ಶೂ ಪಾಲೀಶ್ ಕೆಲಸ ಮಾಡಿ ಹಣ ಸಂಪಾದಿಸಿದ ಗುಂಡಣ್ಣ; ಮಗನ ಬಗ್ಗೆ ಭಾಗ್ಯಗೆ ಬಂತು ಅನುಮಾನ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಗುಂಡಣ್ಣ ಶಾಲೆಗೆ ಚಕ್ಕರ್ ಹೊಡೆದು, ಅಮ್ಮನಿಗೆ ಸಹಾಯ ಮಾಡುವ ಸಲುವಾಗಿ ಶೂ ಪಾಲೀಶ್ ಕೆಲಸ ಮಾಡುತ್ತಿದ್ದಾನೆ. ಅದರಿಂದ ಬಂದ ಹಣದಲ್ಲಿ ಅಮ್ಮ ಭಾಗ್ಯನಿಗೆ ಸಹಾಯ ಮಾಡುವ ಗುರಿ ಅವನದ್ದು.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 13ರ ಸಂಚಿಕೆಯಲ್ಲಿ ಗುಂಡಣ್ಣನನ್ನು ಶಾಲೆಗೆ ಬಿಡಲು ಭಾಗ್ಯ ಹೋಗಿದ್ದಾಳೆ. ಆ ಸಂದರ್ಭದಲ್ಲಿ ಗುಂಡಣ್ಣನ ಬ್ಯಾಗ್ನಲ್ಲಿ ಶೂ ಪಾಲೀಶ್ ಕಿಟ್ ಸಿಕ್ಕಿದೆ. ಅದನ್ನು ನೋಡಿ ಅವಳಿಗೆ ಅನುಮಾನ ಬಂದಿದೆ. ಯಾಕೋ ಗುಂಡಣ್ಣ ಇದನ್ನೆಲ್ಲಾ ಬ್ಯಾಗ್ಗೆ ಹಾಕಿಕೊಂಡಿದ್ದೀ ಎಂದು ಕೇಳುತ್ತಾಳೆ. ಆಗ ಗುಂಡಣ್ಣ, ಅದು ನಾನು ಹಾಕಿಕೊಂಡಿಲ್ಲ, ಹೇಗೋ ಸೇರಿಕೊಂಡಿರಬೇಕು, ಇರಲಿ, ಸಂಜೆ ವಾಪಸ್ ತಂದು ಇಡುತ್ತೇನೆ ಎಂದು ಹೇಳುತ್ತಾನೆ. ಆದರೆ ಭಾಗ್ಯ, ಅದನ್ನೆಲ್ಲಾ ಸ್ಕೂಲ್ಗೆ ತೆಗೆದುಕೊಂಡು ಹೋಗಬಾರದು, ಇಲ್ಲಿ ಕೊಡು, ನಾನೇ ತೆಗೆದುಕೊಂಡು ಹೋಗುತ್ತೇನೆ ಎಂದು ವಾಪಸ್ ತೆಗೆದುಕೊಂಡು ಹೋಗುತ್ತಾಳೆ. ಗುಂಡಣ್ಣ ಪೆಚ್ಚು ಮೋರೆ ಹಾಕಿಕೊಂಡು ನಿಲ್ಲುತ್ತಾನೆ.
ಶೂ ಪಾಲೀಶ್ ಕಿಟ್ ತೆಗೆದುಕೊಂಡು ಹೋಗಿ ಅದರಿಂದ ಸ್ವಲ್ಪ ಹಣ ಸಂಪಾದಿಸುತ್ತೇನೆ, ಅಮ್ಮನಿಗೆ ಸಹಾಯವಾಗಬಹುದು ಎಂದುಕೊಂಡಿದ್ದ ಗುಂಡಣ್ಣನಿಗೆ ಈಗ ನಿರಾಸೆಯಾಗಿದೆ. ಅವನು ಮುಂದೇನು ಮಾಡುವುದು ಎಂದು ಯೋಚಿಸುತ್ತಾ ನಿಲ್ಲುತ್ತಾನೆ, ಭಾಗ್ಯ ಕೆಲಸಕ್ಕೆ ಹೋಗಿರುತ್ತಾಳೆ. ಆಗ ಗುಂಡಣ್ಣನಿಗೆ ರಸ್ತೆ ಬದಿ ಶೂ ಪಾಲೀಶ್ ಮಾಡುವವ ಕಾಣಿಸುತ್ತಾನೆ, ಅವನ ಬಳಿ ಹೋಗಿ ಗುಂಡಣ್ಣ, ನನಗೆ ಶಾಲೆಯಲ್ಲಿ ಕ್ರಾಫ್ಟ್ ಮಾಡಲಿಕ್ಕಿದೆ, ಹೀಗಾಗಿ ನಿಮ್ಮ ಶೂ ಪಾಲೀಶ್ ಕಿಟ್ ಕೊಡಬಹುದೇ ಎಂದು ಕೇಳುತ್ತಾನೆ, ಶಾಲೆಯಲ್ಲಿ ಕ್ರಾಫ್ಟ್ ಕೆಲಸ ಇರಬಹುದು ಎಂದು ಪಾಲೀಶ್ ಅಂಗಡಿಯವ ಕಿಟ್ ಕೊಡುತ್ತಾನೆ.
