ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಯಾವಾಗ? ಈ ಎರಡು ಸ್ಥಾನಗಳಿಗೆ ಕರುಣ್ ನಾಯರ್ ಸೇರಿ 6 ಸ್ಫರ್ಧಿಗಳ ನಡುವೆ ಪೈಪೋಟಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಯಾವಾಗ? ಈ ಎರಡು ಸ್ಥಾನಗಳಿಗೆ ಕರುಣ್ ನಾಯರ್ ಸೇರಿ 6 ಸ್ಫರ್ಧಿಗಳ ನಡುವೆ ಪೈಪೋಟಿ

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಯಾವಾಗ? ಈ ಎರಡು ಸ್ಥಾನಗಳಿಗೆ ಕರುಣ್ ನಾಯರ್ ಸೇರಿ 6 ಸ್ಫರ್ಧಿಗಳ ನಡುವೆ ಪೈಪೋಟಿ

ಐಪಿಎಲ್ ಮುಗಿದ ನಂತರ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇ ಎರಡನೇ ವಾರದಲ್ಲಿ ಭಾರತ ಮತ್ತು ಭಾರತ ಎ ತಂಡಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.

ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಯಾವಾಗ? ಈ ಎರಡು ಸ್ಥಾನಗಳಿಗೆ ಕರುಣ್ ನಾಯರ್ ಸೇರಿ 6 ಸ್ಫರ್ಧಿಗಳ ನಡುವೆ ಪೈಪೋಟಿ
ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ ಯಾವಾಗ? ಈ ಎರಡು ಸ್ಥಾನಗಳಿಗೆ ಕರುಣ್ ನಾಯರ್ ಸೇರಿ 6 ಸ್ಫರ್ಧಿಗಳ ನಡುವೆ ಪೈಪೋಟಿ (AFP)

18ನೇ ಆವೃತ್ತಿಯ ಐಪಿಎಲ್ ಮುಗಿದ ನಂತರ ರೋಹಿತ್ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಜೂನ್ 20ರಿಂದ ನಡೆಯಲಿರುವ ಐದು ಪಂದ್ಯಗಳ ಇಂಗ್ಲೆಂಡ್​ ಸರಣಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂದಿನ ತಿಂಗಳು ಅಂದರೆ ಮೇ 2ನೇ ವಾರದಲ್ಲಿ ಭಾರತ ಮತ್ತು ಭಾರತ ಎ ತಂಡಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಆದರೆ​ ಮಧ್ಯಮ ಕ್ರಮಾಂಕದ ಎರಡು ಸ್ಥಾನಗಳಿಗೆ ಕನಿಷ್ಠ 6 ಸ್ಪರ್ಧಿಗಳ ನಡುವೆ ಪೈಪೋಟಿ ನಡೆಯುತ್ತಿದೆ.

ಬಾರ್ಡರ್-ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಬಿಸಿಸಿಐ 17 ಸದಸ್ಯರ ತಂಡ ಕಳುಹಿಸಿತ್ತು. ಆದರೆ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳಿಗೆ ಅಂತಿಮ ತಂಡದಲ್ಲಿ 15 ಅಥವಾ 16 ಆಟಗಾರರು ಅವಕಾಶ ಪಡೆಯುವ ಸಾಧ್ಯತೆಯಿದೆ. ಈ ಪ್ರವಾಸದ ಸಮಯದಲ್ಲಿ ಭಾರತದ ಎ ತಂಡವೂ ಇಂಗ್ಲೆಂಡ್​ನಲ್ಲಿ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮುಖ್ಯ ತಂಡದ ಅಗತ್ಯಕ್ಕೆ ಅನುಗುಣವಾಗಿ ಎ ತಂಡದಲ್ಲಿರುವ ಆಟಗಾರನನ್ನು ಆಯ್ಕೆ ಮಾಡಬಹುದು.

