ಭಾಗ್ಯಳ ಪಾಲಾಯಿತು ತಾಂಡವ್ ಆಫೀಸ್‌ ಕ್ಯಾಂಟೀನ್; ಕೈತುತ್ತು ಊಟಕ್ಕೆ ಕಂಪನಿ ಬಾಸ್‌ನಿಂದಲೇ ಶಹಬ್ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಭಾಗ್ಯಳ ಪಾಲಾಯಿತು ತಾಂಡವ್ ಆಫೀಸ್‌ ಕ್ಯಾಂಟೀನ್; ಕೈತುತ್ತು ಊಟಕ್ಕೆ ಕಂಪನಿ ಬಾಸ್‌ನಿಂದಲೇ ಶಹಬ್ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಳ ಪಾಲಾಯಿತು ತಾಂಡವ್ ಆಫೀಸ್‌ ಕ್ಯಾಂಟೀನ್; ಕೈತುತ್ತು ಊಟಕ್ಕೆ ಕಂಪನಿ ಬಾಸ್‌ನಿಂದಲೇ ಶಹಬ್ಬಾಸ್: ಭಾಗ್ಯಲಕ್ಷ್ಮೀ ಧಾರಾವಾಹಿ

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಭಾಗ್ಯ ತಾಂಡವ್ ಕೆಲಸ ಮಾಡುವ ಆಫೀಸ್‌ನ ಕ್ಯಾಂಟೀನ್ ಉಸ್ತುವಾರಿಯನ್ನು ಪಡೆದುಕೊಂಡಿದ್ದಾಳೆ. ಕಂಪನಿಯ ಬಾಸ್ ಸ್ವತಃ ಬಂದು ಕೈತುತ್ತು ಕ್ಯಾಂಟೀನ್ ಉದ್ಘಾಟಿಸಿದ್ದಾರೆ. ತಾಂಡವ್ ಮತ್ತು ಶ್ರೇಷ್ಠಾಗೆ ಮತ್ತೆ ಮುಖಭಂಗವಾಗಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರ ಏಪ್ರಿಲ್ 24ರ ಸಂಚಿಕೆ
ಭಾಗ್ಯಲಕ್ಷ್ಮೀ ಧಾರಾವಾಹಿ ಗುರುವಾರ ಏಪ್ರಿಲ್ 24ರ ಸಂಚಿಕೆ (Colors Kannada Facebook)

Bhagyalakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರ ಏಪ್ರಿಲ್ 24ರ ಸಂಚಿಕೆಯಲ್ಲಿ ಭಾಗ್ಯ, ತಾಂಡವ್ ಕೆಲಸ ಮಾಡುವ ಆಫೀಸ್‌ಗೆ ಹೋಗಿ ಅಲ್ಲಿನ ಎಚ್‌ಆರ್ ಅಧಿಕಾರಿಯನ್ನು ಭೇಟಿ ಮಾಡಿದ್ದಾಳೆ. ಅವಳು ಆಫೀಸ್‌ಗೆ ಬಂದಿರುವುದನ್ನು ತಾಂಡವ್ ಮತ್ತು ಶ್ರೇಷ್ಠಾ ಗಮನಿಸಿದ್ದಾರೆ. ಅವರಿಬ್ಬರೂ ಹೊಸ ಅಪಾರ್ಟ್‌ಮೆಂಟ್ ಕೊಳ್ಳುವ ಬಗ್ಗೆ ಮಾತುಕತೆ ನಡೆಸುತ್ತಿದ್ದರು. ಅದರ ಮಧ್ಯೆ ಆಫೀಸ್‌ಗೆ ಭಾಗ್ಯ ಬಂದಿರುವುದು ಅವರಿಗೆ ಕಸಿವಿಸಿಯಾಗಿದೆ. ಇವಳು ಯಾಕೆ ಇಲ್ಲಿ ಬಂದಳು ಎಂದು ತಲೆ ಕೆರೆದುಕೊಂಡಿದ್ದಾನೆ ತಾಂಡವ್. ನಂತರ ನೇರವಾಗಿ ಅವಳ ಬಳಿಯೇ ಹೋಗಿ ಕೇಳಿದ್ದಾನೆ. ಆಗ ಭಾಗ್ಯ ಏನೋ ಸ್ವಲ್ಪ ಕೆಲಸ ಇತ್ತು, ಅದಕ್ಕಾಗಿ ಬಂದೆ ಎನ್ನುತ್ತಾಳೆ. ನಂತರ ಅಲ್ಲಿಂದ ಹೊರಟು ಹೋಗಿದ್ದಾಳೆ.

