ವಿಚಿತ್ರ ಸಂಭ್ರಮದೊಂದಿಗೆ ಅಯ್ಯರ್ಗೆ ಸಿನಿಮಾ ತೋರಿಸಿದ ವಿರಾಟ್ ಕೊಹ್ಲಿ; ಕೆರಳಿದ ಶ್ರೇಯಸ್, ವಿಡಿಯೋ
Virat Kohli: 19ನೇ ಓವರ್ನ 5ನೇ ಎಸೆತದಲ್ಲಿ ಜಿತೇಶ್ ಶರ್ಮಾ ಗೆಲುವಿನ ಸಿಕ್ಸರ್ ಸಿಡಿಸುತ್ತಿದ್ದಂತೆಯೇ ಸಂಭ್ರಮಾಚರಣೆಯೊಂದಿಗೆ ಪಿಬಿಕೆಎಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ನನ್ನು ವಿರಾಟ್ ಕೊಹ್ಲಿ ಕಿಚಾಯಿಸಿದ್ದಾರೆ.

ಏಪ್ರಿಲ್ 18ರಂದು ಪಂಜಾಬ್ ಕಿಂಗ್ಸ್ ವಿರುದ್ಧ ತವರಿನಲ್ಲಿ ಆರ್ಸಿಬಿ ಸೋತಿತ್ತು. ಇದಾದ ಎರಡೇ ದಿನಗಳ ಅಂತರದಲ್ಲಿ ಬೆಂಗಳೂರು ಅವರದ್ದೇ ತವರಿನಲ್ಲಿ ಪಂಜಾಬ್ ಎದುರು ಗೆದ್ದು ಸೇಡು ತೀರಿಸಿಕೊಂಡಿದೆ. ಈ ಪಂದ್ಯ ಸೇಡಿನ ಸಮರವಾಗಲು ಕಾರಣ ಏನೆಂದರೆ ಎಂ ಚಿನ್ನಸ್ವಾಮಿ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಸೋತ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ಸೌಂಡ್ ಕೇಳಿಸ್ತಿಲ್ಲ ಎನ್ನುವ ರೀತಿ ಸಿಗ್ನಲ್ ಮಾಡಿದ್ದರು. ಇದು ಆರ್ಸಿಬಿ ಮತ್ತು ತಂಡದ ಅಭಿಮಾನಿಗಳನ್ನು ಕೆರಳಿಸಿತ್ತು. ಇದೇ ಕಾರಣಕ್ಕೆ ಸೇಡಿನ ಸಮರದೊಂದಿಗೆ ಕಣಕ್ಕಿಳಿದಿದ್ದ ಆರ್ಸಿಬಿ ಮುಲ್ಲನ್ಪುರದಲ್ಲಿ ಅದ್ಭುತ ಗೆಲುವು ದಾಖಲಿಸಿತು.
ಆರಂಭಿಕನಾಗಿ ಕಣಕ್ಕಿಳಿದು ಅಜೇಯರಾಗಿ ಉಳಿದ ವಿರಾಟ್ ಕೊಹ್ಲಿ, 19ನೇ ಓವರ್ನ 5ನೇ ಎಸೆತದಲ್ಲಿ ಜಿತೇಶ್ ಶರ್ಮಾ ಗೆಲುವಿನ ಸಿಕ್ಸರ್ ಸಿಡಿಸುತ್ತಿದ್ದಂತೆಯೇ ಅಪರೂಪದ ಸಂಭ್ರಮಾಚರಣೆಯೊಂದಿಗೆ ಪಿಬಿಕೆಎಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ನನ್ನು ಕಿಚಾಯಿಸಿದರು. ಗೇಲಿ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಆದರೆ ಕೊಹ್ಲಿ ಗೇಲಿ ಮಾಡುತ್ತಿದ್ದಂತೆ ಅಯ್ಯರ್ ಕೆರಳಿರುವುದನ್ನು ಅದೇ ವಿಡಿಯೋದಲ್ಲಿ ಕಾಣಬಹುದು. ಹ್ಯಾಂಡ್ ಶೇಕ್ ಮಾಡುವಾಗ ಅಯ್ಯರ್ ಕೋಪಗೊಂಡಂತೆ ಕಂಡು ಬಂದರು. ಅಯ್ಯರ್ ಕೋಪದಲ್ಲಿ ಕೊಹ್ಲಿಯೊಂದಿಗೆ ಮಾತನಾಡಿದರು. ಆದರೆ ಕೊಹ್ಲಿ ನಗುತ್ತಲೇ ಮಾತನಾಡುವ ಮೂಲಕ ಗಮನ ಸೆಳೆದರು.
