ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್​ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್​ಗೆ ನಾಲ್ಕನೇ ಸೋಲು​
ಕನ್ನಡ ಸುದ್ದಿ  /  ಕ್ರಿಕೆಟ್  /  ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್​ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್​ಗೆ ನಾಲ್ಕನೇ ಸೋಲು​

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್​ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್​ಗೆ ನಾಲ್ಕನೇ ಸೋಲು​

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅವರ ಅರ್ಧಶತಕಗಳ ಸಹಾಯದಿಂದ ತವರಿನ ಹೊರಗೆ ಆರ್​ಸಿಬಿಗೆ ಸತತ 4ನೇ ಗೆಲುವು ದಾಖಲಿಸಿದೆ. ಆದರೆ ರಾಜಸ್ಥಾನ್​ಗೆ ನಾಲ್ಕನೇ ಸೋಲು​ ಕಂಡಿದೆ.

ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್​ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್​ಗೆ ನಾಲ್ಕನೇ ಸೋಲು​
ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಅರ್ಧಶತಕ; ತವರಿನ ಹೊರಗೆ ಆರ್​ಸಿಬಿಗೆ ಸತತ 4ನೇ ಗೆಲುವು, ರಾಜಸ್ಥಾನ್​ಗೆ ನಾಲ್ಕನೇ ಸೋಲು​ (PTI)

ತವರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಸತತ ಎರಡನೇ ಸೋಲಿಗೆ ಶರಣಾಗಿದ್ದ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತವರಿನ ಹೊರಗೆ ನಡೆದ ಸತತ 4ನೇ ಪಂದ್ಯದಲ್ಲಿ ಗೆದ್ದು ಬೀಗಿದೆ. ಫಿಲ್ ಸಾಲ್ಟ್ ಅವರ (65) ಬಿರುಸಿನ ಅರ್ಧಶತಕದ ನೆರವಿನಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ 9 ವಿಕೆಟ್​ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಅಂಕ ಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಜಿಗಿತ ಕಂಡಿದೆ. ರಾಜಸ್ಥಾನ್ ಪರ ಯಶಸ್ವಿ ಜೈಸ್ವಾಲ್ 75 ರನ್ ಗಳಿಸಿ ಅಬ್ಬರದ ಆಟವಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ಋತುವಿನಲ್ಲಿ ಆರ್​​ಆರ್​ಗೆ ಇದು ನಾಲ್ಕನೇ ಸೋಲು. ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಪಿಂಕ್ ಸಿಟಿಯಲ್ಲಿ ಗ್ರೀನ್ ಜೆರ್ಸಿ ತೊಟ್ಟ ಆರ್​​ಸಿಬಿ ತಂಡದಿಂದ ಆತಿಥೇಯ ರಾಯಲ್ಸ್ ಕಠಿಣ ಹೋರಾಟ ಎದುರಿಸಿತು.

ಜೈಪುರದ ಸವಾಯಿ ಮಾನ್​ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್​ನ 28ನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್​ಆರ್, ಯಶಸ್ವಿ ಜೈಸ್ವಾಲ್ ಅವರ (75) ಆಕರ್ಷಕ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್​​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ, 17.3 ಓವರ್​​ಗಳಲ್ಲೇ 1 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿ ಗೆಲುವಿನ ಕೇಕೆ ಹಾಕಿತು. ಫಿಲ್ ಸಾಲ್ಟ್ (65) ಮತ್ತು ವಿರಾಟ್ ಕೊಹ್ಲಿ (62) ಅವರ ಸ್ಫೋಟಕ ಬ್ಯಾಟಿಂಗ್‌ನಿಂದ ಬೆಂಗಳೂರು ತಂಡ ಗೆಲ್ಲಲು ಸುಲಭವಾಯಿತು. ಫಿಲ್ ಸಾಲ್ಟ್​ ಮತ್ತು ವಿರಾಟ್ ಕೊಹ್ಲಿ (62*) ಅರ್ಧಶತಕ ಸಿಡಿಸಿದರು. ದೇವದತ್ ಪಡಿಕ್ಕಲ್ ಇಂಪ್ಯಾಕ್ಟ್ ಪ್ಲೇಯರ್​ ಆಗಿ 40 ರನ್ ಗಳಿಸಿದರು.

