Video: ಚಿನ್ನಸ್ವಾಮಿ ಮೈದಾನದ ಪಿಚ್ಗೆ ನುಗ್ಗಿದ ವ್ಯಕ್ತಿಯನ್ನು ತಡೆದು ನಿಲ್ಲಿಸಿದ ಅಲಿಸ್ಸಾ ಹೀಲಿ
ಬೆಂಗಳೂರಿನ ಚಿನ್ನಸ್ವಾಮಿ ಮೈದಾನದ ಪಿಚ್ಗೆ ವ್ಯಕ್ತಿಯೊಬ್ಬ ಓಡಿ ಬರುತ್ತಿದ್ದುದನ್ನು ಇದನ್ನು ಯುಪಿ ವಾರಿಯರ್ಸ್ ತಂಡದ ನಾಯಕಿ ಅಲಿಸ್ಸಾ ಹೀಲಿ ಆತನನ್ನು ಪಿಚ್ಗೆ ಬರದಂತೆ ತಡೆದಿದ್ದಾರೆ. ವ್ಯಕ್ತಿಯನ್ನು ಎದುರಿಸಿ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಮೈದಾನದ ಅಧಿಕಾರಿಗಳು ಹಾಗೂ ಸಿಬ್ಬಂದಿ ಆತನನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.

ಎರಡನೇ ಆವೃತ್ತಿಯ ಡಬ್ಲ್ಯೂಪಿಎಲ್ (Womens Premier League 2024) ಪಂದ್ಯಾವಳಿಯು ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯಗಳಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಬರುತ್ತಿದ್ದಾರೆ. ಅದರಲ್ಲೂ ಆರ್ಸಿಬಿ ಪಂದ್ಯಗಳಿಗೆ ಸ್ಟೇಡಿಯಂ ಪೂರ್ತಿ ಫ್ಯಾನ್ಸ್ ತುಂಬಿರುತ್ತಾರೆ. ಫೆಬ್ರವರಿ 28ರಂದು ನಡೆದ ಯುಪಿ ವಾರಿಯರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಸಮಯದಲ್ಲೂ ಭಾರಿ ಸಂಖೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ನಡುವೆ ಮೈದಾನದ ಪಿಚ್ ಬಳಿ ನುಗ್ಗಲು ವ್ಯಕ್ತಿಯೊಬ್ಬ ಪ್ರಯತ್ನಿಸಿದ್ದು, ಅವರನ್ನು ಯುಪಿ ನಾಯಕಿ ಅಲಿಸ್ಸಾ ಹೀಲಿ ತಡೆದು ನಿಲ್ಲಿಸಿದ ಘಟನೆ ನಡೆದಿದೆ.
ಬುಧವಾರ ನಡೆದ ಡಬ್ಲ್ಯೂಪಿಎಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಯುಪಿ ವಾರಿಯರ್ಸ್ ತಂಡಗಳು ಮುಖಾಮುಖಿಯದವು. ಪಂದ್ಯದಲ್ಲಿ ಅಲಿಸ್ಸಾ ಹೀಲಿ ಬಳಗವು ಏಳು ವಿಕೆಟ್ಗಳಿಂದ ಜಯ ಸಾಧಿಸಿತು. ಈ ನಡುವೆ, ಮುಂಬೈ ಇಂಡಿಯನ್ಸ್ ತಂಡದ ಬ್ಯಾಟಿಂಗ್ ವೇಳೆ ವ್ಯಕ್ತಿಯೊಬ್ಬ ಪಿಚ್ ಕಡೆಗೆ ನುಗ್ಗಿ ಬಂದಿದ್ದಾನೆ. ಈ ವೇಳೆ ವಿಕೆಟ್ ಕೀಪಿಂಗ್ ಮಾಡುತ್ತಿದ್ದ ಅಲಿಸ್ಸಾ ಹೀಲಿ ಆತನನ್ನು ತಡೆದಿದ್ದಾರೆ.
ಮುಂಬೈ ತಂಡದ ಇನ್ನಿಂಗ್ಸ್ನ ಕೊನೆಯ ಎಸೆತವನ್ನು ಎಸೆಯಲು ಅಂಜಲಿ ಸರ್ವಾನಿ ಸಿದ್ಧರಾಗುತ್ತಿದ್ದಾಗ ಈ ಘಟನೆ ನಡೆದಿದೆ. ಐದನೇ ಎಸೆತದಲ್ಲಿ ಅಂಜಲಿ ಒಂದು ವಿಕೆಟ್ ಪಡೆದಿದ್ದರು. ಮೈದಾನಕ್ಕೆ ಬಂದ ಹೊಸ ಬ್ಯಾಟರ್ ಕೊನೆಯ ಎಸೆತ ಎದುರಿಸಲು ಸಿದ್ಧರಾಗಿದ್ದರು. ಈ ವೇಳೆ ಅಂಪೈರ್ ಬೌಲಿಂಗ್ ಮಾಡದಂತೆ ಹೇಳಿದರು. ಏಕೆಂದರೆ ವ್ಯಕ್ತಿಯೊಬ್ಬ ಆಟದ ಮೈದಾನದತ್ತ ಓಡಿ ಬಂದಿದ್ದಾನೆ. ಇದನ್ನು ನೋಡಿದ ಹೀಲಿ ಆತನನ್ನು ಪಿಚ್ಗೆ ಬರದಂತೆ ತಡೆದಿದ್ದಾರೆ. ಆಕ್ರಮಣಕಾರನನ್ನು ಎದುರಿಸಿ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಮೈದಾನದ ಅಧಿಕಾರಿಗಳು ಹಾಗೂ ಸಿಬ್ಬಂದಿ ವ್ಯಕ್ತಿಯನ್ನು ಮೈದಾನದಿಂದ ಹೊರಗೆ ಕರೆದೊಯ್ದಿದ್ದಾರೆ.
