ಅಣ್ಣಯ್ಯ ಸೀರಿಯಲ್ ನಟ ವಿಕಾಶ್ ಉತ್ತಯ್ಯಗೆ ಜಾಕ್ಪಾಟ್! ಅಮೃತಧಾರೆ ಜೈದೇವ್ ಪತ್ನಿ ಮಲ್ಲಿಗೆ ಜೋಡಿಯಾದ ಮಾರಿಗುಡಿ ಶಿವು
ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ಅಣ್ಣಯ್ಯ ಸೀರಿಯಲ್ನಲ್ಲಿ ಮಾರಿಗುಡಿ ಶಿವು ಅಲಿಯಾಸ್ ವಿಕಾಶ್ ಉತ್ತಯ್ಯ ಮತ್ತು ಅಮೃತಧಾರೆ ಸೀರಿಯಲ್ನ ಮಲ್ಲಿ ಖ್ಯಾತಿಯ ರಾಧಾ ಭಗವತಿ, ಈಗ ಅಪಾಯವಿದೆ ಎಚ್ಚರಿಕೆ ಎಂಬ ಹೊಸ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.
Apaayavide Eccharike Kannada Movie: ಅಮೃತಧಾರೆ ಸೀರಿಯಲ್ನಲ್ಲಿ ದುಷ್ಟ ಜೈದೇವನ ಪತ್ನಿ ಮಲ್ಲಿ ಪಾತ್ರದಲ್ಲಿ ರಾಧಾ ಭಗವತಿ ಮುಂಚುತ್ತಿದ್ದಾರೆ. ಸಿಕ್ಕ ಪಾತ್ರದ ಮೂಲಕವೇ ವೀಕ್ಷಕರ ಗಮನ ಸೆಳೆಯುತ್ತಿದ್ದಾರೆ. ಇನ್ನೊಂದು ಕಡೆ ಅದೇ ಜೀ ಕನ್ನಡದ ಅಣ್ಣಯ್ಯ ಸೀರಿಯಲ್ನಲ್ಲಿ ಮಾರಿಗುಡಿ ಶಿವಣ್ಣನಾಗಿ ವಿಕಾಶ್ ಉತ್ತಯ್ಯ ರಗಡ್ ಆಗಿಯೇ ಮುಂಚುತ್ತಿದ್ದಾರೆ. ನಾಲ್ವರು ತಂಗಿಯರ ಮುದ್ದಿನ ಅಣ್ಣನಾಗಿ ಅವರ ಅಭಿನಯ ನೋಡುಗರನ್ನು ಸೆಳೆಯುತ್ತಿದೆ. ಈ ನಡುವೆ ಗ್ಯಾಪ್ನಲ್ಲಿಯೇ ಮಾರಿಗುಡಿ ಶಿವಣ್ಣ ಮತ್ತು ಮಲ್ಲಿ ಈಗ ಒಂದಾಗಿದ್ದಾರೆ. ಅಂದರೆ, ಅಪಾಯವಿದೆ ಎಚ್ಚರಿಕೆ ಚಿತ್ರದಲ್ಲಿ ಇವರಿಬ್ಬರೂ ಜೋಡಿಯಾಗಿ ನಟಿಸಿದ್ದಾರೆ.
ಕನ್ನಡದಲ್ಲಿ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನು ಜನ ಹೆಚ್ಚು ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ನೋಡಿದಾಗ ಆ ಸಾಲಿಗೆ "ಅಪಾಯವಿದೆ ಎಚ್ಚರಿಕೆ" ಚಿತ್ರ ಸಹ ಸೇರುವ ಎಲ್ಲಾ ಲಕ್ಷಣಗಳಿದೆ. ತೀರ್ಥಹಳ್ಳಿ ಮೂಲದವರಾದ ಅಭಿಜಿತ್ ತೀರ್ಥಹಳ್ಳಿ ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ನಿರ್ದೇಶಿಸಿದ್ದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ "ಅಣ್ಣಯ್ಯ" ಧಾರಾವಾಹಿ ಖ್ಯಾತಿಯ ನಟ ವಿಕಾಶ್ ಉತ್ತಯ್ಯ ನಾಯಕನಾಗಿ ನಟಿಸಿದರೆ, ಅಮೃತಧಾರೆ ಸೀರಿಯಲ್ ಮಲ್ಲಿ ಖ್ಯಾತಿಯ ರಾಧಾ ಭಗವತಿ ನಾಯಕಿಯಾಗಿದ್ದಾರೆ.
ಅಪಾಯವಿದೆ ಎಚ್ಚರಿಕೆ ಚಿತ್ರವನ್ನು ವಿ.ಜಿ.ಮಂಜುನಾಥ ಹಾಗೂ ಪೂರ್ಣಿಮಾ ಎಂ ಗೌಡ ನಿರ್ಮಾಣ ಮಾಡಿದ್ದಾರೆ. ಇತ್ತೀಚಿಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಯಿತು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಚಿತ್ರದ ಬಗ್ಗೆ ನಿರ್ದೇಶಕರ ಮಾತು
ನನಗೂ ಚಿತ್ರರಂಗಕ್ಕೂ ಹತ್ತು ವರ್ಷಗಳ ನಂಟು. ಕೆಲವು ಚಿತ್ರಗಳಿಗೆ ಸಹ ನಿರ್ದೇಶಕನಾಗಿದ್ದ ನಾನು ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗುತ್ತಿದ್ದೇನೆ. ಪಂಚಭೂತಗಳ ಆಧಾರದ ಮೇಲೆ ಈ ಚಿತ್ರದ ಕಥೆ ಹೆಣೆಯಲಾಗಿದೆ. ಒಂದು ಪಾತ್ರಗಳು ಒಂದೊಂದು ತತ್ವವನ್ನು ಪ್ರತಿನಿಧಿಸುತ್ತದೆ. ವಿಕಾಶ್ ಉತ್ತಯ್ಯ ಸೂರಿ ಪಾತ್ರದಲ್ಲಿ, ರಾಘವ್ ಕೊಡಚಾದ್ರಿ ಹಾಗೂ ಮಿಥುನ್ ತೀರ್ಥಹಳ್ಳಿ ವಿಕಾಶ್ ಅವರ ಸ್ನೇಹಿತರಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಭಗವತಿ ರಾಧಾ ಎಂಬ ಹೆಸರಿನಲ್ಲೆ ಬ್ರಾಹ್ಮಣ ಹುಡುಗಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂದು ಚಿತ್ರದ ಬಗ್ಗೆ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಮಾಹಿತಿ ನೀಡಿದರು.