ನಾಯಕ ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭ್ಮನ್ ಗಿಲ್, ರಿಷಭ್ ಪಂತ್ ಮತ್ತು ವಿರಾಟ್ ಕೊಹ್ಲಿ ಪ್ಲೇಯಿಂಗ್ 11​ನಲ್ಲಿ ಸ್ಥಾನ ಪಡೆಯುವುದು ಖಚಿತ. ನಿತೀಶ್ ಕುಮಾರ್ ರೆಡ್ಡಿ ಆಲ್​​ರೌಂಡರ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪ್ರವಾಸಕ್ಕೆ 15 ಅಥವಾ 16 ಆಟಗಾರರ ತಂಡವನ್ನು ಆಯ್ಕೆ ಮಾಡಿದರೆ, ಮಧ್ಯಮ ಕ್ರಮಾಂಕಕ್ಕೆ ಹೆಚ್ಚುವರಿ ಇಬ್ಬರು ಬ್ಯಾಟರ್​ಗಳನ್ನು ಆಯ್ಕೆ ಮಾಡಬಹುದು. ಆದರೆ ಈ ಸ್ಥಾನಗಳಿಗೆ ಆರು ಆಟಗಾರರ ನಡುವೆ ಪೈಪೋಟಿ ಏರ್ಪಟ್ಟಿದೆ.

ತಂಡವನ್ನು ಪ್ರಕಟಿಸುವುದಕ್ಕೂ ಮುನ್ನ ಈ ಎರಡು ಸ್ಥಾನಗಳಿಗೆ ಆಯ್ಕೆ ಮಾಡಲು ಆರು ಆಟಗಾರರ ಕುರಿತು ಚರ್ಚೆ ನಡೆಸುವ ನಿರೀಕ್ಷೆ ಹೆಚ್ಚಾಗಿದೆ. ಈ ಬಗ್ಗೆ ಪಿಟಿಐ ವರದಿ ಮಾಡಿದೆ. ಅವರಲ್ಲಿ ಒಬ್ಬರು ಹಿರಿಯ ತಂಡದಲ್ಲಿ ಸ್ಥಾನ ಪಡೆಯಬಹುದು, ಉಳಿದವರು ಖಂಡಿತವಾಗಿಯೂ ಇಂಗ್ಲೆಂಡ್ ಲಯನ್ಸ್ (ಎ ತಂಡ) ವಿರುದ್ಧದ ಭಾರತ ಎ ಸರಣಿಯ ಭಾಗವಾಗಲಿದ್ದಾರೆ. ಅಂತಹ ಆಟಗಾರರ ಪಟ್ಟಿ ಇಲ್ಲಿದೆ.

ಸಾಯಿ ಸುದರ್ಶನ್

29 ಪ್ರಥಮ ದರ್ಜೆ ಪಂದ್ಯಗಳಲ್ಲಿ 7 ಶತಕ ಗಳಿಸಿರುವ ಸಾಯಿ ಸುದರ್ಶನ್ ಕೂಡ ರೆಡ್-ಬಾಲ್ ಕ್ರಿಕೆಟ್​ನಲ್ಲಿ ಆಡಬೇಕಾದ ಆಟಗಾರ. ಅವರು ಈಗಾಗಲೇ ಐಪಿಎಲ್​ನಲ್ಲಿ ಗುಜರಾತ್ ಟೈಟಾನ್ಸ್ ಪರ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಆಯ್ಕೆದಾರರು ಈ ಬ್ಯಾಟರ್​​​ ಮೇಲೆ ಕಣ್ಣಿಟ್ಟಿದ್ದು, ತಂಡಕ್ಕೆ ಆಯ್ಕೆ ಮಾಡುವ ಒಲವು ತೋರಿದ್ದಾರೆ. ಏಕೆಂದರೆ ಅವರು ಉತ್ತಮ ತಂತ್ರ ಹೊಂದಿದ್ದಾರೆ. ಅವರು ಗಾಯಗೊಳ್ಳುವ ಮೊದಲು ಆಸ್ಟ್ರೇಲಿಯಾದಲ್ಲಿ ಭಾರತ ಎ ಪರ ಉತ್ತಮ ಪ್ರದರ್ಶನ ನೀಡಿದ್ದರು.

ಆರಂಭಿಕರಾಗಿಯೂ ಅಬ್ಬರಿಸುವ ಸಾಮರ್ಥ್ಯ ಹೊಂದಿರುವ ಸುದರ್ಶನ್, ಮಧ್ಯಮ ಕ್ರಮಾಂಕದಲ್ಲೂ ಬ್ಯಾಟಿಂಗ್​ ಶಕ್ತಿಯಾಗಲಿದ್ದಾರೆ. 23 ವರ್ಷದ ಎಡಗೈ ಆಟಗಾರನು ಇಂಗ್ಲೆಂಡ್​ ಬೌನ್ಸಿ ಟ್ರ್ಯಾಕ್​ನಲ್ಲಿ ತನ್ನ ಪ್ರತಿಭೆಯನ್ನು ಜಗತ್ತಿನ ಮುಂದೆ ತೆರೆದಿಡಲು ಸಜ್ಜಾಗಿದ್ದಾರೆ. ಬೌಲರ್​ಗಳ ವೇಗ ಮತ್ತು ಚೆಂಡಿನ ತಿರುವನ್ನು ಚೆನ್ನಾಗಿ ಅರಿಯುವ ಸಾಯಿ ಸುದರ್ಶನ್, ಯಾವುದೇ ಪಿಚ್​​​ನಲ್ಲಿ ರನ್​ ಗಳಿಸಬಲ್ಲರು.