ಘಟನೆಯ ಫೋಟೋ ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ಹಿಂದೆ ಮಾಜಿ ಆಲ್ರೌಂಡರ್ ಆಂಡ್ರ್ಯೂ ಸೈಮಂಡ್ಸ್ ಮತ್ತು ಆಸ್ಟ್ರೇಲಿಯಾದ ಮಹಿಳಾ ಫುಟ್ಬಾಲ್ ಆಟಗಾರ್ತಿ ಸ್ಯಾಮ್ ಕೆರ್ ಕೂಡ ಪಿಚ್ ಬಳಿ ಬಂದ ವ್ಯಕ್ತಿಯನ್ನು ಇದೇ ರೀತಿ ತಡೆದು ನಿಲ್ಲಿಸಿದ್ದರು. ಈಗ ಅಲಿಸ್ಸಾ ಹೀಲಿ ಕೂಡಾ ಅದೇ ರೀತಿ ಮಾಡಿದ್ದಾರೆ.
ಇದನ್ನು ಓದಿ | WPL 2024: ಗುಜರಾತ್ ವಿರುದ್ಧದ ಪಂದ್ಯದ ವೇಳೆ ಶ್ರೇಯಾಂಕ ಪಾಟೀಲ್ಗೆ ಪ್ರಪೋಸ್ ಮಾಡಿದ RCB ಅಭಿಮಾನಿ; ಫೋಟೋ ವೈರಲ್
ಇದಕ್ಕೂ ಹಿಂದೆ ಇದೇ ಚಿನ್ನಸ್ವಾಮಿ ಮೈದಾನದಲ್ಲಿ ಮಂಗಳವಾರ ನಡೆದಿದ್ದ ಮಹಿಳಾ ಪ್ರೀಮಿಯರ್ ಲೀಗ್ನ ಐದನೇ ಪಂದ್ಯದಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿಯಾಗಿದ್ದವು. ಪಂದ್ಯದ ವೇಳೆ ಆರ್ಸಿಬಿ ತಂಡದ 21 ವರ್ಷದ ಆಲ್ರೌಂಡರ್ ಕನ್ನಡತಿ ಶ್ರೇಯಾಂಕಾ ಪಾಟೀಲ್ಗೆ ಮದುವೆ ಪ್ರಪೋಸಲ್ ಮಾಡಲಾಗಿತ್ತು. ಗ್ಯಾಲರಿಯಲ್ಲಿ ಕುಳಿತ ಪ್ರೇಕ್ಷಕನ ಕೈಯಲ್ಲಿ Will You marry me (ನೀವು ನನ್ನನ್ನು ಮದುವೆಯಾಗುತ್ತೀರಾ) ಶ್ರೇಯಾಂಕಾ ಪಾಟೀಲ್ ಎಂಬ ಪೋಸ್ಟರ್ ಹಿಡಿದಿದ್ದ. ಅಭಿಮಾನಿ ಹಿಡಿದ ಪೋಸ್ಟರ್ನಲ್ಲಿ ಉತ್ತರ ಕರ್ನಾಟಕ ಎಂದು ಬರೆಯಲಾಗಿತ್ತು. ಬೆಂಗಳೂರಿಗೆ ಉತ್ತರ ಕರ್ನಾಟಕದಿಂದ ಬಂದು ಆರ್ಸಿಬಿ ಪಂದ್ಯ ವೀಕ್ಷಿಸಿದ ಅಭಿಮಾನಿಗಳು, ಶ್ರೇಯಾಂಕಾಗೆ ಪ್ರಪೋಸ್ ಮಾಡಿದ್ದಾರೆ.
ಇದನ್ನೂ ಓದಿ | ಸತತ ಗೆಲುವುಗಳ ನಂತರ ಮುಗ್ಗರಿಸಿದ ಮುಂಬೈ ಇಂಡಿಯನ್ಸ್; ಎರಡು ಸೋಲುಗಳ ಬಳಿಕ ಗೆದ್ದ ಯುಪಿ ವಾರಿಯರ್ಸ್
ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವನ್ನು ಯುಪಿ ವಾರಿಯರ್ಸ್ ಏಳು ವಿಕೆಟ್ಗಳಿಂದ ಸೋಲಿಸಿ ಅಂಕಪಟ್ಟಿಯಲ್ಲಿ ಖಾತೆ ತೆರೆದಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ, ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗೆ 161 ರನ್ ಕಲೆ ಹಾಕಿತು. ಈ ಗುರಿ ಹಿಂಬಾಲಿಸಿದ ಯುಪಿ ವಾರಿಯರ್ಸ್ ಕೇವಲ 16.3 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 163 ರನ್ ಬಾರಿಸಿ ಜಯದ ನಗೆ ಬೀರಿತು.
ಕ್ರಿಕೆಟ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
(This copy first appeared in Hindustan Times Kannada website. To read more like this please logon to kannada.hindustantimes.com)
