Bomb Threat: ಅಂಬಾನಿ, ಅಮಿತಾಬ್ ಬಚ್ಚನ್, ಧರ್ಮೇಂದ್ರ ಮನೆಗಳಿಗೆ ಬಾಂಬ್ ಬೆದರಿಕೆ ಕರೆ! ಪ್ರಕರಣ ದಾಖಲು
ಮುಖೇಶ್ ಅಂಬಾನಿ, ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಮುಂಬೈನ ಬಂಗಲೆಗಳಿಗೆ ಬಾಂಬ್ ಇಡಲು 25 ಜನರು ಭಯೋತ್ಪಾದಕ ದಾಳಿ ಮಾಡಲು ಬರುತ್ತಿದ್ದಾರೆ ಎಂದು ಬೆದರಿಕೆ ಕರೆ ಮಾಡಿದವರು ತಿಳಿಸಿದ್ದಾರೆ.
Bomb Threat: ಪ್ರಭಾವಿ ವ್ಯಕ್ತಿಗಳ ಮನೆಗೆ ಬಾಂಬ್ ಬೆದರಿಕೆ ಹಾಕುವ ಸುದ್ದಿ ಇತ್ತೀಚಿನದಲ್ಲ. ಆದರೆ, ಕಳೆದ ಕೆಲ ತಿಂಗಳಿಂದ ಸುದ್ದಿಯಿರದ ಈ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಈ ಸಲ ಬಾಲಿವುಡ್ನ ಪ್ರಭಾವಿ ನಟರಿಗೆ ಮತ್ತು ಉದ್ಯಮಿಗಳಿಗೆ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ. ಈ ವಿಚಾರ ಹೊರಬೀಳುತ್ತಿದ್ದಂತೆ ಕೆಲ ಕಾಲ ಆತಂಕದ ವಾತಾವರಣವೂ ನಿರ್ಮಾಣವಾಗಿತ್ತು.
ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ, ಬಿಗ್ ಬಿ ಅಮಿತಾಬ್ ಬಚ್ಚನ್ ಮತ್ತು ಹಿರಿಯ ನಟ ಧರ್ಮೇಂದ್ರ ಅವರ ಮುಂಬೈನ ಬಂಗಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಹಾಕಿದ್ದಾರೆ. ಮಂಗಳವಾರ ಅಪರಿಚಿತ ವ್ಯಕ್ತಿಯೊಬ್ಬ ನಾಗ್ಪುರ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾನೆ. ಬೆದರಿಕೆಯ ಕರೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ತನಿಖೆ ಆರಂಭಿಸಿದ್ದಾರೆ. ತನಿಖೆ ಆರಂಭಿಸಿದ ಕೆಲವೇ ಕ್ಷಣದಲ್ಲಿ ಇದೊಂದು ಸುಳ್ಳು ಕರೆ ಎಂದು ಗೊತ್ತಾಗಿದೆ. ಇತ್ತ ಕರೆ ಮಾಡಿದವರ ವಿರುದ್ಧ ನಾಗ್ಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟುಸಿರು ಬಿಟ್ಟ ಅಭಿಮಾನಿಗಳು..
ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ (ERSS)ಗೆ ಬೆದರಿಕೆ ಕರೆ ಮಾಡಿದ ಕಿಡಿಗೇಡಿಗಳು, ಅಮಿತಾಬ್ ಬಚ್ಚನ್ ಅವರ ನಿವಾಸ, ಹಿರಿಯ ನಟ ಧರ್ಮೇಂದ್ರ ಅವರ ನಿವಾಸ ಮತ್ತು ಉದ್ಯಮಿ ಮುಖೇಶ್ ಅಂಬಾನಿ ಅವರ ಆಂಟಿಲಿಯಾ ಬಂಗಲೆ ಬಳಿ ಬಾಂಬ್ ಸಿಡಿಸುವುದಾಗಿ ಹೇಳಿದ್ದರು. ಪಾಲ್ಘರ್ನ ಶಿವಾಜಿನಗರ ಪ್ರದೇಶದಿಂದ ಬೆದರಿಕೆ ಕರೆ ಬಂದಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿತ್ತು. ಈ ಸುದ್ದಿ ಹರಿದಾಡುತ್ತಿದ್ದಂತೆ ಅಭಿಮಾನಿ ವಲಯದಲ್ಲಿ ಸಹಜ ಆತಂಕ ಮನೆ ಮಾಡಿತ್ತು. ಅದಾಗಿ ಕೆಲವೇ ಗಂಟೆಗಳಲ್ಲಿ ಇದೊಂದು ಹುಸಿ ಬಾಂಬ್ ಕರೆ ಎಂಬ ಮಾಹಿತಿ ತನಿಖೆ ಬಳಿಕ ಗೊತ್ತಾಗಿದ್ದೇ ತಡ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
25 ಜನರಿಂದ ಭಯೋತ್ಪಾದಕ ದಾಳಿ
ಮುಖೇಶ್ ಅಂಬಾನಿ, ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಬಂಗಲೆಗಳಿಗೆ ಬಾಂಬ್ ಇಡಲು ಸರಿಸುಮಾರು 25 ಜನರು ಭಯೋತ್ಪಾದಕ ದಾಳಿ ಮಾಡಲು ಮುಂಬೈಗೆ ಬರುತ್ತಿದ್ದಾರೆ ಎಂದು ಬೆದರಿಕೆ ಕರೆ ಮಾಡಿದವರು ಹೇಳಿದ್ದರು. ತಕ್ಷಣ ಎಚ್ಚೆತ್ತ ಪೊಲೀಸರು ಜುಹು, ವಿಲೆ-ಪಾರ್ಲೆ ಮತ್ತು ಗಾಮ್ದೇವಿಯ ಪೊಲೀಸರನ್ನು ಎಚ್ಚರಿಸಿ, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳಕ್ಕೂ ಮಾಹಿತಿ ರವಾನೆಯಾಗಿತ್ತು. 2021ರಲ್ಲಿ ಮುಂಬೈ ಪೊಲೀಸರ ಅಪರಾಧ ವಿಭಾಗದ ಘಟಕವು ಮೂರು ರೈಲು ನಿಲ್ದಾಣಗಳಲ್ಲಿ ಮತ್ತು ಅಮಿತಾಬ್ ಬಚ್ಚನ್ ಅವರ ಮನೆಯಲ್ಲಿ ಬಾಂಬ್ ವದಂತಿ ಹಬ್ಬಿಸಿದ್ದ ಇಬ್ಬರನ್ನು ಬಂಧಿಸಿತ್ತು.
ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಭದ್ರತೆ
ಉದ್ಯಮಿ ಮುಖೇಶ್ ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಗರಿಷ್ಠ ಭದ್ರತೆ ನೀಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ದೇಶದ ಹೊರತಾಗಿ ವಿದೇಶದಲ್ಲಿರುವ ಮುಖೇಶ್ ಅಂಬಾನಿ ಕುಟುಂಬಕ್ಕೆ ಈ ಭದ್ರತೆ ಒದಗಿಸಬೇಕು ಮತ್ತು ಇದರ ವೆಚ್ಚವನ್ನು ಅಂಬಾನಿ ಕುಟುಂಬ ಭರಿಸಲಿದೆ ಎಂದು ನ್ಯಾಯಮೂರ್ತಿ ಕೃಷ್ಣ ಮುರಾರಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠ ಹೇಳಿದೆ.