ಲಗ್ಗೇಜ್ ಸಹಿತ ಮನೆಗೆ ವಾಪಸ್ ಬಂದೇ ಬಿಟ್ಟ ತಾಂಡವ್, ಕನಸೋ ನಿಜವೋ ತಿಳಿಯದೆ, ಕೈ ಚಿವುಟಿಕೊಂಡ ಕುಸುಮಾ; ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿ ಜನವರಿ 21ರ ಎಪಿಸೋಡ್ನಲ್ಲಿ ನನ್ನ ಮಗ ಮನೆಗೆ ವಾಪಸ್ ಬಂದೇ ಬರುತ್ತಾನೆ ಎಂದು ಕುಸುಮಾ, ಮನೆಯವರ ಬಳಿ ಹೇಳುತ್ತಿದ್ದಂತೆ ತಾಂಡವ್, ಬಾಗಿಲಿನ ಬಳಿ ಪ್ರತ್ಯಕ್ಷವಾಗುತ್ತಾನೆ. ಅಪ್ಪ-ಅಮ್ಮನನ್ನು ಬಿಟ್ಟಿರಲಾಗದೆ ಮನೆಗೆ ವಾಪಸ್ ಬಂದೆ ಎಂದು ನಾಟಕ ಮಾಡುತ್ತಾನೆ.

Bhagyalakshmi Serial: ತಾಂಡವ್, ಶ್ರೇಷ್ಠಾ ಜೊತೆ ಖುಷಿಯಾಗಿ ಸಂಕ್ರಾಂತಿ ಹಬ್ಬ ಆಚರಿಸಿದ ನಂತರ ಇನ್ಮುಂದೆ ಜೀವನದಲ್ಲಿ ಇಷ್ಟೇ ಖುಷಿಯಾಗಿರಬಹುದು ಎಂದುಕೊಳ್ಳುತ್ತಾನೆ. ಆದರೆ ಕನಸಿನಲ್ಲೂ ಊಹಿಸಿರದಂತೆ ಮರುದಿನದಿಂದಲೇ ಕಷ್ಟದ ದಿನಗಳು ಶುರುವಾಗುತ್ತದೆ. ಶ್ರೇಷ್ಠಾ, ಎಂದಿನಂತೆ ವರಸೆ ಶುರು ಮಾಡುತ್ತಾಳೆ. ಮನೆಯಲ್ಲಿ ಯಾವ ಕೆಲಸವನ್ನೂ ಮಾಡದೆ, ಅಡುಗೆಯೂ ಮಾಡದೆ ಆಫೀಸಿಗೆ ಹೊರಡುತ್ತಾಳೆ.
ಅಡುಗೆ ಮಾಡದೆ ತಾಂಡವ್ ವಿಚಾರವಾಗಿ ನಿರ್ಲಕ್ಷ್ಯ ತೋರಿದ ಶ್ರೇಷ್ಠಾ
ತಾಂಡವ್ಗೆ ಹಸಿವು ತಾಳಲಾರದೆ ಶ್ರೇಷ್ಠಾ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾನೆ. ನನಗಂತೂ ಅಡುಗೆ ಮಾಡೋಕೆ ಟೈಮ್ ಇಲ್ಲ. ಆಫೀಸ್ ಕ್ಯಾಂಟೀನಲ್ಲಿ ತಿನ್ನು ಅಥವಾ ಆರ್ಡರ್ ಮಾಡಿಕೋ,ಇಬ್ಬರೂ ಫ್ರೀ ಆದಾಗ ಒಟ್ಟಿಗೆ ಸೇರಿ ಅಡುಗೆ ಮಾಡೋಣ ಎನ್ನುತ್ತಾಳೆ. ಶ್ರೇಷ್ಠಾ, ಅಡುಗೆ ವಿಚಾರವಾಗಿ ನಿರ್ಲಕ್ಷ್ಯ ತೋರುವುದು ತಾಂಡವ್ಗೆ ಹಿಂಸೆ ಆಗುತ್ತದೆ, ಮಧ್ಯಾಹ್ನ ಕೂಡಾ ಹಸಿವು ತಡೆಯದೆ ಡಬ್ಬಿಗಾಗಿ ಹುಡುಕುತ್ತಾನೆ. ಆದರೆ ತಾನು ಬಾಕ್ಸ್ ತಂದಿಲ್ಲ ಅನ್ನೋದು ನಂತರ ಅವನಿಗೆ ಅರಿವಾಗುತ್ತದೆ. ಆಗಲೂ ಶ್ರೇಷ್ಠಾ, ಹೋಟೆಲ್ನಿಂದ ಫುಡ್ ಆರ್ಡರ್ ಮಾಡಿ ಅದನ್ನು ತಿನ್ನುವಂತೆ ಹಿಂಸೆ ಮಾಡುತ್ತಾಳೆ. ನನಗೆ ಹೋಟೆಲ್ ಊಟ ಬೇಡವೇ ಬೇಡ ಎಂದು ತಾಂಡವ್ ಬೇಸರದಿಂದ ಎದ್ದು ಹೋಗುತ್ತಾನೆ.
