ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹರೇ ಅಲ್ಲ; ಸಂಜಯ್ ಮಂಜ್ರೇಕರ್ ಮತ್ತೆ 'ಸ್ಟ್ರೈಕ್ ರೇಟ್' ದಾಳಿ
Sanjay Manjrekar: ವಿರಾಟ್ ಕೊಹ್ಲಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಬಾರದಿತ್ತು. ಯಾರಾದರೂ ಬೌಲರ್ಗೆ ಈ ಪ್ರಶಸ್ತಿ ನೀಡಬೇಕಿತ್ತು ಎಂದ ಸಂಜಯ್ ಮಂಜ್ರೇಕರ್, ಕೊಹ್ಲಿ ಅವರ 'ಸ್ಟ್ರೈಕ್ ರೇಟ್' ಚರ್ಚೆ ಹುಟ್ಟು ಹಾಕಿದ್ದಾರೆ.

ಜೂನ್ 29ರಂದು ಬಾರ್ಬಡೋಸ್ನಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ನಲ್ಲಿ ವಿರಾಟ್ ಕೊಹ್ಲಿ ಅವರು ಅದ್ಭುತ ಪ್ರದರ್ಶನ ನೀಡಿದ್ದರು. ಭಾರತ ತಂಡ 34ಕ್ಕೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ತಂಡವನ್ನು ಕೊಹ್ಲಿ ಪಾರು ಮಾಡಿದರು. ಸತತ ವಿಕೆಟ್ ನಷ್ಟವಾಗುತ್ತಿದ್ದಂತೆ ವಿರಾಟ್, ಕೂಲಾಗಿ ಭಾರತವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು. 59 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 76 ರನ್ ಚಚ್ಚಿದರು. ಸೂಪರ್ಸ್ಟಾರ್ ಆಡಿದ ಇನ್ನಿಂಗ್ಸ್ಗೆ ಜಗತ್ತೇ ಬೆರಗಾಗಿದೆ. ಆದರೆ ಇವರೊಬ್ಬರನ್ನ ಬಿಟ್ಟು.
ಟಿ20 ವಿಶ್ವಕಪ್ ಆವೃತ್ತಿಯ ಮೊದಲ 7 ಇನ್ನಿಂಗ್ಸ್ಗಳಲ್ಲಿ ಲಯವನ್ನು ಕಂಡುಕೊಳ್ಳಲು ಹೆಣಗಾಡುತ್ತಿದ್ದ ಕೊಹ್ಲಿ, ತಮ್ಮ ಕೆಟ್ಟ ಪ್ರದರ್ಶನ ದಾಖಲಿಸಿದ್ದರು. ಆರಂಭಿಕ ಏಳು ಪಂದ್ಯಗಳಲ್ಲಿ ಕೇವಲ 75 ರನ್ ಗಳಿಸಿದ್ದರು. ಕೆನ್ಸಿಂಗ್ಟನ್ ಓವಲ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿ 59 ಎಸೆತಗಳಲ್ಲಿ 76 ರನ್ ಗಳಿಸುವ ಮೂಲಕ ಭಾರತಕ್ಕೆ ಏಳು ರನ್ಗಳಿಂದ ಗೆಲ್ಲಲು ಸಹಾಯ ಮಾಡಿದರು. ಅವರ ಅದ್ಭುತ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಆದರೆ ಇದನ್ನು ಸಹಿಸಿಕೊಳ್ಳದ ಸಂಜಯ್ ಮಂಜ್ರೇಕರ್, ಸ್ಟ್ರೈಕ್ರೇಟ್ ಚರ್ಚೆಯನ್ನು ಮತ್ತೆ ಹುಟ್ಟು ಹಾಕಿದ್ದಾರೆ.
ಪವರ್ಪ್ಲೇನಲ್ಲಿ 3 ವಿಕೆಟ್ಗಳನ್ನು ಕಳೆದುಕೊಂಡರೂ, ಭಾರತ ತಂಡವು ಮೊದಲ ಆರು ಓವರ್ಗಳಲ್ಲಿ 45 ರನ್ಗಳಿಗೆ ಕೊನೆಗೊಂಡಿತು. ಈ ವೇಳೆ ಕೊಹ್ಲಿ 4 ಬೌಂಡರಿಗಳನ್ನು ಸಿಡಿಸಿದರು. ಆದಾಗ್ಯೂ, ವಿರಾಟ್ ಮತ್ತು ಅಕ್ಷರ್ ಜೊತೆಗೂಡಿ 4ನೇ ವಿಕೆಟ್ಗೆ 72 ರನ್ಗಳ ಜೊತೆಯಾಟವಾಡಿದರು. ಅಕ್ಷರ್ 31 ಎಸೆತಗಳಲ್ಲಿ 47 ರನ್ ಗಳಿಸಿದರು. ಶಿವಂ ದುಬೆ 16 ಎಸೆತಗಳಲ್ಲಿ 27 ರನ್ ಗಳಿಸಿದರು. ಇಎಸ್ಪಿಎನ್ ಕ್ರಿಕ್ಇನ್ಫೋ ಜೊತೆ ಮಾತನಾಡಿದ ಮಂಜ್ರೇಕರ್, ಕೊಹ್ಲಿ ಅವರ ಅದ್ಭುತ ಇನ್ನಿಂಗ್ಸ್ ಅನ್ನು ಟೀಕಿಸಿದ್ದಾರೆ. ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಅರ್ಹರೇ ಅಲ್ಲ ಎಂದು ನಾಲಿಗೆ ಹರಿಯಬಿಟ್ಟಿದ್ದಾರೆ.
ಕೊಹ್ಲಿ ಉತ್ತಮವಾಗಿ ಆಡಿತ್ತು ಎಂದ ಮಂಜ್ರೇಕರ್
ವಿರಾಟ್ ಅವರ ಇನ್ನಿಂಗ್ಸ್ ತುಂಬಾ ನಿಧಾನವಾಗಿತ್ತು. ಅವರು ತಂಡವನ್ನು ಅನಿಶ್ಚಿತ ಸ್ಥಿತಿಯಲ್ಲಿರಿಸಿದ್ದರು. ಕೊಹ್ಲಿ ಸ್ಲೋ ಇನ್ನಿಂಗ್ಸ್ ಆಡಿದ್ದ ಕಾರಣ ಹಾರ್ದಿಕ್ ಪಾಂಡ್ಯ ಎರಡು ಎಸೆತಗಳನ್ನಷ್ಟೇ ಎದುರಿಸಲು ಸಾಧ್ಯವಾಯಿತು. ಕೊಹ್ಲಿ ಉತ್ತಮವಾಗಿ ಆಡಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು. ಬೌಲರ್ಗಳು ತಂಡವನ್ನು ಕಾಪಾಡಬೇಕಾಯಿತು ಎಂದು ಮಂಜ್ರೇಕರ್ ಹೇಳಿದ್ದಾರೆ. ಡೆತ್ ಓವರ್ಗಳಲ್ಲಿ ಬೌಲರ್ಗಳು ಇಲ್ಲದಿದ್ದರೆ, ಮೆನ್ ಇನ್ ಬ್ಲೂ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ನಲ್ಲಿ ಸೋಲುತ್ತಿತ್ತು ಎಂದು ಭಾರತದ ಮಾಜಿ ಬ್ಯಾಟರ್ ಅಭಿಪ್ರಾಯಪಟ್ಟಿದ್ದಾರೆ.
ಸ್ಟ್ರೈಕ್ರೇಟ್ ಬಗ್ಗೆ ಮತ್ತೆ ಚರ್ಚೆ
ಆದರೆ, ಪಂದ್ಯದಲ್ಲಿ ಕೇವಲ 128ರ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ ಕೊಹ್ಲಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿದ್ದು ಸರಿಯಿಲ್ಲ. ಪಂದ್ಯವನ್ನು ಗೆಲ್ಲಿಸಿಕೊಟ್ಟ ಬೌಲರ್ಗೆ ಪಂದ್ಯಶ್ರೇಷ್ಠ ನೀಡಬೇಕಾಗಿತ್ತು ಎಂದು ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡವು ಸೋಲುವ ಸ್ಥಿತಿಯಲ್ಲಿತ್ತು. ದಕ್ಷಿಣ ಆಫ್ರಿಕಾ ತಂಡ ಶೇ 90 ರಷ್ಟು ಗೆಲುವಿನ ಅವಕಾಶ ಹೊಂದಿತ್ತು. ಅವರು 128ರ ಸ್ಟ್ರೈಕ್ ರೇಟ್ನೊಂದಿಗೆ ಅರ್ಧದಷ್ಟು ಇನ್ನಿಂಗ್ಸ್ ಆಡಿದ್ದರು. ಕೊಹ್ಲಿ ಜೋರಾಗಿ ಆಡಬೇಕಿತ್ತು. ಸ್ಟ್ರೈಕ್ರೇಟ್ ಹೆಚ್ಚಿಸಿಕೊಳ್ಳಬೇಕಿತ್ತು. ಆದರೆ ಬೌಲರ್ಗಳೇ ಇಲ್ಲದಿದ್ದರೆ, ಪಂದ್ಯದ ಪರಿಸ್ಥಿತಿ ಏನು? ಎಂದು ಹೇಳಿದ್ದಾರೆ.
ವಿರಾಟ್ ಕೊಹ್ಲಿ ಬ್ಯಾಟಿಂಗ್ ಪವರ್ ಪ್ರದರ್ಶನದಿಂದ ಭಾರತ ತಂಡವನ್ನು ಗೆಲ್ಲಿಸಿದ್ದಾರೆ. ಭಾರತ ವಿಶ್ವಕಪ್ ಗೆದ್ದಿದೆ ಎಂದ ಮೇಲೆ ಸ್ಟ್ರೈಕ್ರೇಟ್ ತೆಗೆದುಕೊಂಡು ಏನಾಗಬೇಕಿದೆ? ಕೊಹ್ಲಿ ಬಗ್ಗೆ ಇನ್ನೂ ಉರಿಯುತ್ತಾ, ಮನಸ್ಸಿನ ವಿಷವನ್ನು ಕಾರುತ್ತಾ ಆ ಸ್ಟ್ರೈಕ್ರೇಟ್ಗೆ ಉಪ್ಪಿನಕಾಯಿ ಹಾಕಿ ನೆಕ್ಕಬೇಕಷ್ಟೇ. ಅದನ್ನು ಬಿಟ್ಟು ನಿಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.