ಹೆಚ್ಚುವರಿ ದೃಶ್ಯಗಳ ಜತೆಗೆ 20 ವರ್ಷಗಳ ಬಳಿಕ ಮರು ಬಿಡುಗಡೆ ಆಗುತ್ತಿದೆ ʻಸೈನೈಡ್ʼ ಸಿನಿಮಾ
20 ವರ್ಷಗಳ ಹಿಂದೆ ತೆರೆಕಂಡು, ಹಿಟ್ ಪಟ್ಟ ಪಡೆದಿದ್ದ ಸಿನಿಮಾವೊಂದು ಇದೀಗ ಮರು ಬಿಡುಗಡೆ ಆಗುತ್ತಿದೆ. ಆ ಚಿತ್ರವೇ ʻಸೈನೈಡ್ʼ. 2006ರಲ್ಲಿ ತೆರೆಕಂಡಿದ್ದ ʻಸೈನೈಡ್ʼ ಚಿತ್ರವನ್ನು ಎಎಂಆರ್ ರಮೇಶ್ ನಿರ್ದೇಶನ ಮಾಡಿದ್ದರು. ಇದೀಗ 10 ನಿಮಿಷಗಳ ಹೆಚ್ಚುವರಿ ದೃಶ್ಯಗಳ ಜತೆಗೆ ಮರು ಬಿಡುಗಡೆ ಆಗಲು ರೆಡಿಯಾಗಿದೆ. ಹಾಗಾದರೆ, ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ.

ಸ್ಯಾಂಡಲ್ವುಡ್ನಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಹಳೇ ಸಿನಿಮಾಗಳ ಮರು ಬಿಡುಗಡೆ ಪರ್ವ ಜೋರಾಗಿದೆ. ಬಣ್ಣ ಬದಲಿಸಿಕೊಂಡು, ತಾಂತ್ರಿಕವಾಗಿ ಶ್ರೀಮಂತವಾಗಿ ಮತ್ತೆ ಬೆಳ್ಳಿತೆರೆ ಮೇಲೆ ಸಿನಿಮಾಗಳು ರಿಲೀಸ್ ಆಗಿ ಸದ್ದು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಇದೀಗ 20 ವರ್ಷಗಳ ಹಿಂದೆ ತೆರೆಕಂಡು, ಹಿಟ್ ಪಟ್ಟ ಪಡೆದಿದ್ದ ಸಿನಿಮಾವೊಂದು ಮರು ಬಿಡುಗಡೆ ಆಗುತ್ತಿದೆ. ಆ ಚಿತ್ರವೇ ʻಸೈನೈಡ್ʼ. 2006ರಲ್ಲಿ ತೆರೆಕಂಡಿದ್ದ ʻಸೈನೈಡ್ʼ ಚಿತ್ರವನ್ನು ಎಎಂಆರ್ ರಮೇಶ್ ನಿರ್ದೇಶನ ಮಾಡಿದ್ದರು. ಇದೀಗ 10 ನಿಮಿಷಗಳ ಹೆಚ್ಚುವರಿ ದೃಶ್ಯಗಳ ಜತೆಗೆ ಮರು ಬಿಡುಗಡೆ ಆಗಲು ರೆಡಿಯಾಗಿದೆ. ಹಾಗಾದರೆ, ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆಯ ನಂತರದ ಘಟನೆಗಳನ್ನು ಆಧರಿಸಿದ ʻಸೈನೈಡ್ʼ ಸಿನಿಮಾ ವಿಮರ್ಶೆ ದೃಷ್ಟಿಯಿಂದ ಮೆಚ್ಚುಗೆ ಪಡೆದಿತ್ತು. ಅಕ್ಷಯ್ ಕ್ರಿಯೇಷನ್ಸ್ ನಲ್ಲಿ ಕೆಂಚಪ್ಪ ಗೌಡ ಹಾಗೂ ಎಸ್ ಇಂದುಮತಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ತಾರಾ, ರಂಗಾಯಣ ರಘು, ರವಿಕಾಳೆ, ಮಾಳವಿಕ, ಅವಿನಾಶ್, ಉಷಾ ಭಂಡಾರಿ ಸೇರಿ ಹಲವರು ಈ ಸಿನಿಮಾದಲ್ಲಿ ಅಭಿನಯಿಸಿದ್ದರು. ಎಎಂಆರ್ ರಮೇಶ್ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಈಗ ಇಪ್ಪತ್ತು ವರ್ಷಗಳ ಬಳಿಕ ಈ ಚಿತ್ರವನ್ನು ಮರು ಬಿಡುಗಡೆ ಆಗುತ್ತಿದೆ.
ನಿರ್ದೇಶಕರು ಹೇಳುವುದೇನು?
