Amruthadhaare: ಲಚ್ಚಿ ಸ್ಕೂಲ್ ದತ್ತು ತೆಗೆದುಕೊಳ್ಳಲು ಗೌತಮ್ ನಿರ್ಧಾರ, ಸಮಾಜಮುಖಿ ಆಲೋಚನೆ ಹಂಚಿದ ಅಮೃತಧಾರೆ ಧಾರಾವಾಹಿ
Amruthadhaare serial Yesterday Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಹಣವಂತರು ಸಮಾಜದ ಬಗ್ಗೆ ಯೋಚನೆ ಮಾಡುವಂತೆ ಸಮಾಜಮುಖಿ ಆಲೋಚನೆ ಹಂಚಿಕೊಳ್ಳಲಾಗಿದೆ. ಗೌತಮ್ ದಿವಾನ್ ಲಚ್ಚಿ ಓದುತ್ತಿರುವ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಮುಂದಾಗಿದ್ದಾರೆ.

ಅಮೃತಧಾರೆ ಧಾರಾವಾಹಿ ನಿನ್ನೆಯ ಸಂಚಿಕೆ: ಜೈದೇವ್ ಟೆನ್ಷನ್ನಲ್ಲಿದ್ದಾನೆ. ಒಂದು ಕಡೆ ಅವಳು, ಇನ್ನೊಂದು ಕಡೆ ಇವಳು ಎಂದು ಚಿಂತಿಸುತ್ತಾನೆ. ಈ ಸಮಯದಲ್ಲಿ ಮಲ್ಲಿ ಅಲ್ಲಿಗೆ ಬರುತ್ತಾಳೆ. ಆಕೆಯ ಮುಂದೆ ಆಫೀಸ್ ಒತ್ತಡ ಎನ್ನುತ್ತಾನೆ. "ಇಟ್ಟುಕೊಂಡ ಮೇಲೆ ಯಾವುದನ್ನೂ ಬಿಡುವಂತೆ ಇಲ್ಲ" ಎಂದು ಹೇಳುತ್ತಾನೆ. "ನಾನು ನಿಮ್ಮ ಅಣ್ಣನಲ್ಲಿ ಹೇಳ್ತಿನಿ, ಕೆಲಸ ಕಡಿಮೆ ಮಾಡಲು ಹೇಳ್ತಿನಿ" ಎಂದು ಮಲ್ಲಿ ಹೇಳುತ್ತಾಳೆ. ಇವಳು ಅಣ್ಣನಲ್ಲಿ ಹೇಳಿದ್ರೆ ಎನ್ಕ್ವಯರಿ ಆರಂಭವಾಗುತ್ತದೆ ಎಂದು ಜೈದೇವ್ ಭಯಗೊಳ್ಳುತ್ತಾನೆ. ಹೇಗೋ ತನ್ನ ಮಾತಿನಿಂದಲೇ ಆಕೆಯ ಬಾಯಿ ಮುಚ್ಚಿಸುತ್ತಾನೆ.
