ಮಗಳು ತನ್ವಿ ಸಸ್ಪೆಂಡ್‌ ಸಮಸ್ಯೆ ಬಗೆಹರಿಸಲು ಕಾಲೇಜಿಗೆ ಹೋಗಿ ಇನ್ನಷ್ಟು ಹೆಚ್ಚು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ
ಕನ್ನಡ ಸುದ್ದಿ  /  ಮನರಂಜನೆ  /  ಮಗಳು ತನ್ವಿ ಸಸ್ಪೆಂಡ್‌ ಸಮಸ್ಯೆ ಬಗೆಹರಿಸಲು ಕಾಲೇಜಿಗೆ ಹೋಗಿ ಇನ್ನಷ್ಟು ಹೆಚ್ಚು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಮಗಳು ತನ್ವಿ ಸಸ್ಪೆಂಡ್‌ ಸಮಸ್ಯೆ ಬಗೆಹರಿಸಲು ಕಾಲೇಜಿಗೆ ಹೋಗಿ ಇನ್ನಷ್ಟು ಹೆಚ್ಚು ಮಾಡಿದ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 26ರ ಎಪಿಸೋಡ್‌ನಲ್ಲಿ ಇಷ್ಟವಿಲ್ಲದಿದ್ದರೂ ಭಾಗ್ಯಾ ಒತ್ತಾಯದ ಮೇರೆಗೆ ತನ್ವಿ ಕಾಲೇಜಿಗೆ ಬರುವ ತಾಂಡವ್‌ ತನಗೂ ಮಗಳ ವಿಚಾರಕ್ಕೂ ಏನೂ ಸಂಬಂಧ ಇಲ್ಲವೆನ್ನುವಂತೆ ನಡೆದುಕೊಳ್ಳುತ್ತಾನೆ. ಫೋನ್‌ ಸೈಲೆಂಟ್‌ ಇಡುವಂತೆ ಹೇಳಿದ ಪ್ರಿನ್ಸಿಪಾಲ್‌ ಮೇಲೆ ತಾಂಡವ್‌ ರೇಗಾಡುತ್ತಾನೆ.

ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 26ರ ಎಪಿಸೋಡ್‌
ಭಾಗ್ಯಲಕ್ಷ್ಮೀ ಧಾರಾವಾಹಿ ಡಿಸೆಂಬರ್‌ 26ರ ಎಪಿಸೋಡ್‌ (PC: Jio Cinema)

Bhagyalakshmi Serial: ಕುಡಿದು ಮನೆಗೆ ಬಂದ ತಾಂಡವ್‌ಗೆ ಸರಿಯಾಗಿ ಬುದ್ದಿ ಕಲಿಸಿದ್ದಾಳೆ ಭಾಗ್ಯಾ. ಮನೆ ಹೊರಗೆ ಅರಚಾಡಿ, ಹೂವಿನ ಕುಂಡಗಳನ್ನು ಎಸೆದು ರಂಪಾಟ ಮಾಡುತ್ತಿದ್ದ ತಾಂಡವ್‌ ಮೇಲೆ ಭಾಗ್ಯಾ ನೀರು ಸುರಿಯುತ್ತಾಳೆ. ಭಾಗ್ಯಾ ವರ್ತನೆ ಕಂಡು ತಾಂಡವ್‌ ಶಾಕ್‌ ಆಗುತ್ತಾನೆ. ರಾತ್ರಿ ಇಡೀ ಹೊರಗೆ ಇರಿ ಆಗ ಬುದ್ಧಿ ಕಲಿಯುತ್ತೀರ ಎಂದು ಗಂಡನನ್ನು ಒಳಗೆ ಸೇರಿಸದೆ ಬಾಗಿಲು ಹಾಕುತ್ತಾಳೆ.

