ಅಮ್ಮನ ಸಾವು, ಕೋಮಾದಲ್ಲಿ ಗಂಡ; ಕ್ಯಾಬರೆ ಡ್ಯಾನ್ಸರ್ ಆಗಿ ಬದಲಾದ ನಟಿ ಅನುರಾಧ ಬದುಕಿನ ಕಥೆ
ಕನ್ನಡ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವ ನಟಿ ಅನುರಾಧ (ಸುಲೋಚನಾ ದೇವಿ) ಬದುಕಿನ ಕಥೆಯನ್ನು ರಘುರಾಮ್ ಯೂಟ್ಯೂಬ್ ಚಾನೆಲ್ ಇತ್ತೀಚೆಗೆ ಹಲವು ಸಂಚಿಕೆಗಳಲ್ಲಿ ಪ್ರಸಾರ ಮಾಡಿದೆ. ಅಪಘಾತದ ಬಳಿಕ ಕೋಮಾಕ್ಕೆ ಜಾರಿದ್ದ ಗಂಡನನ್ನು ಬದುಕಿಸಲು ನಡೆಸಿದ ಈಕೆಯ ಹೋರಾಟವಂತೂ ಗಮನ ಸೆಳೆಯುತ್ತದೆ.

ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಅನುರಾಧ ಅವರ ಮೂಲ ಹೆಸರು ಸುಲೋಚನಾದೇವಿ. ನಿರ್ದೇಶಕ ಕೆ.ಜಿ. ಜಾರ್ಜ್ಅವರು ಈಕೆಯ 13 ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಕೆ.ಜಿ. ಜಾರ್ಜ್ ಅವರು ಈಕೆಗೆ ಅನುರಾಧಾ ಎಂಬ ಹೆಸರು ನೀಡಿದ್ದರು. ಎತ್ತರವಾಗಿದ್ದ ಈಕೆ ಆರಂಭದಲ್ಲಿ ಸಿನಿಮಾ ಹೀರೋಯಿನ್ ಆಗಿದ್ದರು. ಬಳಿಕ ಐಟಂ ಡ್ಯಾನ್ಸರ್ ಆಗಿ ಹೊರಹೊಮ್ಮಿದ್ದರು. ಈಕೆ ಮಾರ್ಷಿಯಲ್ ಆರ್ಟ್ ತರಬೇತಿ ಪಡೆದಿದ್ದರು. ಯಾವುದೇ ಡ್ಯೂಪ್ ಇಲ್ಲದೆ ಸಾಹಸ ದೃಶ್ಯಗಳಲ್ಲಿ ನಟಿಸುತ್ತಿದ್ದರು. ಈಕೆಗೆ ಬೈಕ್ ಬಿಡಲು ಗೊತ್ತಿತ್ತು. ಜಾವಾ, ರಾಯಲ್ ಎನ್ಫೀಲ್ಡ್ ಬೈಕ್ ರೈಡ್ ಮಾಡುತ್ತಿದ್ದರು. ಸನ್ ಟಿವಿಯ ತಂಗಮ್ ಸೇರಿಂತೆ ಕೆಲವೊಂದು ಸೀರಿಯಲ್ಗಳಲ್ಲಿಯೂ ನಟಿಸಿದ್ದಾರೆ.
