ಅಡೆತಡೆಗಳನ್ನು ಎದುರಿಸಿ ಮುನ್ನುಗ್ಗುತ್ತಿದ್ದಾಳೆ ಭಾಗ್ಯ; ಮತ್ತೆ ಮತ್ತೆ ಸೋಲುತ್ತಿದ್ದಾಳೆ ಕನ್ನಿಕಾ: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕಥಾನಾಯಕಿ ಭಾಗ್ಯಳಿಗೆ ಒಂದರ ಮೇಲೊಂದರಂತೆ ಕಷ್ಟಗಳು ಬರುತ್ತಿವೆ. ಆದರೂ ಆಕೆ ಅವೆಲ್ಲವನ್ನೂ ಎದುರಿಸಿ, ಧೈರ್ಯದಿಂದ ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾಳೆ. ಅವಳಿಗೆ ಅಡ್ಡಗಾಲು ಹಾಕಿದವರಿಗೆ ಸರಿಯಾದ ರೀತಿಯಲ್ಲೇ ಉತ್ತರಿಸುತ್ತಿದ್ದಾಳೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಳಿಗೆ ಒಂದು ಕಷ್ಟ ಮುಗಿಯಿತು ಎನ್ನುವಾಗ ಇನ್ನೊಂದು ಕಷ್ಟ ಆರಂಭವಾಗುತ್ತಿದೆ. ಭಾಗ್ಯಳನ್ನು ಹೇಗಾದರೂ ಮಾಡಿ ಸೋಲಿಸಬೇಕು ಮತ್ತು ಅವಳು ಜೀವನದಲ್ಲಿ ಉದ್ದಾರ ಆಗಬಾರದು ಎಂದು ಬಯಸುವವರು ಬಹಳಷ್ಟು ಮಂದಿ ಇದ್ದಾರೆ. ಆದರೆ ಆಕೆ ಮಾತ್ರ ಎಲ್ಲವನ್ನೂ ಎದುರಿಸಿ, ಧೈರ್ಯದಿಂದ ಮುನ್ನುಗ್ಗುತ್ತಿದ್ದಾಳೆ. ಒಂದೆಡೆ ತಾಂಡವ್ ಮತ್ತು ಶ್ರೇಷ್ಠಾ ಭಾಗ್ಯಳ ಜೀವನಕ್ಕೆ ಕಲ್ಲು ಹಾಕಲು ಯತ್ನಿಸುತ್ತಿದ್ದರೆ, ಮತ್ತೊಂದೆಡೆ ಕನ್ನಿಕಾ ಕೂಡ ಸಾಧ್ಯವಾದಷ್ಟು ಕಿರುಕುಳ ಕೊಡುತ್ತಿದ್ದಾಳೆ. ಇನ್ನೊಂದೆಡೆ ಮನೆಯಲ್ಲಿ ಕೂಡ ಅವಳು ಮನೆ ಕೆಲಸ, ಮಕ್ಕಳ ಶಾಲೆ, ಮನೆ ಇಎಂಐ, ಕಾರಿನ ಇಎಂಐ ಅದು ಇದು ಮತ್ತೊಂದು ಎಂದು ಎಲ್ಲವನ್ನೂ ನಿಭಾಯಿಸಬೇಕಿದೆ. ಆದರೂ ಭಾಗ್ಯ ಎದೆಗುಂದಿಲ್ಲ.
