ಚಿಕ್ಕಂದಿನಲ್ಲೇ ಡಿಪ್ರೆಷನ್, ತಂದೆಯ ಬೆಂಬಲ, ತ್ಯಾಗ, ಆಹಾರ ಪದ್ಧತಿ ಬದಲಾವಣೆ; ಇದು ಆಯುಷ್ ಮಾತ್ರೆ ಯಶಸ್ಸಿನ ಕಥೆ
ಸಿಎಸ್ಕೆ ತಂಡದ ಅತ್ಯಂತ ಕಿರಿಯ ಆಟಗಾರ 17 ವರ್ಷದ ಆಯುಷ್ ಮಾತ್ರೆ, ಖಿನ್ನತೆ, ಫಿಟ್ನೆಸ್ ಸವಾಲು ಮತ್ತು ಆಹಾರ ಪದ್ಧತಿಯನ್ನು ಪಾಲಿಸಿ ಇದೀಗ ಯಶಸ್ವಿ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.

ಮುಂಬೈ ಕ್ರಿಕೆಟರ್ ಆಯುಷ್ ಮಾತ್ರೆ ವಿನೂತನ ದಾಖಲೆ ನಿರ್ಮಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಏಪ್ರಿಲ್ 20ರಂದು ಮುಂಬೈ ಇಂಡಿಯನ್ಸ್ ವಿರುದ್ಧ ತಾನು ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಅಬ್ಬರಿಸಿದ ಆಯುಷ್ ಮಾತ್ರೆ, 15 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ 32 ರನ್ ಸಿಡಿಸಿ ತನ್ನ ಆಗಮನದ ಸೂಚನೆ ಕೊಟ್ಟರು. ನಿರ್ಭೀತಿಯಿಂದ ಬ್ಯಾಟ್ ಬೀಸಿದ ಅವರು ತನ್ನ ಪ್ರತಿಭೆ ಎಂತಹದ್ದೆಂದು ತೋರಿಸಿದರು. ಇದೀಗ ಮುಂಬೈ ಅಂಡರ್-19 ಕೋಚ್ ದಿನೇಶ್ ಲಾಡ್, ಆಯುಷ್ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ. ಅಲ್ಲದೆ, ತನ್ನ ಶಿಷ್ಯನ ರೋಚಕ ಜರ್ನಿಯ ಕುರಿತು ಮಾತನಾಡಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.
ರೋಹಿತ್ ಶರ್ಮಾ ಮತ್ತು ಶಾರ್ದೂಲ್ ಠಾಕೂರ್ ಬಾಲ್ಯದ ತರಬೇತುದಾರ ಹಾಗೂ ಮುಂಬೈ ಅಂಡರ್-19 ಕ್ರಿಕೆಟ್ ತಂಡದ ಪ್ರಸ್ತುತ ಕೋಚ್ ದಿನೇಶ್ ಲಾಡ್, ಸಿಎಸ್ಕೆ ಬ್ಯಾಟ್ಸ್ಮನ್ ಅವರ ನಿರ್ಭೀತತೆಯನ್ನು ಶ್ಲಾಘಿಸಿದ್ದಾರೆ.' ‘ರೋಹಿತ್ ಅವರಂತೆಯೇ ತುಂಬಾ ಆತ್ಮವಿಶ್ವಾಸ ಹೊಂದಿರುವ ಆಯುಷ್, ಅತ್ಯಂತ ಸಕಾರಾತ್ಮಕ ವ್ಯಕ್ತಿ. ಆಯುಷ್ ಈಗ ಆಡುತ್ತಿರುವಂತೆ ರೋಹಿತ್ 15 ವರ್ಷದವನಿದ್ದಾಗ ಆಡುತ್ತಿದ್ದರು’ ಎಂದು ಟೈಮ್ಸ್ ಆಫ್ ಇಂಡಿಯಾ.ಕಾಮ್ ಜೊತೆಗಿನ ವಿಶೇಷ ಸಂವಾದದಲ್ಲಿ ದಿನೇಶ್ ಹೇಳಿದ್ದಾರೆ. ಲಾಡ್ ಅವರೊಂದಿಗೆ ಆಯುಷ್ ಮಾತ್ರೆ ತರಬೇತಿ ಪಡೆದಿದ್ದಾರೆ.