1987ರಲ್ಲಿ ಈಕೆ ಸತೀಶ್ ಕುಮಾರ್ ಎಂಬ ನೃತ್ಯ ನಿರ್ದೇಶಕರನ್ನು ಮದುವೆಯಾದರು. ಇವರಿಗೆ ಅಭಿನಯಶ್ರೀ ಮತ್ತು ಕಾಲಿಚರಣ್ ಎಂಬ ಇಬ್ಬರು ಮಕ್ಕಳಿದ್ದಾರೆ. 1996ರಲ್ಲಿ ಸತೀಶ್ ಕುಮಾರ್ಗೆ ಬೈಕ್ ಅಪಘಾತವಾಯಿತು. ಈ ನಡುವೆ ತನ್ನ ಗಂಡನನ್ನು ಮಗುವಿನಂತೆ ನೋಡಿಕೊಂಡರು. ಹದಿಮೂರು ವರ್ಷ ಕೋಮಾದಲ್ಲಿದ್ದ ತನ್ನ ಗಂಡನನ್ನು ಮಗುವಿನಂತೆ ನೋಡಿಕೊಂಡರು. ನನ್ನ ಗಂಡ ಮತ್ತೆ ಮೊದಲಿನಂತೆ ಆಗುತ್ತಾನೆ ಎಂಬ ಭರವಸೆಯಿಂದ ಕಾದರು. ಆದರೆ, 2007ರಲ್ಲಿ ಸತೀಶ್ ಕುಮಾರ್ ಹೃದಯಾಘಾತದಿಂದ ಮೃತಪಟ್ಟರು.
"ಇವರು ಹುಟ್ಟಿದ್ದು ಚೆನ್ನೈ. ತಾಯಿ ಆಂಧ್ರದವರು. ನಾನು ಹದಿಮೂರನೇ ವರ್ಷಕ್ಕೆ ಸಿನಿಮಾ ರಂಗಕ್ಕೆ ಬಂದಿದ್ದೆ. ಆಗ ನನ್ನನ್ನು ನೋಡಿರುವ ನಿರ್ದೇಶಕರು ಮುಂದಿನ ಸಿನಿಮಾಕ್ಕೆ ಹದಿನಾಲ್ಕು ವರ್ಷದ ನಟಿ ಬೇಕು ಅಂದ್ರು. ಅಮ್ಮ ಆಗ ಒಪ್ಪಲಿಲ್ಲ. ನಾನು ಚಿಕ್ಕವಳು, ಹದಿಮೂರು ವರ್ಷ ಇದ್ದೆ. ಆಗ ನನ್ನ ಬಣ್ಣವೂ ಕಪ್ಪು ಇತ್ತು. ನಾನು ತುಂಬಾ ಉತ್ಸಾಹದಿಂದ ಒಪ್ಪಿದೆ. ಆಗ ಒಂದು ಸಿನಿಮಾಕ್ಕೆ ಎರಡು ಸಾವಿರ ರೂಪಾಯಿ ವೇತನ, ಐನೂರು ರೂಪಾಯಿ ಅಡ್ವಾನ್ಸ್. ನನ್ನ ಸ್ಕ್ರೀನ್ ನೇಮ್ ಅನುರಾಧ. ಸುಲೋಚನಾ ಅನುರಾಧ ಅಂತ ಬದಲಾಯಿಸಿದ್ದು ನಿರ್ದೇಶಕ ಜಾರ್ಜ್ ಅವರು. ಆಗ ಸುಲಕ್ಷಣಾ ಎಂಬ ನಟಿಯೂ ಇದ್ದರು. ನಮ್ಮಿಬ್ಬರ ಹೆಸರು ಒಂದೇ ರೀತಿ ಇತ್ತು. ಹೀಗಾಗಿ, ನನ್ನ ಹೆಸರನ್ನು ಅನುರಾಧ ಎಂದು ಬದಲಾಯಿಸಿದರು" ಎಂದು ತನ್ನ ಹೆಸರು ಬದಲಾದ ಕಥೆಯನ್ನು ಯೂಟ್ಯೂಬ್ ಚಾನೆಲ್ ಜತೆ ಹಂಚಿಕೊಂಡಿದ್ದಾರೆ.
