ಖಲೀಲ್ ಎಸೆತಕ್ಕೆ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿದ ಕೊಹ್ಲಿ; ಹಿಂದಿನ ಮ್ಯಾಚ್ ಮರ್ತಿಲ್ಲ ಎಂದ ಫ್ಯಾನ್ಸ್, ಚೆಪಾಕ್ನಲ್ಲಿ ಏನಾಗಿತ್ತು?
ಐಪಿಎಲ್ 2025ರಲ್ಲಿ ಆರ್ಸಿಬಿ ಹಾಗೂ ಸಿಎಸ್ಕೆ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾದವು. ಪಂದ್ಯದಲ್ಲಿ ಖಲೀಲ್ ಅಹ್ಮದ್ ಎಸೆತವನ್ನು ಮೊದಲ ಬಾರಿಗೆ ಎದುರಿಸಿದಾಗಲೇ, ವಿರಾಟ್ ಕೊಹ್ಲಿ ಸತತ ಎರಡು ಸಿಕ್ಸರ್ಗಳನ್ನು ಸಿಡಿಸಿದರು. ಇದು ಸೋಷಿಯಲ್ ಮೀಡಿಯಾದಲ್ಲಿ ಬಗೆಬಗೆಯ ಚರ್ಚೆ ಹುಟ್ಟುಹಾಕಿದೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಜಯ ಸಾಧಿಸಿತು. ಕೊನೆಯ ಎಸೆತದವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಆರ್ಸಿಬಿ ತಂಡದ ಸಾಂಘಿಕ ಹೋರಾಟಕ್ಕೆ ಜಯ ಒಲಿದು ಬಂತು. ಪಂದ್ಯದಲ್ಲಿ ಆರ್ಸಿಬಿ ತಂಡದ ಅನುಭವಿ ಆಟಗಾರ ವಿರಾಟ್ ಕೊಹ್ಲಿ ಆಟ ಗಮನ ಸೆಳೆಯಿತು. ಬೌಂಡರಿ ಸಿಕ್ಸರ್ಗಳ ಸುರಿಮಳೆಯೊಂದಿಗೆ ಅಭಿಮಾನಿಗಳಿಗೆ ಮನರಂಜನೆ ಉಣಬಡಿಸಿದರು. ಈ ನಡುವೆ ಖಲೀಲ್ ಅಹ್ಮದ್ ಎಸೆತದಲ್ಲಿ ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಸಿಡಿಸಿ ಗಮನ ಸೆಳೆದರು. ಆರ್ಸಿಬಿ ಇನ್ನಿಂಗ್ಸ್ನ ಮೂರನೇ ಓವರ್ನಲ್ಲಿ ಸತತ ಸಿಕ್ಸರ್ಗಳನ್ನು ಬಾರಿಸಿದರು. ಇದು ಅಭಿಮಾನಿಗಳಿಗೆ ಖುಷಿ ತಂದಿದೆ. ಆ ಮೂಲಕ ಉಭಯ ಆಟಗಾರರ ನಡುವಿನ ಕೊನೆಯ ಮುಖಾಮುಖಿಯನ್ನು ಉಲ್ಲೇಖಿಸುವ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳು ಹರಿದಾಡುತ್ತಿವೆ.
ಏಪ್ರಿಲ್ನಲ್ಲಿ ಚೆನ್ನೈನಲ್ಲಿ ಉಭಯ ತಂಡಗಳ ನಡುವಿನ ಸೀಸನ್ನ ಮೊದಲ ಪಂದ್ಯ ನಡೆದಿತ್ತು. ಆಗ ಪಂದ್ಯದ ನಂತರ ಕೊಹ್ಲಿ ಮತ್ತು ಖಲೀಲ್ ನಡುವೆ ಮಾತುಕತೆ ನಡೆದಿತ್ತು. ಕೊಹ್ಲಿ ಕೋಪಗೊಂಡು ಎಡಗೈ ವೇಗಿಯೊಂದಿಗೆ ಮಾತನಾಡುತ್ತಿದ್ದಂತೆ ಕಂಡುಬಂತು. ಅದಾದ ಬಳಿಕ, ನಿನ್ನೆ (ಶನಿವಾರ) ಉಭಯ ಆಟಗಾರರು ಮೊದಲ ಬಾರಿಗೆ ಪಂದ್ಯದಲ್ಲಿ ಮುಖಾಮುಖಿಯಾದರು.
