ಆರ್ಸಿಬಿ ಆಟಗಾರರಿಗೆ ಹ್ಯಾಂಡ್ಶೇಕ್ ಮಾಡದೆ ತೆರಳಿದ ಎಂಎಸ್ ಧೋನಿ; ಮಾಹಿ ಹುಡುಕುತ್ತಾ ಹೊರಟ ವಿರಾಟ್ ಕೊಹ್ಲಿ, ವಿಡಿಯೋ
MS Dhoni: ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ನಾಯಕ ಎಂಎಸ್ ಧೋನಿ ಅವರು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರರಿಗೆ ಹ್ಯಾಂಡ್ ಶೇಕ್ ಮಾಡದೆಯೇ ಮೈದಾನ ತೊರೆದರು.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ (M Chinnaswamy Cricket Stadium) ನಡೆದ ನಿರ್ಣಾಯಕ ಪಂದ್ಯದಲ್ಲಿ ಮುಖಭಂಗ ಅನುಭವಿಸಿದ ನಂತರ ಚೆನ್ನೈ ಸೂಪರ್ ಕಿಂಗ್ಸ್ (CSK) ಮಾಜಿ ನಾಯಕ ಎಂಎಸ್ ಧೋನಿ (MS Dhoni) ಅವರು ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಆಟಗಾರರಿಗೆ ಶೇಕ್ಹ್ಯಾಂಡ್ ನೀಡದೆಯೇ ಮೈದಾನದಿಂದ ಹೊರ ನಡೆದಿದ್ದಾರೆ. ಶೇಕ್ ಹ್ಯಾಂಡ್ ವೇಳೆ ಧೋನಿ ಕಾಣಿಸಿಕೊಳ್ಳದ ಕಾರಣ ವಿರಾಟ್ ಕೊಹ್ಲಿಯೇ ಅವರ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆರ್ಸಿಬಿ ವಿರುದ್ಧದ ಘರ್ಷಣೆ ಎಂಎಸ್ ಧೋನಿ ಪಾಲಿಗೆ ಕೊನೆಯ ಪಂದ್ಯವೇ? ಕೆಲವರು ಹೌದು ಎಂದರೆ, ಇನ್ನೂ ಕೆಲವರು ಇಲ್ಲವೆಂದು ಹೇಳುತ್ತಿದ್ದಾರೆ. 20ನೇ ಓವರ್ನ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಎಂಎಸ್ ಧೋನಿ, ಬಹುತೇಕ ಪಂದ್ಯದನ್ನು ಫಿನಿಶ್ ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ, ಯಶ್ ಅದ್ಭುತ ಬೌಲಿಂಗ್ ನಡೆಸಿ ಗೆಲುವು ತಂದುಕೊಟ್ಟರು. ಪಂದ್ಯದ ನಂತರ ಧೋನಿ, ಆರ್ಸಿಬಿ ಆಟಗಾರರಿಗೆ ಶೇಕ್ಹ್ಯಾಂಡ್ ಮಾಡದೆಯೇ ಡ್ರೆಸ್ಸಿಂಗ್ ರೂಮ್ ಕಡೆ ಹೆಜ್ಜೆ ಹಾಕಿದರು.
ಪಂದ್ಯ ಮುಕ್ತಾಯಗೊಳ್ಳುತ್ತಿದ್ದಂತೆ ಧೋನಿ, ಸಹ ಆಟಗಾರರು- ಸಿಬ್ಬಂದಿಗೆ ಹ್ಯಾಂಡ್ ಶೇಕ್ ಮಾಡಿದರು. ಸಂಪೂರ್ಣ ಫಿಟ್ ಆಗದ ಧೋನಿ, ಆರ್ಸಿಬಿ ಆಟಗಾರರು ತಮ್ಮ ಸಂಭ್ರಮಾಚರಣೆ ಮುಗಿಸಿ ಕೈಕುಲುಕಲು ಕಾದು ಕುಳಿತಿದ್ದ ಸಿಎಸ್ಕೆ ಆಟಗಾರರ ಸರತಿ ಸಾಲಿನಲ್ಲಿ ನಿಂತಿದ್ದರು. ನಂತರ ಅಲ್ಲಿಂದ ಹೊರ ನಡೆದ ಮಾಹಿ, ಆರ್ಸಿಬಿ ಡಗೌಟ್ನಲ್ಲಿ ಕೆಲ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿಗೆ ಹ್ಯಾಂಡ್ ಶೇಕ್ ಮಾಡಿ ನೇರವಾಗಿ ಡ್ರೆಸ್ಸಿಂಗ್ ಕಡೆ ಹೆಜ್ಜೆ ಹಾಕಿದರು.
ಧೋನಿ ಹ್ಯಾಂಡ್ಶೇಕ್ ಮಾಡದೆಯೇ ಹೊರಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅನುಭವಿ ವಿಕೆಟ್-ಕೀಪರ್ ಬ್ಯಾಟರ್ ಎದುರಾಳಿ ತಂಡದ ಆಟಗಾರರಿಗಾಗಿ ಕಾಯುವ ಬದಲು ಡ್ರೆಸ್ಸಿಂಗ್ ರೂಮ್ಗೆ ಮರಳಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಧೋನಿ ನಡೆಗೆ ಪರ-ವಿರೋಧ ಚರ್ಚೆಗಳು ಆರಂಭಗೊಂಡಿವೆ. ಅನುಭವಿ ಆಟಗಾರನೇ ಹೀಗೆ ವರ್ತಿಸಿದ್ದು ಸರಿಯಲ್ಲ ಎಂದು ಕೆಲವರು ಟೀಕಿಸಿದ್ದಾರೆ. ಕಾರಣ ತಿಳಿಯದೆ ಮಾತನಾಡುವುದು ತಪ್ಪು ಎಂದು ಇನ್ನೂ ಕೆಲವರು ಸಮರ್ಥಿಸಿಕೊಳ್ಳುತ್ತಿದ್ದಾರೆ.
ಧೋನಿಯನ್ನು ಹುಡುಕಿಕೊಂಡು ಹೋದ ಕೊಹ್ಲಿ
ಹ್ಯಾಂಡ್ಶೇಕ್ ವೇಳೆ ಕಾಣಿಸಿಕೊಳ್ಳದ ಕಾರಣ ವಿರಾಟ್ ಕೊಹ್ಲಿ ಅವರು ಧೋನಿ ಅವರನ್ನು ಹುಡುಕಿಕೊಂಡು ಡ್ರೆಸ್ಸಿಂಗ್ ರೂಮ್ಗೆ ಹೋಗಿದ್ದಾರೆ. ಹ್ಯಾಂಡ್ಶೇಕ್ ಮಾಡಲೆಂದೇ ಧೋನಿಯನ್ನೇ ಕೊಹ್ಲಿ ಹಿಂಬಾಲಿಸಿದ್ದಾರೆ. ಪಂದ್ಯದ ನಡುವೆಯೇ ಬ್ಯಾಟಿಂಗ್ ಮಾಡುವಾಗ ವಿರಾಟ್, ಧೋನಿಯಂದಿಗೆ ಚಿಟ್ಚಾಟ್ ನಡೆಸಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಧೋನಿ ತಪ್ಪು ಮಾಡಿದರೂ ಕೊಹ್ಲಿ ಮಾಡಲ್ಲ ಎಂದು ವಿರಾಟ್ ಫ್ಯಾನ್ಸ್ ಹೇಳಿದ್ದಾರೆ.
ಪ್ರಶಸ್ತಿ ಗೆಲ್ಲಲು ಇನ್ನೂ ಪಂದ್ಯ ಆಡಬೇಕು!
ಮೇ 22ರಂದು ಎಲಿಮಿನೇಟರ್ ಪಂದ್ಯವನ್ನಾಡಲು ಆರ್ಸಿಬಿ ಆಟಗಾರರು, ಅಹ್ಮದಾಬಾದ್ಗೆ ತೆರಳಿದ್ದಾರೆ. ಆರ್ಸಿಬಿ ಕಪ್ ಗೆಲ್ಲಲು ಇನ್ನೂ ಪಂದ್ಯಗಳನ್ನಾಡಬೇಕಿದೆ. ಎಲಿಮಿನೇಟರ್ ಗೆದ್ದರೆ, ಕ್ವಾಲಿಫೈಯರ್ -2 ಆಡಬೇಕು. ಇಲ್ಲಿ ಗೆದ್ದರೆ ಫೈನಲ್ಗೆ ಅರ್ಹತೆ ಪಡೆದುಕೊಳ್ಳಲಿದೆ. ಸಿಎಸ್ಕೆ ವಿರುದ್ಧ ಅಮೋಘ ಗೆಲುವು ಸಾಧಿಸಿದ ಬೆನ್ನಲ್ಲೇ ಅಭಿಮಾನಿಗಳು ಆರ್ಸಿಬಿ ಟ್ರೋಫಿ ಗೆಲ್ಲುವುದು ಖಚಿತ ಎಂದು ನಿರ್ಧರಿಸಿದ್ದಾರೆ. ಈ ಸಲ ಕಪ್ ನಮ್ದೆ ಎಂದು ಘೋಷಣೆ ಕೂಗುತ್ತಿದ್ದಾರೆ.
ಆರ್ಸಿಬಿ vs ಸಿಎಸ್ಕೆ ಸಂಕ್ಷಿಪ್ತ ಸ್ಕೋರ್
ಸಿಎಸ್ಕೆ ವಿರುದ್ಧ ಮೊದಲು ಬ್ಯಾಟಿಂಗ್ ಆರ್ಸಿಬಿ, ಬೃಹತ್ ಮೊತ್ತ ಪೇರಿಸಿತು. ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್ ಬೊಂಬಾಟ್ ಬ್ಯಾಟಿಂಗ್ ನಡೆಸಿದರು. ಪರಿಣಾಮ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಪೇರಿಸಿತು. ಈ ಗುರಿ ಬೆನ್ನಟ್ಟಿದ ಸಿಎಸ್ಕೆ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ಗಳಿಗೆ ಇನ್ನಿಂಗ್ಸ್ ಮುಗಿಸಿತು. ರಚಿನ್ ರವೀಂದ್ರ ಮತ್ತು ರವೀಂದ್ರ ಜಡೇಜಾ ಪ್ರತಿರೋಧ ತೋರಿದರೂ ಗೆಲುವು ದಕ್ಕಲಿಲ್ಲ.
(ಕನ್ನಡದಲ್ಲಿ ಕ್ರಿಕೆಟ್, ಎಚ್ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)