ಗೌತಮ್ ಲಚ್ಚಿಯನ್ನು ಕರೆದುಕೊಂಡು ಸ್ಕೂಲ್ಗೆ ಬರುತ್ತಾನೆ. ದೊಡ್ಡ ಕಾರಿನಲ್ಲಿ ಲಚ್ಚಿ ಬಂದಿರುವುದನ್ನು ನೋಡಿ ಶಾಲೆಯ ಮಕ್ಕಳು ಅಚ್ಚರಿಗೊಳ್ಳುತ್ತಾರೆ. "ಲಚ್ಚಿ... ನೀನು ಈ ಕಾರಲ್ಲಿ ಬಂದ್ಯಾ" ಎಂದು ಕುತೂಹಲದಿಂದ ಕೇಳುತ್ತಾರೆ. "ಇವರು ನನ್ನ ಅಮ್ಮನ ಅಣ್ಣ, ಇದು ಅವರ ಕಾರು" ಎಂದು ಪರಿಚಯಿಸುತ್ತಾಳೆ. ಮಕ್ಕಳ ಹರಿದ ಚಪ್ಪಲು, ಕಷ್ಟವನ್ನು ಕಂಡು ಗೌತಮ್ ಮನಸ್ಸು ಕರಗುತ್ತದೆ. "ನಮಗೂ ಇಂತಹ ಮಾಮ ಸಿಕ್ರೆ ಕಾರಲ್ಲಿ ಬರಬಹುದು" ಎಂದು ಒಬ್ಬಳು ಹುಡುಗಿ ಹೇಳುತ್ತಾಳೆ. "ಇವರೆಲ್ಲ ನನ್ನ ಫ್ರೆಂಡ್ಸ್" ಎಂದು ಲಚ್ಚಿ ಹೇಳುತ್ತಾಳೆ. ನಿಮಗೆಲ್ಲ ಓದೋದು ಇಷ್ಟನಾ ಎಂದು ಕೇಳುತ್ತಾರೆ ಗೌತಮ್. "ನಾವು ಓದಿ, ಒಳ್ಳೆ ಕೆಲಸ ಪಡೆದು ಅಪ್ಪ ಅಮ್ಮನ ಚೆನ್ನಾಗಿ ನೋಡಿಕೊಳ್ಳಬೇಕು" ಎಂದು ಮಕ್ಕಳು ಹೇಳುತ್ತಾರೆ. ಶಾಲೆಯ ಬೆಲ್ನ ಸದ್ದಿಗೆ ಮಕ್ಕಳು ಹೋಗುತ್ತಾರೆ.
ಭಾಗ್ಯಮ್ಮ ಮೆಟ್ಟಿಲು ಇಳಿಯುತ್ತ ಬಂದಾಗ ಕೆಳಗೆ ಕುಳಿತಿರುವ ಶಕುಂತಲಾರನ್ನು ಕಂಡು ಭಯಗೊಳ್ಳುತ್ತಾರೆ. ಲಕ್ಷ್ಮಿಕಾಂತ್ ಈಕೆಯನ್ನು ಶಕುಂತಲಾಗೆ ತೋರಿಸುತ್ತಾನೆ. ಭಾಗ್ಯಮ್ಮ ಭಯದಲ್ಲಿ ಮೇಲೆ ಓಡುತ್ತಾಳೆ. ಆಗ ಅಲ್ಲಿ ಭೂಮಿಕಾ ಇರುತ್ತಾರೆ. ಭಾಗ್ಯಮ್ಮ ಕೆಳಗೆ ಕೈ ತೋರಿಸುವಾಗ ಅಲ್ಲಿದ್ದ ಶಕುಂತಲಾ ಬೇರೆ ಕಡೆಗೆ ಹೋಗುತ್ತಾರೆ. ಭೂಮಿಕಾ ನೋಡಿದಾಗ ಅಲ್ಲಿ ಯಾರೂ ಇರುವುದಿಲ್ಲ. "ಈಕೆಗೆ ಮತಿಭ್ರಮಣೆಯಾಗಿದೆ ಎಂದು ನೆಮ್ಮದಿಯಾಗಿದ್ದರೆ ಈಕೆ ನಮ್ಮ ಕಡೆಗೆ ಕೈ ತೋರಿಸುತ್ತಾಳೆ" ಎಂದು ಶಕುಂತಲಾದೇವಿ ಆತಂಕಗೊಳ್ಳುತ್ತಾರೆ.