ಆಯುಷ್ 10 ವರ್ಷದವನಿದ್ದಾಗ ಮೊದಲು ಭೇಟಿಯಾಗಿದ್ದೆ. ಅವನ ಪ್ರತಿಭೆ ಮತ್ತು ಫ್ಲೂಯಿಡ್ ಸ್ಟ್ರೋಕ್ ಆಟ ಗಮನಿಸಿದೆ. ಮುಂಬೈನಿಂದ ಬಹುದೂರ ಇರುವ ನಲಾ ಸೋಪಾರದಿಂದ ಪ್ರಯಾಣಿಸುತ್ತಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಬರುತ್ತಿದ್ದ. ಶಿಸ್ತು ಪಾಲನೆ ಚೆನ್ನಾಗಿದೆ. ದೊಡ್ಡ ರನ್ ಗಳಿಸುವ ಹಸಿವು ಆಯುಷ್ಗಿದೆ. ಇದು ಅವನ ತ್ವರಿತ ಬೆಳವಣಿಗೆಗೆ ಒಂದು ಅಂಶವಾಗಿದೆ ಎಂದು ಹೇಳಿದ್ದಾರೆ. ಹೀಗಿರುವಾಗ ಆಯುಷ್ ತನ್ನ ಚಿಕ್ಕವಯಸ್ಸಿನಲ್ಲೇ ಖಿನ್ನತೆಗೆ ಒಳಗಾಗಿದ್ದನಂತೆ, ಫಿಟ್ನೆಸ್ ಸಮಸ್ಯೆಗೂ ಎದುರಾಗಿದ್ದ. ಇದೆಲ್ಲವನ್ನೂ ಮೆಟ್ಟಿನಿಂತಿದ್ದು ಅವರ ತಂದೆಯ ಬೆಂಬಲ ಮತ್ತು ಕೋಚ್ ದಿನೇಶ್ ಲಾಡ್ ಅವರಿಂದ!
ಆಯುಷ್ ಕುಟುಂಬ, ತಂದೆಯ ಬೆಂಬಲ
ಆಯುಷ್ ಕುಟುಂಬ ವಿರಾರ್ನಲ್ಲಿ ನೆಲೆಸಿರುವ ಮಧ್ಯಮ ವರ್ಗದ ಕುಟುಂಬ. ತಂದೆ ಯೋಗೇಶ್ ಮಗ ಆಡುತ್ತಿದ್ದ ಪಂದ್ಯಗಳಿಗೆ ಒಟ್ಟಿಗೆ ಹೋಗುತ್ತಿದ್ದರು. ಬ್ಯಾಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಮುಂಬೈನಲ್ಲಿ ಪ್ರತಿದಿನ ಸುಮಾರು 6 ಗಂಟೆಗಳ ಕಾಲ ಭಾರವಾದ ಕಿಟ್ ಬ್ಯಾಗ್ನೊಂದಿಗೆ ಮಗನ ಜತೆಗೆ ಪ್ರಯಾಣಿಸುತ್ತಿದ್ದರು. ಆದಾಗ್ಯೂ, ಯೋಗೇಶ್ ಈ ಕಿಟ್ ಹೊತ್ತು ಮಗನೊಂದಿಗೇ ಇರುತ್ತಿದ್ದರು. ಯೋಗೇಶ್ ಬ್ಯಾಂಕರ್ ಕೆಲಸ ತೊರೆದು ಮಗನಿಗೆ ಹೆಚ್ಚಿನ ಸಮಯವನ್ನೂ ಮೀಸಲಿಟ್ಟಿದ್ದರು. ಇವರೇನು ಶ್ರೀಮಂತರಲ್ಲದಿದ್ದರೂ ಅವರ ತ್ಯಾಗ ಎಲ್ಲಕ್ಕಿಂತ ದೊಡ್ಡದು.
