ಶ್ರೇಷ್ಠಾಳಂತೆ ಕುಸುಮಾ, ಭಾಗ್ಯಾ ಮೇಲೆ ದರ್ಪ ತೋರಿಸಲು ಶುರು ಮಾಡಿದ ಮನೆ ಕೆಲಸದವಳು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 11ರ ಎಪಿಸೋಡ್ನಲ್ಲಿ ತಾನು ಆಫೀಸಿಗೆ ಹೋದಾಗ ಮನೆ ಕೆಲಸ ಮಾಡಲು ಶ್ರೇಷ್ಠಾ, ಮನೆ ಕೆಲಸದವಳನ್ನು ಕರೆ ತರುತ್ತಾಳೆ. ಆದರೆ ಶ್ರೇಷ್ಠಾಳಂತೆ ಮನೆ ಕೆಲಸದವಳು ಕೂಡಾ ಕುಸುಮಾ, ಭಾಗ್ಯಾ ಮೇಲೆ ದರ್ಪ ತೋರಿಸುತ್ತಾಳೆ. ಇದನ್ನು ಕಂಡು ಕುಸುಮಾ, ಭಾಗ್ಯಾ ಸಿಟ್ಟಾಗುತ್ತಾರೆ.

Bhagyalakshmi Serial: ಶ್ರೇಷ್ಠಾ ವರ್ತನೆ ಅತಿಯಾಗುತ್ತಿದೆ. ಮದುವೆ ಆಗದೆ ತಾಂಡವ್ ಮನೆಗೆ ಬಂದು ಸೇರಿಕೊಂಡಿರುವ ಶ್ರೇಷ್ಠಾ, ಅಧಿಕಪ್ರಸಂಗ ಮಾಡುತ್ತಿದ್ದಾಳೆ. ಅವಳನ್ನು ಮನೆಯೊಳಗೆ ಬಿಟ್ಟುಕೊಂಡಿದ್ದು ತಪ್ಪಾಯ್ತು ಎನ್ನುವಷ್ಟರ ಮಟ್ಟಿಗೆ, ನಾನೇ ಈ ಮನೆಯ ಸೊಸೆ ಎಂದು ದರ್ಪ ತೋರುತ್ತಿದ್ದಾಳೆ.
ಸೋಲು ಒಪ್ಪಿಕೊಳ್ಳದ ಶ್ರೇಷ್ಠಾ
ಸತ್ಯನಾರಾಯಣ ಪೂಜೆಯಲ್ಲಿ ಶ್ರೇಷ್ಠಾಗೆ ಪ್ರಸಾದ ಮಾಡಲು ಬರದೆ, ಭಾಗ್ಯಾ ದೇವರಿಗೆ ನೈವೇದ್ಯ ತಯಾರಿ ಮಾಡುತ್ತಾಳೆ. ತಾನೇ ಎಲ್ಲರಿಗೂ ತಾಂಬೂಲ ಕೊಡುವೆ ಎಂದು ಖುಷಿಯಿಂದ ತಾಂಬೂಲದ ತಟ್ಟೆಯನ್ನು ಕಸಿದುಕೊಂಡಿದ್ದ ಶ್ರೇಷ್ಠಾಗೆ ನೆರೆಹೊರೆಯವರು ಮುಖಭಂಗವಾಗುವಂತೆ ಮಾಡುತ್ತಾರೆ. ಈ ಮನೆ ಸೊಸೆ ಭಾಗ್ಯಾ, ಅವಳು ಕೊಟ್ಟರೆ ಮಾತ್ರ ನಾವು ತಾಂಬೂಲ ತೆಗೆದುಕೊಳ್ಳುವುದು ಎಂದು ಹೇಳಿದ್ದರು. ನಾನು ಸೋಲು ಇಲ್ಲಿಗೆ ಬಂದಿಲ್ಲ. ಗೆಲ್ಲಲು ಬಂದಿರುವುದು, ಗೆದ್ದು ತೋರಿಸುತ್ತೇನೆ ಎಂದು ಶ್ರೇಷ್ಠಾ ಎಲ್ಲರ ಮುಂದೆ ಮತ್ತೆ ಸವಾಲು ಹಾಕುತ್ತಾಳೆ. ನಾನು ಭಾಗ್ಯಾಳನ್ನು ಅನುಸರಿಸಿದರೆ ಆಗುವುದಿಲ್ಲ, ಇನ್ಮುಂದೆ ಶ್ರೇಷ್ಠಾ ಆಗಿಯೇ ಎಲ್ಲರಿಗೂ ಬುದ್ಧಿ ಕಲಿಸುತ್ತೇನೆ ಎಂದು ನಿರ್ಧರಿಸುತ್ತಾಳೆ.
