ಐಪಿಎಲ್ಗೆ ಆಯ್ಕೆ ಆದ್ಮೇಲೆ ಯೋಗರಾಜ್ ಸಿಂಗ್ರಿಂದ ಕೋಚಿಂಗ್ ನಿಲ್ಲಿಸಿದ್ದೇಕೆ ಅರ್ಜುನ್ ತೆಂಡೂಲ್ಕರ್?
Arjun Tendulkar: ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾದ ಬಳಿಕ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ತನ್ನ ಬಳಿ ಕೋಚಿಂಗ್ ನಿಲ್ಲಿಸಿದ್ದೇಕೆ ಎಂದು ಯೋಗರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ಗೆ ಆಯ್ಕೆಯಾದ ನಂತರ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ತನ್ನ ಬಳಿ ಕೋಚಿಂಗ್ ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದೇಕೆ ಎಂಬುದಕ್ಕೆ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಬಹಿರಂಗಪಡಿಸಿದ್ದಾರೆ. 2022ರಲ್ಲಿ ದೇಶೀಯ ಕ್ರಿಕೆಟ್ಗೂ ಮುನ್ನ ಸಚಿನ್, ಯುವಿ ಮನವಿ ಮೇರೆಗೆ ಅರ್ಜುನ್ ತರಬೇತಿಗೆ ಯೋಗರಾಜ್ರನ್ನು ಸಂಪರ್ಕಿಸಿದ್ದರು. ಚಂಡೀಗಢದ ಡಿಎವಿ ಕಾಲೇಜಿನಲ್ಲಿ ಯೋಗರಾಜ್ ಮಾರ್ಗದರ್ಶನದಲ್ಲಿ ಅರ್ಜುನ್ ತರಬೇತಿ ಪಡೆದಿದ್ದರು.
ಯುವರಾಜ್ ಸಿಂಗ್ ಅವರ ತಂದೆಯ ಜೊತೆಗೆ 12 ದಿನಗಳ ಕಾಲ ತರಬೇತಿ ಪಡೆದಿದ್ದ ಅರ್ಜುನ್, ರಣಜಿ ಟ್ರೋಫಿಯಲ್ಲಿ ಗೋವಾ ಪರ ಶತಕ ಬಾರಿಸಿದ್ದರು. ಅದೇ ವರ್ಷ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮೂಲ ಬೆಲೆ 20 ಲಕ್ಷಕ್ಕೆ ಬಿಕರಿಯಾಗಿದ್ದರು. ಆದರೆ ಐಪಿಎಲ್ನಲ್ಲಿ ಮುಂಬೈ ತಂಡವನ್ನು ಸೇರಿದ ನಂತರ ಅರ್ಜುನ್ ತರಬೇತಿ ಪಡೆಯಲು ಯೋಗರಾಜ್ ಬಳಿಗೆ ಹೋಗಲಿಲ್ಲ. ಆರಂಭಿಕ ಯಶಸ್ಸಿನ ಹೊರತಾಗಿಯೂ ತನ್ನನ್ನು ಅರ್ಜುನ್ ತೆಗೆದು ಹಾಕಿದ್ದೇಕೆ ಎಂದು ಯೋಗರಾಜ್ ಬಹಿರಂಗಪಡಿಸಿದ್ದಾರೆ.
ಯೋಗರಾಜ್ ಸಿಂಗ್ ಹೇಳಿದ್ದೇನು?
