ಶುಭ್ಮನ್ ಗಿಲ್​ಗೆ ವಿಚಿತ್ರ ಸೆಂಡ್ ಆಫ್ ಕೊಟ್ಟ ಅಬ್ರಾರ್ ಅಹ್ಮದ್​ ವಿರುದ್ಧ ಪಾಕಿಸ್ತಾನದಲ್ಲೂ ನಿಂತಿಲ್ಲ ಟ್ರೋಲ್, ಟೀಕೆ!
ಕನ್ನಡ ಸುದ್ದಿ  /  ಕ್ರಿಕೆಟ್  /  ಶುಭ್ಮನ್ ಗಿಲ್​ಗೆ ವಿಚಿತ್ರ ಸೆಂಡ್ ಆಫ್ ಕೊಟ್ಟ ಅಬ್ರಾರ್ ಅಹ್ಮದ್​ ವಿರುದ್ಧ ಪಾಕಿಸ್ತಾನದಲ್ಲೂ ನಿಂತಿಲ್ಲ ಟ್ರೋಲ್, ಟೀಕೆ!

ಶುಭ್ಮನ್ ಗಿಲ್​ಗೆ ವಿಚಿತ್ರ ಸೆಂಡ್ ಆಫ್ ಕೊಟ್ಟ ಅಬ್ರಾರ್ ಅಹ್ಮದ್​ ವಿರುದ್ಧ ಪಾಕಿಸ್ತಾನದಲ್ಲೂ ನಿಂತಿಲ್ಲ ಟ್ರೋಲ್, ಟೀಕೆ!

Abrar Ahmed: ಟೀಮ್ ಇಂಡಿಯಾ ಓಪನರ್​ ಶುಭ್ಮನ್ ಗಿಲ್​ ಅವರಿಗೆ ವಿಚಿತ್ರ ಸೆಂಡ್ ಆಫ್ ಕೊಟ್ಟಿದ್ದ ಸ್ಪಿನ್ನರ್​ ಅಬ್ರಾರ್ ಅಹ್ಮದ್​ ವಿರುದ್ಧ ಟ್ರೋಲ್, ಟೀಕೆ ಪಾಕಿಸ್ತಾನದಲ್ಲೂ ನಿಂತಿಲ್ಲ.

ಶುಭ್ಮನ್ ಗಿಲ್​ಗೆ ವಿಚಿತ್ರ ಸೆಂಡ್ ಆಫ್ ಕೊಟ್ಟ ಅಬ್ರಾರ್ ಅಹ್ಮದ್​ ವಿರುದ್ಧ ಪಾಕಿಸ್ತಾನದಲ್ಲೂ ನಿಂತಿಲ್ಲ ಟ್ರೋಲ್, ಟೀಕೆ!
ಶುಭ್ಮನ್ ಗಿಲ್​ಗೆ ವಿಚಿತ್ರ ಸೆಂಡ್ ಆಫ್ ಕೊಟ್ಟ ಅಬ್ರಾರ್ ಅಹ್ಮದ್​ ವಿರುದ್ಧ ಪಾಕಿಸ್ತಾನದಲ್ಲೂ ನಿಂತಿಲ್ಲ ಟ್ರೋಲ್, ಟೀಕೆ! (REUTERS)

ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ 2025ರ ಗ್ರೂಪ್ ಎ ಪಂದ್ಯದ 18ನೇ ಓವರ್​​ನಲ್ಲಿ ಭಾರತದ ಆರಂಭಿಕ ಬ್ಯಾಟರ್​ ಶುಭ್ಮನ್ ಗಿಲ್ ಅವರನ್ನು ತಮ್ಮ ಸ್ಪಿನ್ ಮೋಡಿಯಿಂದ ಕ್ಲೀನ್ ಬೋಲ್ಡ್ ಮಾಡಿದ್ದ ಪಾಕಿಸ್ತಾನದ ಸ್ಪಿನ್ನರ್​ ಅಬ್ರಾರ್ ಅಹ್ಮದ್ ವಿರುದ್ಧ ಈಗಲೂ ಟೀಕೆ, ಟ್ರೋಲ್ ನಿಂತಿಲ್ಲ. ನಿಜ, ಅಬ್ರಾರ್ ಎಸೆತವನ್ನು ಅಂದಾಜಿಸಲು ಆಗದೇ ವಿಕೆಟ್​ ಕೈ ಚೆಲ್ಲಿದ ಗಿಲ್, ಒಂದು ಕ್ಷಣ ನಿಂತಲ್ಲೇ ನಿಂತುಬಿಟ್ಟು ಅಚ್ಚರಿಗೊಳಗಾದರು. ಆದರೆ ಗಿಲ್​ಗೆ ಅಬ್ರಾರ್​ ಕೊಟ್ಟ ವಿಚಿತ್ರ ಸೆಂಡ್​ ಆಫ್ ಅನ್ನು ನೀವೂ ನೋಡಿರುತ್ತೀರಿ ಅಥವಾ ನಿಮ್ಮ ಗಮನಕ್ಕೂ ಬಂದಿರಬಹುದು. ಟ್ರೋಲ್ ಮಾತ್ರ ಇನ್ನೂ ನಿಂತಿಲ್ಲ!

