ʻಸ್ನೇಹದ ಕಡಲಲ್ಲಿʼ ಧಾರಾವಾಹಿ ಮೂಲಕ ಕನ್ನಡ ಕಿರುತೆರೆ ಪ್ರವೇಶಿಸಿದ ಬಹುಭಾಷಾ ನಟ ಸುಮನ್ ತಲ್ವಾರ್
ದಕ್ಷಿಣ ಭಾರತದ ಖ್ಯಾತ ನಟ ಸುಮನ್ ತಲ್ವಾರ್, ಒಂದೇ ಭಾಷೆಗೆ ಸೀಮಿತವಾಗದ ಕಲಾವಿದ. ಈಗಾಗಲೇ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಸುಮನ್, ಕನ್ನಡ, ತೆಲುಗು, ತಮಿಳು ಮಾತ್ರವಲ್ಲದೆ ಒಟ್ಟು 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ʻಸ್ನೇಹದ ಕಡಲಲ್ಲಿʼ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಆಗಮಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟರಲ್ಲಿ ಸುಮನ್ ತಲ್ವಾರ್ ಸಹ ಒಬ್ಬರು. ಹಲವು ಭಾಷೆಗಳಲ್ಲಿ ಗುರುತಿಸಿಕೊಂಡಿರುವ ಸುಮನ್, ಈಗಾಗಲೇ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ, ತೆಲುಗು, ತಮಿಳು ಮಾತ್ರವಲ್ಲದೆ ಒಟ್ಟು 11 ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೆಳೆದಿದ್ದು ತಮಿಳುನಾಡಿನಲ್ಲಾದರೂ, ಇವರದ್ದು ಮೂಲತಃ ಕರ್ನಾಟಕದ ಮಂಗಳೂರು. ಜಾಸ್ತಿ ಬೇರೆ ಭಾಷೆಗಳಲ್ಲೇ ಕಾಣಿಸಿಕೊಂಡಿದ್ದರೂ ತುಳು ಹಾಗೂ ಕನ್ನಡದ ಮೇಲೆ ಹೆಚ್ಚು ಗೌರವ. ಇದೀಗ ಇದೇ ಮೊದಲ ಬಾರಿಗೆ ಸುಮನ್ ಕಿರುತೆರೆಗೆ ಪ್ರವೇಶ ಮಾಡುತ್ತಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಶುರುವಾಗುತ್ತಿರುವ ʻಸ್ನೇಹದ ಕಡಲಲ್ಲಿʼ ಮೂಲಕ ಕನ್ನಡ ಕಿರುತೆರೆಗೆ ಆಗಮಿಸಿದ್ದಾರೆ. ಅವರಿಗಿಲ್ಲಿ 'ಮಾಧವ ಅರಸ್' ಎಂಬ ಮುಖ್ಯ ಪಾತ್ರ ಮಾಡುತ್ತಿದ್ದಾರೆ.
ಏನಿದು ಸ್ನೇಹದ ಕಡಲಲ್ಲಿ ಕಥೆ..
ಮಧ್ಯಮ ಕುಟುಂಬದಲ್ಲಿ ಬೆಳೆದಿರೋ ಸಿಂಪಲ್ ಹುಡುಗಿ ಕಥಾ ನಾಯಕಿ ಪಲ್ಲವಿ, ಹೆಚ್ಚು ಓದಿರೋ ಈಕೆ ಸೌಮ್ಯ ಗುಣದವಳು. ಮನೆಯವರ ಇಚ್ಛೆಯಂತೆ ಮದುವೆಯಾಗೋ ಪಲ್ಲವಿಗೆ ಮೊದಲ ರಾತ್ರಿಯಲ್ಲಿ ಗಂಡನ ನಿಜ ಮುಖದ ಅರಿವಾಗುತ್ತೆ. ಅದೇ ಕ್ಷಣದಲ್ಲಿ ಗಂಡನ ಮನೆ ಬಿಟ್ಟು ಡಿವೋರ್ಸ್ ಕೊಡೋಕೆ ಮುಂದಾಗುತ್ತಾಳೆ. ಇಂತಹ ಸಮಯದಲ್ಲಿ ಸ್ನೇಹಿತನಾಗಿ ಸಾಥ್ ಕೊಡೋದು ಶಿವರಾಜ್ ಅರಸ್.ಕಥಾನಾಯಕ ಶಿವರಾಜ್ ಅರಸ್ ಈ ಮದುವೆಗೆ ಇವೆಂಟ್ ಮ್ಯಾನೇಜ್ಮೆಂಟ್ನ ಜವಾಬ್ದಾರಿ ಹೊತ್ತಿರುತ್ತಾನೆ. ಈತ ಖ್ಯಾತ ಉದ್ಯಮಿ ಮಾಧವ ಅರಸ್ ಅವರ ಮಗ.