ಅದಾದ ಬಳಿಕ, ಶ್ರೇಷ್ಠಾ ಎಚ್‌ಆರ್ ಬಳಿ ಹೋಗಿ ಭಾಗ್ಯ ಬಂದ ವಿಚಾರವನ್ನು ಪ್ರಸ್ತಾಪಿಸಿದ್ದಾಳೆ. ಆದರೆ ಅವನು ಮಾತ್ರ ಯಾವುದೇ ವಿಚಾರ ಇವಳ ಬಳಿ ಹೇಳಿಲ್ಲ. ಹೀಗಾಗಿ ಭಾಗ್ಯ ಯಾಕೆ ಆಫೀಸ್‌ಗೆ ಬಂದಿದ್ದಳು ಎನ್ನುವುದು ತಾಂಡವ್ ಮತ್ತು ಶ್ರೇಷ್ಠಾಗೆ ತಿಳಿದಿಲ್ಲ. ಅವರು ಎಂದಿನಂತೆ ಕೆಲಸ ಮುಗಿಸಿ ಮನೆಗೆ ತೆರಳಿದರೂ, ಭಾಗ್ಯ ಆಫೀಸ್‌ಗೆ ಬಂದು ಹೋದ ಸಂಗತಿ ತಾಂಡವ್‌ಗೆ ತಲೆಯಲ್ಲೇ ಕೊರೆಯುತ್ತಿದೆ. ಇತ್ತ ಭಾಗ್ಯ ಮನೆಗೆ ಬಂದಿದ್ದಾಳೆ, ಮನೆಗೆ ಬಂದ ಕೂಡಲೇ ಅವಳ ಬಳಿ ಎಲ್ಲರೂ ಎಲ್ಲಿಗೆ ಹೋಗಿದ್ದೇ ಭಾಗ್ಯ, ಹೋದ ಕೆಲಸ ಏನಾಯಿತು ಎಂದು ಕೇಳಿದ್ದಾರೆ. ಆದರೆ ಭಾಗ್ಯ ಯಾವುದೇ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ, ನಾಳೆ ಬಂದು ನೀವೇ ನೋಡಿ, ಎಲ್ಲರೂ ನನ್ನ ಜೊತೆ ಇರಬೇಕು, ಎಲ್ಲರೂ ಬರಬೇಕು ಎಂದು ಹೇಳುತ್ತಾಳೆ.