ಈ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ರಮೇಶ್, ʻಸೈನೈಡ್ʼ ಸಿನಿಮಾ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಬಳಿಕ ನಡೆದ ಘಟನೆ ಆಧರಿಸಿದ ಚಿತ್ರ. 2006ರಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವಾಗ ಸೂಕ್ಷ್ಮವಾದ ವಿಷಯದ ಕುರಿತಾದ ಸಿನಿಮಾ. ಏನಾಗುತ್ತದೊ ಏನೋ ಎಂಬ ಆತಂಕವಿತ್ತು. ಆದರೆ ಬಿಡುಗಡೆ ಆದ ಮೇಲೆ ಜನ ಈ ಚಿತ್ರ ಸ್ವೀಕರಿಸಿದ ರೀತಿ ಕಂಡು ಆತಂಕ ದೂರವಾಯಿತು. ನಾಡಿನ ಖ್ಯಾತ ಸಾಹಿತಿಗಳು, ನಟರು ಹಾಗೂ ನಿರ್ದೇಶಕರು ಸಹ ಈ ಚಿತ್ರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದರು. ತಾರಾ ಅವರ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ತಂದುಕೊಟ್ಟ ಚಿತ್ರ ಕೂಡ ಇದ್ದಾಗಿತ್ತು. ಪ್ರಸ್ತುತ ಈ ಚಿತ್ರವನ್ನು ಈಗಿನ ಕೆಲವು ತಂತ್ರಜ್ಞಾನಗಳನ್ನು ಅಳವಡಿಸಿ ಜೊತೆಗೆ ಹತ್ತು ನಿಮಿಷ ಸಿನಿಮಾ ಅವಧಿಯನ್ನು ಹೆಚ್ಚಿಸಿ ಮೇ 23ರಂದು ಮರು ಬಿಡುಗಡೆ ಮಾಡುತ್ತಿದ್ದೇವೆ. ʻಸೈನೈಡ್ʼ ಚಿತ್ರದ ಪ್ರೀಕ್ವೆಲ್ ಸಹ ಬರಲಿದ್ದು, ಅದರ ಕಾರ್ಯಗತಿಯೂ ಸಹ ಪ್ರಗತಿಯಲ್ಲಿದೆ ಎಂದರು ನಿರ್ದೇಶಕರು.
ನಟಿ ತಾರಾ ಮಾತು
ನಾನು ʻಸೈನೈಡ್ʼ ಚಿತ್ರದಲ್ಲಿ ಮೃದುಲ ಎಂಬ ಮುಗ್ಧ ಹೆಣ್ಣು ಮಗಳ ಪಾತ್ರ ನಿರ್ವಹಿಸಿದ್ದೆ. ಇಪ್ಪತ್ತು ವರ್ಷಗಳ ಹಿಂದೆ ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದಾಗ ನಾನು ಮೃದುಲ ಅವರನ್ನು ಭೇಟಿ ಮಾಡಲು ಪ್ರಯತ್ನ ಪಟ್ಟೆ. ಆದರೆ ಅದು ಆಗಲಿಲ್ಲ. ಅವರ ಪತಿ ರಂಗನಾಥ್ ಚಿತ್ರೀಕರಣ ಸ್ಥಳಕ್ಕೆ ಬರುತ್ತಿದ್ದರು. ಅವರಿಂದ ಮೃದುಲ ಅವರ ಸ್ವಭಾವ ತಿಳಿದುಕೊಂಡು ನಟಿಸಿದ್ದೆ. ನನ್ನ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಕೂಡ ಬಂತು. ಈಗ ರಮೇಶ್ ಈ ಚಿತ್ರವನ್ನು ಮರು ಬಿಡುಗಡೆ ಮಾಡುತ್ತಿದ್ದಾರೆ ಎಂದರು ನಟಿ ತಾರಾ.
"ಸೈನೈಡ್" ಚಿತ್ರದಲ್ಲಿ ಟೆರರಿಸ್ಟ್ ಪಾತ್ರ ಮಾಡಿದ್ದನ್ನು ನಟಿ ಉಷಾ ಭಂಡಾರಿ ನೆನಪಿಕೊಂಡರು. ನಿರ್ಮಾಪಕರಾದ ಕೆಂಚಪ್ಪ ಗೌಡ, ಎಸ್ ಇಂದುಮತಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಅಂದಹಾಗೆ, 2006ರ ಜುಲೈ 7ರಂದು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಿತ್ತು. ಆರ್ ರತ್ನವೇಲು ಛಾಯಾಗ್ರಹಣದ ಈ ಸಿನಿಮಾಕ್ಕೆ ಸಂದೀಪ್ ಚೌಟಾ ಸಂಗೀತ ನೀಡಿದ್ದರು. ಅಂಥೋನಿ ಸಂಕಲನದ ಜವಾಬ್ದಾರಿ ಹೊತ್ತಿದ್ದರು.