ಶ್ರೇಯಸ್ ಅಯ್ಯರ್

ಕಳೆದ ವರ್ಷ ರಣಜಿ ಕ್ರಿಕೆಟ್​ಗಿಂತ ಐಪಿಎಲ್​ಗೆ ಆದ್ಯತೆ ನೀಡಿದ್ದಕ್ಕಾಗಿ ಬಿಸಿಸಿಐನಿಂದ ಛೀಮಾರಿಯನ್ನು ಎದುರಿಸಿದ ನಂತರ ಶ್ರೇಯಸ್ ರೆಡ್-ಬಾಲ್ ಸ್ವರೂಪದಲ್ಲಿ ಉತ್ತಮ ತಂತ್ರದೊಂದಿಗೆ ಹೊರಹೊಮ್ಮಿದ ಆಟಗಾರ ಎಂದು ಸಾಬೀತುಪಡಿಸಿದ್ದಾರೆ. ಅವರು ಮೊದಲಿಗಿಂತ ಈಗ ಶಾರ್ಟ್ ಪಿಚ್ ಚೆಂಡುಗಳನ್ನು ಉತ್ತಮವಾಗಿ ಆಡುತ್ತಿದ್ದಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ಅವರ ಅನುಭವವು ಉಪಯುಕ್ತವಾಗಲಿದೆ. 2022ರಲ್ಲಿ ಇಂಗ್ಲೆಂಡ್​​​ನಲ್ಲಿ ಒಂದು ಸೇರಿದಂತೆ 14 ಟೆಸ್ಟ್​​ಗಳನ್ನು ಆಡಿದ ಅವರಿಗೆ ಸವಾಲುಗಳ ಬಗ್ಗೆ ತಿಳಿದಿದೆ. ಕೇಂದ್ರ ಒಪ್ಪಂದದಿಂತ ತೆಗೆದು ಹಾಕಿದ ನಂತರ ಮತ್ತಷ್ಟು ಸುಧಾರಣೆ ಕಂಡಿದ್ದಾರೆ. ಅದಕ್ಕೆ ಸಾಕ್ಷಿ ಇತ್ತೀಚೆಗೆ ನೀಡಿರುವ ಪ್ರದರ್ಶನ.

ರಜತ್ ಪಾಟಿದಾರ್

ಪಾಟೀದಾರ್ ಉತ್ತಮ ತಂತ್ರ ಮತ್ತು ಮೈದಾನದ ಸುತ್ತಲೂ ಸಲೀಸಾಗಿ ಶಾಟ್​ಗಳನ್ನು ಆಡುವ ಉತ್ತಮ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಅಂಕಿಅಂಶಗಳನ್ನು ನೋಡಿದರೆ, ಅವರು ಇಂಗ್ಲೆಂಡ್ ವಿರುದ್ಧ ತವರು ಮೈದಾನದಲ್ಲಿ ಒಂದೇ ಒಂದು ಅರ್ಧಶತಕ ಗಳಿಸದೆ ಟೆಸ್ಟ್ ಕ್ರಿಕೆಟ್​​ನಲ್ಲಿ ತಮ್ಮ ಅವಕಾಶವನ್ನು ಕಳೆದುಕೊಂಡಿದ್ದಾರೆ. ಕಳೆದ ರಣಜಿ ಋತುವಿನಲ್ಲಿ (450 ಕ್ಕಿಂತ ಕಡಿಮೆ) ಯೋಜನೆಯ ಪ್ರಕಾರ ನಡೆಯಲಿಲ್ಲ, ಆದ್ದರಿಂದ ಅಗರ್ಕರ್ ನೇತೃತ್ವದ ಸಮಿತಿಯು ಅವರ ಮೇಲೆ ಮತ್ತೊಮ್ಮೆ ನಂಬಿಕೆ ಇಡುತ್ತದೆಯೇ ಎಂಬುದನ್ನು ಕಾದುನೋಡಬೇಕು.

