Zaid Khan Second Movie: ಎರಡನೇ ಚಿತ್ರಕ್ಕೆ ಝೈದ್ ಖಾನ್ ರೆಡಿ..ಶೀಘ್ರದಲ್ಲೇ ಅಧಿಕೃತ ಘೋಷಣೆ
'ಬನಾರಸ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಝೈದ್ ಖಾನ್ ನಟನೆಗೆ ಫುಲ್ ಮಾರ್ಕ್ಸ್ ದೊರೆತಿದೆ. ಈ ಕಾರಣದಿಂದಲೇ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಅವಕಾಶಗಳು ಒಲಿದು ಬರುತ್ತಿವೆ. ಖ್ಯಾತ ನಿರ್ದೇಶಕನೊಂದಿಗೆ ಝೈದ್ ಖಾನ್ ಎರಡನೇ ಸಿನಿಮಾಗೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ.
ಕಲಾವಿದರ ಮಕ್ಕಳು ಕಲಾವಿದರೇ ಆಗಬೇಕು, ರಾಜಕೀಯ ನಾಯಕರ ಮಕ್ಕಳು ರಾಜಕೀಯಕ್ಕೆ ಬರಬೇಕು ಎಂಬ ಕಾಲ ಈಗ ಬದಲಾಗಿದೆ. ಈಗ ಎಲ್ಲರೂ ತಮಗಿಷ್ಟವಾದ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ಮುನ್ನಡೆಯುತ್ತಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್, ಅಪ್ಪನಂತೆ ರಾಜಕೀಯಕ್ಕೆ ಹೋಗದೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವುದು ತಿಳಿದ ವಿಚಾರ.
ಝೈದ್ ಖಾನ್ ನಟನೆಯ ಮೊದಲ ಸಿನಿಮಾ 'ಬನಾರಸ್' ನವೆಂಬರ್ 4 ರಂದು ತೆರೆ ಕಂಡಿದೆ. ಚಿತ್ರದ ಹಾಡುಗಳು, ಕಥೆ, ಝೈದ್ ಖಾನ್ ನಟನೆಗೆ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೊದಲ ಸಿನಿಮಾ ರಿಲೀಸ್ ಆದ ಬೆನ್ನಲ್ಲೇ ಝೈದ್ ಖಾನ್ಗೆ ಹೊಸ ಚಿತ್ರದಲ್ಲಿ ನಟಿಸಲು ಆಫರ್ ಬಂದಿದೆ ಎನ್ನಲಾಗಿದೆ. 'ಬನಾರಸ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ ಝೈದ್ ಖಾನ್ ನಟನೆಗೆ ಫುಲ್ ಮಾರ್ಕ್ಸ್ ದೊರೆತಿದೆ. ಈ ಕಾರಣದಿಂದಲೇ ಅವರಿಗೆ ಸ್ಯಾಂಡಲ್ವುಡ್ನಲ್ಲಿ ಅವಕಾಶಗಳು ಒಲಿದು ಬರುತ್ತಿವೆ. ಖ್ಯಾತ ನಿರ್ದೇಶಕನೊಂದಿಗೆ ಝೈದ್ ಖಾನ್ ಎರಡನೇ ಸಿನಿಮಾಗೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗಿದೆ.
ಕೊರಿಯೋಗ್ರಾಫರ್ ಕಮ್ ಡೈರೆಕ್ಟರ್ ಎ. ಹರ್ಷ ಅವರೊಂದಿಗೆ ಝೈದ್ ಖಾನ್ ಎರಡನೇ ಸಿನಿಮಾ ಮಾಡುತ್ತಿದ್ದಾರೆ ಎಂಬ ಸುದ್ದಿ ಸ್ಯಾಂಡಲ್ವುಡ್ನಲ್ಲಿ ಹರಿದಾಡುತ್ತಿದೆ. ಝೈದ್ ಖಾನ್ ಆಗಲೀ, ಎ ಹರ್ಷ ಆಗಲೀ ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಹರ್ಷ ನಿರ್ದೇಶನದಲ್ಲಿ ಝೈದ್ ಖಾನ್ ನಟಿಸುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಸದ್ಯಕ್ಕೆ ಹರ್ಷ, 'ವೇದ' ರಿಲೀಸ್ಗೆ ಕಾಯುತ್ತಿದ್ದು ಇದರ ನಂತರ ಝೈದ್ ಜೊತೆಗಿನ ಸಿನಿಮಾ ಕೆಲಸಗಳು ಆರಂಭವಾಗಬಹುದು ಎನ್ನಲಾಗುತ್ತಿದೆ. ಶಿವರಾಜ್ಕುಮಾರ್ ಅಭಿನಯದ 125ನೇ 'ವೇದ'. ತಮ್ಮ ಬ್ಯಾನರ್ ಮೂಲಕವೇ ಶಿವರಾಜ್ಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 1960 ಕಾಲಘಟ್ಟದ ಕಥೆ ಇರುವ ಸಿನಿಮಾ ಇದಾಗಿದೆ. ಡಿಸೆಂಬರ್ 23 ರಂದು 'ವೇದ' ತೆರೆಗೆ ಬರುತ್ತಿದೆ.
ಇನ್ನು ಝೈದ್ ಖಾನ್ ಅಭಿನಯದ 'ಬನಾರಸ್' ಚಿತ್ರದ ವಿಚಾರಕ್ಕೆ ಬರುವುದಾದರೆ, ಈ ಸಿನಿಮಾ ಆರಂಭವಾದಾಗಿನಿಂದ ಸಾಕಷ್ಟು ಹೈಪ್ ಕ್ರಿಯೇಟ್ ಆಗಿತ್ತು. ಸಿನಿಮಾ ಹಾಡುಗಳು, ಟ್ರೇಲರ್ ತೆರೆ ಕಂಡಾಗಲಂತೂ ಝೈದ್, ನಟನೆ ನೋಡಲು ಸಿನಿಪ್ರಿಯರು ಕಾಯುತ್ತಿದ್ದರು. ಅಕ್ಟೋಬರ್ 22 ರಂದು ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ ಆವರಣದಲ್ಲಿ 'ಬನಾರಸ್' ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭೇಟಿ ನೀಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ದರು. ದರ್ಶನ್ ಜೊತೆಗೆ, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು.
'ಬನಾರಸ್' ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿ ಒಟ್ಟು 5 ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾದ ಪ್ಯಾನ್ ಇಂಡಿಯಾ ಸಿನಿಮಾ. ಚಿತ್ರವನ್ನು ತಿಲಕ್ರಾಜ್ ಬಲ್ಲಾಳ್ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. 'ಪಂಚತಂತ್ರ' ಖ್ಯಾತಿಯ ಸೋನಲ್ ಮೊಂತೇರೋ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ.