ಮಯಾಂಕ್ ಅಗರ್ವಾಲ್ 4ನೇ ಶತಕ; ನಾಗಾಲ್ಯಾಂಡ್ ಮಣಿಸಿ 6ನೇ ಜಯದೊಂದಿಗೆ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್​ಗೆ ಲಗ್ಗೆ
ಕನ್ನಡ ಸುದ್ದಿ  /  ಕ್ರಿಕೆಟ್  /  ಮಯಾಂಕ್ ಅಗರ್ವಾಲ್ 4ನೇ ಶತಕ; ನಾಗಾಲ್ಯಾಂಡ್ ಮಣಿಸಿ 6ನೇ ಜಯದೊಂದಿಗೆ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್​ಗೆ ಲಗ್ಗೆ

ಮಯಾಂಕ್ ಅಗರ್ವಾಲ್ 4ನೇ ಶತಕ; ನಾಗಾಲ್ಯಾಂಡ್ ಮಣಿಸಿ 6ನೇ ಜಯದೊಂದಿಗೆ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್​ಗೆ ಲಗ್ಗೆ

Vijay Hazare Trophy: ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಗಾಲ್ಯಾಂಡ್ ತಂಡವನ್ನು 9 ವಿಕೆಟ್​ಗಳ ಅಂತರದಿಂದ ಮಣಿಸಿದ ಕರ್ನಾಟಕ ತಂಡ, ಕ್ವಾರ್ಟರ್ ಫೈನಲ್​ಗೆ ಲಗ್ಗೆ ಇಟ್ಟಿದೆ.

ಮಯಾಂಕ್ ಅಗರ್ವಾಲ್ ನಾಲ್ಕನೇ ಶತಕ; ನಾಗಾಲ್ಯಾಂಡ್ ಮಣಿಸಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ ತಂಡ
ಮಯಾಂಕ್ ಅಗರ್ವಾಲ್ ನಾಲ್ಕನೇ ಶತಕ; ನಾಗಾಲ್ಯಾಂಡ್ ಮಣಿಸಿ ಕ್ವಾರ್ಟರ್ ಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ ತಂಡ (espncricinfo)

ವಿಜಯ್ ಹಜಾರೆ ಟ್ರೋಫಿಯಲ್ಲಿ ನಾಯಕ ಮಯಾಂಕ್ ಅಗರ್ವಾಲ್ (116) ಅವರ 4ನೇ ಶತಕದ ನೆರವಿನಿಂದ ಕರ್ನಾಟಕ ತಂಡ ತನ್ನ ಕೊನೆಯ ಲೀಗ್​ ಪಂದ್ಯದಲ್ಲೂ ಭರ್ಜರಿ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್​​ಗೆ ಲಗ್ಗೆ ಇಟ್ಟಿದೆ. ಇಂದು (ಜನವರಿ 3) ಅಹ್ಮದಾಬಾದ್​​ನ ಗುಜರಾತ್ ಕಾಲೇಜ್ ಗ್ರೌಂಡ್​ನಲ್ಲಿ ನಾಗಾಲ್ಯಾಂಡ್ ವಿರುದ್ಧ ಅಬ್ಬರಿಸಿದ ಕರ್ನಾಟಕ, 9 ವಿಕೆಟ್​ಗಳ ಅಮೋಘ ಜಯ ಸಾಧಿಸಿತು. ಲೀಗ್​ ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ ದಾಖಲಾದ 6ನೇ ಗೆಲುವು ಇದಾಗಿದ್ದರೆ, ನಾಗಾಲ್ಯಾಂಡ್ 6ನೇ ಸೋಲಿಗೆ ಶರಣಾಯಿತು.

ಸಿ ಗುಂಪಿನಲ್ಲಿ ರೌಂಡ್-7 ಪಂದ್ಯದಲ್ಲಿ ಕರ್ನಾಟಕ ಟಾಸ್ ಜಯಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲ ಬ್ಯಾಟಿಂಗ್ ನಡೆಸಿದ ನಾಗಾಲ್ಯಾಂಡ್, 48.3 ಓವರ್​​ಗಳಲ್ಲಿ 206 ರನ್​ಗೆ ಆಲೌಟ್ ಆಯಿತು. ಚೇತನ್ ಬಿಸ್ಟ್ 77, ಜೋನಾಥನ್ 51 ರನ್ ಗಳಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸಲು ನೆರವಾದರು. ಕರ್ನಾಟಕ ಪರ ಶ್ರೇಯಸ್ ಗೋಪಾಲ್ 4 ವಿಕಟ್ ಕಬಳಿಸಿ ಮಿಂಚಿದರು. ಕರ್ನಾಟಕ 1 ವಿಕೆಟ್ ನಷ್ಟಕ್ಕೆ 37.5 ಓವರ್​​​ಗಳಲ್ಲಿ ಗೆಲುವಿನ ನಗೆ ಬೀರಿತು. ಮಯಾಂಕ್ ಮತ್ತೊಂದು ಶತಕ ಸಿಡಿಸಿದರು.

