ನನ್ನನ್ನು ಅಪ್ಪ-ಅಮ್ಮನಿಂದ ದೂರ ಮಾಡಿದ ಪಾಪ ನಿನ್ನನ್ನು ಬಿಡೊಲ್ಲ,ಭಾಗ್ಯಾಗೆ ಶಾಪ ಹಾಕಿ ಮನೆಯಿಂದ ಹೊರನಡೆದ ತಾಂಡವ್: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 16ರ ಎಪಿಸೋಡ್ನಲ್ಲಿ ನನಗೆ ಬೆಲೆ ಕೊಡದ ಅಪ್ಪ ಅಮ್ಮ ನನಗೆ ಬೇಡ, ಇನ್ಮುಂದೆ ಈ ಮನೆಯೂ ನಿಂದೇ, ಮನೆಯವರೂ ನಿನ್ನವರೇ ಅದು ಹೇಗೆ ಎಲ್ಲರನ್ನೂ ಸಂಭಾಳಿಸುವ ನಾನು ನೋಡುತ್ತೇನೆ ಎಂದು ಭಾಗ್ಯಾಗೆ ಚಾಲೆಂಜ್ ಹಾಕುವ ತಾಂಡವ್, ಮನೆ ಬಿಟ್ಟು ಶ್ರೇಷ್ಠಾ ಜೊತೆ ಹೋಗುತ್ತಾನೆ.

Bhagyalakshmi Serial: ಅಮ್ಮನಿಗೆ ಮನೆ ಕೆಲಸದವಳು ಅವಮಾನ ಮಾಡಿದ್ದಾಳೆ ಎಂಬ ಕಾರಣಕ್ಕೆ ಶ್ರೇಷ್ಠಾ ಮೇಲೆ ತಾಂಡವ್ ಕೋಪಗೊಳ್ಳುತ್ತಾನೆ. ಆದರೆ ಇದೆಲ್ಲಾ ನಿನ್ನ ಅಮ್ಮ ಹಾಗೂ ಮನೆಯವರು ಸೇರಿ ಮಾಡುತ್ತಿರುವ ನಾಟಕ ಎಂದು ಶ್ರೇಷ್ಠಾ ಹೇಳಿದರೂ ತಾಂಡವ್ ನಂಬುವುದಿಲ್ಲ. ನಾನು ಪ್ರೂವ್ ಮಾಡುತ್ತೇನೆ ಎಂದು ಶ್ರೇಷ್ಠಾ, ಮನೆಯವರಿಗೆ ಕಾಣದಂತೆ ತಾಂಡವ್ನನ್ನು ಕರೆದುಕೊಂಡು ಬಂದು ಮೆಟ್ಟಿಲ ಬಳಿ ನಿಲ್ಲುತ್ತಾಳೆ.
ಲಗ್ಗೇಜ್ ಸಹಿತ ಮನೆ ಬಿಟ್ಟಲು ಹೊರಟ ತಾಂಡವ್
ಆಗಲೇ ತಾಂಡವ್ಗೆ ಎಲ್ಲರೂ ನಾಟಕವಾಡುತ್ತಿರುವ ವಿಚಾರ ತಿಳಿಯುತ್ತದೆ. ಶ್ರೇಷ್ಠಾ ಕಪಿಮುಷ್ಠಯಿಂದ ತಾಂಡವ್ ಹೊರ ಬರುತ್ತಿದ್ದಾನೆ ಎಂದುಕೊಂಡವರಿಗೆ ಶಾಕ್ ಕಾದಿರುತ್ತದೆ. ತಾಂಡವ್, ಲಗ್ಗೇಜ್ ಸಹಿತ ಮನೆಯಿಂದ ಹೊರಡಲು ಮುಂದಾಗುತ್ತಾನೆ. ಇಷ್ಟು ದಿನ ನೀವು ನನ್ನ ಪರ ಇದ್ದೀರಿ ಎಂದು ತಿಳಿದುಕೊಂಡಿದ್ದೆ, ಆದರೆ ನೀವೆಲ್ಲಾ ನಾಟಕ ಮಾಡುತ್ತಿರುವುದು ನನಗೆ ಗೊತ್ತಾಗಿದೆ. ನಿಮ್ಮ ಕಾಟ ನನಗೆ ತಡೆಯಲು ಆಗುತ್ತಿಲ್ಲ. ನಾನು ಹಾಗೂ ಶ್ರೇಷ್ಠಾ ಮನೆ ಬಿಟ್ಟು ಹೋಗುತ್ತೇವೆ ಎನ್ನುತ್ತಾನೆ. ಅದನ್ನು ಕೇಳಿ ಎಲ್ಲರಿಗೂ ಶಾಕ್ ಆಗುತ್ತದೆ.
ಇಷ್ಟು ದಿನ ನಿನಗೆ ಅಪ್ಪ-ಅಮ್ಮ ಬೇಕಿತ್ತು, ಈ ಮನೆಹಾಳಿ ಬಂದ ನಂತರ ಅಪ್ಪ ಅಮ್ಮ ನಿನಗೆ ಕಾಟ ಕೊಡುತ್ತಾರೆ ಅನ್ನಿಸುತ್ತಿದ್ಯಾ? ಎಂದು ಕುಸುಮಾ ಕೇಳುತ್ತಾಳೆ. ಅದಕ್ಕೆ ಪ್ರತಿಕ್ರಿಯಿಸುವ ತಾಂಡವ್, ನಿನ್ನ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ, ಅದಕ್ಕೂ ಮುನ್ನ ನೀವು ನನ್ನ ಪ್ರಶ್ನೆಗಳಿಗೆ ಉತ್ತರಿಸು, ಈ ಮನೆಯಲ್ಲಿ ನಾನು ಇರಬೇಕು ಅಥವಾ ಭಾಗ್ಯಾ ಇರಬೇಕಾ ಎಂದು ಕೇಳುತ್ತಾನೆ. ಮಗನ ಮಾತಿಗೆ ಕುಸುಮಾಗೆ ಏನು ಹೇಳಬೇಕೆಂದು ತಿಳಿಯುವುದಿಲ್ಲ. ಮೌನ ಮುರಿಯುವ ಧರ್ಮರಾಜ್, ಇದಕ್ಕೆ ನಾನು ಉತ್ತರಿಸುತ್ತೇನೆ. ನಮಗೆ ಎಂದೆಂದಿಗೂ ಭಾಗ್ಯಾಳೇ ಮುಖ್ಯ. ಅವಳಿಗೂ ನಿನಗೂ ಹೋಲಿಗೆ ಇಲ್ಲವೇ ಇಲ್ಲ ಎನ್ನುತ್ತಾನೆ. ಇದನ್ನು ಕೇಳಿ ತಾಂಡವ್ ಸಿಟ್ಟಾಗುತ್ತಾನೆ.