ಸಾಲ್ಟ್ ಅಬ್ಬರ, ಕೊಹ್ಲಿ ನಿಧಾನ

174 ರನ್​ಗಳ ಸ್ಪರ್ಧಾತ್ಮಕ ಗುರಿ ಬೆನ್ನಟ್ಟಿದ ಆರ್​​ಸಿಬಿ ಉತ್ತಮ ಆರಂಭ ಪಡೆಯಿತು. ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್​ ಅವರು ಆರಂಭಿಕರಾಗಿ ಕಣಕ್ಕಿಳಿದು ಆರ್​​ಆರ್​ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಇವರಿಬ್ಬರು ಮೊದಲ ವಿಕೆಟ್​​ಗೆ 92 ರನ್ ಕಲೆಹಾಕಿದರು. ಇನ್ನಿಂಗ್ಸ್ ಆರಂಭದಿಂದಲೇ ಆರ್​ಆರ್​ ಬೌಲರ್​ಗಳು ಬೆಂಗಳೂರು ತಂಡದ ಮೇಲೆ ಒತ್ತಡ ಹಾಕಲು ಯತ್ನಿಸಿದರು. ಆದರೆ ಸಾಲ್ಟ್​ ಅದೆಲ್ಲವನ್ನೂ ಮೀರಿ ಬ್ಯಾಟಿಂಗ್ ನಡೆಸಿ ಬೌಲರ್​​ಗಳ ಮೇಲೆಯೇ ಒತ್ತಡ ಹೇರಿದರು. ಇಂಗ್ಲೆಂಡ್ ಆಟಗಾರ 33 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ ಸಹಿತ ಭರ್ಜರಿ 65 ರನ್ ಗಳಿಸಿ ಔಟಾದರು. ಅದಾಗಲೇ ಆರ್​​ಸಿಬಿ ಸುಸ್ಥಿತಿಯಲ್ಲಿತ್ತು.

ಸಾಲ್ಟ್​ ಬಿರುಸಿನ ಬ್ಯಾಟಿಂಗ್ ನಡೆಸುತ್ತಿದ್ದ ಕಾರಣ ವಿರಾಟ್ ಕೊಹ್ಲಿ ನಿಧಾನವಾಗಿ ಬ್ಯಾಟ್ ಮಾಡಿದರು. ಪರಿಣಾಮ ವಿಕೆಟ್ ಕಾಪಾಡಿಕೊಳ್ಳುವಲ್ಲಿಯೂ ನೆರವಾದರು. ಆದರೆ ಸಾಲ್ಟ್ ಔಟಾದ ಬಳಿಕ ಕೊಹ್ಲಿ ತಾನೂ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇಂಪ್ಯಾಕ್ಟ್ ಪ್ಲೇಯರ್​ ದೇವದತ್ ಪಡಿಕ್ಕಲ್ ಜೊತೆ ಸೇರಿ 2ನೇ ವಿಕೆಟ್​ಗೆ ಅಜೇಯ 83 ರನ್ ಗಳಿಸಿ ಮಿಂಚಿದರು. 45 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 62 ರನ್ ಗಳಿಸಿದರು. ಪಡಿಕ್ಕಲ್ 28 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್​ ಸಹಿತ ಅಜೇಯ 40 ರನ್ ಬಾರಿಸಿದರು. ಆರ್​ಆರ್​ ಪರ ಕುಮಾರ್ ಕಾರ್ತಿಕೇಯ ಮಾತ್ರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉಳಿದ ಬೌಲರ್​​ಗಳು ವಿಕೆಟ್​ಗಾಗಿ ಪರದಾಡಿದರು. ಆದರೆ ಯಶಸ್ವಿಯಾಗಲಿಲ್ಲ.