ಖಿನ್ನತೆಗೆ ಒಳಗಾಗಿದ್ದ ಆಯುಷ್
ಕ್ರಿಕೆಟಿಗನಾಗಿ ಆಯುಷ್ ಮೊದಲ ಕನಸು ಅಂಡರ್-19 ವಿಶ್ವಕಪ್ನಲ್ಲಿ ಭಾರತ ತಂಡ ಪ್ರತಿನಿಧಿಸುವುದು. ಆದಾಗ್ಯೂ, ಕಳೆದ ವರ್ಷ ಅನಿರೀಕ್ಷಿತ ಹೊಡೆತ ಅವರ ಆಕಾಂಕ್ಷೆ ಹಳಿತಪ್ಪಿಸಿದಂತೆ ತೋರಿತು. ಹೀಗಾಗಿ ಸಿಎಸ್ಕೆ ಬ್ಯಾಟರ್ ಖಿನ್ನತೆಗೆ ಒಳಗಾಗಿದ್ದರಂತೆ. ಕಳೆದ ವರ್ಷ ಆಯುಷ್ ಇಂಟರ್-ಕ್ಯಾಂಪ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಕಾರಣ ಆತನನ್ನು ಎನ್ಸಿಎನ ಟಾಪ್-30 ಆಟಗಾರರಲ್ಲಿ ಆಯ್ಕೆ ಮಾಡಲಾಗಿಲ್ಲ. ಆ ಸಮಯದಲ್ಲಿ ಆಯುಷ್ ತುಂಬಾ ಖಿನ್ನತೆಗೆ ಒಳಗಾಗಿದ್ದರು. ಬಳಿಕ ಕೋಚ್ಗಳು ಆತನ ಬ್ಯಾಟಿಂಗ್ ತಂತ್ರದ ಮೇಲೆ ಕೆಲಸ ಮಾಡಲು ಆರಂಭಿಸಿದರು. ಇದು ಆತನ ಆತ್ಮವಿಶ್ವಾಸ ಹೆಚ್ಚಿಸಿತು.
ಬಳಿಕ ವಿನೂ ಮಂಕಡ್ ಟ್ರೋಫಿಯಲ್ಲಿ ಆಯುಷ್ ಬಲಿಷ್ಠವಾಗಿ ಕಂಬ್ಯಾಕ್ ಮಾಡಿದರು. ಪಂದ್ಯಗಳಿಗಾಗಿ ಮುಂಬೈನ ವಿವಿಧ ಭಾಗಗಳಿಗೆ ಪ್ರಯಾಣಿಸುತ್ತಿದ್ದ ಯುವ ಕ್ರಿಕೆಟಿಗ ದಿನಕ್ಕೆ 2 ಪ್ರಾಕ್ಟೀಸ್ ಮಾಡುತ್ತಿದ್ದರು. ಇದಾದ ಬಳಿಕ ಕೆಎಸಿಎ ಎಂಬ ಸ್ಥಳೀಯ ಟೂರ್ನಮೆಂಟ್ನಲ್ಲಿ ಅವಕಾಶದ ನಂತರ ಅವರು ತಿರುಗಿ ನೋಡಲಿಲ್ಲ. ಮುಕ್ತವಾಗಿ ರನ್ ಗಳಿಸುವ ಮೂಲಕ ಗಮನ ಸೆಳೆದರು. ಈ ಟೂರ್ನಿಯ ಮೊದಲ ಪಂದ್ಯದಲ್ಲಿ 17 ವರ್ಷದ ಆಟಗಾರ 51 ರನ್ ಗಳಿಸಿದ ಆಯುಷ್, ಆ ದಿನ ಕ್ರಿಕೆಟಿಗರಾಗಿ ನಿಜವಾಗಿಯೂ ಪ್ರಬುದ್ಧತೆ ತೋರಿದರು. ಇದು ಕ್ರಿಕೆಟ್ ಸೆಲೆಕ್ಟರ್ಗಳ ಮನ ಗೆದ್ದಿತು.
