ಭಾರತಕ್ಕೆ ರಿಂಕು, ಸೂರ್ಯಕುಮಾರ್ರಂಥ ಸ್ಫೋಟಕ ಬ್ಯಾಟರ್ಗಳ ಅಗತ್ಯವಿದೆ ಎಂದ ಸೆಹ್ವಾಗ್
ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪ್ರದರ್ಶನವು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಸಮಾಧಾನ ತರಿಸಿಲ್ಲ. ಹೀಗಾಗಿ ಸ್ಫೋಟಕ ಆಟಗಾರರು ತಂಡಕ್ಕೆ ಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ಏಷ್ಯನ್ ಗೇಮ್ಸ್ (Asian Games) ಕ್ರಿಕೆಟ್ ಪಂದ್ಯದಲ್ಲಿ ಭಾರತ ಪುರುಷರ ತಂಡವು ಸೆಮಿಫೈನಲ್ಗೆ ಪ್ರವೇಶಿಸಿದೆ. ಕ್ರಿಕೆಟ್ ಶಿಶು ನೇಪಾಳ (India vs Nepal) ವಿರುದ್ಧದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 23 ರನ್ಗಳ ಸಣ್ಣ ಅಂತರದಿಂದ ಗೆದ್ದು ನಿರಾಳವಾಯ್ತು. ಸುಲಭವಾಗಿ ಗೆಲ್ಲಬೇಕಿದ್ದ ಪಂದ್ಯದಲ್ಲಿ ಭಾರತ ತಂಡ ಹೆಣಗಾಡಿ ಗೆದ್ದಿತು.
ಟ್ರೆಂಡಿಂಗ್ ಸುದ್ದಿ
ಹ್ಯಾಂಗ್ಝೌನ್ ಪಿಂಗ್ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್ ಸಣ್ಣ ಮೈದಾನದಲ್ಲಿ, ಭಾರತೀಯರ ಪ್ರದರ್ಶನ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಭಾರತ ನೀಡಿದ 203 ರನ್ಗಳ ಸ್ಪರ್ಧಾತ್ಮಕ ಗುರಿಯನ್ನು ಸ್ಪರ್ಧಾತ್ಮಕ ಮನೋಭಾವದಿಂದಲೇ ಬೆನ್ನಟ್ಟಿದ ನೇಪಾಳ, ಗೆಲುವಿನ ಸನಿಹ ಬಂದಿತ್ತು. ಆದರೆ, ಭಾರತೀಯರ ಅನುಭವದ ಬೌಲಿಂಗ್ ಮುಂದೆ ತುಸು ಮಂಕಾಯಿತು. ಈ ನಡುವೆ ನೇಪಾಳ ಆಟಗಾರರು ದಾಖಲೆಯ 14 ಸಿಕ್ಸರ್ಗಳನ್ನು ಸಿಡಿಸಿದರು. ಇದು ಭಾರತದ ಇನ್ನಿಂಗ್ಸ್ನಲ್ಲಿ ದಾಖಲಾದ ಸಿಕ್ಸರ್ಗಳಿಗಿಂತ ಹೆಚ್ಚು. ಇದರಲ್ಲಿ ಶತಕವೀರ ಯಶಸ್ವಿ ಜೈಸ್ವಾಲ್ ಮತ್ತು ರಿಂಕು ಸಿಂಗ್ ಕೊಡುಗೆಯೇ ಹೆಚ್ಚು ಎನ್ನುವುದು ಗಮನಾರ್ಹ.