ರಾತ್ರಿಯಿಡೀ ಮನೆ ಹೊರಗೆ ಮಲಗಿದ ತಾಂಡವ್‌

ತಾಂಡವ್‌ ರಾತ್ರಿಯಿಡೀ ಹೊರಗೆ ಮಲಗುತ್ತಾನೆ. ಬೆಳಗ್ಗೆ ತಾಂಡವ್‌ಗೆ ಎಚ್ಚರವಾದಾಗ ಹಿಂದಿನ ದಿನ ನಡೆದಿದ್ದನ್ನು ನೆನಪಿಸಿಕೊಳ್ಳುತ್ತಾನೆ. ಭಾಗ್ಯಾ, ನನಗೆ ಇಷ್ಟೆಲ್ಲಾ ಅವಮಾನ ಮಾಡುತ್ತಿದ್ದೀಯ ನಿನ್ನನ್ನು ಯಾವುದೇ ಕಾರಣಕ್ಕೂ ಸುಮ್ಮನೆ ಬಿಡುವುದಿಲ್ಲ ಎಂದುಕೊಳ್ಳುತ್ತಾನೆ. ಅಷ್ಟರಲ್ಲಿ ನೆರೆಯವರು ತಾಂಡವ್‌ ಬಳಿ ಬಂದು ನೀನು ಇಷ್ಟೆಲ್ಲಾ ಬದಲಾಗಿದ್ದೀಯ ಎಂದರೆ ನಂಬಲು ಆಗುತ್ತಿಲ್ಲ, ನಶೆ ಇಳಿಯಿತಾ ಇಲ್ಲವಾ? ಎಲ್ಲಾ ಹೆಣ್ಣು ಮಕ್ಕಳಿಗೂ ತಾಂಡವ್‌ನಂಥ ಗಂಡ ಸಿಗಬೇಕು ಎಂದುಕೊಂಡಿದ್ದೆವು, ಆದರೆ ನಿನ್ನಂಥ ಹುಡುಗ ಯಾವ ಹೆಣ್ಣಿಗೂ ಸಿಗಬಾರದು, ನಿನ್ನಂಥ ವ್ಯಕ್ತಿ ಯಾರಿಗೂ ಮಗನಾಗಿ ಹುಟ್ಟಬಾರದು ಎಂದು ನೆರೆಹೊರೆಯವರು ತಾಂಡವ್‌ಗೆ ಛೀಮಾರಿ ಹಾಕುತ್ತಾರೆ. ಇಷ್ಟಾದರೂ ತಾಂಡವ್‌ ಬುದ್ಧಿ ಕಲಿಯುವುದಿಲ್ಲ, ಇದು ನನ್ನ ವೈಯಕ್ತಿಕ ವಿಚಾರ, ನೀವು ಇದರಲ್ಲಿ ಮೂಗು ತೂರಿಸಬೇಡಿ ಎನ್ನುತ್ತಾನೆ.

