ಭಾಗ್ಯ ಮನೆಗೇ ಬಂದು ಮತ್ತೆ ಮುಖಭಂಗ ಅನುಭವಿಸಿದ ತಾಂಡವ್; ರಟ್ಟಾಯಿತು ಕೈತುತ್ತಿನ ಗುಟ್ಟು: ಭಾಗ್ಯಲಕ್ಷ್ಮೀ ಧಾರಾವಾಹಿ
Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಏಪ್ರಿಲ್ 23ರ ಸಂಚಿಕೆಯಲ್ಲಿ ತಾಂಡವ್, ಭಾಗ್ಯ ಮನೆಗೆ ಕೈತುತ್ತು ಊಟದ ಡಬ್ಬಿ ಹಿಡಿದುಕೊಂಡು ಬಂದಿದ್ದಾನೆ. ಭಾಗ್ಯಳಿಗಿಂತ ಚೆನ್ನಾಗಿ ಅಡುಗೆ ಮಾಡುವ ವ್ಯಕ್ತಿ ಇದ್ದಾರೆ ಎನ್ನುವುದನ್ನು ತೋರಿಸಿಕೊಡುವುದು ಅವನ ಉದ್ದೇಶವಾಗಿತ್ತು. ಆದರೆ ಕೈತುತ್ತಿನ ಗುಟ್ಟು ಈಗ ರಟ್ಟಾಗಿದೆ.

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರ ಏಪ್ರಿಲ್ 23ರ ಸಂಚಿಕೆಯಲ್ಲಿ ತಾಂಡವ್ ಅತ್ಯಂತ ಉತ್ಸಾಹದಿಂದ ಭಾಗ್ಯ ಮನೆಗೆ ಬಂದಿದ್ದಾನೆ. ಬರುವಾಗ ಆಫೀಸ್ಗೆ ಆರ್ಡರ್ ಮಾಡಿದ್ದ ಭಾಗ್ಯಳ ಕೈತುತ್ತಿನ ಊಟದ ಬಾಕ್ಸ್ ಕೂಡ ಹಿಡಿದುಕೊಂಡು ಬಂದಿದ್ದಾನೆ. ಅವನು ಬಂದ ಸಮಯದಲ್ಲಿ ಭಾಗ್ಯ, ಕುಸುಮಾ ಮತ್ತು ಸುಂದರಿ ಮನೆಯಲ್ಲಿ ಇರಲಿಲ್ಲ. ಅವರು ಕನ್ನಿಕಾ ಆಫೀಸ್ಗೆ ಹೋಗಿದ್ದರು. ಅಷ್ಟರಲ್ಲೇ ಮರಳಿ ಅವರು ಮನೆಗೆ ಬಂದಿದ್ದಾರೆ, ಅವರು ಬರುವುದನ್ನೇ ತಾಂಡವ್ ಕಾಯುತ್ತಾ ಕುಳಿತಿದ್ದ. ಜತೆಗೆ ಪೂಜಾ ಕೂಡ ಮನೆಗೆ ಬಂದಿದ್ದಾಳೆ. ಈಗ ಮನೆಯಲ್ಲಿ ಎಲ್ಲರೂ ಸೇರಿರುವುದರಿಂದ, ಅವನು ಊಟದ ವಿಚಾರ ಪ್ರಸ್ತಾಪಿಸಿ, ಭಾಗ್ಯಳ ಅಡುಗೆಯ ಸಂಗತಿ ಪ್ರಸ್ತಾಪಿಸಿದ್ದಾನೆ.
ಕುಸುಮಾ ಜತೆ ಮಾತನಾಡುತ್ತಾ, ನಿಮ್ಮ ಸೊಸೆ, ಅಲ್ಲಲ್ಲ, ಮಗಳು ಭಾಗ್ಯ, ಅತ್ಯುತ್ತಮ ಅಡುಗೆ ಮಾಡುತ್ತಾಳೆ ಎಂದು ಹೇಳುತ್ತಿದ್ದೀರಿ ಅಲ್ಲವೇ, ಅವಳಿಗಿಂತ ಉತ್ತಮ ಅಡುಗೆಯನ್ನು ನಾನು ನೋಡಿದ್ದೇನೆ, ತಿಂದಿದ್ದೇನೆ. ಅದರ ರುಚಿ ನೀವೂ ಕೂಡ ನೋಡಬೇಕು, ಅದಕ್ಕಾಗಿ ನಿಮಗೆ ತೋರಿಸಲು ಇಲ್ಲಿಗೆ ತೆಗೆದುಕೊಂಡು ಬಂದೆ ಎಂದು ಹೇಳಿದ್ದಾನೆ. ನಂತರ ಊಟದ ಬಾಕ್ಸ್ ತೆಗೆದು, ಅದರಲ್ಲಿನ ಒಂದೊಂದೆ ಖಾದ್ಯವನ್ನು ಎಲ್ಲರಿಗೂ ಟೇಸ್ಟ್ ಮಾಡಲು ಕೊಟ್ಟಿದ್ದಾನೆ. ಮನೆಯವರಿಗೆ ಅದು ಭಾಗ್ಯಳ ಅಡುಗೆ ಎಂದು ಅದಾಗಲೇ ಗೊತ್ತಾಗಿದ್ದರೂ ಸುಮ್ಮನಾಗಿದ್ದಾರೆ. ಪೂಜಾ ಮತ್ತು ಸುಂದರಿ ಕೂಡ ತಾಂಡವ್ಗೆ ಇದು ಭಾಗ್ಯನ ಅಡುಗೆ ಎಂದು ಹೇಳಲು ಹೊರಟಿದ್ದಾರೆ. ಆದರೆ ಸುಮ್ಮನಿರುವಂತೆ ಕುಸುಮಾ ಕಣ್ಸನ್ನೆ ಮಾಡಿದ್ದಾಳೆ.