ಹಾಗೆಯೇ, ಮತ್ತೊಂದೆಡೆ ಭಾಗ್ಯ ನಡೆಸುತ್ತಿದ್ದ ಫುಡ್ ಬಿಜಿನೆಸ್ಗೆ ತೊಂದರೆ ಮಾಡಲು ಕನ್ನಿಕಾ ಸಂಚು ರೂಪಿಸಿದ್ದಳು. ಅದಕ್ಕೆ ತಾಂಡವ್ ಮತ್ತು ಶ್ರೇಷ್ಠಾ ಸೇರಿಕೊಂಡು ಕುಮ್ಮಕ್ಕು ನೀಡಿದ್ದರು. ಆದರೆ ಅವರ ಸಂಚು ಫಲಿಸಲಿಲ್ಲ. ಭಾಗ್ಯಳ ಮನೆಗೆ ಬಂದು ಫುಡ್ ಇನ್ಸ್ಪೆಕ್ಟರ್ ಅವಳು ತಯಾರಿಸಿದ್ದ ಆಹಾರವನ್ನು ಜಪ್ತಿ ಮಾಡಿ ತೆಗೆದುಕೊಂಡು ಹೋಗಿದ್ದರು. ಜಪ್ತಿ ಮಾಡಿದ್ದ ಆಹಾರವನ್ನು ಇಲಾಖೆಯ ಸಿಬ್ಬಂದಿ ಮನಸೋ ಇಚ್ಛೆ ಸವಿದಿದ್ದರು. ಆದರೆ ಇನ್ಸ್ಪೆಕ್ಟರ್ ಮಾತ್ರ, ಕನ್ನಿಕಾ ಸೂಚನೆಯಂತೆ ಭಾಗ್ಯಳಿಗೆ ಫುಡ್ ಲೈಸನ್ಸ್ ತಪ್ಪಿಸಲು ಸಂಚು ರೂಪಿಸಿದ್ದ. ಹೀಗಾಗಿ ಅವನು ಹಾಳಾಗಿರುವ ಆಹಾರವನ್ನು ಲ್ಯಾಬ್ಗೆ ಕಳುಹಿಸಲು ಮುಂದಾಗಿದ್ದ.
ಆದರೆ ಭಾಗ್ಯಳ ಅದೃಷ್ಟ ಚೆನ್ನಾಗಿತ್ತು, ಅವಳು ಆಹಾರ ಇಲಾಖೆಗೆ ಬಂದಾಗ, ಅಲ್ಲಿನ ಭ್ರಷ್ಟ ಇನ್ಸ್ಪೆಕ್ಟರ್, ನನಗೆ ಕನ್ನಿಕಾ ದುಡ್ಡು ಕೊಟ್ಟಿದ್ದಾಳೆ. ಹೀಗಾಗಿ ಅವಳ ಪರವಾಗಿ ಕೆಲಸ ಮಾಡುತ್ತಿದ್ದೇನೆ, ನಿನಗೆ ಲೈಸನ್ಸ್ ಸಿಗುವುದಿಲ್ಲ, ಏನಾದರೂ ಮಾಡಿಕೋ ಎಂದು ಎಚ್ಚರಿಕೆ ಕೊಟ್ಟಿದ್ದಾನೆ. ಆದರೆ ಭಾಗ್ಯಳಿಗೆ ಇಲ್ಲಿ ಕನ್ನಿಕಾ ಕುತಂತ್ರ ಕೆಲಸ ಮಾಡಿರುವುದು ಮತ್ತು ಇನ್ಸ್ಪೆಕ್ಟರ್ ದುಡ್ಡು ಪಡೆದುಕೊಂಡಿರುವುದು ಮೊದಲೇ ಗೊತ್ತಿತ್ತು. ಹೀಗಾಗಿ ಆಕೆ ಹೆದರದೇ, ನೇರವಾಗಿ ಆಹಾರ ಇಲಾಖೆಯ ನಿರ್ದೇಶಕರ ಬಳಿ ಹೋಗಿ, ತನಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾಳೆ.
ನಿರ್ದೇಶಕರು ಕೂಡ ಅವಳ ಕಷ್ಟ ಕೇಳಿ, ಭಾಗ್ಯಳಿಗೆ ನ್ಯಾಯ ಕೊಡಿಸಿದ್ದಾರೆ. ಜತೆಗೆ ಕುತಂತ್ರ ಮಾಡಲು ಬಂದ ಕನ್ನಿಕಾಗೆ ಸರಿಯಾಗಿಯೇ ಬುದ್ದಿ ಹೇಳಿ ಕಳುಹಿಸಿದ್ದಾರೆ. ಭಾಗ್ಯಳಿಗೆ ಸಿಗಬೇಕಿದ್ದ ಫುಡ್ ಲೈಸನ್ಸ್, ನ್ಯಾಯವಾಗಿಯೇ ಸಿಕ್ಕಿದೆ, ಅಹಂಕಾರದ ಮಾತಾಡಿದ್ದ ಫುಡ್ ಇನ್ಸ್ಪೆಕ್ಟರ್ಗೆ ಸಸ್ಪೆಂಡ್ ಆದೇಶವನ್ನು ನಿರ್ದೇಶಕರು ನೀಡಿದ್ದಾರೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಶುಕ್ರವಾರದ ಏಪ್ರಿಲ್ 18ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 766ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