ಜೈಸ್ವಾಲ್ ಅಬ್ಬರ, ಉಳಿದವರು ನಿರಾಸೆ

ಮೊದಲು ಬ್ಯಾಟಿಂಗ್ ಮಾಡಿದ ಆರ್​​ಆರ್​, ಉತ್ತಮ ಆರಂಭ ಪಡೆಯಿತು. ಪವರ್​ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 45 ರನ್ ಗಳಿಸಿತು. ಆದರೆ ಪವರ್​ಪ್ಲೇ ಮುಗಿದ ಮರು ಓವರ್​ನಲ್ಲೇ ಸಂಜು ಸ್ಯಾಮ್ಸನ್ ಔಟಾದರು. ಕೃನಾಲ್ ಪಾಂಡ್ಯ ಬೌಲಿಂಗ್​ನಲ್ಲಿ ಸ್ಟಂಪ್ ಆದರು. ಇದರ ಬಳಿಕ ರಾಯಲ್ಸ್​ ನಿಧಾನಗತಿಯ ಆಟಕ್ಕೆ ಒತ್ತು ಕೊಟ್ಟಿತು. ಮತ್ತೊಂದೆಡೆ ಆರ್​​ಸಿಬಿ ಬೌಲರ್​​ಗಳು ಸಹ ಮಾರಕ ದಾಳಿ ನಡೆಸಿ ವಿಕೆಟ್ ಪಡೆಯದಿದ್ದರೂ ರನ್ ನಿಯಂತ್ರಿಸಿದರು. ಆದರೆ ಅರ್ಧಶತಕದ ಬಳಿಕ ಗೇರ್ ಚೇಂಜ್ ಮಾಡಿದ ಜೈಸ್ವಾಲ್, ಹೊಡಿಬಡಿ ಆಟಕ್ಕೆ ಮುಂದಾದರು. ಇದು ಸ್ಕೋರ್​ ಏರಿಕೆಗೂ ಕಾರಣವಾಯಿತು.

ಆದರೆ 47 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ 75 ರನ್ ಗಳಿಸಿದ್ದ ಅವಧಿಯಲ್ಲಿ ಜೈಸ್ವಾಲ್, ಜೋಶ್ ಹೇಜಲ್​ವುಡ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯು ಆದರು. ರಿಯಾನ್ ಪರಾಗ್ 30 ರನ್​ಗಳ ಕಾಣಿಕೆ ನೀಡಿದರೆ, ಧ್ರುವ್ ಜುರೆಲ್ ಅಜೇಯ 35 ರನ್​ಗಳ ಕೊಡುಗೆ ನೀಡಿದರು. ಶಿಮ್ರಾನ್ ಹೆಟ್ಮೆಯರ್​ 9, ನಿತೀಶ್ ರಾಣಾ 4 ರನ್​ಗಳಿಸಿದರು. ಆರ್​ಸಿಬಿ ಕಠಿಣ ಬೌಲಿಂಗ್ ದಾಳಿ ನಡೆಸಿ ಬೃಹತ್ ಮೊತ್ತ ಕಲೆ ಹಾಕದಂತೆ ಬ್ಯಾಟರ್​ಗಳನ್ನು ನಿಯಂತ್ರಿಸಿದರು. ಭುವನೇಶ್ವರ್ ಕುಮಾರ್​, ಕೃನಾಲ್ ಪಾಂಡ್ಯ, ಜೋಶ್ ಹೇಜಲ್​ವುಡ್, ಯಶ್ ದಯಾಳ್ ತಲಾ 1 ವಿಕೆಟ್ ಪಡೆದರು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.
Whats_app_banner