭಾರತ 27 ರನ್ ಸೇರಿಸಿದಾಗ ಅಂದರೆ 191 ರನ್ ಆಗಿದ್ದಾಗ ಪಂತ್ ಔಟಾದರು. ಕೆಟ್ಟ ಶಾಟ್ಗೆ ಕೈ ಹಾಕಿದ ಪಂತ್, ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ನಲ್ಲಿ ನಾಥನ್ ಲಿಯಾನ್ಗೆ ಕ್ಯಾಚ್ ನೀಡಿ ಹೊರ ನಡೆದರು. ಇದು ಗವಾಸ್ಕರ್ ಕೋಪಕ್ಕೆ ಕಾರಣವಾಗಿದ್ದು. ಲೈವ್ನಲ್ಲೇ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಈಗಾಗಲೇ ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ರಿಷಭ್ ಪಂತ್ ನೆರವಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಅವರು 37 ಎಸೆತಗಳಲ್ಲಿ 3 ಬೌಂಡರಿ ಸಹಿತ 28 ರನ್ ಸಿಡಿಸಿ ಔಟಾಗಿ ಮೊದಲ ಸೆಷನ್ನಲ್ಲೇ ಭಾರತ ತಂಡವನ್ನು ಅಸ್ತವ್ಯಸ್ತಗೊಳಿಸಿದರು. ಔಟಾಗುವ ಎಸೆತದ ಹಿಂದಿನ ಎಸೆತವನ್ನು ಅದೇ ರೀತಿ ಶಾಟ್ ಮಾಡಲು ವಿಫಲವಾಗಿದ್ದ ಪಂತ್, ಮುಂದಿನ ಎಸೆತದಲ್ಲೂ ಬೋಲ್ಯಾಂಡ್ಗೆ ಕೆಳಕ್ಕೆ ಬಾಗಿ ಸ್ಕೂಪ್ ಮಾಡಲು ಪ್ರಯತ್ನಿಸುತ್ತಾರೆ. ಆದರೆ ಆ ಚೆಂಡು ಬ್ಯಾಟ್ಗೆ ತಾಗಿ ಥರ್ಡ್ ಮ್ಯಾನ್ಗೆ ಹೋಗುತ್ತದೆ. ಲಿಯಾನ್ ಅದ್ಭುತವಾಗಿ ಕ್ಯಾಚ್ ಹಿಡಿಯುತ್ತಾರೆ. ಇದು ಗವಾಸ್ಕರ್ ಆಕ್ರೋಶಕ್ಕೆ ಗುರಿಯಾಯಿತು. ಸ್ಟುಪಿಡ್ ಎಂದು ಮೂರು ಸಲ ಹೇಳಿದ್ದಾರೆ.
ರಿಷಭ್ ಪಂತ್ ವಿರುದ್ಧ ಸನ್ನಿ ಆಕ್ರೋಶ
ಸ್ಟುಪಿಡ್! ಸ್ಟುಪಿಡ್! ಸ್ಟುಪಿಡ್! ಅದು ನಿಮ್ಮ ಸಹಜ ಆಟವೇ ಅಲ್ಲ. ಇದು ಸ್ಟುಪಿಡ್ ಶಾಟ್. ತಂಡದ ಪರಿಸ್ಥಿತಿಯನ್ನು ಅರಿತು ಆಡಬೇಕು. ಈಗ ನಿನ್ನ ಆಟದಿಂದ ತಂಡಕ್ಕೆ ಎಷ್ಟು ನಷ್ಟವಾಗಿದೆ ನೋಡು. ಬೇರೆ ಡ್ರೆಸ್ಸಿಂಗ್ ರೂಮ್ಗೆ ಹೋಗು ಎಂದು ಕಾಮೆಂಟರಿ ಮಾಡುತ್ತಿದ್ದ ವೇಳೆ ಗವಾಸ್ಕರ್ ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಇಂತಹ ಅನಗತ್ಯ ಹೊಡೆತಕ್ಕೆ ಕೈಹಾಕುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ರಿಷಭ್ ಪಂತ್ಗೆ ಸ್ಟುಪಿಡ್ ಎಂದು ಕರೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ, ಗವಾಸ್ಕರ್ ಜೊತೆಗೆ ಕ್ರಿಕೆಟ್ ಪ್ರೇಮಿಗಳು ಸಹ ಪಂತ್ ವಿರುದ್ಧ ಕಿಡಿಕಾರಿದ್ದಾರೆ.
ರೆಡ್ಡಿ-ಸುಂದರ್ ಮನಮೋಹಕ ಆಟ
ರಿಷಭ್ ಪಂತ್ ಬಳಿಕ ರವೀಂದ್ರ ಜಡೇಜಾ (17 ರನ್) ಕೂಡ ಔಟಾದರು. ಆದರೆ ಆ ಬಳಿಕ ನಿತೀಶ್ ಕುಮಾರ್ ರೆಡ್ಡಿ ಮತ್ತು ವಾಷಿಂಗ್ಟನ್ ಸುಂದರ್ ಜೋಡಿ ಭಾರತ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಇಬ್ಬರು ಶತಕದ ಜೊತೆಯಾಟದ ಮೂಲಕ ಫಾಲೋ ಆನ್ನಿಂದ ಪಾರು ಮಾಡಿದ್ದಲ್ಲದೆ ಹಿನ್ನಡೆಯ ಅಂತರನ್ನೂ ಕಡಿಮೆ ಮಾಡಿದರು.