ಭಾಗ್ಯ ಫುಡ್ ಬಿಜಿನೆಸ್‌ಗೆ ಕಲ್ಲು ಹಾಕಿದ ಕನ್ನಿಕಾ; ಲೈಸನ್ಸ್ ಇಲ್ಲವೆಂದು ಬಂದ್ ಮಾಡಿದ ಅಧಿಕಾರಿಗಳು: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯ ಫುಡ್ ಬಿಜಿನೆಸ್‌ಗೆ ಕಲ್ಲು ಹಾಕಿದ ಕನ್ನಿಕಾ; ಲೈಸನ್ಸ್ ಇಲ್ಲವೆಂದು ಬಂದ್ ಮಾಡಿದ ಅಧಿಕಾರಿಗಳು: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯ ಫುಡ್ ಬಿಜಿನೆಸ್‌ಗೆ ಕಲ್ಲು ಹಾಕಿದ ಕನ್ನಿಕಾ; ಲೈಸನ್ಸ್ ಇಲ್ಲವೆಂದು ಬಂದ್ ಮಾಡಿದ ಅಧಿಕಾರಿಗಳು: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಭಾಗ್ಯಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದೆ. ಭಾಗ್ಯ ನಡೆಸುತ್ತಿದ್ದ ಹೋಮ್ ಫುಡ್ ಬಿಜಿನೆಸ್‌ಗೆ ಲೈಸನ್ಸ್ ಇಲ್ಲವೆಂದು ಅಧಿಕಾರಿಗಳು ಬಂದು ದಾಳಿ ಮಾಡಿ, ಎಲ್ಲವನ್ನೂ ಸೀಜ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರ ಏಪ್ರಿಲ್ 14ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಸೋಮವಾರ ಏಪ್ರಿಲ್ 14ರ ಸಂಚಿಕೆ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರ ಏಪ್ರಿಲ್ 14ರ ಸಂಚಿಕೆಯಲ್ಲಿ ಕುಸುಮಾ ಮತ್ತು ಧರ್ಮರಾಜ್ ರೆಗ್ಯುಲರ್ ಚೆಕಪ್‌ಗೆ ಎಂದು ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿ ಹೊರಗಡೆ ತಾಂಡವ್ ಕಾರು ಇರುವುದನ್ನು ಗಮನಿಸಿದ್ದಾರೆ. ತಾಂಡವ್ ಪತ್ನಿ ಶ್ರೇಷ್ಠಾ ಜೊತೆ ಆಸ್ಪತ್ರೆಗೆ ಬಂದು ವೈದ್ಯರನ್ನು ಭೇಟಿಯಾಗಿದ್ದಾನೆ. ವೈದ್ಯರು ತಾಂಡವ್‌ನನ್ನು ಪರಿಶೀಲಿಸಿ, ಮಾತ್ರೆ ಬರೆದುಕೊಟ್ಟಿದ್ದಾರೆ. ನಿಮಗೆ ಹೊರಗಿನ ಊಟ ಒಗ್ಗುವುದಿಲ್ಲ, ಹಾಗಿದ್ದರೂ ಪಾರ್ಸೆಲ್ ಯಾಕೆ ಬೇಕು? ಮನೆಯ ಊಟವನ್ನೇ ಮಾಡಿ, ಪಾರ್ಸೆಲ್ ತಂದು ತಿನ್ನಬೇಡಿ ಎಂದು ಎಚ್ಚರಿಸಿದ್ದಾರೆ. ಈ ಮಾತುಗಳನ್ನು ಹೊರಗಡೆ ನಿಂತ ಕುಸುಮಾ ಕೇಳಿಸಿಕೊಂಡಿದ್ದಾಳೆ. ಚೆಕಪ್ ಮುಗಿಸಿಕೊಂಡು ತಾಂಡವ್ ಮತ್ತು ಶ್ರೇಷ್ಠಾ ಹೊರಗಡೆ ಬಂದಿದ್ದಾರೆ.