56 ಎಸೆತಗಳಲ್ಲಿ 7 ಬೌಂಡರಿ ಸಹಿತ 46 ರನ್ ಗಳಿಸಿದ್ದ ಶುಭ್ಮನ್ ಗಿಲ್, 18ನೇ ಓವರ್​​ನ 3ನೇ ಎಸೆತದಲ್ಲಿ ಅಬ್ರಾರ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್ ಆದರು. ಅಬ್ರಾರ್​ ಅವರ ಲೆಗ್ ಬ್ರೇಕ್ ಬೌಲಿಂಗ್ ಕಂಡ ಗಿಲ್ ಜೊತೆಗೆ ನಾನ್​ಸ್ಟ್ರೈಕ್​ನಲ್ಲಿದ್ದ ವಿರಾಟ್ ಕೊಹ್ಲಿಯೂ ಶಾಕ್ ಆದರು. ವಿಕೆಟ್ ಪಡೆದು ಸಂಭ್ರಮಿಸದ ಅಬ್ರಾರ್, ವಿಚಿತ್ರವಾಗಿ ಬೀಳ್ಕೊಟ್ಟರು. ಗಿಲ್​ ಡ್ರೆಸ್ಸಿಂಗ್ ರೂಮ್​ಗೆ ತೆರಳುವಾಗ ಅಬ್ರಾರ್ ಕೊಟ್ಟ ಲುಕ್ ಈಗಲೂ ಟ್ರೋಲ್, ಟೀಕೆಗೆ ಒಳಗಾಗುವಂತೆ ಮಾಡಿದೆ. ಸೋಲುವ ಪರಿಸ್ಥಿತಿಯಲ್ಲಿದ್ದರೂ ಪಾಕ್ ಸ್ಪಿನ್ನರ್​ ಈ ರೀತಿ ತೋರಿದ ದುವರ್ತನೆ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.

ವಿಕೆಟ್ ಒಪ್ಪಿಸಿದ ಬಳಿಕ ಗಿಲ್ ಅವರನ್ನು ಕೆಣಕುವ ರೀತಿ ಅಬ್ರಾರ್ ಕೈಕಟ್ಟಿಕೊಂಡು ಗಂಭೀರವಾಗಿ ನೋಡುತ್ತಾ ಮುಖದಲ್ಲೇ ಗೆಟ್ ಔಟ್ ಎನ್ನುವ ರೀತಿ ಮೂರು ಬಾರಿ ಸನ್ನೆ ಮಾಡಿದ್ದರು. ಆದರೆ ಗಿಲ್ ಹೋಗುವಾಗ ಅವರ ಕಡೆಯೇ ದಿಟ್ಟಿಸಿ ನೋಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಕಷ್ಟು ಟ್ರೋಲ್​ಗೂ ಗುರಿಯಾಗಿದ್ದರು. ಈಗಲೂ ಸಹ ಅವರನ್ನು ತರಾಟಗೆ ತೆಗೆದುಕೊಳ್ಳುವವರ ಸಂಖ್ಯೆ ನಿಂತಿಲ್ಲ ಎಂದರೆ ತಪ್ಪಾಗಲ್ಲ. ಯಾರೋ ಯಾಕೆ ಸ್ವತಃ ಪಾಕಿಸ್ತಾನದವರೇ ಅವರ ವಿರುದ್ಧ ಸಿಡಿಮಿಡಿಗೊಳ್ಳುತ್ತಿದ್ದಾರೆ ಎಂದರೆ ಇದು ವರ್ತನೆ ಹೇಗಿತ್ತು ಎಂಬುದಕ್ಕೆ ಸಾಕ್ಷಿ.