ತಾಂಡವ್‌ ಮನೆ ಒಳಗೆ ಬರುತ್ತಾನೆ. ಸುಂದ್ರಿ, ಪೂಜಾ ಅವನ ಕಾಲೆಳೆಯುತ್ತಾರೆ. ಇನ್ಮುಂದೆ ನೀನು ಕುಡಿದು ಬಂದರೆ ಇದೇ ರೀತಿ ಹೊರಗೆ ನಿಲ್ಲಿಸುತ್ತೇನೆ ಎಂದು ಕುಸುಮಾ, ಮಗನಿಗೆ ಎಚ್ಚರಿಸುತ್ತಾಳೆ. ಅಪ್ಪ ಅಮ್ಮ ಕೂಡಾ ಸೊಸೆ ಜೊತೆ ಸೇರಿ ತನಗೆ ಇಷ್ಟೆಲ್ಲಾ ಅವಮಾನ ಮಾಡುತ್ತಿದ್ದಾರೆ, ಎಲ್ಲರಿಗೂ ಬುದ್ಧಿ ಕಲಿಸುತ್ತೇನೆ ಎಂದು ತಾಂಡವ್‌ ಮನಸ್ಸಿನಲ್ಲಿ ನಿರ್ಧರಿಸುತ್ತಾನೆ. ಇತ್ತ ತಾಂಡವ್‌ ಜೊತೆ ಮಾತನಾಡಲು ಶ್ರೇಷ್ಠಾ ಪದೇ ಪದೇ ಕಾಲ್‌ ಮಾಡುತ್ತಲೇ ಇರುತ್ತಾಳೆ. ಎಷ್ಟು ಸಾರಿ ಕಾಲ್‌ ಮಾಡುತ್ತೀಯ ಎಂದು ತಾಂಡವ್‌ ರೇಗುತ್ತಾನೆ. ಅಲ್ಲಿಂದ ಬಂದ ನಂತರ ಎಲ್ಲಿದ್ದೀಯ? ಏನು ಮಾಡುತ್ತಿದ್ದೀಯ ಅಂತ ಒಂದು ಮಾತು ಕೇಳಿಲ್ಲ ಎಂದು ಶ್ರೇಷ್ಠಾ ರೇಗುತ್ತಾಳೆ. ನೀನು ಮಾತ್ರ ಕಷ್ಟದಲ್ಲಿರೋದು, ನಾನು ಇಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿದ್ದೀನಾ? ನನಗೂ ಸಾಕಷ್ಟು ಸಮಸ್ಯೆಗಳಿವೆ ಎಂದು ತಾಂಡವ್‌ ಫೋನ್‌ ಡಿಸ್ಕನೆಕ್ಟ್‌ ಮಾಡುತ್ತಾನೆ.

ತಾಂಡವ್‌ನನ್ನು ತನ್ವಿ ಕಾಲೇಜಿಗೆ ಕರೆದೊಯ್ದ ಭಾಗ್ಯಾ

ತಾಂಡವ್‌ ಆಫೀಸಿಗೆ ಹೋರಡುವಾಗ ಕಾಲೇಜಿಗೆ ಬರುವಂತೆ ಭಾಗ್ಯಾ ಹೇಳುತ್ತಾಳೆ. ನಮ್ಮಿಂದ ಮಗಳು ಸಸ್ಪೆಂಡ್‌ ಆಗಿದ್ದಾಳೆ. ಅವಳ ಸಮಸ್ಯೆ ನಾವೇ ಬಗೆಹರಿಸಬೇಕು ಎನ್ನುತ್ತಾಳೆ. ನಾನು ನಿನ್ನ ಜೊತೆ ಎಲ್ಲಿ ಕೂಡಾ ಬರುವುದಿಲ್ಲ ಎಂದು ತಾಂಡವ್‌ ದುರಹಂಕಾರ ತೋರುತ್ತಾನೆ. ಭಾಗ್ಯಾ ಹಟ ಬಿಡದೆ ತಾಂಡವ್‌ ಕೈ ಹಿಡಿದು ಎಳೆದೊಯ್ಯುತ್ತಾಳೆ. ಕಾಲೇಜಿನಲ್ಲಿ ಪ್ರಿನ್ಸಿಪಾಲ್‌ ಬಳಿ ಬಂದು ಭಾಗ್ಯಾ, ಮಗಳ ಪರ ಮನವಿ ಮಾಡಿಕೊಳ್ಳುತ್ತಾಳೆ. ತಾಂಡವ್‌ಗೂ ಮಾತನಾಡಿ ಮನವಿ ಮಾಡಿಕೊಳ್ಳುವಂತೆ ಸನ್ನೆ ಮಾಡುತ್ತಾಳೆ. ತಾಂಡವ್‌ ಬೇಕಾಬಿಟ್ಟಿಯಾಗಿ ಆಗಿದ್ದು ಆಯ್ತು, ಸಾರಿ ಎನ್ನುತ್ತಾನೆ. ತಾಂಡವ್‌, ಪ್ರಿನ್ಸಿಪಾಲ್‌ ಜೊತೆ ಮಾತನಾಡುವಾಗ ಶ್ರೇಷ್ಠಾ ಪದೇ ಪದೇ ಕಾಲ್‌ ಮಾಡುತ್ತಾಳೆ.