ಸಮಾಜಮುಖಿ ಆಲೋಚನೆ
ಆನಂದ್ ಮತ್ತು ಗೌತಮ್ ಮಾತನಾಡುತ್ತಿದ್ದಾರೆ. "ಲಚ್ಚಿ ಸ್ಕೂಲ್ಗೆ ಹೋದೆ, ಅಲ್ಲಿ ಬೇರೆ ಪ್ರಪಂಚನೇ ನೋಡಿದೆ" ಎಂದು ಗೌತಮ್ ಹೇಳುತ್ತಾರೆ. "ಈ ಬಡತನ, ಈ ಕಷ್ಟ ಎಲ್ಲಾ ಹೋಗುವ ತನಕ ನಮಗೆ ತಲೆ ಎತ್ತಿ ನಡೆಯುವ ಅಧಿಕಾರವಿಲ್ಲ. ಅವರು ನಮ್ಮ ತರಹ ಎಂಬ ಭಾವನೆ ನಮ್ಮಲ್ಲಿ ಬರಬೇಕು. ನಾವೆಲ್ಲರೂ ಆ ದಿಕ್ಕಿನಲ್ಲಿ ಯೋಚನೆ ಮಾಡಬೇಕು. ಹಸಿವಾದವರಿಗೆ ಅನ್ನ ಹಾಕಿದರೆ ಸಾಲದು, ಅವರಿಗೆ ಅನ್ನ ದುಡಿಯುವ ದಾರಿ ತೋರಿಸಬೇಕು. ಈಗ ಶಿಕ್ಷಣ ಅನ್ನೋದು ಬಿಸ್ನೆಸ್ ಆಗಿದೆ" ಎಂದು ಗೌತಮ್ ಹೇಳುತ್ತಾರೆ.
"ನಾವು ಬ್ರ್ಯಾಂಡ್ ಬಗ್ಗೆ ಯೋಚನೆ ಮಾಡ್ತಿವಿ. ಆದರೆ, ಅ ಮಕ್ಕಳ ಬಟ್ಟೆ ಹರಿದಿತ್ತು. ಅವರು ಹಾಗೆ ಇರಲು ನಾವೇ ಕಾರಣ. ಆ ಸ್ಕೂಲ್ ಲಗ್ಷುರಿ ಸ್ಕೂಲ್ ಆಗಬೇಕು. ಬೇರೆ ಲಗ್ಷುರಿ ಸ್ಕೂಲ್ನಲ್ಲಿ ಏನು ಸಿಗುತ್ತೋ ಎಲ್ಲವೂ ಆ ಸ್ಕೂಲ್ನಲ್ಲಿ ಸಿಗಬೇಕು. ಇದಕ್ಕಾಗಿ ಆ ಮಕ್ಕಳಿಗೆ ಎಲ್ಲವನ್ನೂ ನೀಡಬೇಕು ಎಂದುಕೊಂಡಿದ್ದೇನೆ" ಎಂದು ಗೌತಮ್ ಹೇಳುತ್ತಾರೆ. "ನೀನು ಅಂದುಕೊಂಡದ್ದು ಮಾಡಬೇಕಾದ್ರೆ ಆ ಸ್ಕೂಲ್ ಅನ್ನು ದತ್ತು ತೆಗೆದುಕೊಂಡುಬಿಡು. ನೀನು ಅಂದುಕೊಂಡಿರುವುದನ್ನೆಲ್ಲ ಮಾಡಬಹುದು" ಎಂದು ಆನಂದ್ ಹೇಳುತ್ತಾರೆ. "ಇದು ಒಳ್ಳೆಯ ಐಡಿಯಾ" ಎಂದು ಗೌತಮ್ ಯೋಚನೆ ಮಾಡುತ್ತಾರೆ.