ದೇಶೀಯ ಕ್ರಿಕೆಟ್ನಲ್ಲೂ ಮಿಂಚು
ಕೆಎಸಿಎ ಟೂರ್ನಿಯಲ್ಲಿ ಆಯುಷ್ ಅವರ ಅದ್ಭುತ ಪ್ರದರ್ಶನವು ಇರಾನಿ ಟ್ರೋಫಿ, ರಣಜಿ ಟ್ರೋಫಿ, ಭಾರತೀಯ ಅಂಡರ್ -19 ತಂಡ, ವಿಜಯ್ ಹಜಾರೆ ಟ್ರೋಫಿ ಮತ್ತು ಈಗ ಐಪಿಎಲ್ಗೆ ಆಯ್ಕೆಯಾಗಲು ಕಾರಣವಾಯಿತು. 17ನೇ ವಯಸ್ಸಿನಲ್ಲಿ ಯಾವುದೇ ಕ್ರಿಕೆಟಿಗ ಇಷ್ಟೊಂದು ಟೂರ್ನಿಗಳನ್ನು ಆಡಿದ್ದು ಇದೇ ಮೊದಲು. ಇದು ಒಂದು ಪವಾಡವೂ ಹೌದು. ಅವರ ಮಾನಸಿಕ ದೃಢತೆ, ಕೆಲಸದ ನೀತಿ ಮತ್ತು ಅವರ ಸಾಮರ್ಥ್ಯಗಳಲ್ಲಿನ ನಂಬಿಕೆಯೇ ಅವರ ಹೋರಾಟಕ್ಕೆ ಕಾರಣ.
ಮೈದಾನದಲ್ಲಿ ಕಠಿಣ ಪರಿಶ್ರಮ ಪಟ್ಟರೂ, ಉತ್ತಮ ಸಾಧನೆ ಮಾಡಲು ಅಗತ್ಯವಾದ ಫಿಟ್ನೆಸ್ ಮಟ್ಟ ಅಗತ್ಯ ಎನ್ನುವ ಕೋಚ್ ಸಾಲುಗಳನ್ನು ಅನುಕರಿಸಿದ ಆಯುಷ್ ಹೊಸ ಆಹಾರ ಕ್ರಮ ಅನುಕರಿಸಿದ್ದು, ಫಿಟ್ನೆಸ್ ಮಟ್ಟ ತುಂಬಾ ಸುಧಾರಿಸಿದೆ. 2019-20ಕ್ಕೆ ಹೋಲಿಸಿದರೆ ಈಗ ಅವರು ತುಂಬಾ ಬದಲಾಗಿದ್ದಾರೆ. ಆಯುಷ್ ಬೀಚ್ನಲ್ಲಿ ಓಡುತ್ತಿದ್ದರು, ಫೀಲ್ಡಿಂಗ್ ಅಭ್ಯಾಸ ಮಾಡುತ್ತಿದ್ದರು. ಇದು ಆತನನ್ನು ಮತ್ತಷ್ಟು ಬಲಿಷ್ಠಗೊಳಿಸಿತು. ಬೌಲಿಂಗ್ ಮೇಲೂ ಕೆಲಸ ಆರಂಭಿಸಿದ್ದು, ಉತ್ತಮ ಆಲ್ರೌಂಡರ್ ಆಗಿ ಸಜ್ಜಾಗಿದ್ದಾರೆ.
2024/25ರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಯುಷ್ ಅತ್ಯಧಿಕ ಸ್ಕೋರ್ ದಾಖಲಿಸಿದ್ದು, ನಾಗಾಲ್ಯಾಂಡ್ ವಿರುದ್ಧದ ಮುಂಬೈ ಪರ 117 ಎಸೆತಗಳಲ್ಲಿ 181 ರನ್ ಗಳಿಸುವ ಮೂಲಕ ಗಮನ ಸೆಳೆದರು. ಆ ಬಳಿಕ 17 ವರ್ಷದ ಬ್ಯಾಟ್ಸ್ಮನ್ರನ್ನು ಟ್ರಯಲ್ಸ್ಗೆ ಮುಂಬೈ ಮತ್ತು ಸಿಎಸ್ಕೆ ತಂಡಗಳು ಆಹ್ವಾನಿಸಿದ್ದವು. ಇದೀಗ ಋತುರಾಜ್ ಗಾಯಕ್ವಾಡ್ ಬದಲಿಗೆ ಆಯುಷ್ ಮಾತ್ರೆ ಅವರನ್ನು ಸಿಎಸ್ಕೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಮುಂದಿನ ಪಂದ್ಯಗಳಲ್ಲಿ ಯಾವ ರೀತಿ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದುನೋಡೋಣ.