ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?

ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?

ಜೂನ್ 20ರಿಂದ ಶುರುವಾಗುವ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್​ ಸರಣಿಗೆ ಭಾರತ ಕ್ರಿಕೆಟ್ ತಂಡ ಹೇಗಿರಲಿದೆ? ಯಾರಿಗೆಲ್ಲಾ ಅವಕಾಶ ಸಿಗಬಹುದು? ಇಲ್ಲಿದೆ ವಿವರ

ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?
ಇಂಗ್ಲೆಂಡ್​ ಸರಣಿಗೆ ಭಾರತದ ಸಂಭಾವ್ಯ ತಂಡ; ನಿವೃತ್ತಿ ವಯಸ್ಸಲ್ಲಿ ರಿಎಂಟ್ರಿ ಕೊಡ್ತಾರಾ ಈ ಡೇಂಜರಸ್ ಬ್ಯಾಟರ್?

2025ರ ಇಂಡಿಯನ್ ಪ್ರೀಮಿಯರ್ ಲೀಗ್​​ನಲ್ಲಿ ಭಾರತದ ಆಟಗಾರರು ಬ್ಯುಸಿಯಾಗಿದ್ದಾರೆ. ಸುಮಾರು ಎರಡು ತಿಂಗಳ ಕಾಲ ನಡೆಯುವ ಈ ಶ್ರೀಮಂತ ಲೀಗ್​​​ನಲ್ಲಿ ಭಾರತ-ವಿದೇಶಿ ಅತ್ಯುತ್ತಮ ಆಟಗಾರರು ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಲೀಗ್ ಮುಗಿದ ಬೆನ್ನಲ್ಲೇ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಎರಡೂ ತಂಡಗಳ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿಗೂ ರೋಹಿತ್ ಶರ್ಮಾ ಅವರೇ ನಾಯಕನಾಗಿದ್ದಾರೆ. ಆದರೆ, ನಿವೃತ್ತಿ ವಯಸ್ಸಿನ ಆಟಗಾರನೊಬ್ಬ ಟೀಮ್ ಇಂಡಿಯಾದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ವರದಿಯಾಗಿದೆ.

ಬಿಸಿಸಿಐ 2024-25ನೇ ಸಾಲಿಗೆ ಟೀಮ್ ಇಂಡಿಯಾ ಆಟಗಾರರಿಗೆ ಹೊಸ ಕೇಂದ್ರ ಒಪ್ಪಂದಗಳನ್ನು ಪ್ರಕಟಿಸಿದೆ. ಕೇಂದ್ರ ಒಪ್ಪಂದದಲ್ಲಿ ಬಿಸಿಸಿಐ ನಿಯಮಿತ ನಾಯಕ ರೋಹಿತ್ ಶರ್ಮಾ ಅವರನ್ನು ಗ್ರೇಡ್ ಎ ಪ್ಲಸ್​​ನಲ್ಲಿ ಸೇರಿಸಿದೆ. ಇದರಿಂದ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಇತ್ತೀಚೆಗೆ, ಪಾಡ್‌ಕ್ಯಾಸ್ಟ್‌ನಲ್ಲಿ ಭಾಗವಹಿಸಿದ್ದ ರೋಹಿತ್ ಇಂಗ್ಲೆಂಡ್ ಪ್ರವಾಸದ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, ಇಂಗ್ಲೆಂಡ್ ಪ್ರವಾಸಕ್ಕೆ ಸಂಪೂರ್ಣ ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಈ ಪ್ರವಾಸ ರೋಹಿತ್ ಶರ್ಮಾಗೆ ಕಠಿಣ ಪರೀಕ್ಷೆಯಂತೆ.