ಸಸ್ಪೆನ್, ಹಾರರ್ ಪ್ರಕಾರದ ಸಿನಿಮಾ
ಸಸ್ಪೆನ್ ಅಡ್ವೆಂಚರ್ ಹಾರರ್ ಜಾನರ್ನ ಈ ಚಿತ್ರಕ್ಕೆ ಸುನಾದ್ ಗೌತಮ್ ಛಾಯಾಗ್ರಹಣದೊಂದಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ಮೂರು ಹಾಡುಗಳಿದ್ದು, ಆನಂದ್ ಆಡಿಯೋದವರು ಆಡಿಯೋ ಹಕ್ಕು ಪಡೆದುಕೊಂಡಿದ್ದಾರೆ. ಚಿತ್ರಕ್ಕೆ ಹರ್ಷಿತ್ ಪ್ರಭು ಸಂಕಲನವಿದೆ. ಈ ಚಿತ್ರವನ್ನು ನಿರ್ದೇಶಿಸಿಸಲು ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ನನ್ನ ತಂಡಕ್ಕೆ ಧನ್ಯವಾದ ಎಂದು ತಿಳಿಸಿದ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಚಿತ್ರವನ್ನು ಜನವರಿಯಲ್ಲಿ ತೆರೆಗೆ ತರುವುದಾಗಿ ಹೇಳಿದರು.
ವಿಕಾಶ್ ಉತ್ತಯ್ಯ ಹೇಳಿದ್ದೇನು?
ಸಿನಿಮಾ ಅನ್ನುವುದು ಕೃತಿ, ಹಾಗೆ ಕೃಷಿ. ಅದನ್ನು ರಚಿಸಿ, ರುಚಿಸಿ ನಿರ್ದೇಶಿಸುವುದು ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಅವರ ಬಹು ದಿನಗಳ ಕನಸು. ಆ ಕನಸು ಇಂದು ನನಸಾಗಿದೆ. ಅವರು ಈ ಚಿತ್ರಕ್ಕಾಗಿ ಪಟ್ಟಿರುವ ಶ್ರಮ ಅಷ್ಟಿಷ್ಟಲ್ಲ. ನಮ್ಮನೆಲ್ಲಾ ಅವರು ಆಡಿಷನ್ ಮಾಡಿದ ರೀತಿಯೇ ವಿಭಿನ್ನ. ಸೂರಿ ನನ್ನ ಪಾತ್ರದ ಹೆಸರು ಎಂದರು ನಾಯಕ ವಿಕಾಶ್ ಉತ್ತಯ್ಯ.
ಕಿರುತೆರೆಯಲ್ಲಿ ತಮ್ಮ ನಟನೆ ಮೂಲಕವೇ ಜನಮನ್ನಣೆ ಪಡೆದ ವಿಕಾಶ್ ಉತ್ತಯ್ಯ ಮತ್ತು ರಾಧಾ ಭಗವತಿಗೆ ಈಗ ಅಪಾಯವಿದೆ ಎಚ್ಚರಿಕೆ ಸಿನಿಮಾ ಮೂಲಕ ಜಾಕ್ಪಾಟ್ ಹೊಡೆದಂತಾಗಿದೆ. ಇನ್ನೇನು ಶೀಘ್ರದಲ್ಲಿಯೇ ಈ ಸಿನಿಮಾ ರಿಲೀಸ್ ಆಗಲಿದೆ.
ನಟರಾದ ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ನಟಿ ರಾಧಾ ಭಗವತಿ, ಸಂಗೀತ ನಿರ್ದೇಶಕ ಹಾಗೂ ಛಾಯಾಗ್ರಾಹಕ ಸುನಾದ್ ಗೌತಮ್, ಸಂಕಲನಕಾರ ಹರ್ಷಿತ್ ಪ್ರಭು ಚಿತ್ರದ ಬಗ್ಗೆ ಮಾತನಾಡಿದರು. ಕದ್ದು ಮುಚ್ಚಿ ಸಿನಿಮಾ ನಂತರ ನಾನು ನಿರ್ಮಾಣ ಮಾಡಿರುವ ಚಿತ್ರವಿದು. ಸಹೋದರಿ ಪೂರ್ಣಿಮಾ ಕೂಡ ನಿರ್ಮಾಣದಲ್ಲಿ ಸಾಥ್ ನೀಡಿದ್ದಾರೆ. ನಿರ್ದೇಶಕ ಅಭಿಜಿತ್ ಅವರ ಶ್ರಮ ಈ ಚಿತ್ರಕ್ಕೆ ಸಾಕಷ್ಟಿದೆ ಎಂದು ನಿರ್ಮಾಪಕ ಮಂಜುನಾಥ್ ತಿಳಿಸಿದರು.
ವಿಭಾಗ