ಕರುಣ್ ನಾಯರ್

ಟೆಸ್ಟ್ ಕ್ರಿಕೆಟ್​​​ನಲ್ಲಿ ಭಾರತ ತಂಡದ ಪರ ತ್ರಿಶತಕ ಬಾರಿಸಿದ ಎರಡನೇ ಬ್ಯಾಟರ್​ ಆಗಿರುವ ನಾಯರ್ ಮಧ್ಯಮ ಕ್ರಮಾಂಕದಲ್ಲಿ ಲಯ ಕಳೆದುಕೊಂಡಿದ್ದರು. ಆದರೆ ವಿದರ್ಭಕ್ಕೆ ಸೇರಿದ ನಂತರ ಅವರು ಉತ್ತಮ ರೀತಿಯಲ್ಲಿ ಫಾರ್ಮ್​​ಗೆ ಮರಳುವಲ್ಲಿ ಯಶಸ್ವಿಯಾದರು. ಕಳೆದ ಆವೃತ್ತಿಯ ರಣಜಿಯಲ್ಲಿ 850ಕ್ಕೂ ಹೆಚ್ಚು ರನ್ ಗಳಿಸಿ ಗಮನ ಸೆಳೆದಿದ್ದರು. ಹೀಗಾಗಿ ಇಂಗ್ಲೆಂಡ್ ಪ್ರವಾಸವು ಅವರ ವೃತ್ತಿಜೀವನಕ್ಕೆ ಮರು ಜೀವ ನೀಡಬಹುದು. 2018ರಲ್ಲಿ ನೆಟ್ ಸೆಷನ್​​ಗಳಲ್ಲಿ ರವಿ ಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಅವರನ್ನು ಮೆಚ್ಚಿಸಲು ವಿಫಲರಾಗಿದ್ದರು. ಇದೀಗ ಬ್ಯಾಟಿಂಗ್​ನಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ನಾಯರ್​, ಮತ್ತೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ದೇವದತ್ ಪಡಿಕ್ಕಲ್

ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಮೊದಲ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್​​ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ಮತ್ತೊಬ್ಬ ಎಡಗೈ ಬ್ಯಾಟ್ಸ್​​ಮನ್​ ದೇವದತ್ ಪಡಿಕ್ಕಲ್. 2ನೇ ಇನ್ನಿಂಗ್ಸ್​​​ನಲ್ಲಿ ಯಶಸ್ವಿ ಜೈಸ್ವಾಲ್ ಅವರೊಂದಿಗೆ ಪ್ರಭಾವಶಾಲಿ ಜೊತೆಯಾಟವಾಡಿದರು. ಆ ಸಮಯದಲ್ಲಿ ಪಡಿಕ್ಕಲ್ ತಮ್ಮ ಪ್ರತಿಭೆಯ ಇಣುಕುನೋಟಗಳನ್ನು ತೋರಿಸಿದರು. ಐಪಿಎಲ್​ನಲ್ಲಿ ಉತ್ತಮ ಫಾರ್ಮ್​​ ಹೊಂದಿರುವ ಪಡಿಕ್ಕಲ್, ಹಿರಿಯ ತಂಡದಲ್ಲಿ ಸ್ಥಾನ ಪಡೆಯದಿದ್ದರೆ, ಭಾರತ ಎ ತಂಡಕ್ಕೆ ಆಯ್ಕೆಯಾಗಬಹುದು.

ಸರ್ಫರಾಜ್ ಖಾನ್

ಅಕ್ಟೋಬರ್​​ನಲ್ಲಿ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 150 ರನ್ ಗಳಿಸಿದ ನಂತರ ಸರ್ಫರಾಜ್ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಬೇಕಾಗಿತ್ತು, ಆದರೆ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಕೆಲವು ಕಳಪೆ ಶಾಟ್ ಆಯ್ಕೆಯಿಂದಾಗಿ ಅವರು ತಮ್ಮ ಸ್ಥಾನವನ್ನು ಕಳೆದುಕೊಂಡರು. ಆಸ್ಟ್ರೇಲಿಯಾದಲ್ಲಿ ಅವರು ಪ್ರವಾಸಿಯಂತೆ ಇದ್ದರು. ಆದಾಗ್ಯೂ ಆಯ್ಕೆದಾರರು ಈತನ ಆಯ್ಕೆಗೆ ಒಲವು ತೋರಬಹುದು.

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.