ಪಂದ್ಯದ ಮೂರನೇ ಓವರ್ ವೇಳೆ ಖಲೀಲ್ ಅವರ 5ನೇ ಎಸೆತವನ್ನು ಮೊದಲ ಬಾರಿಗೆ ಕೊಹ್ಲಿ ಎದುರಿಸಿದರು. ಆ ಮೊದಲ ಎಸೆತವನ್ನೇ ಸಿಕ್ಸರ್ಗೆ ಅಟ್ಟಿದರು. ಖಲೀಲ್ ಅವರ ಮೊದಲ ಚೆಂಡನ್ನು ಫೈನ್-ಲೆಗ್ ಬೌಂಡರಿಯ ಮೇಲೆ ಸುಲಭವಾಗಿ ಕಳುಹಿಸಿಬಿಟ್ಟರು. ಆ ನಂತರದ ಎಸೆತವನ್ನೂ ಕೊಹ್ಲಿ ಮತ್ತೊಮ್ಮೆ ಸಿಕ್ಸರ್ಗೆ ಅಟ್ಟುವ ಮೂಲಕ ಸತತ ಎರಡು ಸಿಕ್ಸರ್ ಸಿಡಿಸಿದರು.
ಇಲ್ಲಿದೆ ವಿಡಿಯೋ
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಬಗೆಬಗೆಯ ಪ್ರತಿಕ್ರಿಯೆ ನೀಡಲು ಶುರು ಮಾಡಿದರು. ಅಂದು ಕೆಣಕಿದ್ದಕ್ಕೆ ಕೊಹ್ಲಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ ಎಂದು ವರ್ಣಿಸಿದ್ದಾರೆ.
ಕೊಹ್ಲಿ-ಖಲೀಲ್ ನಡುವೆ ಏನಾಗಿತ್ತು?
ಚೆಪಾಕ್ನಲ್ಲಿ ನಡೆದಿದ್ದ ಈ ಹಿಂದಿನ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ವೇಳೆ ಖಲೀಲ್ ತೀಕ್ಷ್ಣವಾದ ಬೌನ್ಸರ್ ಎಸೆದರು. ಬೌಲಿಂಗ್ ಮಾಡುತ್ತಾ ಓಡುವಾಗ ಫಾಲೋ-ಅಪ್ ವೇಳೆ ಕೊಹ್ಲಿ ಕಡೆಗೆ ಸಾಗಿದರು. ಅದು ಕೊಹ್ಲಿಗೆ ಇಷ್ಟವಾಗಿರಲಿಲ್ಲ. ಕೋಪದ ಕಣ್ಣೋಟ ಅವರಲ್ಲಿತ್ತು. ಅಲ್ಲಿಗೆ ವಿಷಯ ಮುಗಿಯಲಿಲ್ಲ. ಪಂದ್ಯದ ನಂತರ, ಉಭಯ ತಂಡಗಳ ಆಟಗಾರರು ಸಾಂಪ್ರದಾಯಿಕ ಹಸ್ತಲಾಘವಕ್ಕಾಗಿ ಸಾಲುಗಟ್ಟಿ ನಿಂತಾಗ ಮತ್ತೊಮ್ಮೆ ಇಬ್ಬರು ಮುಖಾಮುಖಿಯಾದರು. ಆರ್ಸಿಬಿ ತಂಡದ ಮಾಜಿ ನಾಯಕ ಆ ಸನ್ನಿವೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಖಲೀಲ್, "ಭಯ್ಯಾ ಬೌಲಿಂಗ್ ತೋ ಕರ್ನೆ ದೋ ಧಂಗ್ ಸೇ (ಅಣ್ಣ, ಕನಿಷ್ಠ ನನಗೆ ಸರಿಯಾಗಿ ಬೌಲಿಂಗ್ ಮಾಡಲು ಬಿಡಿ)" ಎಂದು ತಮಾಷೆಯ ಧಾಟಿಯಲ್ಲಿ ಹೇಳಿದ್ದರು.
ಈ ಎಲ್ಲಾ ನಾಟಕೀಯ ಬೆಳವಣಿಗೆಗಳು ಏನೇ ಇದ್ದರೂ, ಇಬ್ಬರೂ ಆಟಗಾರರು ಮೈದಾನದ ಹೊರಗೂ ಮಾತನಾಡುತ್ತಿದ್ದರು. ಮೈದಾನದಲ್ಲಿ ಆಕ್ರೋಶಭರಿತ ಆಟಕ್ಕೆ ಹೆಸರಾದ ಕೊಹ್ಲಿ, ಆಟದ ಹೊರತಾಗಿ ಯುವ ಆಟಗಾರರೊಂದಿಗೆ ಆತ್ಮೀಯರಾಗಿ ಬೆರೆಯುತ್ತಾರೆ.