ಮರುದಿನ ಆಫೀಸ್‌ಗೆ ಬಂದ ತಾಂಡವ್‌ಗೆ ಬಾಸ್ ಬಂದಿರುವುದು ಗೊತ್ತಾಗುತ್ತದೆ. ಬಾಸ್ ಯಾಕೆ ಸಡನ್ನಾಗಿ ಬಂದಿದ್ದಾರೆ, ಮುಂದಿನ ವಾರ ಅವರು ಬರಬೇಕಿತ್ತು, ಇವತ್ತೇ ಯಾಕೆ ಅರ್ಜಂಟ್‌ನಲ್ಲಿ ಬಂದಿದ್ದಾರೆ ಎಂದು ಕೇಳಿದಾಗ ಅವನಿಗೆ ಯಾರೂ ಸಮರ್ಪಕ ಉತ್ತರ ನೀಡಲಿಲ್ಲ. ಬಾಸ್ ಬಂದಿರುವುದರಿಂದ ಆಫೀಸ್‌ನಲ್ಲಿ ಎಲ್ಲರೂ ಲಗುಬಗೆಯಿಂದ ಓಡಾಡುತ್ತಿದ್ದಾರೆ. ನಂತರ ತಾಂಡವ್ ಬಾಸ್‌ನ ಭೇಟಿ ಮಾಡುತ್ತಾನೆ, ಅವರು ಪತ್ನಿ ಜತೆ ಆಫೀಸ್‌ಗೆ ಬಂದಿರುವುದು ಅವನಿಗೆ ಗೊತ್ತಾಗುತ್ತದೆ. ಅವರು ತಾಂಡವ್‌ಗೆ ಅಷ್ಟೇನೂ ಪ್ರಾಮುಖ್ಯತೆ ಕೊಡದೆ, ನೇರವಾಗಿ ಕ್ಯಾಂಟೀನ್‌ಗೆ ಹೋಗುತ್ತಾರೆ. ಇದರಿಂದ ತಾಂಡವ್‌ ಪೆಚ್ಚಾಗುತ್ತಾನೆ.

ಕ್ಯಾಂಟೀನ್‌ ಅನ್ನು ಅದ್ದೂರಿಯಾಗಿ ಸಿಂಗರಿಸಲಾಗಿದೆ. ಅಷ್ಟರಲ್ಲಿ ಭಾಗ್ಯ ಮನೆಯವರು ಎಲ್ಲರೂ ಒಬ್ಬೊಬ್ಬರಾಗಿ ಅಲ್ಲಿಗೆ ಬರುತ್ತಾರೆ. ನಂತರ ಬಾಸ್ ಎಲ್ಲರನ್ನೂ ಕರೆದು, ಇನ್ನು ಮುಂದೆ ನಮ್ಮ ಆಫೀಸ್‌ ಕ್ಯಾಂಟೀನ್ ಉಸ್ತುವಾರಿ ಭಾಗ್ಯಳದ್ದು, ಅವಳೇ ಎಲ್ಲವನ್ನೂ ನೋಡಿಕೊಳ್ಳುತ್ತಾಳೆ ಎಂದು ಭಾಗ್ಯಳನ್ನು ಕರೆದು, ಪರಿಚಯಿಸಿ, ಅವಳ ಊಟದ ರುಚಿಯನ್ನು ಪ್ರಶಂಸಿಸುತ್ತಾರೆ. ಬಾಸ್ ಹೆಂಡತಿಯೂ ಭಾಗ್ಯಳ ಅಡುಗೆಯನ್ನು ಹೊಗಳುತ್ತಾರೆ.

ಇದನ್ನು ನೋಡಿ ತಾಂಡವ್ ಮತ್ತು ಶ್ರೇಷ್ಠಾಗೆ ಅಘಾತವಾಗುತ್ತದೆ. ಸ್ವತಃ ಬಾಸ್ ಬಂದು ಕ್ಯಾಂಟೀನ್ ಉದ್ಘಾಟಿಸಿ, ಅದನ್ನು ಭಾಗ್ಯಗೆ ನೀಡಿರುವುದನ್ನು ಅವನಿಗೆ ನೋಡಲಾಗುತ್ತಿಲ್ಲ. ಭಾಗ್ಯ ಮತ್ತೊಮ್ಮೆ ಅವನ ಎದುರು ಗೆಲುವು ಕಂಡಿದ್ದಾಳೆ. ಅಲ್ಲಿಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಗುರುವಾರದ ಏಪ್ರಿಲ್ 24ರ ಸಂಚಿಕೆ ಕೊನೆಯಾಗಿದೆ. ಪ್ರಸ್ತುತ ಭಾಗ್ಯಲಕ್ಷ್ಮಿ ಧಾರಾವಾಹಿ 768ನೇ ಸಂಚಿಕೆ ಮುಗಿಸಿದೆ. ಇನ್ನು ಮುಂದೆ ಏನು ನಡೆಯಲಿದೆ ಎನ್ನುವುದನ್ನು ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ- ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in