Health News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಹಾವೇರಿ ಸೇರಿ ಕರ್ನಾಟಕದಲ್ಲಿ7 ಮಂದಿ ಸಾವು, ಮುನ್ನೆಚ್ಚರಿಕೆಗೆ ಸೂಚನೆ
ಕನ್ನಡ ಸುದ್ದಿ  /  ಕರ್ನಾಟಕ  /  Karnataka Assembly-election  /  Health News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಹಾವೇರಿ ಸೇರಿ ಕರ್ನಾಟಕದಲ್ಲಿ7 ಮಂದಿ ಸಾವು, ಮುನ್ನೆಚ್ಚರಿಕೆಗೆ ಸೂಚನೆ

Health News: ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಡೆಂಗ್ಯೂ ಪ್ರಕರಣ, ಹಾವೇರಿ ಸೇರಿ ಕರ್ನಾಟಕದಲ್ಲಿ7 ಮಂದಿ ಸಾವು, ಮುನ್ನೆಚ್ಚರಿಕೆಗೆ ಸೂಚನೆ

Bangalore News ಬೆಂಗಳೂರು ಸೇರಿದಂತೆ ಡೆಂಗ್ಯೂ ಸಾವಿನ ( Dengue Death cases) ಪ್ರಕರಣ ಹೆಚ್ಚುತ್ತಲೇ ಇವೆ. ಹಾವೇರಿ ಜಿಲ್ಲೆಯ ಲ್ಲೂ ಬಾಲಕನೊಬ್ಬ ಬಲಿಯಾಗಿದ್ದಾನೆ

ಬೆಂಗಳೂರು ಸಹಿತ ಹಲವೆಡೆ ಡೆಂಗ್ಯೂ ಪ್ರಕರಣ ಹೆಚ್ಚುತ್ತಿವೆ.
ಬೆಂಗಳೂರು ಸಹಿತ ಹಲವೆಡೆ ಡೆಂಗ್ಯೂ ಪ್ರಕರಣ ಹೆಚ್ಚುತ್ತಿವೆ.

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಕಡೆಗಳಲ್ಲಿ ಡೆಂಗ್ಯೂ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇವೆ. ಮುಂಗಾರು ಆರಂಭದ ನಂತರ ಹಲವು ಭಾಗಗಳಲ್ಲಿ ಡೆಂಗ್ಯೂ ಪ್ರಕರಣಗಳು ಉಲ್ಬಣಗೊಂಡಿವೆ. ಬೆಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 5 ರಂದು ಗಗನ್ ಎಂಬ 11 ವರ್ಷದ ಬಾಲಕ ಡೆಂಗ್ಯೂ ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿದ್ದಾನೆ ಎಂದು ಶಂಕಿಸಲಾಗಿದೆ. ಇದಕ್ಕೂ ಮುನ್ನ ಜೂನ್ 28 ರಂದು ಕಗ್ಗದಾಸಪುರದ ಅಭಿಲಾಷ್ ಎಂಬ 27 ವರ್ಷದ ವ್ಯಕ್ತಿ ಡೆಂಗ್ಯೂನಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು ಏಳು ಡೆಂಗ್ಯೂ ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿಯೇ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯೂ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕರ್ನಾಟಕದಲ್ಲಿಯೇ ಏಳು ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯಸ್ಥ ತುಷಾರ್ ಗಿರಿನಾಥ್ ಮಾತನಾಡಿ, ಬೆಂಗಳೂರಿನ ಬಾಲಕನೊಬ್ಬನ ಸಾವಿನ ಪ್ರಕರಣಲ್ಲಿ, ಸಾವಿಗೆ ಡೆಂಗ್ಯೂ ಕಾರಣ ಎಂದು ಶಂಕಿಸಲಾಗಿದೆ ಎಂಬ ನಮಗೆ ವರದಿ ಬಂದಿದೆ. ಅದರ ನಂತರ, ನಾವು ಲ್ಯಾಬ್ ಪರೀಕ್ಷೆಗಳನ್ನು ಹೆಚ್ಚಿಸಿದ್ಧೇವೆ. ನಂತರ ವರದಿಯನ್ನು ಆರೋಗ್ಯ ಇಲಾಖೆಗೆ ಕಳುಹಿಸುತ್ತೇವೆ. ಸಾವಿಗೆ ಕಾರಣವನ್ನು ಡೆಂಗ್ಯೂ ಎಂದು ಘೋಷಿಸುವ ಮೊದಲು ಅವರು ಪರಿಶೀಲಿಸುತ್ತಾರೆ. ಆದ್ದರಿಂದ ಅಂತಿಮ ವರದಿ ಬರುವವರೆಗೆ ನಾವು ಇದನ್ನು ಡೆಂಗ್ಯೂ ಸಾವು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹಾವೇರಿಯಲ್ಲೂ ಸಾವು