ಹೊರಗಡೆ ಕುಸುಮಾ ಮತ್ತು ಧರ್ಮರಾಜ್ ಕಂಡು ತಾಂಡವ್ ದಂಗಾಗಿದ್ದಾನೆ. ಅವನನ್ನು ಕಂಡ ಕುಸುಮಾ, ಏನಪ್ಪಾ ತಾಂಡವ್, ಚೆನ್ನಾಗಿದ್ದೀಯಾ ಎಂದು ಛೇಡಿಸಿದ್ದಾಳೆ. ಅಲ್ಲದೆ, ಹೆಂಡತಿ ಮಾಡುವ ಅಡುಗೆಯನ್ನು ಟೀಕಿಸಿದ್ದಾಳೆ. ಅದನ್ನು ತಿಂದೇ ನಿನಗೆ ಈ ಗತಿ ಬಂದಿದೆ. ಮನೆಯಲ್ಲಿ ಇರುವಾಗ ಒಳ್ಳೆಯ ಊಟ ಸಿಗುತ್ತಿತ್ತು, ಆದರೆ ಈಗ ಹೀಗಾಗಿದೆ, ಇನ್ನು ಕೂಡ ಪಾರ್ಸೆಲ್ ಊಟವೇ ತಿಂದರೆ ಏನು ಕಥೆ ಎಂದು ಹೇಳಿದ್ದಾಳೆ. ಅದನ್ನು ಕೇಳಿ ತಾಂಡವ್ ಮತ್ತು ಶ್ರೇಷ್ಠಾಗೆ ಉರಿದುಹೋಗಿದೆ. ಇಬ್ಬರೂ ಅಲ್ಲಿಂದ ಹೊರಟಿದ್ದಾರೆ.

ಆಫೀಸ್‌ಗೆ ಹೋದಾಗ ಅಲ್ಲಿ ತಾಂಡವ್‌ನ ಸಹೋದ್ಯೋಗಿ, ಭಾಗ್ಯಳ ಮನೆ ಊಟ ಪಾರ್ಸೆಲ್ ತರಿಸಿಕೊಂಡು ತಿನ್ನುತ್ತಿದ್ದಾನೆ. ಅದನ್ನು ಕಂಡು ತಾಂಡವ್ ಕೂಡ ಆಸೆಯಿಂದ, ಅವನಲ್ಲಿರುವ ಊಟವನ್ನು ಕೇಳಿ ತೆಗೆದುಕೊಂಡು ತಿಂದಿದ್ದಾನೆ. ಊಟ ಮಾಡಿ ಎಷ್ಟೋ ದಿನ ಆಗಿರುವಂತೆ, ಗಬಗಬನೇ ತಿಂದು ಮುಗಿಸಿದ್ದಾನೆ.

ಮತ್ತೊಂದೆಡೆ ಮನೆಯಲ್ಲಿ ಭಾಗ್ಯ, ಊಟದ ಆರ್ಡರ್ ಪಡೆದುಕೊಂಡು ಅದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಳೆ. ಅಷ್ಟರಲ್ಲಿ ಆಹಾರ ಇಲಾಖೆಯ ಅಧಿಕಾರಿಗಳು ಬಂದು ಭಾಗ್ಯಳ ಮನೆ ಬಾಗಿಲು ಬಡಿದಿದ್ದಾರೆ. ನಾವು ಫುಡ್ ಇನ್ಸ್‌ಪೆಕ್ಟರ್, ನೀವು ಲೈಸನ್ಸ್ ಇಲ್ಲದೇ ಊಟ ತಯಾರಿಸಿ ಕೊಡುತ್ತಿದ್ದೀರಿ, ಇದಕ್ಕೆಲ್ಲಾ ಅನುಮತಿ ಪಡೆದುಕೊಳ್ಳಬೇಕು, ಇಲ್ಲವಾದರೆ ಊಟದ ಸರ್ವಿಸ್ ನೀಡುವ ಹಾಗಿಲ್ಲ ಎಂದು ಹೇಳಿ, ಇನ್ನು ಮುಂದೆ ಹೀಗೆ ಮಾಡುವಂತಿಲ್ಲ ಎಂದು ಎಚ್ಚರಿಸಿದ್ದಾರೆ. ಇದಕ್ಕೆಲ್ಲಾ ಕನ್ನಿಕಾ ಕುತಂತ್ರವೇ ಕಾರಣ ಎಂದು ಭಾಗ್ಯಗೆ ಅರಿವಾಗಿಲ್ಲ. ಹೀಗಾಗಿ ಭಾಗ್ಯಳ ಕೈತುತ್ತಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಜತೆಗೆ ಭಾಗ್ಯ ತಯಾರಿಸಿದ್ದ ಅಡುಗೆಯನ್ನು ಸೀಜ್ ಮಾಡಿ ಅಲ್ಲಿಂದ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಸೋಮವಾರದ ಏಪ್ರಿಲ್ 14ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 762ನೇ ಸಂಚಿಕೆ ಮುಗಿಸಿದೆ. ಭಾಗ್ಯ ಈಗ ಮತ್ತೆ ತಾಂಡವ್, ಶ್ರೇಷ್ಠಾ ಮತ್ತು ಕನ್ನಿಕಾಳ ಹೊಸ ಸಂಚನ್ನು ಹೇಗೆ ಎದುರಿಸುತ್ತಾಳೆ, ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in
Whats_app_banner