‘ಅನ್ಫಿಲ್ಟರ್ಡ್ ಬೈ ಸಮದೀಶ್’ ಯೂಟ್ಯೂಬ್ ಚಾನೆಲ್ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಯೋಗರಾಜ್, 'ಸಚಿನ್ ಅವರ ಮಗ ಅರ್ಜುನ್ ನನ್ನಲ್ಲಿ 12 ದಿನಗಳ ಕಾಲ ತರಬೇತಿ ಪಡೆದ. ಅವರು ಚೊಚ್ಚಲ ರಣಜಿ ಪಂದ್ಯದಲ್ಲೇ ಶತಕ ಗಳಿಸಿದ. ಐಪಿಎಲ್ನಲ್ಲಿ ಮುಂಬೈ ತಂಡಕ್ಕೂ ಆಯ್ಕೆಯಾದ. ಆದರೆ, ಬೇರೆ ಟೀಮ್ ಕೋಚ್ ಜೊತೆಗೆ ಅರ್ಜುನ್ ಹೆಸರು ತಳುಕು ಹಾಕಿಕೊಳ್ಳುತ್ತದೆ ಎನ್ನುವ ಕಾರಣಕ್ಕೆ ನನ್ನಿಂದ ಕೋಚಿಂಗ್ ಪಡೆಯುವುದನ್ನು ನಿಲ್ಲಿಸಿದ. ಈ ಹಠಾತ್ ನಿರ್ಧಾರಕ್ಕೆ ಕಾರಣಗಳು ಸ್ಪಷ್ಟವಾಗಿಲ್ಲ. ಅರ್ಜುನ್ ನನ್ನ ಬಳಿ ಕೋಚಿಂಗ್ ಪಡೆದರೆ ಜನರು ಏನು ಹೇಳುತ್ತಾರೇ ಎಂಬ ಭಯದಿಂದ ಹಿಂದೆ ಸರಿದರು ಎಂದು ಯೋಗರಾಜ್ ಹೇಳಿದ್ದಾರೆ.
ಅರ್ಜುನ್ ಬೌಲಿಂಗ್ ತಂತ್ರವನ್ನು ಸುಧಾರಿಸಲು ಯೋಗರಾಜ್ ಸಹಾಯ ಮಾಡಲಿಲ್ಲವಾದರೂ ಬ್ಯಾಟಿಂಗ್ ಸುಧಾರಣೆಗೆ ಅಗತ್ಯ ನೆರವು ನೀಡಿದ್ದರು. ಅರ್ಜುನ್ 17 ಪ್ರಥಮ ದರ್ಜೆ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 37 ವಿಕೆಟ್ ಪಡೆದಿದ್ದಾರೆ. ಮುಂಬೈ ಇಂಡಿಯನ್ಸ್ ಪರ 5 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 3 ವಿಕೆಟ್ ಕಬಳಿಸಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ ಮುಂಬೈ ಪಾಲಾಗಿರುವ ಅರ್ಜುನ್, ಮೂಲ ಬೆಲೆ 30 ಲಕ್ಷಕ್ಕೆ ಸೇಲ್ ಆದರು. ಸಚಿನ್ ಪುತ್ರ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿಯಲ್ಲಿ ಗೋವಾ ತಂಡವನ್ನು ಪ್ರತಿನಿಧಿಸಿದ್ದರು.
ಯೋಗರಾಜ್ ವಿವಾದಾತ್ಮಕ ಹೇಳಿಕೆ
ಇದೇ ಸಂದರ್ಶನದಲ್ಲಿ ಯೋಗರಾಜ್, ಹಿಂದಿ ಭಾಷೆಯ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದಿ ಭಾಷೆಗೆ ಜೀವವಿಲ್ಲ. ಇದು ಮಹಿಳೆಯರು ಮಾತಾಡುವ ಭಾಷೆ ಎಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಇದು ಪುರುಷರು ಮಾತನಾಡುವ ಭಾಷೆಯಲ್ಲ. ಅವರು ಮಾತನಾಡಿದರೆ ಚೆನ್ನಾಗಿರಲ್ಲ. ಹೀಗಾಗಿ ನಾನು ಪುರುಷರ ಭಾಷೆ ಎನ್ನಲ್ಲ ಎಂದ ಯೋಗರಾಜ್, ಪಂಜಾಬಿ ಭಾಷೆ ಪುರುಷರ ಭಾಷೆ ಎಂದಿದ್ದಾರೆ. ಪಂಜಾಬಿ ಭಾಷೆಯಲ್ಲಿ ಗಂಡಸರು ಮಾತನಾಡುವಾಗ ಅದಕ್ಕೊಂದು ತೂಕ ಇರುತ್ತದೆ ಎಂದು ವಿವಾದ ಸೃಷ್ಟಿಸಿದ್ದಾರೆ.