ಈ ನಡುವೆ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಚಳಗೇರಿ ಗ್ರಾಮದಲ್ಲೂ ಬಾಲಕನೊಬ್ಬ ಡೆಂಗ್ಯೂಗೆ ಬಲಿಯಾಗಿದ್ದಾನೆ. ಗ್ರಾಮದ ಪ್ರೇಮಕುಮಾರ್‌ ಮೃತ ಬಾಲಕ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದ ಆತನಿಗೆ ಜ್ವರ ಬಂದಿತ್ತು. ತಪಾಸಣೆ ನಡೆಸಿದಾಗ ಡೆಂಗ್ಯೂ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಗ್ರಾಮಕ್ಕೂ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದು ಗ್ರಾಮದಲ್ಲಿ ಸ್ವಚ್ಚತೆ ಜಾಗೃತಿಯನ್ನು ಮೂಡಿಸುತ್ತಿದೆ.

ಆರೋಗ್ಯ ಸಚಿವರ ಹೇಳಿಕೆ

ಈ ಕುರಿತು ಮಾತನಾಡಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಕರ್ನಾಟಕದಲ್ಲಿ ಡೆಂಗ್ಯೂಗೆ ಸಂಬಂಧಿಸಿದಂತೆ ಪ್ರಕರಣಗಳು ವರದಿಯಾಗುತ್ತಿದ್ದು, ಆರೋಗ್ಯ ಇಲಾಖೆಯೂ ಮುನ್ನಚ್ಛರಿಕೆ ವಹಿಸಿದೆ. ಡೆಂಗ್ಯೂ ತಡೆಗಟ್ಟಲು ಆರೋಗ್ಯ ಇಲಾಖೆ ತಂಡಗಳು ಕೆಲಸ ಮಾಡುತ್ತಿವೆ. ಬೇಕಾದ ಸಿದ್ದತೆಗಳನ್ನೂ ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ಪ್ಲೇಟ್‌ ಲೇಟ್‌ ಕೊರತೆಯಿಲ್ಲ. ಬೆಡ್‌ಗಳ ವ್ಯವಸ್ಥೆಯನ್ನೂ ಮಾಡಿಕೊಳ್ಳಲಾಗಿದೆ. ಶಾಲೆ, ಮನೆಗಳ ಸುತ್ತಮುತ್ತ, ನಿರ್ಮಾಣ ಕಾಮಗಾರಿ ಪ್ರದೇಶದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವಂತೆ ಸೂಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ತುರ್ತು ಸ್ಥಿತಿ ಎಂದು ಘೋಷಿಸಿ