ಮರುದಿನ ಆಫೀಸಿಗೆ ಹೊರಡುವ ಶ್ರೇಷ್ಠಾ, ಮನೆ ಕೆಲಸ ಮಾಡಲು ಕೆಲಸದವಳನ್ನು ಗೊತ್ತು ಮಾಡುತ್ತಾಳೆ. ಮನೆ ಕೆಲಸ ಮಾಡಲು ಕಂಡಿಷನ್ ಮೇಲೆ ಕಂಡಿಷನ್ ಹಾಕುವ ಕೆಲಸದವಳು ಎಲ್ಲಾ ಕೆಲವನ್ನು ಮಾಡಿ ಮುಗಿಸುತ್ತಾಳೆ. ಇದೇ ಖುಷಿಗೆ ಶ್ರೇಷ್ಠಾ ಎಲ್ಲರನ್ನೂ ಡೈನಿಂಗ್ ಟೇಬಲ್ ಬಳಿ ಕೂರಿಸಿ, ಇನ್ಮುಂದೆ ನಾನು ಕೆಲಸಕ್ಕೆ ಹೋಗುತ್ತೇನೆ, ಮನೆ ಕೆಲಸ ಮಾಡಲು ಇವಳನ್ನು ಕರೆದು ತಂದಿರುವೆ ಎಂದು ಪರಿಚಯ ಮಾಡಿಸುತ್ತಾಳೆ. ಸೊಸೆ ಎಂದರೆ ಮನೆ ಕೆಲಸದವಳನ್ನು ಇಟ್ಟು ಮನೆ ನಿಭಾಯಿಸುವುದಾ? ಎಂದು ಪೂಜಾ ಕೇಳುತ್ತಾಳೆ. ಸೊಸೆ ಎಂದರೆ ಆಫೀಸಿನಲ್ಲೂ ಕೆಲಸ ಮಾಡಿ, ಮನೆ ಕೆಲಸವನ್ನೂ ನಿಭಾಯಿಸುವುದು, ಅದನ್ನು ಶ್ರೇಷ್ಠಾ ಸರಿಯಾಗಿ ಮಾಡುತ್ತಿದ್ದಾಳೆ ಎಂದು ತಾಂಡವ್ ಹೇಳುತ್ತಾನೆ. ಶ್ರೇಷ್ಠಾ ಹಾಗೂ ತಾಂಡವ್ ಬಹಳ ಕ್ಲೋಸ್ ಇರುವುದನ್ನು ನೋಡಿ ಭಾಗ್ಯಾಗೆ ದುಃಖ ಉಮ್ಮಳಿಸಿ ಬರುತ್ತದೆ.
ಮನೆ ಕೆಲಸದವಳ ದರ್ಬಾರ್
ನನ್ನ ಸ್ಥಾನವನ್ನು ಮನೆ ಕೆಲಸದವಳು ತುಂಬುತ್ತಾಳೆ ಅಂತ ನನಗೆ ಗೊತ್ತಿರಲಿಲ್ಲ ಎಂದು ಕಣ್ಣೀರಿಡುತ್ತಾಳೆ. ನೀನು ಯೋಚಿಸಬೇಡ, ನಾನು ನಿನ್ನೊಂದಿಗೆ ಇರುವೆ, ಅದು ಹೇಗೆ ಶ್ರೇಷ್ಠಾ ಈ ಮನೆ ಸೊಸೆ ಆಗುತ್ತಾಳೆ ನಾನು ನೋಡುವೆ ಎಂದು ಕುಸುಮಾ ಹೇಳುತ್ತಾಳೆ. ಆಫೀಸಿಗೆ ಹೊರಡುವ ಶ್ರೇಷ್ಠಾ ಹಾಗೂ ತಾಂಡವ್ನನ್ನು ನಿಲ್ಲಿಸಿ ಮನೆ ಕೆಲಸದವಳು ಮತ್ತೆ ಕಂಡಿಷನ್ ಹಾಕುತ್ತಾಳೆ. ನಾನು ಬೆಳಗಿನಿಂದ ಸಂಜೆವರೆಗೂ ಇಲ್ಲಿ ಇರಬೇಕೆಂದರೆ ನನ್ನ ಕಂಡಿಷನ್ಗೆ ನೀವು ಒಪ್ಪಬೇಕು. ನನಗೆ ಮನೆಯಲ್ಲಿ ಧಾರಾವಾಹಿ ನೋಡಲು ಅವಕಾಶ ಮಾಡಿಕೊಡಬೇಕು. ಮಧ್ಯಾಹ್ನ 1 ಗಂಟೆ ನಿದ್ರೆ ಮಾಡುತ್ತೇನೆ, ಸಂಜೆ 7ಕ್ಕೆ ವಾಪಸ್ ಹೋಗುತ್ತೇನೆ ಎನ್ನುತ್ತಾಳೆ. ಅವಳ ಕಂಡಿಷನ್ ಅತಿ ಎನಿಸಿದರೂ ತಲೆನೋವು ತಪ್ಪಿದರೆ ಸಾಕು ಅಂತ ತಾಂಡವ್,ಶ್ರೇಷ್ಠಾ ಇಬ್ಬರೂ ಆಕೆಯ ಕಂಡಿಷನ್ಗೆ ಒಪ್ಪುತ್ತಾರೆ.
