ಕನ್ನಿಕಾ ಆಫೀಸ್‌ನಲ್ಲಿ ಅವಳ ಉದ್ಯೋಗಿಗಳ ಮುಂದೆಯೇ ಮಾನ ಹರಾಜು ಹಾಕಿದ ಕುಸುಮಾ: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಕನ್ನಿಕಾ ಆಫೀಸ್‌ನಲ್ಲಿ ಅವಳ ಉದ್ಯೋಗಿಗಳ ಮುಂದೆಯೇ ಮಾನ ಹರಾಜು ಹಾಕಿದ ಕುಸುಮಾ: ಭಾಗ್ಯಲಕ್ಷ್ಮೀ ಧಾರಾವಾಹಿ

ಕನ್ನಿಕಾ ಆಫೀಸ್‌ನಲ್ಲಿ ಅವಳ ಉದ್ಯೋಗಿಗಳ ಮುಂದೆಯೇ ಮಾನ ಹರಾಜು ಹಾಕಿದ ಕುಸುಮಾ: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 22ರ ಸಂಚಿಕೆಯಲ್ಲಿ ಕುಸುಮಾ, ಭಾಗ್ಯ ಮತ್ತು ಸುಂದರಿಯನ್ನು ಕರೆದುಕೊಂಡು ಕನ್ನಿಕಾ ಆಫೀಸ್‌ಗೆ ಹೋಗಿ, ಅಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ಊಟ ಕೊಟ್ಟಿದ್ದಾಳೆ. ನಂತರ ಕನ್ನಿಕಾಳ ಮಾನ ಹರಾಜು ಹಾಕಿದ್ದಾಳೆ.

ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 22ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 22ರ ಸಂಚಿಕೆ (Colors Kannada)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರ ಏಪ್ರಿಲ್ 22ರ ಸಂಚಿಕೆಯಲ್ಲಿ ಕುಸುಮಾ ಮತ್ತು ಭಾಗ್ಯ ಹಾಗೂ ಸುಂದರಿ ಕನ್ನಿಕಾ ಆಫೀಸ್‌ನಲ್ಲಿ ಅವಳ ಉದ್ಯೋಗಿಗಳಿಗೆ ಮನೆಯಿಂದ ತಂದ ಒಳ್ಳೆಯ ಊಟವನ್ನು ಕೊಟ್ಟಿದ್ದಾರೆ. ಅವರೆಲ್ಲರೂ ಮನಸೋ ಇಚ್ಛೆ ಖುಷಿಯಲ್ಲಿ ಊಟ ಮಾಡಿದ್ದಾರೆ. ಮತ್ತೆ ಮತ್ತೆ ಕೇಳಿ ಊಟ ಹಾಕಿಸಿಕೊಂಡಿದ್ದಾರೆ. ಅಷ್ಟರಲ್ಲಿ ಕನ್ನಿಕಾ ಅಲ್ಲಿಗೆ ಬಂದಿದ್ದಾಳೆ. ಕನ್ನಿಕಾಳನ್ನು ನೋಡಿ ಕುಸುಮಾ, ಬಾ ಬಾ ಕನ್ನಿಕಾ, ನೀನು ಬರುವುದು ತಡವಾಯಿತು ಎಂದು ಕೂಗಿ ಕರೆದಿದ್ದಾಳೆ. ಕನ್ನಿಕಾ ಕೋಪದಿಂದಲೇ ಅಲ್ಲಿಗೆ ಎಂಟ್ರಿ ಕೊಟ್ಟಿದ್ದಾಳೆ.

ಕನ್ನಿಕಾ ಬರುತ್ತಲೇ ಅವಳನ್ನು ನೋಡಿಯೂ ಉದ್ಯೋಗಿಗಳು ಊಟ ಮಾಡುವುದನ್ನು ಮುಂದುವರಿಸಿದ್ದಾರೆ. ಭಾಗ್ಯ ಮತ್ತು ಸುಂದರಿ ಅವರಿಗೆ ಬೇಕಾಗಿರುವುದನ್ನು ಬಡಿಸಿದ್ದಾರೆ. ಹೀಗೆ ಊಟ ಸಾಗಿದೆ. ಅಷ್ಟರಲ್ಲಿ ಕನ್ನಿಕಾ, ಯಾಕೆ ನನ್ನ ಆಫೀಸ್‌ಗೆ ಬಂದಿದ್ದೀರಿ? ಯಾರಲ್ಲಿ ಕೇಳಿ ಬಂದಿರಿ ಎಂದು ದಬಾಯಿಸಿದ್ದಾಳೆ. ಆಗ ಕುಸುಮಾ, ಕನ್ನಿಕಾಳನ್ನು ತಡೆದಿದ್ದಾಳೆ. ನೀನು ಯಾರಲ್ಲೂ ಹೇಳದೆ, ಕೇಳದೆ ಇನ್ನೊಬ್ಬರ ಮನೆಗೆ ಹೋಗಬಹುದು, ಏನು ಬೇಕಾದರೂ ಮಾತನಾಡಬಹುದು. ಆದರೆ ನಾವು ಮಾತ್ರ ನಿನ್ನ ಆಫೀಸ್‌ಗೆ ಬರಬಾರದಾ ಎಂದು ಕೇಳುತ್ತಾಳೆ. ಅದಕ್ಕೆ ಕನ್ನಿಕಾ ಪೆಚ್ಚಾಗುತ್ತಾಳೆ. ಕನ್ನಿಕಾಳ ಕುತಂತ್ರ ಅವಳಿಗೇ ತಿರುಗಿ ಬಂದಿರುವುದಕ್ಕೆ ಅವಳಿಗೆ ಕೋಪವೂ ಬಂದಿದೆ, ಅಸಹನೆಯೂ ಉಂಟಾಗಿದೆ.