ಡೆಂಗ್ಯೂ ಜ್ವರವನ್ನು ವೈದ್ಯಕೀಯ ತುರ್ತುಸ್ಥಿತಿ ಎಂದು ಘೋಷಿಸುವಂತೆ ಬೆಂಗಳೂರು ಗ್ರಾಮಾಂತರ ಸಂಸದ ಹಾಗೂ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಚಿಕುನ್ ಗುನ್ಯಾ ಮತ್ತು ಝಿಕಾದಂತಹ ರೋಗಗಳು ಹರಡುವುದನ್ನು ತಡೆಯಲು ಸೊಳ್ಳೆ ಸಂತಾನೋತ್ಪತ್ತಿಯನ್ನು ನಿಯಂತ್ರಿಸುವ ನಿರ್ಣಾಯಕ ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಪ್ರಸ್ತುತ ಸಾಂಕ್ರಾಮಿಕ ರೋಗವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಆರೋಗ್ಯ ಅಧಿಕಾರಿಗಳು, ನಗರಾಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಸದಸ್ಯರು ಮತ್ತು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರತಿನಿಧಿಗಳನ್ನು ಒಳಗೊಂಡ ಕಾರ್ಯಪಡೆಯನ್ನು ರಚಿಸುವಂತೆ ಡಾ.ಮಂಜುನಾಥ್ ಸಲಹೆ ನೀಡಿದ್ದಾರೆ

ರಾಜ್ಯದಲ್ಲಿ ಪ್ರಕರಣಗಳು 7,000 ಕ್ಕೆ ಏರುತ್ತಿವೆ, ಸುಮಾರು ಆರರಿಂದ ಏಳು ಸಾವುಗಳು ಸಂಭವಿಸಿವೆ. ಹಾಸನ, ಚಿಕ್ಕಮಗಳೂರು, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಇತರ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಕರಣಗಳು ತೀವ್ರವಾಗಿ ಏರಿಕೆಯಾಗುತ್ತಿವೆ. ಸೋಂಕನ್ನು ನಿಯಂತ್ರಿಸಲು ಸರ್ಕಾರವು ರಾಜ್ಯ ವೈದ್ಯಕೀಯ ತುರ್ತುಸ್ಥಿತಿಯನ್ನು ಘೋಷಿಸಬೇಕಾಗಿದೆ" ಎಂದು ಅವರು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಮಳೆಯೊಂದಿಗೆ ಅಪೂರ್ಣ ರಸ್ತೆ ಕಾಮಗಾರಿ ಮತ್ತು ಫ್ಲೈಓವರ್ಗಳು ಮತ್ತು ಅಂಡರ್‌ ಪಾಸ್‌ ಗಳ ನಿರ್ಮಾಣವು ಸೊಳ್ಳೆಗಳ ಸಂತಾನೋತ್ಪತ್ತಿ ಸ್ಥಳವನ್ನು ಹೆಚ್ಚಿಸುತ್ತಿದೆ. ತಾತ್ತ್ವಿಕವಾಗಿ, ನಾಗರಿಕ ಸಂಸ್ಥೆಗಳು ಬೇಸಿಗೆಯಲ್ಲಿ ಮಳೆಗಾಲಕ್ಕೆ ಸಂಬಂಧಿಸಿದ ಕೆಲಸಗಳನ್ನು ಪೂರ್ಣಗೊಳಿಸಬೇಕಾಗಿತ್ತು, ಆದರೆ ಅವು ಇನ್ನೂ ಬಾಕಿ ಉಳಿದಿವೆ.. ಇತ್ತೀಚಿನ ದಿನಗಳಲ್ಲಿ ಅನೇಕ ಮಕ್ಕಳು ಡೆಂಗ್ಯೂಗೆ ಬಲಿಯಾಗುತ್ತಿದ್ದಾರೆ. ಮಕ್ಕಳನ್ನು ಸೋಂಕಿನಿಂದ ರಕ್ಷಿಸುವ ಮಾರ್ಗಗಳನ್ನು ಗುರುತಿಸಲು ಶಾಲಾ ಆಡಳಿತ ಮಂಡಳಿ ಸಭೆ ನಡೆಸಬೇಕು. ಸೋಂಕುಗಳು ಜಟಿಲವಾದರೆ ಡೆಂಗ್ಯೂಗೆ ಯಾವುದೇ ಚಿಕಿತ್ಸೆ ಇಲ್ಲ. ಹೆಚ್ಚಿನ ಸಂದರ್ಭಗಳಲ್ಲಿ ಇದು ಸಾವಿಗೆ ಕಾರಣವಾಗುತ್ತದೆ" ಎನ್ನುವುದು ಡಾ.ಮಂಜುನಾಥ್‌ ವಿವರಣೆ.

Whats_app_banner