ʻಮೊದಲು ಯುದ್ಧ ಮುಗೀಲಿ ತಡೀರಪ್ಪ!ʼ ಟ್ರೋಲಿಗರ ಬಾಯಿಗೆ ಆಹಾರವಾಯ್ತು ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌
ಕನ್ನಡ ಸುದ್ದಿ  /  ಮನರಂಜನೆ  /  ʻಮೊದಲು ಯುದ್ಧ ಮುಗೀಲಿ ತಡೀರಪ್ಪ!ʼ ಟ್ರೋಲಿಗರ ಬಾಯಿಗೆ ಆಹಾರವಾಯ್ತು ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌

ʻಮೊದಲು ಯುದ್ಧ ಮುಗೀಲಿ ತಡೀರಪ್ಪ!ʼ ಟ್ರೋಲಿಗರ ಬಾಯಿಗೆ ಆಹಾರವಾಯ್ತು ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌

ಈಗಷ್ಟೇ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಕಾವು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಬೆನ್ನಲ್ಲೇ ಬಾಲಿವುಡ್‌ನಲ್ಲಿ ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಚಿತ್ರದ ಪೋಸ್ಟರ್‌ ನೋಡಿದ ನೆಟ್ಟಿಗರು ಚಿತ್ರತಂಡವನ್ನು ಟ್ರೋಲ್‌ ಮಾಡಿದ್ದಾರೆ.

ತೆರೆಮೇಲೆ ಮಹಿಳಾ ಶಕ್ತಿಯ ಪ್ರದರ್ಶನ, ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ, ಆದರೆ..
ತೆರೆಮೇಲೆ ಮಹಿಳಾ ಶಕ್ತಿಯ ಪ್ರದರ್ಶನ, ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ, ಆದರೆ..

ಭಾರತ ಮತ್ತು ಪಾಕ್‌ ನಡುವೆ ಇದೀಗ ಯುದ್ಧದ ಕಾರ್ಮೋಡ ಆವರಿಸಿದೆ. ಈ ಯುದ್ಧದ ಬೆನ್ನಲ್ಲೇ ಸಿನಿ ವಲಯದಲ್ಲಿ ʻಆಪರೇಷನ್ ಸಿಂದೂರʼ ಹೆಸರಿಗೆ ಪೈಪೋಟಿ ನಡೆದಿದೆ. ಬಾಲಿವುಡ್‌ನ ಘಟಾನುಘಟಿ ನಿರ್ಮಾಣ ಸಂಸ್ಥೆಗಳು ಈ ಸಿನಿಮಾ ಶೀರ್ಷಿಕೆಗೆ ಪೈಪೋಟಿ ನಡೆಸಿವೆ. ಆದರೆ, ಆ ಶೀರ್ಷಿಕೆ ಅಧಿಕೃತವಾಗಿ ಯಾರಿಗೆ ಸಿಕ್ಕಿದೆ ಎಂಬುದು ಖಚಿತವಾಗಿಲ್ಲ. ಇದೆಲ್ಲ ಬೆಳವಣಿಗೆ ನಡುವೆಯೇ ʻಆಪರೇಷನ್‌ ಸಿಂದೂರʼ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ಅಷ್ಟೇ ಅಲ್ಲ ಇದೇ ಚಿತ್ರದ ಪೋಸ್ಟರ್‌ ನೋಡಿದ ನೆಟ್ಟಿಗರು ಚಿತ್ರತಂಡವನ್ನು ಟ್ರೋಲ್‌ ಮಾಡಿದ್ದಾರೆ.