ಶೂ ಪಾಲೀಶ್ ಕಿಟ್ ಹಿಡಿದುಕೊಂಡು ಬಂದ ಗುಂಡಣ್ಣ, ಪಕ್ಕದ ರಸ್ತೆಗೆ ಹೋಗಿ, ಅಲ್ಲಿ ರಸ್ತೆ ಬದಿ ಕುಳಿತು ಶೂ ಪಾಲೀಶ್, ಶೂ ಪಾಲೀಶ್ ಎಂದು ಜನರನ್ನು ಕೂಗಿ ಕರೆದಿದ್ದಾನೆ. ಒಬ್ಬೊಬ್ಬರೇ ಬಂದು ಶೂ ಪಾಲೀಶ್ ಮಾಡಿಸಿಕೊಂಡು ಹೋಗಿದ್ದಾರೆ. ಅವರು ಕೊಟ್ಟ ದುಡ್ಡನ್ನು ಗುಂಡಣ್ಣ ಜೋಪಾನವಾಗಿ ತೆಗೆದಿಟ್ಟುಕೊಂಡಿದ್ದಾನೆ. ನಂತರ ಸಂಜೆ ವಾಪಸ್ ಬಂದು, ಪಾಲೀಶ್ ಅಂಗಡಿಯವನಿಗೆ ಅವರ ಕಿಟ್ ಕೊಟ್ಟಿದ್ದಾನೆ. ಇವನ ಶರ್ಟ್ನಲ್ಲಿ ಪಾಲೀಶ್ನ ಕೊಳೆ ನೋಡಿದ ಪಾಲೀಶ್ನವನು, ನಿನಗೆ ಮನೆಯಲ್ಲಿ ಬೈಗುಳ ಖಂಡಿತಾ.. ಯಾಕೆಂದರೆ ಅಷ್ಟೊಂದು ಕೊಳೆ ಮಾಡಿಕೊಂಡಿದ್ದೀ ಎನ್ನುತ್ತಾನೆ. ಆಗ ಗುಂಡಣ್ಣ ಬಾಟಲಿ ನೀರಿನಿಂದ ಶರ್ಟ್ನ ಕೊಳೆ ತೊಳೆಯಲು ಯತ್ನಿಸಿದ್ದಾನೆ. ಕೊಳೆ ಹೋಗಿಲ್ಲ.
ಶರ್ಟ್ನಲ್ಲಿ ಕೊಳೆ ಪತ್ತೆಹಚ್ಚಿದ ಭಾಗ್ಯ
ಫ್ರೆಂಡ್ ಮನೆಗೆ ಹೋಗಿ ಬರುತ್ತೇನೆ ಎಂದು ಗುಂಡಣ್ಣ ತಡವಾಗಿ ಮನೆಗೆ ಬಂದಿದ್ದಾನೆ. ಸಂಜೆ ಅವನ ಶರ್ಟ್ನಲ್ಲಿ ಕೊಳೆ ನೋಡಿ ಮನೆಯವರಿಗೂ ಸಂಶಯ ಬಂದಿದೆ, ಹೀಗಾಗಿ ಅವನು ಕೂಡಲೇ ರೂಮ್ಗೆ ಹೋಗಿದ್ದಾನೆ. ಬಳಿಕ ಸ್ನಾನ ಮಾಡಲು ಹೋಗಿದ್ದಾನೆ. ಅಷ್ಟರಲ್ಲಿ ಭಾಗ್ಯ ಮನೆಗೆ ಬಂದಿದ್ದಾಳೆ. ಬಂದವಳೇ ಗುಂಡಣ್ಣನ ಸ್ಕೂಲ್ ಶರ್ಟ್ ನೋಡಿದ್ದಾಳೆ. ಅದರಲ್ಲಿ ಕೊಳೆ ಇರುವುದನ್ನು ಗಮನಿಸಿದ್ದಾಳೆ. ಜತೆಗೆ ಚಡ್ಡಿಯ ಜೇಬಿನಲ್ಲಿ ಸ್ವಲ್ಪ ಹಣವೂ ಕಂಡುಬಂದಿದೆ, ಗುಂಡಣ್ಣನ ಬಗ್ಗೆ ಭಾಗ್ಯಗೆ ಈಗ ಸಂಶಯ ಬಂದಿದೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಮಾರ್ಚ್ 13ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 740ನೇ ಸಂಚಿಕೆ ಮುಗಿಸಿದೆ. ಭಾಗ್ಯ ಯಾವ ರೀತಿ ಗುಂಡಣ್ಣನನ್ನು ವಿಚಾರಿಸುತ್ತಾಳೆ ಎಂದು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