ಬಿ ಯುವರ್ ಓನ್ ಶುಗರ್ ಡ್ಯಾಡಿ; ಡಿವೋರ್ಸ್ ಬಳಿಕ ಗಮನ ಸೆಳೆದ ಚಹಲ್ ಟಿಶರ್ಟ್, ಏನಿದರ ಅರ್ಥ?
ಕ್ರಿಕೆಟಿಗ ಯುಜ್ವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. ಆದರೆ, ಕೋರ್ಟ್ಗೆ ಹೋಗುವಾಗ ಚಹಲ್ ಧರಿಸಿದ್ದ ಟಿಶರ್ಟ್ ಎಲ್ಲರ ಗಮನ ಸೆಳೆದಿದೆ. ಅದರಲ್ಲಿದ್ದ ಬರಹದ ಅರ್ಥ ಏನೆಂದು ನೋಡೋಣ.

ಭಾರತ ಕ್ರಿಕೆಟ್ ತಂಡದ ಆಟಗಾರ ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅಧಿಕೃತವಾಗಿ ವಿಚ್ಛೇದನ ಪಡೆದಿದ್ದಾರೆ. 2020ರಲ್ಲಿ ವಿವಾಹವಾದ ಈ ದಂಪತಿ, ಕಳೆದ ಒಂದೂವರೆ ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಈ ವರ್ಷದ ಫೆಬ್ರವರಿ 5ರಂದು, ಅವರು ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಜಂಟಿ ಅರ್ಜಿ ಸಲ್ಲಿಸಿದರು. ಇಂದು (ಮಾರ್ಚ್ 20) ಮುಂಬೈನಲ್ಲಿರುವ ಕೌಟುಂಬಿಕ ನ್ಯಾಯಾಲಯದಲ್ಲಿ ಇಬ್ಬರೂ ತಮ್ಮ ವಿಚ್ಛೇದನದ ಅಂತಿಮ ಪ್ರಕ್ರಿಯೆಗೆ ಹಾಜರಾಗಿದ್ದರು. ಕೋರ್ಟ್ ವಿಚ್ಛೇದನ ಅರ್ಜಿಯನ್ನು ಸ್ವೀಕರಿಸಿ, ಇಬ್ಬರೂ ಬೇರೆ ಬೇರೆ ಆಗಲು ಅನುಮತಿ ನೀಡಿದೆ.
ಸದ್ಯ ಇಬ್ಬರ ಡಿವೋರ್ಸ್ ಅಂತಿಮಗೊಂಡರೂ, ನ್ಯಾಯಾಲಯಕ್ಕೆ ಯೂಜಿ ಹಾಜರಾದ ರೀತಿಯು ನೆಟ್ಟಿಗರ ಗಮನ ಸೆಳೆದಿದೆ. ಕೋರ್ಟ್ಗೆ ಹಾಜರಾಗುವಾಗ ಧನಶ್ರೀ ಸರಳವಾಗಿ ಬಂದರೆ, ಚಹಲ್ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದೆ. ಧನಶ್ರೀ ಬಿಳಿ ಟಿ-ಶರ್ಟ್ ಮತ್ತು ನೀಲಿ ಜೀನ್ಸ್ನೊಂದಿಗೆ ಕ್ಯಾಶುಯಲ್ ಲುಕ್ನಲ್ಲಿ ಬಂದಿದ್ದಾರೆ. ಚಹಲ್ ಡೆನಿಮ್ ಪ್ಯಾಂಟ್ಗೆ ಕಪ್ಪು ಟಿ-ಶರ್ಟ್ ಧರಿಸಿದ್ದರು. ಆ ಟಿ-ಶರ್ಟ್ನಲ್ಲಿ ಇದ್ದ ಬರಹವೇ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಅದರಲ್ಲಿ ಬರೆದಿದ್ದು "Be your own sugar daddy" ಎಂದಾಗಿದೆ.
ಯುಜ್ವೇಂದ್ರ ಚಹಲ್ ತಮ್ಮ ಟಿ-ಶರ್ಟ್ ಮೂಲಕವೇ ಮಾಜಿ ಪತ್ನಿ ಧನಶ್ರೀ ವರ್ಮಾ ಅವರನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿಚ್ಛೇದನದ ನಂತರ ಧನಶ್ರೀ ಅವರಿಗೆ ಚಹಲ್ ಜೀವನಾಂಶ ನೀಡಬೇಕು ಎಂಬ ಬಗ್ಗೆ ವರದಿಗಳಿವೆ. ಹೀಗಾಗಿ ವಿಚ್ಛೇದಿತ ಪತ್ನಿಯನ್ನು ಟೀಕಿಸುವ ಸಲುವಾಗಿ ಈ ಟಿಶರ್ಟ್ ಧರಿಸಿದ್ದರು ಎಂಬುದು ನೆಟ್ಟಿಗರ ಅಭಿಪ್ರಾಯ.
