ಕನ್ನಡ ಸುದ್ದಿ  /  Entertainment  /  Actor Anirudh Jatkar Has Announced A New Serial Title Suryavamsha

Aniruddha Jatkar Suryavamsha: ಗೃಹ ಪ್ರವೇಶದ ಬಳಿಕ ಅಭಿಮಾನಿಗಳಿಗೆ ಸೂಪರ್‌ ಸರ್ಪ್ರೈಸ್‌ ನೀಡಿದ ಅನಿರುದ್ಧ ಜತ್ಕರ್

ಜೊತೆ ಜೊತೆಯಲಿ ಧಾರಾವಾಹಿ ಬಳಿಕ ಕೆಲ ತಿಂಗಳು ಗ್ಯಾಪ್‌ ತೆಗೆದುಕೊಂಡ ಅನಿರುದ್ಧ ಇದೀಗ, ಹೊಸ ಧಾರಾವಾಹಿಯೊಂದಿಗೆ ಆಗಮಿಸುತ್ತಿದ್ದಾರೆ.

ಗೃಹ ಪ್ರವೇಶದ ಬಳಿಕ ಅಭಿಮಾನಿಗಳಿಗೆ ಸೂಪರ್‌ ಸರ್ಪ್ರೈಸ್‌ ನೀಡಿದ ಅನಿರುದ್ಧ ಜತ್ಕರ್
ಗೃಹ ಪ್ರವೇಶದ ಬಳಿಕ ಅಭಿಮಾನಿಗಳಿಗೆ ಸೂಪರ್‌ ಸರ್ಪ್ರೈಸ್‌ ನೀಡಿದ ಅನಿರುದ್ಧ ಜತ್ಕರ್

Aniruddha Jatkar Suryavamsha: ನಟ ಅನಿರುದ್ಧ ಜತ್ಕರ್‌ ಸಿನಿಮಾಗಿಂತ ಹೆಚ್ಚು ಜನಪ್ರಿಯರಾಗಿದ್ದು ಕಿರುತೆರೆಯಲ್ಲಿ. ಸಿನಿಮಾಗಿಂತ ಹೆಚ್ಚು ನೇಮು ಫೇಮು ತಂದುಕೊಟ್ಟಿದ್ದೆ ಧಾರಾವಾಹಿ ಕ್ಷೇತ್ರ. ‘ಜೊತೆ ಜೊತೆಯಲಿ’ ಧಾರಾವಾಹಿ ಅವರನ್ನು ಕಿರುತೆರೆಯಲ್ಲಿ ಸ್ಟಾರ್‌ ಪಟ್ಟ ಕೊಟ್ಟಿತು. ಆರಂಭದಿಂದ ಈಗಿನವರೆಗೂ ಈ ಸೀರಿಯಲ್‌ ಕನ್ನಡಿಗರ ನೆಚ್ಚಿನ ಕಿರುತೆರೆ ಕಾರ್ಯಕ್ರಮಗಳಲ್ಲೊಂದು.

ಜೀ ಕನ್ನಡದಲ್ಲಿ ಪ್ರಸಾರವಾಗುವ ‘ಜೊತೆ ಜೊತೆಯಲಿ’ ಧಾರಾವಾಹಿಯನ್ನು ಆರೂರು ಜಗದೀಶ್‌ ನಿರ್ದೇಶನ ಮಾಡಿದರೆ, ಮೇಘಾ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಆದರೆ, ಇತ್ತೀಚಿನ ಕೆಲ ಬದಲಾವಣೆಯಿಂದಾಗಿ ‘ಜೊತೆ ಜೊತೆಯಲಿ’ ಧಾರಾವಾಹಿಯಿಂದಲೇ ಮುಖ್ಯಭೂಮಿಕೆ ನಿಭಾಯಿಸುತ್ತಿದ್ದ ಅನಿರುದ್ಧ ಹಿಂದೆ ಸರಿಯಬೇಕಾಯಿತು. ಅದಾದ ಮೇಲೆ ಅವರಿಂದ ಬೇರೆ ಪ್ರಾಜೆಕ್ಟ್‌ ಅಪ್‌ಡೇಟ್‌ ಸಿಕ್ಕಿರಲಿಲ್ಲ. ಇದೀಗ ಹೊಸ ವಿಚಾರವೊಂದನ್ನು ಬಹಿರಂಗಪಡಿಸಿದ್ದಾರೆ.

