ಸರಿಯಾಗಿ ಊಟ ಇಲ್ಲ ಕಾಳಜಿ ಮಾಡುವವರೂ ಇಲ್ಲ, ಶುರುವಾಯ್ತು ತಾಂಡವ್ ಕಷ್ಟದ ದಿನಗಳು; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 20ರ ಎಪಿಸೋಡ್ನಲ್ಲಿ ಶ್ರೇಷ್ಠಾ ಜೊತೆ ಖುಷಿಯಾಗಿರಬಹುದು ಎಂದು ಮನೆ ಬಿಟ್ಟು ಹೋದ ತಾಂಡವ್ಗೆ ಒಂದೊಂದಾಗಿ ಕಷ್ಟದ ದಿನಗಳು ಆರಂಭವಾಗಿದೆ. ಭಾಗ್ಯಾಳಂತೆ ಶ್ರೇಷ್ಠಾಗೆ ಅಡುಗೆ ಮಾಡುವುದಿಲ್ಲ,ಕಾಳಜಿ ಮಾಡಲು ಬರುವುದಿಲ್ಲ ಎಂಬುದು ನಿಧಾನವಾಗಿ ಅರ್ಥವಾಗುತ್ತಿದೆ.

Bhagyalakshmi Serial: ಶ್ರೇಷ್ಠಾಳೇ ನನಗೆ ಸರಿಯಾದ ಜೋಡಿ, ಅವಳ ಜೊತೆ ನಾನು ಯಾವಾಗಲೂ ಖುಷಿಯಾಗಿರುತ್ತೇನೆ ಎಂದು ತಾಂಡವ್, ಅವಳ ಜೊತೆ ಬೇರೆ ಮನೆ ಮಾಡಿದ್ದಾನೆ. ಹಬ್ಬದ ದಿನ ಶ್ರೇಷ್ಠಾ ಹೋಟೆಲ್ನಿಂದ ಊಟ ತರಿಸಿ, ನಾನೇ ಮಾಡಿದ್ದು ಎಂದು ಸುಳ್ಳು ಹೇಳಿ ತಾಂಡವ್ಗೆ ಬಡಿಸುತ್ತಾಳೆ. ತಾಂಡವ್ ಕೂಡಾ ಅದನ್ನು ನಂಬಿ ಖುಷಿಯಿಂದ ಊಟ ಮಾಡುತ್ತಾನೆ. ಇನ್ಮುಂದೆ ನಿನಗೆ ನಿನ್ನ ಮನೆ, ಮನೆಯವರ ನೆನಪೇ ಬಾರದಂತೆ ನೋಡಿಕೊಳ್ಳುತ್ತೇನೆ ಎಂದು ಶ್ರೇಷ್ಠಾ ಹೇಳಿದಾಗ ತಾಂಡವ್ ಸಂತೋಷಕ್ಕೆ ಮಿತಿಯೇ ಇಲ್ಲದಂತೆ ಆಗುತ್ತದೆ, ಆದರೆ ಮರುದಿನದಿಂದಲೇ ಅವನ ಕಷ್ಟದ ದಿನಗಳು ಆರಂಭವಾಗುತ್ತದೆ.