ಇತ್ತ ತನ್ನ ಮಗಳ ಜೀವನ ಹಾಳಾಯ್ತಲ್ಲಾ ಎಂದು ಸುನಂದಾ ಅಳುತ್ತಲೇ ಇದ್ದಾಳೆ. ಭಾಗ್ಯಾ ಜೀವನ ಸರಿ ಮಾಡುತ್ತೇನೆ ಎಂದ ನೀವೆಲ್ಲರೂ ತಾಂಡವ್ನನ್ನು ಮನೆ ಬಿಟ್ಟು ಹೋಗುವಂತೆ ಮಾಡಿದಿರಿ, ನನ್ನ ಅಳಿಯ ಮನೆಗೆ ಬರುವವರೆಗೂ ನಾನು ಪ್ರತಿದಿನ ಭಾಗ್ಯಾ ಕೈಯಲ್ಲಿ ದೇವರ ಮುಂದೆ ದೀಪ ಬೆಳಗಿಸುತ್ತೇನೆ ಎಂದು ಹರಕೆ ಮಾಡಿಕೊಂಡಿರುವುದಾಗಿ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ, ಕೆಲಸದಿಂದ ಮನೆಗೆ ಬರುತ್ತಾಳೆ. ಅಮ್ಮ ಪ್ರತಿದಿನ ನೀನು ಇದೇ ವಿಚಾರವಾಗಿ ಜಗಳ ತೆಗೆಯಬೇಡ, ದಯವಿಟ್ಟು ಎಂದು ಮನವಿ ಮಾಡುತ್ತಾಳೆ. ನನ್ನ ಮಗ ಈ ಮನೆಗೆ ವಾಪಸ್ ಬಂದೇ ಬರುತ್ತಾನೆ, ಅದರಲ್ಲಿ ಎರಡು ಮಾತಿಲ್ಲ, ಆದಷ್ಟು ಬೇಗ ಅವನಿಗೆ ಆ ಶ್ರೇಷ್ಠಾ ಬುದ್ಧಿ ಅರ್ಥವಾಗುತ್ತದೆ ಎನ್ನುತ್ತಾಳೆ. ಕುಸುಮಾ ಈ ಮಾತು ಹೇಳುತ್ತಿದ್ದಂತೆ ಮನೆ ಬಾಗಿಲಿನ ಬಳಿ ತಾಂಡವ್, ಲಗ್ಗೇಜ್ ಸಹಿತ ಪ್ರತ್ಯಕ್ಷನಾಗುತ್ತಾನೆ.
ತಾಂಡವ್ ವಾಪಸ್ ಬಂದಿದ್ದನ್ನು ನೋಡಿ ಶಾಕ್ ಆದ ಮನೆಯವರು
ತಾಂಡವ್ನನ್ನು ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಇದು ಕನಸೋ, ನಿಜವೋ ಎಂದು ತಿಳಿಯದೆ ಕುಸುಮಾ ಕೈ ಚಿವುಟುವಂತೆ ಪೂಜಾಗೆ ಹೇಳುತ್ತಾಳೆ. ತಾಂಡವ್ ನಿಜವಾಗಿಯೂ ಮನೆಗೆ ವಾಪಸ್ ಬಂದಿರುವ ವಿಚಾರ ತಿಳಿದು ಸುನಂದಾ, ಕುಸುಮಾ ಅವನನ್ನು ಒಳಗೆ ಬರಮಾಡಿಕೊಳ್ಳುತ್ತಾರೆ. ತಾಂಡವ್ಗೆ ಜ್ಯೂಸ್ ಮಾಡಿಕೊಡುವಂತೆ ಸುನಂದಾ ಮಗಳಿಗೆ ಹೇಳುತ್ತಾಳೆ. ಅವರಿಬ್ಬರ ವರ್ತನೆ ಕಂಡು ಭಾಗ್ಯಾಗೆ ಇರುಸುಮುರುಸಾಗುತ್ತದೆ. ಮಗ ಮನೆಗೆ ಬಂದಿರುವ ಸುದ್ದಿ ಕೇಳಿ ಧರ್ಮರಾಜ್ ಕೆಳಗೆ ಬರುತ್ತಾರೆ. ನಾನು ಯಾವುದೋ ವಿಷ ಗಳಿಗೆಯಲ್ಲಿ ಮನೆ ಬಿಟ್ಟು ಹೋದೆ, ಅದರೆ ಅಪ್ಪ-ಅಮ್ಮ, ನಿಮ್ಮಿಬ್ಬರನ್ನು ಬಿಟ್ಟು ಇರಲು ನನಗೆ ಆಗುತ್ತಿಲ್ಲ, ನನಗೆ ನನ್ನದೇ ಆದ ಕೆಲವು ಜವಾಬ್ದಾರಿಗಳಿವೆ ಅದಕ್ಕೆ ವಾಪಸ್ ಬಂದೆ ಎಂದು ಮೊಸಳೆ ಕಣ್ಣೀರು ಹರಿಸುತ್ತಾನೆ. ತಾಂಡವ್ ಮಾಡುತ್ತಿರುವುದು ನಾಟಕ ಎಂದು ಧರ್ಮರಾಜ್, ಭಾಗ್ಯಾಗೆ ಗೊತ್ತಾಗುತ್ತದೆ, ಆದರೆ ಕುಸುಮಾ, ಸುನಂದಾ ಮಾತ್ರ ತಾಂಡವ್ ಪರ ನಿಲ್ಲುತ್ತಾರೆ.
ತಾಂಡವ್, ಯಾವ ಉದ್ದೇಶದಿಂದ ಮನೆಗೆ ವಾಪಸ್ ಬಂದಿದ್ದಾನೆ, ಈ ವಿಚಾರ ಶ್ರೇಷ್ಠಾಗೆ ಗೊತ್ತಾದರೆ ಹೇಗೆ ಪ್ರತಿಕ್ರಿಯಿಸುತ್ತಾಳೆ? ಮುಂದಿನ ಎಪಿಸೋಡ್ನಲ್ಲಿ ತಿಳಿಯಲಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ - ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್

ವಿಭಾಗ