ತಾಂಡವ್ನನ್ನು ಪಡೆದೇ ತೀರುತ್ತೇನೆ ಎಂದು ಸವಾಲು ಹಾಕಿದ ಶ್ರೇಷ್ಠಾ
ಸರಿ ಹಾಗಿದ್ರೆ ಗೌರವ ಇಲ್ಲದೆ ಮನೆಯಲ್ಲಿ ನಾನು ಇರಲು ಇಷ್ಟಪಡುವುದಿಲ್ಲ. ನಾನು ನನ್ನ ಹೆಂಡತಿ ಶ್ರೇಷ್ಠಾ ಜೊತೆ ಈ ಮನೆ ಬಿಟ್ಟು ಹೋಗುತ್ತಿದ್ದೇನೆ ಎನ್ನುತ್ತಾನೆ. ಭಾಗ್ಯಾ ಎದುರು ಬಂದು ನಿಲ್ಲುವ ತಾಂಡವ್, ನೀನು ಈ ಮನೆಗೆ ದರಿದ್ರ, ಅಪ್ಪ ಅಮ್ಮನನ್ನು ನನ್ನಿಂದ ದೂರ ಮಾಡಿದ ಪಾಪ ನಿನ್ನನ್ನು ಎಂದಿಗೂ ಬಿಡುವುದಿಲ್ಲ. ಅದೇಗೆ ನೀನು ಇವರನ್ನೆಲ್ಲಾ ಸಾಕುವ ನಾನೂ ನೋಡುತ್ತೇನೆ. ಇನ್ಮುಂದೆ ಈ ಮನೆಯೂ ನಿನ್ನದು, ಈ ಮನೆಯವರೂ ನಿನ್ನವರು ಎಂದು ಹೇಳಿ ಶ್ರೇಷ್ಠಾ ಕೈ ಹಿಡಿದು ಮನೆಯಿಂದ ಹೊರ ಹೋಗುತ್ತಾನೆ. ನಿನಗೆ ನೋವು ಕೊಟ್ಟವರಿಗೆ ಕೆಲವು ಮಾತುಗಳನ್ನು ಹೇಳಬೇಕು ಇಲ್ಲೇ ಇರು ಎಂದು ಹೇಳಿ ಮತ್ತೆ ಮನೆ ಒಳಗೆ ಬರುವ ಶ್ರೇಷ್ಠಾ, ತಾಂಡವ್ನನ್ನು ನನ್ನವನ್ನಾಗಿ ಮಾಡಿಕೊಂಡೇ ತೀರುತ್ತೇನೆ ಎಂದು ಚಾಲೆಂಜ್ ಹಾಕಿ ಹೋಗುತ್ತಾಳೆ. ತಾಂಡವ್-ಶ್ರೇಷ್ಠಾ ವರ್ತನೆ ಮನೆಯವರಿಗೆ ನೋವುಂಟು ಮಾಡುತ್ತದೆ.
ಸ್ನೇಹಿತನ ಮನೆಗೆ ಹೋಗುವ ತಾಂಡವ್ ಅಪ್ಪ-ಅಮ್ಮನ ಮಾತುಗಳನ್ನೇ ನೆನಪಿಸಿಕೊಳ್ಳುತ್ತಾನೆ. ಹಸಿ ಸಿಮೆಂಟ್ ಸ್ಲ್ಯಾಬ್ ಮೇಲೆ ಇಬ್ಬರೂ ಹೆಜ್ಜೆ ಇಡೋಣ, ನಾವಿಬ್ಬರೂ ಸಾಧ್ಯವಾದಷ್ಟೂ ನೆನಪುಗಳನ್ನು ಕ್ರಿಯೇಟ್ ಮಾಡಿಕೊಳ್ಳಬೇಕು ಎಂದು ಶ್ರೇಷ್ಠಾ ತಾಂಡವ್ ಕೈ ಹಿಡಿದು ಸ್ಲ್ಯಾಬ್ ಮೇಲೆ ಹೆಜ್ಜೆ ಇಡುತ್ತಾಳೆ. ಆದರೆ ಜಾರಿ ಕೆಳಗೆ ಬೀಳುತ್ತಾಳೆ. ಅವಳು ಬಿದ್ದರೂ ತಾಂಡವ್ ಮೇಲೆ ಎತ್ತುವುದಿಲ್ಲ. ತಾಂಡವ್ ಗಮನ ಮನೆ ಕಡೆ ಇದೆ, ನನ್ನ ಕಡೆ ಗಮನ ಕೊಡದಿದ್ದರೆ ಕಷ್ಟ ಎಂದುಕೊಳ್ಳುವ ಶ್ರೇಷ್ಠಾ, ನಿನ್ನನ್ನು ಯಾರೂ ದೂರ ಮಾಡಿದರೂ ನಾನು ಮಾಡುವುದಿಲ್ಲ ಎನ್ನುತ್ತಾಳೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