ವರದಿಗಳ ಪ್ರಕಾರ, ನ್ಯಾಯಾಲಯದ ತೀರ್ಪಿನ ಪ್ರಕಾರ ಚಹಲ್ ಅವರಿಂದ ಧನಶ್ರೀ 4.75 ಕೋಟಿ ಜೀವನಾಂಶವನ್ನು ಪಡೆಯಲಿದ್ದಾರೆ. ಆದರೆ, ಚಹಲ್ ಪರ ವಕೀಲರು ಈ ಬಗ್ಗೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಶುಗರ್ ಡ್ಯಾಡಿ ಎಂದರೇನು?
ಶುಗರ್ ಡ್ಯಾಡಿ ಎಂದರೆ ದುಡ್ಡಿರುವ ಶ್ರೀಮಂತ ವ್ಯಕ್ತಿ ಎಂಬ ಅರ್ಥವಿದೆ. ಆದರೆ, ಇದನ್ನು ಹಾಸ್ಯಮಯವಾಗಿ ಟೀಕೆಯ ಸಲುವಾಗಿಯೇ ಹೆಚ್ಚು ಬಳಸಲಾಗುತ್ತದೆ. ತನಗಿಂತ ಕಿರಿಯ ವಯಸ್ಸಿನ ಯುವಕ ಅಥವಾ ಯುವತಿಗಾಗಿ ಹಣ ಖರ್ಚು ಮಾಡುವ ವ್ಯಕ್ತಿ ಎಂಬ ಅರ್ಥ ಶುಗರ್ ಡ್ಯಾಡಿ ಎಂಬ ಪದಕ್ಕಿದೆ. ಇಲ್ಲಿ ಚಹಲ್ ಹಾಕಿರುವ ಟಿಶರ್ಟ್ನಲ್ಲಿ 'ಬಿ ಯುವರ್ ಓನ್ ಶುಗರ್ ಡ್ಯಾಡಿ' ಎಂದು ಬರೆಯಲಾಗಿದೆ, ಅಂದರೆ "ನಿಮಗೆ ನೀವೇ ಶುಗರ್ ಡ್ಯಾಡಿ ಆಗಿರಿ" ಎಂಬ ಅರ್ಥ ನೀಡುತ್ತದೆ. ಇದರರ್ಥ, ನಿಮಗೆ ನೀವೇ ಆರ್ಥಿಕವಾಗಿ ಸ್ವತಂತ್ರರಾಗಿರಿ ಎಂದು ಹೇಳುವಂತಿದೆ. ಅಂದರೆ ಹಣ ಅಥವಾ ಉಡುಗೊರೆಗಳಿಗಾಗಿ ಬೇರೆಯವರನ್ನು ಅವಲಂಬಿಸುವ ಬದಲು ನಿಮ್ಮ ಹಣದ ಅಗತ್ಯವನ್ನು ನೀವೇ ಪೂರೈಸಿಕೊಳ್ಳಿ ಎಂದು ಚಹಲ್ ತಮ್ಮ ಟಿಶರ್ಟ್ ಮೂಲಕ ಹೇಳುತ್ತಿದ್ದಾರೆ ಎಂದು ನೆಟ್ಟಿಗರು ಅರ್ಥ ಮಾಡಿಕೊಂಡಿದ್ದಾರೆ.
ಐಪಿಎಲ್ ಕಾರಣದಿಂದಾಗಿ ಮಾರ್ಚ್ 21ರ ನಂತರ ಕ್ರಿಕೆಟಿಗ ಲಭ್ಯವಿಲ್ಲದ ಕಾರಣ, ದಂಪತಿಯ ವಿಚ್ಛೇದನ ಅರ್ಜಿಯನ್ನು ಮಾರ್ಚ್ 20ರೊಳಗೆ ನಿರ್ಧರಿಸುವಂತೆ ನ್ಯಾಯಮೂರ್ತಿ ಮಾಧವ್ ಜಾಮ್ದಾರ್ ನಗರದ ಬಾಂದ್ರಾ ಕುಟುಂಬ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದ್ದರು. ಅದರಂತೆ ಇಂದು ತೀರ್ಪು ಬಂದಿದೆ. ಐಪಿಎಲ್ನಲ್ಲಿ ಚಹಲ್ ಪಂಜಾಬ್ ಕಿಂಗ್ಸ್ ಪರ ಆಡಲಿದ್ದಾರೆ.