ಅಬ್ರಾರ್ ಅಹ್ಮದ್ ಸೆಲೆಬ್ರೆಷನ್ ನನಗೆ ಇಷ್ಟವಾಗಲಿಲ್ಲ. ತಂಡವು ಸೋಲುವ ಹಂತಕ್ಕೆ ಸಿಲುಕಿದ್ದಾಗ ಇಂತಹ ಹುಚ್ಚಾಟ ಬೇಕಿತ್ತಾ? ಇಂತಹ ದುರ್ವತನೆ ಟಿವಿಯಲ್ಲಿ ಚೆನ್ನಾಗಿ ಕಾಣಿಸಲ್ಲ. ಒಂದು ವೇಳೆ ಗೆಲ್ಲುವ ಹಂತದಲ್ಲಿದ್ದರೆ ಇಂತಹ ಸನ್ನಿವೇಶಗಳು ಇಷ್ಟವಾಗಬಹುದು. ಆದರೆ ಸೋಲುವಾಗಲ್ಲ. ಮುಂದೆಯಾದರೂ ವಿನಮ್ರತೆ ಕಲಿ ಎಂದು ವಾಸೀಂ ಅಕ್ರಮ್ ಹೇಳಿದ್ದಾರೆ.

ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ತಂಡ

ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ತೋರಿದ ಸಂಘಟಿತ ಹೋರಾಟದ ಮುಂದೆ ಪಾಕಿಸ್ತಾನ ತಂಡ ಮಂಡಿಯೂರಿತ್ತು. ಆರು ವಿಕೆಟ್​ಗಳಿಂದ ಸೋಲೊಪ್ಪಿಕೊಂಡು ತೀವ್ರ ಮುಖಭಂಗಕ್ಕೆ ಒಳಗಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 49.4 ಓವರ್​ಗಳಲ್ಲಿ 241 ಗಳಿಸಿ ತನ್ನೆಲ್ಲಾ ವಿಕೆಟ್​ಗಳನ್ನು ಕಳೆದುಕೊಂಡಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತಂಡ, 42.3 ಓವರ್​​ಗಳಲ್ಲಿ ಗೆಲುವಿನ ನಗೆ ಬೀರಿತ್ತು. ವಿರಾಟ್ ಕೊಹ್ಲಿ ಅವರು ಅಜೇಯ ಶತಕ ಸಿಡಿಸಿ ಗೆಲುವಿನಲ್ಲಿ ರೂವಾರಿಯಾಗಿದ್ದರು.

ಚಾಂಪಿಯನ್ಸ್ ಟ್ರೋಫಿಯಿಂದ ಪಾಕ್ ಹೊರಕ್ಕೆ

29 ವರ್ಷಗಳ ನಂತರ ಮೊದಲ ಬಾರಿಗೆ ಐಸಿಸಿ ಟೂರ್ನಿಯೊಂದನ್ನು ಆಯೋಜಿಸಿದ ಪಾಕಿಸ್ತಾನ ತಂಡ ಇದೀಗ ಚಾಂಪಿಯನ್ಸ್ ಟ್ರೋಫಿಯ ಗುಂಪು ಹಂತದಿಂದಲೇ ಹೊರ ಬಿದ್ದಿದೆ. ಎ ಗುಂಪಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿವೆ. ಆದರೆ, ಬಾಂಗ್ಲಾ ಮತ್ತು ಪಾಕಿಸ್ತಾನ ಇನ್ನೂ ಪಂದ್ಯ ಬಾಕಿ ಇರುವಂತೆಯೇ ಟೂರ್ನಿಯಿಂದ ಹೊರ ಬಿದ್ದಿವೆ. ಇದು ವಿಶ್ವಮಟ್ಟದಲ್ಲಿ ಮುಜುಗರಕ್ಕೆ ಒಳಗಾಗಿದೆ. ಫೆಬ್ರವರಿ​ 27ರಂದು ಬಾಂಗ್ಲಾ ಮತ್ತು ಪಾಕ್ ತಂಡಗಳು ತಮ್ಮ ಕೊನೆಯ ಲೀಗ್ ಪಂದ್ಯಗಳಲ್ಲಿ ಕಾದಾಟ ನಡೆಸಲಿವೆ.

Prasanna Kumar P N

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.