ಈ ಚಾನೆಲ್ನಲ್ಲಿ ತನ್ನ ಮದುವೆ ಕುರಿತೂ ಮಾತನಾಡಿದ್ದಾರೆ. "ಆ ಸಮಯದಲ್ಲಿ ಡ್ಯಾನ್ಸ್ ಮಾಸ್ಟರ್ ಸತೀಶ್ಕುಮಾರ್ ಇದ್ದರು. ಅವರು ಚೆನ್ನಾಗಿ ಓದಿಕೊಂಡಿದ್ದರು. ಇಂಗ್ಲಿಷ್ ಮಾತನಾಡುತ್ತಿದ್ದರು. ಪಕ್ಕದಲ್ಲಿರುವವರು ಇವರಿಬ್ಬರಿಗೆ ಲವ್ ಅಂತ ನಮ್ಮಿಬ್ಬರ ಬಗ್ಗೆ ಮಾತನಾಡುತ್ತಿದ್ದರು... ಸತೀಶ್ಗೆ ಅಪಘಾತ ಆಯ್ತು. ಅಮ್ಮ ತೀರಿಕೊಂಡರು" ಎಂದು ಆ ಕಥೆಗಳನ್ನೂ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. “ಇವರಿಗೆ ಅಪಘಾತವಾದ ಮೂರು ತಿಂಗಳ ಬಳಿಕ ಹೃದಯಾಘಾತವಾಗಿ ನನ್ನ ಅಮ್ಮ ತೀರಿಹೋದ್ರು. ಈ ಸಮಯದಲ್ಲಿ ಸತೀಶ್ ಕೋಮಾದಲ್ಲಿದ್ರು. ಚಿಕ್ಕ ಮಗು ರೀತಿ ಇದ್ರು. ಇದು ಅತ್ಯಂತ ಕೆಟ್ಟ ಸಮಯ. ಕಷ್ಟ ಅಂದರೆ ನನಗೆ ಆಗ ಅರ್ಥ ಆಯಿತು. ಮಕ್ಕಳನ್ನು ಇಟ್ಟುಕೊಂಡು ಏನು ಮಾಡೋದು... ಹಣ ಇದೆ. ಆದರೆ, ಬದುಕುವುದು ಹೇಗೆ” ಹೀಗೆ ಈ ಚಾನೆಲ್ನಲ್ಲಿ ಸಾಕಷ್ಟು ವಿಚಾರಗಳ ಕುರಿತು ಮಾತನಾಡಿದ್ದಾರೆ. ಈ ಕೆಳಗೆ ನೀಡಿರುವ ವಿಡಿಯೋ ಪ್ಲೇ ಬಟನ್ ಕ್ಲಿಕ್ಮಾಡುವ ಮೂಲಕ ಅನುರಾಧ ಅವರ ಬದುಕಿನ ಕಥೆಯನ್ನು ಕೇಳಿರಿ.
ಕನ್ನಡ, ತೆಲುಗು, ತಮಿಳು, ಮಲಯಾಳಂಗಳಲ್ಲಿ ವಿಪರೀತ ಬೇಡಿಕೆ ಇರುವಂತಹ ಸಮಯದಲ್ಲಿಯೇ ಇವರು ವಿವಾಹವಾಗಿದ್ದರು. ಪತಿ ಮೃತಪಟ್ಟರು. ಆಧಾರವಾಗಿದ್ದ ತಾಯಿಯೂ ಮೃತಪಟ್ಟರು. ಈ ಸಂದರ್ಭದಲ್ಲಿ ದೃಢವಾಗಿ ನಿಂತು ಮಕ್ಕಳನ್ನು ಸಾಕಿದರು. ಆ ಸಮಯದಲ್ಲಿ ಈಕೆಗೆ ನಟನೆಯ ಬೇಡಿಕೆಯೂ ಕಡಿಮೆಯಾಗಿತ್ತು. ಪತಿಯ ನೆನಪಿನಲ್ಲಿ ಕಾಲ ಕಳೆಯುವ ಈಕೆ ರಘುರಾಮ್ ಎಂಬ ಜನಪ್ರಿಯ ಯೂಟ್ಯೂಬ್ ಚಾನೆಲ್ನಲ್ಲಿ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.