ಕೊಹ್ಲಿ ಮಾತಿಗೆ ಮನ್ನಣೆ ಕೊಡದ ಅಯ್ಯರ್
ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ರನ್ ಚೇಸ್ನಲ್ಲಿ ಆರ್ಸಿಬಿ ಶ್ರೇಷ್ಠ ಆಟಗಾರ 54 ಎಸೆತಗಳಲ್ಲಿ ಅಜೇಯ 73 ರನ್ ಗಳಿಸಿದರು. ಅವರ ಇನ್ನಿಂಗ್ಸ್ನಲ್ಲಿ 7 ಬೌಂಡರಿ, 1 ಸಿಕ್ಸರ್ ಇತ್ತು. 7 ವಿಕೆಟ್ಗಳು ಬಾಕಿ ಇರುವಾಗಲೇ ಆರ್ಸಿಬಿ 157 ರನ್ಗಳ ಗುರಿ ತಲುಪಿತು. ಆದಾಗ್ಯೂ, ಆರ್ಸಿಬಿ ಗೆಲುವಿನ ನಂತರದ ಪಂದ್ಯದ ನಂತರದ ದೃಶ್ಯಗಳು ಅಭಿಮಾನಿಗಳ ಗಮನ ಸೆಳೆದವು. ಕೊಹ್ಲಿ ಅವರು ಪಿಬಿಕೆಎಸ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ತಮ್ಮ ಸಂಭ್ರಮಾಚರಣೆಯೊಂದಿಗೆ ಗೇಲಿ ಮಾಡಿದರು. ಅಯ್ಯರ್ ಕೋಪಗೊಂಡರೂ ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ ಕೊಹ್ಲಿ ಮಾತಿಗೆ ಮನ್ನಣೆ ಕೊಡಲಿಲ್ಲ. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದಾರೆ.
ನೇಹಾಲ್ ವಧೇರಾ ಔಟಾದಾಗಲೂ ಕೊಹ್ಲಿ ಸಂಭ್ರಮ
ಕೊಹ್ಲಿ ಇದೇ ಗೇಲಿ ಮಾಡುವ ಸಂಭ್ರಮಾಚರಣೆ ಮಾಡಿದ್ದು ಇದೇ ಮೊದಲಲ್ಲ. ಪಿಬಿಕೆಎಸ್ ಇನ್ನಿಂಗ್ಸ್ನಲ್ಲಿ ನೇಹಾಲ್ ವಧೇರಾ ಅವರನ್ನು ರನೌಟ್ ಮಾಡಿದ ಬೆನ್ನಲ್ಲೇ ಕೊಹ್ಲಿ ಅವರು ಯುವ ಆಟಗಾರನಿಗೆ ವಿಚಿತ್ರವಾಗಿ ಸೆಲೆಬ್ರೇಷನ್ ಮಾಡಿದರು. ನಂತರ ರನ್ ಚೇಸಿಂಗ್ನಲ್ಲಿ ಕೊಹ್ಲಿ ಅವರು ಹರ್ಪ್ರೀತ್ ಬ್ರಾರ್ ಅವರೊಂದಿಗೆ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗಿದ್ದರು. ನಿಮ್ಮ ಕೋಚ್ ಕೂಡ ನನಗೆ ಗೊತ್ತು ಎಂದು ಪಿಬಿಕೆಎಸ್ ಬೌಲರ್ ಜೊತೆಗೆ ವಾಗ್ವಾದಕ್ಕೆ ಇಳಿದಿದ್ದರು.
ಅದೇನೇ ಇದ್ದರೂ, ಆರ್ಸಿಬಿ ಪ್ರಮುಖ ಗೆಲುವು ದಾಖಲಿಸಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆದಿದೆ. ಆಡಿರುವ 8 ಪಂದ್ಯಗಳಲ್ಲಿ 10 ಅಂಕ ಗಳಿಸಿರುವ ಆರ್ಸಿಬಿ, ತವರಿನ ಹೊರಗೆ ಆಡಿರುವ ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿದೆ. ಆದರೆ, ತವರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡ ಇನ್ನೂ ಗೆಲುವು ದಾಖಲಿಸಿಲ್ಲ. 157 ರನ್ಗಳ ಗುರಿ ಬೆನ್ನಟ್ಟಿದ ಆರ್ಸಿಬಿ ಪರ ದೇವದತ್ ಪಡಿಕ್ಕಲ್ ಕೇವಲ 35 ಎಸೆತಗಳಲ್ಲಿ 61 ರನ್ ಬಾರಿಸಿ ಗಮನ ಸೆಳೆದರು. ಕೃನಾಲ್ ಪಾಂಡ್ಯ ಹಾಗೂ ಸುಯಾಶ್ ಶರ್ಮಾ ತಲಾ 2 ವಿಕೆಟ್ ಪಡೆದರೆ, 4 ಓವರ್ಗಳಲ್ಲಿ 25 ಹಾಗೂ 26 ರನ್ ನೀಡಿ ಮಿಂಚಿದರು.
ವಿಭಾಗ