ಲಚ್ಚಿ ಸ್ಕೂಲ್ಗೆ ಗೌತಮ್ ಮತ್ತು ಆನಂದ್ ಹೋಗುತ್ತಾರೆ. ಹೆಡ್ಮಾಸ್ಟರ್ ಕೋಣೆಗೆ ಹೋಗಿ ತಮ್ಮನ್ನು ಪರಿಚಯಿಸಿಕೊಳ್ಳುತ್ತಾರೆ. "ಲಚ್ಚಿ ನನ್ನ ತಂಗಿ ಮಗಳು" ಎನ್ನುತ್ತಾರೆ ಗೌತಮ್. "ಅವಳು ಯಾಕೆ ಸ್ಲಮ್ನಲ್ಲಿ ಇದ್ದಾಳೆ?" ಎಂದು ಹೆಡ್ ಮಾಸ್ಟರ್ ಕೇಳಿದಾಗ ಆಕೆ ಸಿಕ್ಕ ಕತೆ ಹೇಳುತ್ತಾರೆ. "ನಾನು ಈ ಸ್ಕೂಲ್ ದತ್ತು ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ. ಈ ಸ್ಕೂಲ್ಗೆ ಏನೇನು ಆಗಬೇಕೋ ಅದನ್ನೆಲ್ಲ ನೀಡಬೇಕು ಎಂದುಕೊಂಡಿದ್ದೇನೆ" ಎಂದು ಗೌತಮ್ ಹೇಳಿದಾಗ ಮಾಸ್ಟರ್ ಖುಷಿಪಡುತ್ತಾರೆ. "ನಾನು ನಿಮ್ಮ ರೀತಿಯವರಿಗೆ ಎದುರು ನೋಡುತ್ತ ಇದ್ದೆ" ಎಂದು ಅವರು ಅನುಮತಿ ಕೊಡುತ್ತಾರೆ. ಇದೇ ಸಮಯದಲ್ಲಿ ಆ ಮಾಸ್ಟರ್ ತನ್ನ ಜಾಗವನ್ನು ಶಾಲಾ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಬಿಟ್ಟುಕೊಟ್ಟಿರುವ ಕಥೆಯನ್ನೂ ಹೇಳುತ್ತಾರೆ.
ಧಾರಾವಾಹಿ ಹೆಸರು: ಅಮೃತಧಾರೆ.
ಎಪಿಸೋಡ್: ಜನವರಿ 13, 2024
ಯಾವ ಚಾನೆಲ್: ಜೀ ಕನ್ನಡ
ಪ್ರಸಾರ ಸಮಯ: ಪ್ರತಿದಿನ ರಾತ್ರಿ 7 ಗಂಟೆಗೆ
ಅಮೃತಧಾರೆ ಸೀರಿಯಲ್ ಪಾತ್ರವರ್ಗ: ಛಾಯಾ ಸಿಂಗ್: ಭೂಮಿಕಾ (ನಾಯಕಿ), ರಾಜೇಶ್ ನಟರಂಗ್: ಗೌತಮ್ ದಿವಾನ್ (ನಾಯಕ), ವನಿತಾ ವಾಸು: ಶಕುಂತಳಾ (ಗೌತಮ್ ಮಲತಾಯಿ), ಸಿಹಿಕಹಿ ಚಂದ್ರು: ಸದಾಶಿವ (ಭೂಮಿಕ ಮತ್ತು ಜೀವನ್ ತಂದೆ), ಚೈತ್ರಾ ಶೆಣೈ: ಮಂದಾಕಿಣಿ (ಸದಾಶಿವನ ಹೆಂಡತಿ, ಭೂಮಿಕಾ ಮತ್ತು ಜೀವನ್ ತಾಯಿ), ಅಮೃತ ನಾಯಕ್: ಅಪೇಕ್ಷಾ (ಭೂಮಿಕ ತಂಗಿ), ಸಾರಾ ಅಣ್ಣಯ್ಯ : ಮಹಿಮಾ (ಗೌತಮ್ ತಂಗಿ, ಶಂಕುತಳಾ ಮಗಳು, ಜೀವನ್ ಹೆಂಡತಿ), ಶಶಿ ಹೆಗ್ಗಡೆ: ಜೀವನ್ (ಭೂಮಿಕಾ ತಮ್ಮ, ಮಂದಕಿನಿ, ಸದಾಶಿವನ ಮಗ, ಮಹಿಮಾಳ ಗಂಡ), ರಾಣವ್: ಜೈದೇವ್, ಚಂದನ್: ಅಶ್ವಿನಿ, ಸ್ವಾತಿ: ಅಪರ್ಣಾ (ಆನಂದ್ ಹೆಂಡತಿ), ಆನಂದ್: ಆನಂದ್ (ಗೌತಮ್ ಸ್ನೇಹಿತ, ಅಪರ್ಣಾ ಗಂಡ).

ವಿಭಾಗ