ಶ್ರೇಯಸ್ ಗೋಪಾಲ್ ಅಬ್ಬರ, ನಾಗಾಲ್ಯಾಂಡ್ ತತ್ತರ

ಗೆಲುವಿನೊಂದಿಗೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಅಭಿಯಾನ ಮುಗಿಸುವ ಲೆಕ್ಕಾಚಾರ ಹಾಕಿದ್ದ ನಾಗಾಲ್ಯಾಂಡ್ ಕಳಪೆ ಬ್ಯಾಟಿಂಗ್​ಗೆ ಬೆಲೆ ತೆತ್ತಿತ್ತು. ಸೆಡೆಝಾಲಿ ರೂಪೆರೊ 0, ನಿಶ್ಚಲ್ 1 ರನ್​ಗೆ ಆರಂಭದಲ್ಲೇ ವಿಕೆಟ್ ಒಪ್ಪಿಸಿ ತಂಡವನ್ನು ಒತ್ತಡಕ್ಕೆ ಸಿಲುಕಿಸಿದರು. 24 ರನ್ ಗಳಿಸಿ ನೆರವಾಗಲು ಯತ್ನಿಸಿದ ಹೇಮ್ ಛೆಟ್ರಿಗೆ ಗೋಪಾಲ್​ ಗೇಟ್​ಪಾಸ್ ಕೊಟ್ಟರು. ಯುಗಂಧರ್ ಸಿಂಗ್ ಸಹ 10 ರನ್​ಗೆ ಆಟ ಮುಗಿಸಿದರು. ಆಗ ಜೊನಾಥನ್ ಮತ್ತು ಚೇತನ್ ಬಿಸ್ಟ್​ ಜೊತೆಯಾಗಿ ತಲಾ ಅರ್ಧಶತಕ ಸಿಡಿಸಿ ಮೊತ್ತ ಏರಿಸಿದರು.

ಆದರೆ 73 ಎಸೆತಗಳಲ್ಲಿ 51 ರನ್ ಸಿಡಿಸಿದ್ದ ಜೊನಾಥನ್​, ಅಭಿಲಾಷ್ ಶೆಟ್ಟಿ ಬೌಲಿಂಗ್​ನಲ್ಲಿ ಹೊರನಡೆದರು. ನಂತರ ಜಗದೀಶನ್ ಸುಚಿತ್ 3, ಇಮ್ಲಿವಾಟಿ ಲೆಮಟೂರು 7, ತಹಮೀದ್ ರೆಹಮಾನ್ 13, ನಾಗಹೊ ಚಿಶಿ 7, ಅದ್ದು ಬೋರಾ 0 ರನ್​ಗೆ ಔಟಾದರು. ಸತತ ವಿಕೆಟ್​ ಪತನದ ನಡುವೆಯೂ ಅದ್ಭುತ ಪ್ರದರ್ಶನ ನೀಡಿದ ಚೇತನ್, 73 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 77 ರನ್ ಸಿಡಿಸಿ ಅಜೇಯರಾಗಿ ಉಳಿದರು. ಶ್ರೇಯಸ್ ಗೋಪಾಲ್ 9.3 ಓವರ್​ಗಳಲ್ಲಿ 24 ರನ್ ಬಿಟ್ಟುಕೊಟ್ಟು 4 ವಿಕೆಟ್ ಕಿತ್ತರು. ಅಭಿಲಾಷ್ ಶೆಟ್ಟಿ 2, ವಾಸುಕಿ ಕೌಶಿಕ್, ಹಾರ್ದಿಕ್ ರಾಜ್, ವಿದ್ಯಾದರ್ ಪಾಟೀಲ್, ನಿಕಿನ್ ಜೋನ್ಸ್ ತಲಾ 1 ವಿಕೆಟ್ ಪಡೆದರು.

ಮಯಾಂಕ್ ಮತ್ತೊಂದು ಶತಕ

207 ರನ್​ಗಳ ಗುರಿ ಬೆನ್ನಟ್ಟಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಗಲಿಲ್ಲ. ನಿಕಿನ್ ಜೋನ್ಸ್​ 13 ಎಸೆತಗಳನ್ನು ಎದುರಿಸಿ 1 ರನ್ ಗಳಿಸಿ ನಿರ್ಗಮಿಸಿದರು. ಆ ಬಳಿಕ ಜೊತೆಯಾದ ಮಯಾಂಕ್ ಅಗರ್ವಾಲ್​ ಮತ್ತು ಅನೀಶ್ ಕೆವಿ ಅದ್ಭುತ ಪ್ರದರ್ಶನ ನೀಡಿದರು. 2ನೇ ವಿಕೆಟ್​ಗೆ 198 ರನ್​​​ ಹರಿದು ಬಂತು. ನಾಗಾಲ್ಯಾಂಡ್ ಬೌಲರ್​​ಗಳ ವಿರುದ್ಧ ಸವಾರಿ ನಡೆಸಿದ ಮಯಾಂಕ್, ಟೂರ್ನಿಯಲ್ಲಿ 4ನೇ ಶತಕ ಸಿಡಿಸಿ ಮಿಂಚಿದರು. ಮತ್ತೊಂದೆಡೆ ಅನೀಶ್ ಭರ್ಜರಿ ಅರ್ಧಶತಕ ಸಿಡಿಸಿ ಎದುರಾಳಿ ತಂಡದ ಗೆಲುವನ್ನು ಕಸಿದರು. ಮಯಾಂಕ್, 119 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ 116 ರನ್ ಸಿಡಿಸಿದರೆ, ಅನೀಶ್ 95 ಬಾಲ್​ಗಳಲ್ಲಿ 10 ಬೌಂಡರಿ ಸಹಿತ 82 ರನ್ ಗಳಿಸಿದರು. ಇಬ್ಬರೂ ಅಜೇಯರಾಗಿ ಉಳಿದರು.

Whats_app_banner