ಏಕೆಂದರೆ, ಈ ಪ್ರವಾಸದಲ್ಲಿ ಟೀಮ್ ಇಂಡಿಯಾ ಸರಣಿ ಗೆಲ್ಲಲು ವಿಫಲವಾದರೆ, ಅವರು ಟೆಸ್ಟ್ ತಂಡದ ನಾಯಕತ್ವವನ್ನು ಕಳೆದುಕೊಳ್ಳುವುದಲ್ಲದೆ, ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಅವರು ಬಾರ್ಡರ್​ ಗವಾಸ್ಕರ್ ಟ್ರೋಫಿಯಲ್ಲಿ ಹೀನಾಯವಾಗಿ ಸೋಲು ಕಂಡ ಕಾರಣ ಹಿಟ್​ಮ್ಯಾನ್ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಈ ಸರಣಿಯಲ್ಲಿ ಆಡಿದ್ದ 3 ಪಂದ್ಯಗಳ 5 ಇನ್ನಿಂಗ್ಸ್​​ಗಳಲ್ಲಿ ಕೇವಲ 31 ರನ್ ಗಳಿಸಿದ್ದರು. ಇದು ಕೂಡ ಅವರ ಭವಿಷ್ಯವನ್ನು ಪ್ರಶ್ನಿಸುವಂತೆ ಮಾಡಿತ್ತು. ರೆಡ್​ಬಾಲ್ ಕ್ರಿಕೆಟ್​ನಲ್ಲಿ ಸುಧಾರಣೆ ಕಾಣುವುದು ಅಗತ್ಯವಾಗಿದೆ.

ಕರುಣ್ ನಾಯರ್ ರಿಟರ್ನ್​

ದೇಶೀಯ ಕ್ರಿಕೆಟ್‌ನಲ್ಲಿ ರನ್ ಗಳಿಕೆ ಮೂಲಕ ಗಮನ ಸೆಳೆದಿರುವ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕರುಣ್ ನಾಯರ್, ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾದ 15 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ವಿದರ್ಭ ಪರ ಆಡುತ್ತಿರುವ ಕರುಣ್ ನಾಯರ್ 2024-25ರ ರಣಜಿ ಟ್ರೋಫಿಯಲ್ಲಿ 4 ಶತಕ, 2 ಅರ್ಧಶತಕ ಸೇರಿದಂತೆ 53.93 ಸರಾಸರಿಯಲ್ಲಿ 863 ರನ್ ಗಳಿಸಿದ್ದಾರೆ. ಅಲ್ಲದೆ, ವಿಜಯ್ ಹಜಾರೆ, ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲೂ ರನ್ ಬೇಟೆಯಾಡಿದ್ದಾರೆ. ಅಲ್ಲದೆ, ಅವರನ್ನು ಆಯ್ಕೆ ಮಾಡಲು ಟೀಮ್ ಮ್ಯಾನೇಜ್​ಮೆಂಟ್ ಮತ್ತು ಸೆಲೆಕ್ಟರ್​ಗಳ ಒತ್ತಡವೂ ಹೆಚ್ಚಾಗಿದೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಕರುಣ್ ಆಡಿದ 9 ಪಂದ್ಯಗಳ 8 ಇನ್ನಿಂಗ್ಸ್​​ಗಳಲ್ಲಿ 389.50ರ ಸರಾಸರಿಯಲ್ಲಿ 779 ರನ್‌ ಗಳಿಸಿದರು. ಈ ಪೈಕಿ 5 ಶತಕ, 1 ಅರ್ಧಶತಕವೂ ಸೇರಿದೆ. ಈ ಅಂಕಿ-ಅಂಶಗಳನ್ನು ನೋಡಿದ ನಂತರ, ಕರುಣ್ 8 ವರ್ಷಗಳ ನಂತರ ಟೀಮ್ ಇಂಡಿಯಾಕ್ಕೆ ಮರಳುವುದು ಬಹುತೇಕ ಖಚಿತ ಎನ್ನಬಹುದು. ಆದರೆ ಕೆಲವು ವರದಿಗಳ ಪ್ರಕಾರ ನಾಯರ್​​ಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ. ಏಕೆಂದರೆ ನಿವೃತ್ತಿಯ ಅಂಚಿನಲ್ಲಿರುವ ಕರುಣ್​ಗೆ ಅವಕಾಶ ನೀಡುವ ಬದಲು ಯುವ ಆಟಗಾರರಿಗೆ ಚಾನ್ಸ್​ ಕೊಟ್ಟರೆ ಭವಿಷ್ಯದ ತಂಡವನ್ನು ನಿರ್ಮಿಸಲು ನೆರವಾಗಲಿದೆ ಎಂದು ಹೇಳಲಾಗುತ್ತಿದೆ.

15 ಸದಸ್ಯರ ಭಾರತ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಕರುಣ್ ನಾಯರ್/ಸರ್ಫರಾಜ್ ಖಾನ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ನಿತೀಶ್ ಕುಮಾರ್ ರೆಡ್ಡಿ, ಜಸ್ಪ್ರೀತ್ ಬುಮ್ರಾ (ಉಪನಾಯಕ), ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.