ಕಾಲೇಜ್‌ ಒಳಗೆ ಬರುವಾಗ ಫೋನ್‌ ಸೈಲೆಂಟ್‌ ಇಡಬೇಕು ಅಂತ ನಿಮಗೆ ಗೊತ್ತಾಗುವುದಿಲ್ಲವೇ ಎಂದು ಪ್ರಿನ್ಸಿಪಾಲ್‌ ತಾಂಡವ್‌ಗೆ ಏರು ದನಿಯಲ್ಲಿ ಪ್ರಶ್ನಿಸುತ್ತಾರೆ. ಅದಕ್ಕೆ ಕೋಪಗೊಳ್ಳುವ ತಾಂಡವ್‌, ನಿಮ್ಮ ಬೋಧನೆ ಕೇಳಲು ನಾನು ಬಂದಿಲ್ಲ ಎನ್ನುತ್ತಾನೆ. ತಾಂಡವ್‌ ದುರಹಂಕಾರದ ಮಾತುಗಳಿಗೆ ಪ್ರಿನ್ಸಿಪಾಲ್‌ ಸಿಟ್ಟಾಗುತ್ತಾರೆ. ನಾನು ನಿನಗೆ ಮತ್ತೆ ಫೋನ್‌ ಮಾಡುವುದಿಲ್ಲ. ನಿನ್ನ ಹೆಸರು ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಶ್ರೇಷ್ಠಾ ಮಾಡಿದ ಮೆಸೇಜ್‌ ನೋಡಿ ತಾಂಡವ್‌ ಗಾಬರಿಯಾಗುತ್ತಾನೆ.

ತಾಂಡವ್‌ ವರ್ತನೆಯಿಂದ ತನ್ವಿ ಸಸ್ಪೆಂಡ್‌ ಸಮಸ್ಯೆ ಇನ್ನಷ್ಟು ಹೆಚ್ಚಾಗುವುದಾ? ಅಥವಾ ಭಾಗ್ಯಾ ಮನವಿಯನ್ನು ಪ್ರಿನ್ಸಿಪಾಲ್‌ ಸ್ವೀಕರಿಸುತ್ತಾರಾ ಕಾದು ನೋಡಬೇಕು.

ಭಾಗ್ಯಲಕ್ಷ್ಮೀ ಧಾರಾವಾಹಿ ಪಾತ್ರ ಪರಿಚಯ

ಕುಸುಮಾ - ಪದ್ಮಜಾ ರಾವ್‌

ಧರ್ಮರಾಜ್‌ - ಶಶಿಧರ್‌ ಕೋಟೆ

ಭಾಗ್ಯಾ - ಸುಷ್ಮಾ ಕೆ ರಾವ್‌

ತಾಂಡವ್‌ ಸೂರ್ಯವಂಶಿ - ಸುದರ್ಶನ್‌ ರಂಗಪ್ರಸಾದ್‌

ಭಾಗ್ಯಾ ತಾಯಿ ಸುನಂದಾ - ಸುನಿತಾ ಶೆಟ್ಟಿ

ಪೂಜಾ - ಆಶಾ ಅಯ್ಯನರ್‌

ಶ್ರೇಷ್ಠಾ - ಕಾವ್ಯಾ ಗೌಡ

ತನ್ವಿ - ಅಮೃತಾ ಗೌಡ

ಗುಂಡಣ್ಣ - ನಿಹಾರ್‌ ಗೌಡ

ಸುಂದರಿ - ಸುನೇತ್ರಾ ಪಂಡಿತ್‌

Whats_app_banner