ಅಷ್ಟಕ್ಕೇ ಸುಮ್ಮನಾಗದ ಕುಸುಮಾ, ಅಲ್ಲಿದ್ದ ಎಲ್ಲ ಉದ್ಯೋಗಿಗಳನ್ನು ಉದ್ದೇಶಿಸಿ, ನಿಮ್ಮ ಬಾಸ್ ಎಷ್ಟು ಕುತಂತ್ರಿ ಎನ್ನುವುದು ನಿಮಗೆ ಗೊತ್ತಿಲ್ಲ, ಅವಳು ಒಳ್ಳೆಯ ಉದ್ದೇಶಕ್ಕೆ ಕಲ್ಲು ಹಾಕುವವಳು, ನೀವು ಅವಳನ್ನು ನಂಬಿಕೊಂಡು ನಿಮ್ಮ ಕೆಲಸದಲ್ಲಿ ಒಳ್ಳೆಯ ಭವಿಷ್ಯವಿದೆ ಎಂದುಕೊಳ್ಳಬೇಡಿ. ಅವಳಿಂದ ನಿಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಹೀಗಾಗಿ ನೀವು ಸಾಧ್ಯವಾದಷ್ಟು ಬೇಗ ಬೇರೆ ಕೆಲಸ ನೋಡಿಕೊಳ್ಳಿ ಎಂದು ಹೇಳುತ್ತಾಳೆ. ಅವರಿಗೆ ಕುಸುಮಾ ಮಾತು ಕೇಳಿ ಹೆದರಿಕೆಯಾಗುತ್ತದೆ. ಆಗ ಕುಸುಮಾಳಿಗೆ ಕನ್ನಿಕಾ ಗದರುತ್ತಾಳೆ, ಇನ್ನೊಂದು ಮಾತು ಹೇಳಿದರೂ ನಾನು ಸುಮ್ಮನಿರುವುದಿಲ್ಲ ಎಂದು ಹೇಳುತ್ತಾಳೆ. ಆಗ ಭಾಗ್ಯ ಎದುರು ಬಂದು, ನನ್ನ ಅತ್ತೆಯ ವಿರುದ್ಧ ಮಾತನಾಡುವಾಗ ಹುಷಾರ್, ಎಚ್ಚರಿಕೆ ಇರಲಿ, ನಿನಗೆ ಮೊದಲೇ ಹೇಳಿದ್ದೇನೆ. ಹೀಗಾಗಿ ನೀನು ಅವರ ವಿಷಯದಲ್ಲಿ ತಲೆ ಹಾಕಬೇಡ, ಜಾಗ್ರತೆ ಮಾಡು ಎಂದು ಗದರುತ್ತಾಳೆ. ಭಾಗ್ಯಳ ಕೋಪದ ಅರಿವಿರುವ ಕನ್ನಿಕಾ ಹೆದರಿ ಸುಮ್ಮನಾಗುತ್ತಾಳೆ.

ನಂತರ ಭಾಗ್ಯ, ಕುಸುಮಾ ಮತ್ತು ಸುಂದರಿ ಅಲ್ಲಿಂದ ವಾಪಸ್ ಹೊರಡುತ್ತಾರೆ. ಇತ್ತ ತಾಂಡವ್, ಭಾಗ್ಯಳ ಊಟವನ್ನು ಆರ್ಡರ್ ಮಾಡಿ, ಅವಳಿಗೆ ಕೊಡಲು ಮನೆಗೆ ತೆಗೆದುಕೊಂಡು ಬಂದಿದ್ದಾನೆ, ಭಾಗ್ಯಳಿಗಿಂತ ಉತ್ತಮ ಅಡುಗೆ ಮಾಡುವವರು ಇದ್ದಾರೆ ಎಂದು ತೋರಿಸುವುದು ಅವನ ಉದ್ದೇಶವಾಗಿದೆ. ಆದರೆ ಅದು ಭಾಗ್ಯಳದ್ದೇ ಊಟ ಎನ್ನುವುದು ಅವನಿಗೆ ಅರಿವಿಲ್ಲ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಮಂಗಳವಾರದ ಏಪ್ರಿಲ್ 22ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 768ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in