ನಿನ್ನ ಕೆಲಸ ನೀನೇ ಮಾಡಿಕೊ ಎಂದ ಶ್ರೇಷ್ಠಾ
ಬೆಳಗ್ಗೆ ಎದ್ದ ಕೂಡಲೇ ತಾಂಡವ್ ಆಫೀಸಿಗೆ ಹೊರಡಲು ರೆಡಿ ಆಗುತ್ತಾನೆ, ಆದರೆ ತನ್ನ ವಸ್ತುಗಳು ಕೈಗೆ ಸಿಗದೆ ಪರದಾಡುತ್ತಾನೆ. ಭಾಗ್ಯಾ ಆದರೆ ಎಲ್ಲವನ್ನೂ ರೆಡಿ ಮಾಡಿ ಇಡುತ್ತಿದ್ದಳು, ಬಟ್ಟೆ ಕೂಡಾ ಐರನ್ ಮಾಡಿಲ್ಲ ಈ ಶ್ರೇಷ್ಠಾ ಏನೂ ಮಾಡಿಲ್ಲ ಎಂದು ಗೊಣಗುತ್ತಾನೆ, ಅಷ್ಟಕ್ಕೂ ನಾನೇಕೆ ಭಾಗ್ಯಾಳನ್ನು ನೆನಪಿಸಿಕೊಳ್ಳುತ್ತಿದ್ದೇನೆ, ಅವಳು ಬೇಡ ಎಂದು ತಾನೇ ನಾನು ಇಲ್ಲಿಗೆ ಬಂದಿದ್ದು ಎಂದು ತನಗೆ ತಾನೆ ಸಮಾಧಾನ ಮಾಡಿಕೊಳ್ಳುತ್ತಾನೆ, ನಾನು ಮನೆಯಿಂದ ದೂರ ಇದ್ದೇನೆ ಎಂದು ಒಂದು ಕ್ಷಣ ಮರೆತು ಮರೆತು ಭಾಗ್ಯಾ ಎಂದು ಕರೆಯುತ್ತಾನೆ, ತಪ್ಪಿನ ಅರಿವಾಗಿ ಶ್ರೇಷ್ಠಾಳನ್ನು ಕರೆಯುತ್ತಾನೆ. ಶ್ರೇಷ್ಠಾ ಆಗಲೇ ಆಫೀಸಿಗೆ ಹೊರಡಲು ರೆಡಿ ಆಗಿರುತ್ತಾಳೆ.
ನಾಳೆಯಿಂದ ನನ್ನ ಬಟ್ಟೆಗಳನ್ನು ನೀನೇ ಐರನ್ ಮಾಡಿಕೊಡಬೇಕು ಎನ್ನುತ್ತಾನೆ, ನನಗೆ ಅಷ್ಟೆಲ್ಲಾ ಮಾಡೋಕೆ ಸಮಯ ಇಲ್ಲ, ನಾನೂ ಮೀಟಿಂಗ್ಗೆ ಹೊರಡಬೇಕು, ಅರ್ಥ ಮಾಡಿಕೋ ಎಂದು ಹೇಳಿ ಮನೆಯಿಂದ ಹೊರಡುತ್ತಾಳೆ. ಹೊಟ್ಟೆ ಹಸಿವಾಗುತ್ತಿದೆ ತಿಂಡಿ ಅದರೂ ತಿನ್ನೋಣ ಎಂದು ಅಡುಗೆ ಮನೆಗೆ ಹೋಗಿ ಹುಡುಕಿದರೂ ಶ್ರೇಷ್ಠಾ ತಿಂಡಿ ಕೂಡಾ ಮಾಡಿರುವುದಿಲ್ಲ. ಶ್ರೇಷ್ಠಾಗೆ ಫೋನ್ ಮಾಡಿ, ತಿಂಡಿ ಏಕೆ ಮಾಡಿಲ್ಲ ಎಂದು ಕೇಳುತ್ತಾನೆ. ನನಗೆ ಮೀಟಿಂಗ್ ಇದೆ, ಅದೆಲ್ಲಾ ಮಾಡಿಕೊಂಡು ಕೂರೂಕೆ ಆಗೊಲ್ಲ, ನೀನು ಆಫೀಸ್ ಕ್ಯಾಂಟೀನ್ಗೆ ಬಂದು ತಿನ್ನು, ಇಲ್ಲವಾದರೆ ಏನಾದರೂ ಆರ್ಡರ್ ಮಾಡಿಕೋ ಎನ್ನುತ್ತಾಳೆ. ತಾಂಡವ್ ಬೇಸರದಿಂದಲೇ ಆಫೀಸಿಗೆ ಹೊರಡುತ್ತಾನೆ.