ಕಾರಣಾಂತರಗಳಿಂದಾಗಿ ಅಪ್ಪ- ಮಗನ ಬಾಂಧವ್ಯ ಸರಿ ಇರಲ್ಲ. ಜೊತೆಗೆ ಅಣ್ಣನನ್ನು ದ್ವೇಷಿಸೋ ತಂಗಿಯರು. ಹೀಗೆ ಸಂಬಂಧಗಳ ಸುಳಿಯಲ್ಲಿ ಸಿಲುಕಿರುವ ಶಿವರಾಜ್ಗೆ ಸಾಥ್ ಕೊಡೋ ಪಲ್ಲವಿಯ ಸ್ನೇಹ ಸೇತುವೆಯಾಗುತ್ತಾ? ಗಂಡನನ್ನು ಬಿಟ್ಟು ಬಂದಿರೋ ಪಲ್ಲವಿಗೆ ಆಸರೆಯಾಗುವ ಶಿವರಾಜ್ನ ಈ ಸ್ನೇಹವನ್ನು ಸಮಾಜ ಒಪ್ಪುತ್ತಾ? ಸ್ನೇಹದ ಕಡಲಲ್ಲಿರೋ ಇವರಿಬ್ಬರ ಜೀವನದ ದಿಕ್ಕು ಮುಂದೆ ಯಾವ ರೀತಿ ತಿರುವು ಪಡೆಯಲಿದೆ? ಎಂಬುದೇ ಧಾರಾವಾಹಿಯ ಮುಖ್ಯ ಕಥೆ.
ಸುಮನ್ ತಲ್ವಾರ್ ಪಾತ್ರ ಎಂಥದ್ದು?
ಸೂಪರ್ ಸ್ಟಾರ್ ರಜನಿಕಾಂತ್, ವಿಜಯ್, ಮೋಹನ್ ಲಾಲ್, ಅಕ್ಷಯ್ ಕುಮಾರ್, ದೇವರಾಜ್, ಪುನೀತ್ ರಾಜ್ ಕುಮಾರ್, ದರ್ಶನ್, ಶ್ರೀ ಮುರಳಿ, ಮಹೇಶ್ ಬಾಬು, ಅಲ್ಲೂ ಅರ್ಜುನ್, ಚಿರಂಜೀವಿ ಸೇರಿದಂತೆ ದಕ್ಷಿಣ ಭಾರತದ ಹೆಸರಾಂತ ನಟರ ಜೊತೆ ಅಭಿನಯಿಸಿದ ಹೆಗ್ಗಳಿಕೆ ನಟ ಸುಮನ್ ತಲ್ವಾರ್ ಅವರದ್ದು. ಇದೀಗ ಇದೇ ನಟ ಕನ್ನಡ ಕಿರುತೆರೆಗೆ ಆಗಮಿಸುತ್ತಿದ್ದಾರೆ. ಸ್ನೇಹದ ಕಡಲಲ್ಲಿ ಧಾರಾವಾಹಿಯಲ್ಲಿ ಮಾಧವ ಅರಸ್ ಎಂಬ ಉದ್ಯಮಿಯ ಪಾತ್ರದಲ್ಲಿ ಸುಮನ್ ಕಾಣಿಸಿಕೊಳ್ಳುತ್ತಿದ್ದಾರೆ.
ತಾರಾಬಳಗದಲ್ಲಿ ಯಾರೆಲ್ಲ ಇದ್ದಾರೆ?
ಅತ್ಯದ್ಭುತ ತಾರಾಬಳಗವನ್ನು ಹೊಂದಿರೋ ಈ ಧಾರಾವಾಹಿಯಲ್ಲಿ ನಾಯಕನಾಗಿ ಚಂದು ಗೌಡ ಹಾಗು ನಾಯಕಿಯಾಗಿ ಕಾವ್ಯ ಮಹದೇವ್ ನಟಿಸುತ್ತಿದ್ದಾರೆ. ಜೊತೆಗೆ ಅನನ್ಯ ಕಾಸರವಳ್ಳಿ, ಹೇಮಾ ಬೆಳ್ಳೂರು, ಸಮೀಪ್ ಆಚಾರ್ಯ, ಅಭಿಜ್ಞಾ ಭಟ್, ನಯನ ಸೇರಿದಂತೆ ಇನ್ನು ಅನೇಕರು ಅಭಿನಯಿಸುತ್ತಿದ್ದಾರೆ. 'ಪಿಂಗಾರ ಪ್ರೊಡಕ್ಷನ್ಸ್' ಎಂಬ ಸಂಸ್ಥೆಯಡಿ ನಿರ್ದೇಶಕ ಪ್ರೀತಮ್ ಶೆಟ್ಟಿ ಈ ಧಾರಾವಾಹಿಯನ್ನು ನಿರ್ಮಿಸಿ, ನಿರ್ದೇಶಿಸುತ್ತಿದ್ದಾರೆ.
ಯಾವಾಗಿನಿಂದ ಪ್ರಸಾರ?
ಎರಡು ನೊಂದ ಹೃದಯಗಳ ಸುಂದರ ಸ್ನೇಹದ ಹೊಸ ಧಾರಾವಾಹಿ "ಸ್ನೇಹದ ಕಡಲಲ್ಲಿ" ಇದೇ ಸೋಮವಾರದಿಂದ ಪ್ರತಿದಿನ ರಾತ್ರಿ 8.30ಕ್ಕೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.