ಪಂದ್ಯದಲ್ಲಿ ಗೆದ್ದು ಭಾರತ ತಂಡ ಸೆಮೀಸ್ಗೆ ಲಗ್ಗೆ ಇಟ್ಟಿದೆ. ಆದರೆ, ಭಾರತದ ಪ್ರದರ್ಶನವು ಟೀಮ್ ಇಂಡಿಯಾದ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರಿಗೆ ಸಮಾಧಾನ ತರಿಸಿಲ್ಲ. ಅಲ್ಲದೆ ಭಾರತ ತಂಡದ ಬ್ಯಾಟಿಂಗ್ ಲೈನಪ್ ಕುರಿತಾಗಿ ಕೆಲವೊಂದು ಬದಲಾವಣೆಗಳನ್ನು ಮಾಡುವಂತೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಜೈಸ್ವಾಲ್, ರಿಂಕು ಕೊಡುಗೆಯೇ ಹೆಚ್ಚು
ಭಾರತದ ಬ್ಯಾಟಿಂಗ್ನಲ್ಲಿ ಮಿಂಚಿದ್ದು ಇಬ್ಬರು ಮಾತ್ರ. ಅವರೇ ಜೈಸ್ವಾಲ್ ಮತ್ತು ರಿಂಕು. ಉಳಿದಂತೆ ನಾಯಕ ಗಾಯಕ್ವಾಡ್ ಕೂಡಾ ತೀರಾ ಸಪ್ಪೆ ಪ್ರದರ್ಶನ ನೀಡಿದರು. ಇವರಿಬ್ಬರು ಕೇವಲ 55 ಎಸೆತಗಳಲ್ಲಿ 100 ರನ್ ಜೊತೆಯಾಟವಾಡಿದ್ದರೂ, ಜೈಸ್ವಾಲ್ ಅವರ ಆಕ್ರಮಣಕಾರಿ ಆಟದ ಕೊಡುಗೆಯೇ ಇಲ್ಲಿ ಹೆಚ್ಚು. ಕೇವಲ 33 ಎಸೆತಗಳಲ್ಲಿ ಜೈಸ್ವಾಲ್ 70 ರನ್ ಗಳಿಸಿದರೆ, ನಾಯಕ 23 ಎಸೆತಗಳಲ್ಲಿ 25 ರನ್ ಮಾತ್ರ ಪೇರಿಸಿದರು. ಡೆತ್ ಓವರ್ಗಳಲ್ಲಿ ರಿಂಕು ಸಿಂಗ್ 15 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿ ಸಹಿತ ಭರ್ಜರಿ 37 ರನ್ ಸಿಡಿಸಿದರು.
ಟೀಮ್ ಇಂಡಿಯಾಗೆ ಸೆಹ್ವಾಗ್ ಸಲಹೆ
ಭಾರತದ ಪಂದ್ಯದ ನಂತರ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆ ನೀಡಿರುವ ಸೆಹ್ವಾಗ್, ಟಿ20 ಕ್ರಿಕೆಟ್ನಲ್ಲಿ ಭಾರತ ತಂಡ ಹೊಸ ಮಾನದಂಡ ಅನುಸರಿಸಬೇಕೆಂದು ಪ್ರಸ್ತಾಪಿಸಿದ್ದಾರೆ. ನಿಧಾನಗತಿಯಲ್ಲಿ ಕ್ರೀಸ್ಕಚ್ಚಿ ಆಡುವ ಬ್ಯಾಟರ್ಗಳಿಗಿಂತ, ರಿಂಕು ಮತ್ತು ಸೂರ್ಯಕುಮಾರ್ ಯಾದವ್ ಅವರಂಥ ಸ್ಫೋಟಕ ಬ್ಯಾಟರ್ಗಳು ಭಾರತ ಟಿ20 ತಂಡಕ್ಕೆ ಅಗತ್ಯವಿದೆ ಎಂದು ಅವರು ಒತ್ತಾಯಿಸಿದ್ದಾರೆ.
“ನಮ್ಮಲ್ಲಿ ಒಂದೇ ಗೇರ್ನಲ್ಲಿ(ನಿಧಾನಗತಿ) ಆಡುವ ಹಲವಾರು ಬ್ಯಾಟರ್ಗಳಿದ್ದಾರೆ ಎಂದು ನಾನು ಭಾವಿಸುತ್ತೇನೆ. ವಿಶೇಷವಾಗಿ ಟಿ20 ಕ್ರಿಕೆಟ್ನಲ್ಲಿ ಟಾಪ್ ಗೇರ್ನಲ್ಲಿ ಆಡಬಲ್ಲ ಸ್ಫೋಟಕ ಆಟಗಾರರನ್ನು ಹೆಚ್ಚು ಬೆಳೆಸುವ ಅಗತ್ಯವಿದೆ. ರಿಂಕು ಮತ್ತು ಸ್ಕೈ ಅವರಂತೆ ಇನ್ನೂ ಅನೇಕ ಬ್ಯಾಟರ್ಗಳು ಅಪಾಯಕಾರಿ ತಂಡ ಕಟ್ಟಲು ಅಗತ್ಯವಿದೆ,” ಎಂದು ಸೆಹ್ವಾಗ್ ಪೋಸ್ಟ್ ಮಾಡಿದ್ದಾರೆ.
ಭಾರತ ಕ್ರಿಕೆಟ್ ತಂಡವು ಮುಂದೆ ಅಕ್ಟೋಬರ್ 6ರಂದು ಸೆಮಿಫೈನಲ್ ಪಂದ್ಯದಲ್ಲಿ ಆಡಲಿದೆ.
ಸಂಬಂಧಿತ ಲೇಖನ