ಮುಂದುವರಿದ ತಾಂಡವ್, ನನಗೆ ಹುಷಾರಿಲ್ಲದ ಸಂದರ್ಭದಲ್ಲೂ ಈ ಊಟ ಮಾಡಿ, ಆರಾಮವಾಗಿದ್ದೇನೆ, ರಾತ್ರಿಯೂ ಅವರು ಮಾನವೀಯತೆಯಿಂದ ಊಟ ರೆಡಿ ಮಾಡಿ ಕೊಟ್ಟಿದ್ದಾರೆ ಎಂದು ಭಾಷಣ ಬಿಗಿದಿದ್ದಾನೆ. ಆಗ ಕುಸುಮಾ, ಹೌದು ತಾಂಡವ್, ಊಟ ತುಂಬಾ ಚೆನ್ನಾಗಿದೆ. ಭಾಗ್ಯ ಹೀಗೆ ಅಡುಗೆ ಮಾಡಲು ಸಾಧ್ಯವಿಲ್ಲ, ನಾವು ಕೂಡ ಅಲ್ಲಿಂದಲೇ ಊಟ ತರಿಸಿಕೊಳ್ಳುತ್ತಿದ್ದೇವೆ ಎಂದು ತಾಂಡವ್ಗೆ ಅಡುಗೆ ಮನೆಯಲ್ಲಿದ್ದ ಊಟದ ಬಾಕ್ಸ್ಗಳನ್ನು ತೋರಿಸುತ್ತಾಳೆ. ಅದನ್ನು ನೋಡಿ ತಾಂಡವ್ ಪೆಚ್ಚಾಗುತ್ತಾನೆ. ಅಷ್ಟರಲ್ಲಿ ಭಾಗ್ಯ ಬಂದು, ಅವನಿಗೆ ಕೈತುತ್ತು ಊಟದ ಮೆನು ಕೊಡುತ್ತಾಳೆ. ಈ ಬಿಜಿನೆಸ್ ಮಾಡುತ್ತಿರುವುದು ನಾನೇ ಎಂದು ಹೇಳುತ್ತಾಳೆ. ಅದನ್ನು ನೋಡಿದ ತಾಂಡವ್ ಶಾಕ್ ಆಗುತ್ತಾನೆ. ಬಳಿಕ ಕೋಪದಿಂದ ಅಲ್ಲಿಂದ ವಾಪಸ್ ಹೋಗುತ್ತಾನೆ.
ಆಫೀಸ್ಗೆ ಬಂದ ಬಳಿಕ ತಾಂಡವ್ ಶ್ರೇಷ್ಠಾ ಮೇಲೂ ರೇಗಾಡಿದ್ದಾನೆ. ಊಟ ಬೇಕಾ ಎಂದು ಕೇಳಲು ಬಂದ ಗೌರವ್ಗೂ ಕೋಪದಿಂದ ಬೈದು ಕಳುಹಿಸಿದ್ದಾನೆ.ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಬುಧವಾರದ ಏಪ್ರಿಲ್ 23ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 768ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.
ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ
ಕುಸುಮಾ - ಪದ್ಮಜಾ ರಾವ್
ಧರ್ಮರಾಜ್ - ಶಶಿಧರ್ ಕೋಟೆ
ಭಾಗ್ಯಾ - ಸುಷ್ಮಾ ಕೆ ರಾವ್
ತಾಂಡವ್ ಸೂರ್ಯವಂಶಿ - ಸುದರ್ಶನ್ ರಂಗಪ್ರಸಾದ್
ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ
ಪೂಜಾ - ಆಶಾ ಅಯ್ಯನರ್
ಶ್ರೇಷ್ಠಾ - ಕಾವ್ಯಾ ಗೌಡ
ತನ್ವಿ - ಅಮೃತಾ ಗೌಡ
ಗುಂಡಣ್ಣ - ನಿಹಾರ್ ಗೌಡ
ಸುಂದರಿ - ಸುನೇತ್ರಾ ಪಂಡಿತ್
ವಿಭಾಗ