ಒಲೆ ಮೇಲೆ ಇಟ್ಟ ಅಡುಗೆಯನ್ನು ಮರೆತು ಮನೆ ಕೆಲಸದವಳು ಟಿವಿ ನೋಡುತ್ತಾ ಕೂರುತ್ತಾಳೆ. ಅವಳನ್ನು ನೋಡಿ ಭಾಗ್ಯಾ ಸಿಟ್ಟಾಗುತ್ತಾಳೆ. ಆದರೂ ನಾನೇ ಈ ಮನೆ ಯಜಮಾನಿ ಎನ್ನುವಂತೆ ಕೆಲಸದವಳು ವರ್ತಿಸುತ್ತಾಳೆ. ಅಷ್ಟರಲ್ಲಿ ಕುಸುಮಾ ಅಲ್ಲಿಗೆ ಬರುತ್ತಾಳೆ. ಬಾಯಿಗೆ ಬಂದಂತೆ ಮಾತನಾಡುವ ಕೆಲಸದವಳಿಗೆ ಕಪಾಳಮೋಕ್ಷ ಮಾಡುತ್ತಾಳೆ. ಅದೇ ಸಿಟ್ಟಿಗೆ ಕೆಲಸದವಳು ಕುಸುಮಾಳನ್ನು ತಳ್ಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಬಂದು ಬೀಳುತ್ತಿದ್ದ ಅತ್ತೆಯನ್ನು ಹಿಡಿದುಕೊಳ್ಳುತ್ತಾಳೆ. ನನಗೆ ಆರ್ಡರ್ ಮಾಡುವ ಹಕ್ಕು ಇರೋದು ಈ ಮನೆ ಸೊಸೆ ಶ್ರೇಷ್ಠಾಗೆ ಮಾತ್ರ ಎಂದು ಕೆಲಸದವಳು ಹೇಳುತ್ತಾಳೆ.
ಆಫೀಸಿನಲ್ಲಿದ್ದ ತಾಂಡವ್ಗೆ ಕುಸುಮಾ ಕರೆ ಮಾಡುತ್ತಾಳೆ. ಆದರೆ ಶ್ರೇಷ್ಠಾ, ಮೊಬೈಲನ್ನು ಸೈಲೆಂಟ್ ಇಡುತ್ತಾಳೆ. ಅಷ್ಟರಲ್ಲಿ ಶ್ರೇಷ್ಠಾ ಮೊಬೈಲ್ಗೆ ಕೆಲಸದವಳು ನಿಮ್ಮ ಮನೆಯಲ್ಲಿ ನನಗೆ ಅನ್ಯಾಯ ಆಗಿದೆ, ನಾನು ಸಂಘಕ್ಕೆ ದೂರು ಕೊಡುತ್ತೇನೆ ಎಂದು ಮೆಸೇಜ್ ಮಾಡುತ್ತಾಳೆ. ಅದನ್ನು ನೋಡಿ ಶ್ರೇಷ್ಠಾ, ಗಾಬರಿಯಿಂದ ಮನೆಗೆ ಹೋಗುತ್ತಾಳೆ. ತಾಂಡವ್ ಕಾಲ್ ರಿಸೀವ್ ಮಾಡುತ್ತಿಲ್ಲ ಎಂದು ಕುಸುಮಾ, ಬಾಸ್ಗೆ ಕರೆ ಮಾಡುತ್ತಾಳೆ. ಆಫೀಸ್ ಬಾಯ್ ಬಂದು ತಾಂಡವ್ಗೆ ಸುದ್ದಿ ಮುಟ್ಟಿಸುತ್ತಾನೆ. ಮೊಬೈಲ್ ಚೆಕ್ ಮಾಡಿದಾಗ ತಾಂಡವ್ ಅಮ್ಮನ ಮಿಸ್ಡ್ ಕಾಲ್ಗಳನ್ನು ನೋಡುತ್ತಾನೆ. ಏನೋ ಆಗಿರಬಹುದೆಂದು ಅಮ್ಮನಿಗೆ ಕರೆ ಮಾಡುತ್ತಾನೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