ನಿಕ್ಕಿ ವಿಕ್ಕಿ ಭಗ್ನಾನಿ ಫಿಲ್ಮ್ಸ್ ಮತ್ತು ದಿ ಕಂಟೆಂಟ್ ಎಂಜಿನಿಯರ್ ಸಂಸ್ಥೆ, ʻಆಪರೇಷನ್‌ ಸಿಂದೂರʼ ಹೆಸರಿನ ಸಿನಿಮಾವನ್ನು ಘೋಷಣೆ ಮಾಡಿದೆ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತ ಸರ್ಕಾರವು ʻಆಪರೇಷನ್ ಸಿಂದೂರʼ ಮೂಲಕ ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿತ್ತು. ಇದೀಗ ಇದೇ ನೈಜ ಘಟನೆಯನ್ನೇ ಸಿನಿಮಾ ಮಾಡುವ ಕೆಲಸ ಬಾಲಿವುಡ್‌ನಲ್ಲಿ ನಡೆಯುತ್ತಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆಯು ಮೇ 6 ಮತ್ತು 7ರ ರಾತ್ರಿ ನಡೆಸಿದ ಕಾರ್ಯಾಚರಣೆಯನ್ನು ಆಧರಿಸಿ ʻಆಪರೇಷನ್‌ ಸಿಂದೂರʼ ಚಿತ್ರ ನಿರ್ಮಿಸಲಾಗುತ್ತಿದೆ. ಈ ಕಾರ್ಯಾಚರಣೆಯಲ್ಲಿ, ಭಾರತೀಯ ಸೇನೆಯು ಪಾಕಿಸ್ತಾನ ಮತ್ತು ಪಿಒಕೆಯಲ್ಲಿ 9 ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸುವುದಷ್ಟೇ ಅಲ್ಲದೆ, ಭಯೋತ್ಪಾದಕರನ್ನೂ ಹತ್ಯೆ ಮಾಡಿತ್ತು.

ಸೋಷಿಯಲ್‌ ಮೀಡಿಯಾದಲ್ಲಿ ಟೀಕೆ

ಚಿತ್ರನಿರ್ಮಾಣ ಸಂಸ್ಥೆ, ʻಆಪರೇಷನ್‌ ಸಿಂದೂರʼ ಚಿತ್ರದ ಪೋಸ್ಟರ್‌ ಹಂಚಿಕೊಳ್ಳುತ್ತಿದ್ದಂತೆ, ಟೀಕೆಗಳು ಕೇಳಿಬರುತ್ತಿದ್ದಂತೆ ಡಿಲಿಟ್‌ ಮಾಡಿದೆ. ಅದೇ ಪೋಸ್ಟರ್‌ಅನ್ನು ವೈರಲ್‌ ಭಯಾನಿ ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿದ್ದಾರೆ. ಆ ಪೋಸ್ಟ್‌ಗೆ ಬಹುತೇಕರ ನೆಗೆಟಿವ್‌ ಕಾಮೆಂಟ್‌ ಹಾಕಿದ್ದಾರೆ. "ದೇಶವನ್ನು ಮುಜುಗರಕ್ಕೀಡು ಮಾಡುವುದನ್ನು ನಿಲ್ಲಿಸಿ", "ಸೆಲೆಬ್ರಿಟಿಗಳು ಈ ಯುದ್ಧದ ಬಗ್ಗೆ ಸಾರ್ವಜನಿಕವಾಗಿ ಏನನ್ನೂ ಹೇಳುವ ಧೈರ್ಯ ಹೊಂದಿಲ್ಲ. ಆದರೆ, ಇದೇ ಸಿನಿಮಾ ಮಂದಿ ಇದರ ಮೇಲೆ ಸಿನಿಮಾ ಮಾಡುವ ಮೂಲಕ ಹಣ ಗಳಿಸಲು ಬಯಸುತ್ತಾರೆ. ವಾಹ್ ಅದ್ಭುತ" ಎಂದೂ ಅಣಕಿಸಿದ್ದಾರೆ.

"ಇನ್ನೂ ಯುದ್ಧವೇ ಪೂರ್ಣವಾಗಿಲ್ಲ. ಅದನ್ನಾದರೂ ಮೊದಲು ಮುಗಿಯಲು ಬಿಡಿ", "ಇಂತಹ ವಿಷಯಗಳನ್ನು ಎನ್‌ಕ್ಯಾಶ್‌ ಮಾಡಿಕೊಳ್ಳುವುದನ್ನು ನಿಲ್ಲಿಸಿ. ಇದು ನಿಜಕ್ಕೂ ನಾಚಿಕೆಗೇಡು" ಎಂದೆಲ್ಲ ಕಾಮೆಂಟ್‌ ಹಾಕುವ ಮೂಲಕ ಚಿತ್ರ ನಿರ್ಮಿಸಲು ಹೊರಟ ಚಿತ್ರತಂಡದ ವಿರುದ್ಧ ನೆಟ್ಟಿಗರು ಗರಂ ಆಗಿದ್ದಾರೆ.

ಏನಿದೆ ಪೋಸ್ಟರ್‌ನಲ್ಲಿ?

ಚಿತ್ರದ ಪೋಸ್ಟರ್‌ ವಿಶೇಷವಾಗಿದೆ. ಏಕೆಂದರೆ ಪಹಲ್ಗಾಮ್ ದಾಳಿಯಲ್ಲಿ, ದುಷ್ಟ ಭಯೋತ್ಪಾದಕರು ಪತ್ನಿಯರ ಕಣ್ಣೆದುರೆ ಗಂಡಂದಿರನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಧರ್ಮದ ಆಧಾರದ ಮೇಲೆ ಹಿಂದೂಗಳನ್ನಷ್ಟೇ ಗುರಿಯನ್ನಾಗಿಸಿ ಗುಂಡಿಕ್ಕಿದರು. ಈ ಮೂಲಕ ಪತ್ನಿಯರ ಹಣೆ ಮೇಲಿನ ಸಿಂದೂರ ಅಳಿಸಿಹಾಕಿದರು. ಈ ಪರಿಕಲ್ಪನೆಯಲ್ಲಿಯೇ ʻಆಪರೇಷನ್‌ ಸಿಂದೂರʼ ಸಿನಿಮಾ ಮೂಡಿಬರಲಿದೆ.

ಪೋಸ್ಟರ್‌ನಲ್ಲಿ ಮಹಿಳಾ ಆರ್ಮಿ ಆಫೀಸರ್‌ವೊಬ್ಬಳು ಒಂದು ಕೈಯಲ್ಲಿ ತನ್ನ ಹಣೆಗೆ ಸಿಂದೂರ ಲೇಪಿಸಿಕೊಳ್ಳುವ ರೀತಿಯಲ್ಲಿ, ಮತ್ತೊಂದು ಕೈಯಲ್ಲಿ ಗನ್‌ ಹಿಡಿದು ನಿಂತ ಭಂಗಿಯಲ್ಲಿ ಕಂಡಿದ್ದಾರೆ. ಈ ಚಿತ್ರವು ದೇಶಭಕ್ತಿ ಜತೆಗೆ ಮಹಿಳಾ ಶಕ್ತಿಯನ್ನು ಪ್ರತಿಬಿಂಬಿಸುವಂತಿದೆ. ಪೋಸ್ಟರ್‌ನಲ್ಲಿ ಟ್ಯಾಂಕ್‌ಗಳು, ಯುದ್ಧಭೂಮಿ, ಮುಳ್ಳುತಂತಿ ಮತ್ತು ಹಿನ್ನೆಲೆಯಲ್ಲಿ ಆಕಾಶದಲ್ಲಿ ಹಾರುವ ಯುದ್ಧ ವಿಮಾನಗಳನ್ನು ತೋರಿಸಲಾಗಿದೆ.

ನಿರ್ದೇಶನದ ಜವಾಬ್ದಾರಿ ಯಾರದ್ದು?

ʻಆಪರೇಷನ್‌ ಸಿಂದೂರʼ ಚಿತ್ರವನ್ನು ಉತ್ತಮ್ ಮಹೇಶ್ವರಿ ನಿರ್ದೇಶಿಸಲಿದ್ದಾರೆ. ಚಿತ್ರದ ತಾರಾಗಣದ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಇನ್ನು ನಿರ್ಮಾಪಕರಾದ ನಿಕ್ಕಿ ಮತ್ತು ವಿಕ್ಕಿ ಭಗ್ನಾನಿ ʻನಿಕಿತಾ ರಾಯ್ʼ ಎಂಬ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದೊಂದು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರವಾಗಿದ್ದು, ಮೇ 30 ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಅರ್ಜುನ್ ರಾಂಪಾಲ್, ಪರೇಶ್ ರಾವಲ್ ಮತ್ತು ಸುಹೇಲ್ ನಯ್ಯರ್ ಕೂಡ ಇದರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.