ಹೋಟೆಲ್ ಊಟ ತಿನ್ನಲು ನಿರಾಕರಿಸಿದ ತಾಂಡವ್
ಮಧ್ಯಾಹ್ನ ಮೀಟಿಂಗ್ ಕೂಡಾ ಸರಿಯಾಗಿ ಮಾಡದೆ ಬೇಗನೆ ಮುಗಿಸುತ್ತಾನೆ, ಸಹೋದ್ಯೋಗಿಗಳು ತಾಂಡವ್ ವರ್ತನೆ ಕಂಡು ಆಶ್ಚರ್ಯಗೊಳ್ಳುತ್ತಾರೆ. ಮೊದಲೆಲ್ಲಾ ಹೆಚ್ಚು ಸಮಯ ಮೀಟಿಂಗ್ ಮಾಡುತ್ತಿದ್ದ ತಾಂಡವ್ ಇವರೇನಾ? ಇವತ್ತು ಇಷ್ಟು ಬೇಗ ಊಟಕ್ಕೆ ಬಿಡುತ್ತಿದ್ದಾರೆ ಎಂದು ಮಾತನಾಡಿಕೊಳ್ಳುತ್ತಾರೆ. ತಾಂಡವ್, ತನ್ನ ಕ್ಯಾಬಿನ್ಗೆ ಹೋಗಿ ಕೂರುತ್ತಾನೆ, ಅಷ್ಟರಲ್ಲಿ ಅಲ್ಲಿಗೆ ಬರುವ ಶ್ರೇಷ್ಠಾ ಅವನ ಕೈ ಹಿಡಿದು ಕರೆದೊಯ್ಯುತ್ತಾಳೆ. ಶ್ರೇಷ್ಠಾ, ಹೋಟೆಲ್ನಿಂದ ಆರ್ಡರ್ ಮಾಡಿದ ಊಟವನ್ನು ತಾಂಡವ್ ಮುಂದಿಟ್ಟು ಊಟ ಮಾಡಲು ಹೇಳುತ್ತಾಳೆ.
ನನಗೆ ಈ ಹೋಟೆಲ್ ಊಟ ಹಿಡಿಸುವುದಿಲ್ಲ. ನೀನು ಅಡುಗೆ ಕೂಡಾ ಮಾಡಲು ಆಗುವುದಿಲ್ಲವಾ ಎಂದು ಕೇಳುತ್ತಾನೆ. ಪದೇ ಪದೆ ಅಡುಗೆ ವಿಚಾರ ಮಾತನಾಡಬೇಡ, ನನಗೆ ಟೈಮ್ ಇಲ್ಲ ಎಂದು ಶ್ರೇಷ್ಠಾ ಹೇಳುತ್ತಾಳೆ. ನನಗೆ ಈ ಊಟ ಬೇಡ ಎಂದು ತಾಂಡವ್ ಅಲ್ಲಿಂದ ಎದ್ದು ಹೋಗುತ್ತಾನೆ. ಸಂಜೆ ಮನೆಗೆ ಬೇಗ ಬರುವ ಶ್ರೇಷ್ಠಾ, ಗೆಳತಿ ಹೇಳಿದ್ದನ್ನು ನೆನಪಿಸಿಕೊಳ್ಳುತ್ತಾಳೆ. ಭಾಗ್ಯಾ ಇಷ್ಟು ದಿನ ತಾಂಡವ್ಗೆ ಎಲ್ಲಾ ಮಾಡಿಕೊಡುತ್ತಿದ್ದಳು, ನೀನೂ ಹಾಗೇ ಇರಬೇಕು ಇಲ್ಲದಿದ್ದರೆ ಅವನು ನಿನ್ನ ಕೈ ತಪ್ಪಿ ಹೋಗಬೇಕು ಎಂದು ಹೇಳಿದ್ದು ನೆನಪಾಗುತ್ತದೆ, ನಾನೇ ಈಗ ನಿನಗೆ ಅಡುಗೆ ಮಾಡುತ್ತೇನೆ, ಇಷ್ಟು ದಿನ ಆ ಭಾಗ್ಯಾ ಮಾಡಿದ ಅನ್ನ,ಸಾಂಬಾರ್ ತಿಂದು ನಿನಗೆ ಬೇಸರ ಆಗಿರಬಹುದು, ಆದ್ದರಿಂದ ಇವತ್ತು ನಿನಗೆ ಕಾಂಟಿನೆಂಟಲ್ ಅಡುಗೆ ಮಾಡುತ್ತೇನೆ ಎಂದುಕೊಂಡು ಎಲ್ಲಾ ತಯಾರಿ ಮಾಡಿಕೊಳ್ಳುತ್ತಾಳೆ.
ಶ್ರೇಷ್ಠಾ ಮಾಡಿದ ಅಡುಗೆಯನ್ನು ತಾಂಡವ್ ಇಷ್ಟ ಪಟ್ಟು ತಿನ್ನುತ್ತಾನಾ? ಇನ್ಮುಂದೆಯಾದರೂ ಶ್ರೇಷ್ಠಾ, ಗೆಳತಿ ಹೇಳಿದಂತೆ ನಡೆದುಕೊಳ್ಳುತ್ತಾನಾ ಕಾದು ನೋಡಬೇಕು.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