ಇತ್ತೀಚೆಗಷ್ಟೇ ಜಯನಗರದಲ್ಲಿ ಅದ್ದೂರಿಯಾಗಿ ಮನೆ ನಿರ್ಮಾಣ ಮಾಡಿರುವ ಅನಿರುದ್ಧ, ಆ ಮನೆಗೆ ‘ವಲ್ಮೀಕ’ ಎಂದು ಹೆಸರಿಟ್ಟಿದ್ದಾರೆ. ಸ್ಯಾಂಡಲ್‌ವುಡ್‌ ಸೇರಿ ಕಿರುತೆರೆಯ ಸಾಕಷ್ಟು ಮಂದಿ ನೂತನ ಮನೆಗೆ ಆಗಮಿಸಿ, ಅನಿರುದ್ಧ ಅವರಿಗೆ ಶುಭಾಶಯ ತಿಳಿಸಿದ್ದಾರೆ. ಕಿಚ್ಚ ಸುದೀಪ್‌, ಯಶ್‌, ಜಗ್ಗೇಶ್‌ ಸಹ ಆಗಮಿಸಿದ್ದರು. ಇದೀಗ ನೂತನ ಮನೆಯ ಗೃಹಪ್ರವೇಶಿಸಿದ ಬಳಿಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸೂರ್ಯವಂಶದಲ್ಲಿ ಅನಿರುದ್ಧ..

‘ಜೊತೆ ಜೊತೆಯಲಿ’ ಧಾರಾವಾಹಿ ಬಳಿಕ ಕೆಲ ತಿಂಗಳು ಗ್ಯಾಪ್‌ ತೆಗೆದುಕೊಂಡ ಅನಿರುದ್ಧ ಇದೀಗ, ಹೊಸ ಧಾರಾವಾಹಿಯೊಂದಿಗೆ ಆಗಮಿಸುತ್ತಿದ್ದಾರೆ. ಆ ಧಾರವಾಹಿಯ ಹೆಸರೂ ಕೂಡ ರಿವೀಲ್‌ ಆಗಿದ್ದು, ಅದರ ಲುಕ್‌ ಬಿಡುಗಡೆ ಮಾಡಿದ್ದಾರೆ ಅನಿರುದ್ಧ. ವಿಶೇಷ ಏನೆಂದರೆ, ಎಸ್‌. ನಾರಾಯಣ್‌ ಅವರ ನಿರ್ದೇಶನದ ‘ಸೂರ್ಯವಂಶ’ ಧಾರಾವಾಹಿ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ. ಈ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ಅನಿರುದ್ಧ ಕಾಣಿಸಿಕೊಳ್ಳಲಿದ್ದಾರೆ.

ಈ ಬಗ್ಗೆ ಹೇಳಿಕೊಳ್ಳುವ ಅನಿರುದ್ಧ, "ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ. ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ" ಎಂದು ಹೇಳಿಕೊಂಡಿದ್ದಾರೆ.

1999ರಲ್ಲಿ ಬಂದಿತ್ತು ಸಾಹಸಸಿಂಹನ ಸೂರ್ಯವಂಶ

1999ರಲ್ಲಿ ಎಸ್‌ ನಾರಾಯಣ್‌ ಅವರೇ ನಿರ್ದೇಶನ ಮಾಡಿದ್ದ ಸೂರ್ಯವಂಶ ತೆರೆಗೆ ಬಂದಿತ್ತು. ಸಾಹಸ ಸಿಂಹ ವಿಷ್ಣುವರ್ಧನ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಈ ಸಿನಿಮಾ ಕನ್ನಡದ ಮಾಸ್ಟರ್‌ ಪೀಸ್‌ ಸಿನಿಮಾಗಳಲ್ಲೊಂದು. ಇದೀಗ ಅದೇ ಸಿನಿಮಾದ ಶೀರ್ಷಿಕೆಯಲ್ಲಿ ಧಾರಾವಾಹಿ ಸಿದ್ಧವಾಗುತ್ತಿದೆ. ಅದೇ ಎಸ್‌. ನಾರಾಯಣ್‌ ಸೀರಿಯಲ್‌ ನಿರ್ದೇಶನ ಮಾಡಿದರೆ, ವಿಷ್ಣುವರ್ಧನ್‌ ಅವರ ಅಳಿಯ ಅನಿರುದ್ಧ ಪ್ರಧಾನ ಪಾತ್ರದಲ್ಲಿದ್ದಾರೆ.

IPL_Entry_Point